ಏಪ್ರಿಲ್ 29, 2012

ವೀರಣ್ಣ ಮಡಿವಾಳರ ಸಂದರ್ಶನ


ಕನ್ನಡದ  ಹೊಸತಲೆಮಾರಿನ ಸಂವೇದನಾಶೀಲ ಬರೆಹಗಾರರಲ್ಲಿ ಒಬ್ಬರಾದ ವೀರಣ್ಣ ಮಡಿವಾಳರ ಅವರ 'ನೆಲದ ಕರುಣೆಯ ದನಿ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ 'ದ ಸಂಡೆ ಇಂಡಿಯನ್' ಗಾಗಿ ನಡೆಸಿದ ಸಂದರ್ಶನ.


ನಿಮ್ಮ 'ನೆಲದ ಕರುಣೆಯ ದನಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ    ಲಭಿಸಿರುವುದು ಏನೆನ್ನಿಸುತ್ತದೆ? 

ಇದು ನನ್ನ ಮತ್ತು ನನ್ನ ತಲೆಮಾರಿನ ಅಭಿವ್ಯಕ್ತಿಗೆ ಸಂದ ಗೌರವವೆಂದು ಭಾವಿಸುತ್ತೇನೆ.
ಈ ಕ್ಷಣ ಅಪ್ಪನ ಬೆವರು, ಅವ್ವನ ಕನಸು ನೆನಪಾಗುತ್ತಿವೆ. ಈ ಪುರಸ್ಕಾರವನ್ನು ಕನ್ನಡ ಕಾವ್ಯವನ್ನು ಮತ್ತಷ್ಟು ಜೀವಪರವಾಗಿಸಿದ ಕವಿ ಎನ್.ಕೆ.ಹನುಮಂತಯ್ಯ, ವಿಭಾ ತಿರಕಪಡಿ, ಹಾಗೂ ನಾನು ಎಷ್ಟು ಓದಿದರೂ ಮತ್ತೆ ಮತ್ತೆ ಓದಬೇಕೆನಿಸುವ ಪುಟ್ಟ ಪುಸ್ತಕಗಳೇ ಆಗಿರುವ ನನ್ನ ಗಾವಡ್ಯಾನವಾಡಿ ಶಾಲೆಯ ಮಕ್ಕಳಿಗೆ ಅರ್ಪಿಸುತ್ತೇನೆ.

ವರ್ತಮಾನದ ಈ ಅವಘಡದ ಕಾಲದಲ್ಲಿ ಯಾವುದೇ ಸಂವೇದನಾಶೀಲ ಮನಸ್ಸು , ಯಾವುದೇ ಪುರಸ್ಕಾರವನ್ನು ಆನಂದಿಸುವ ಸ್ಥಿತಿಯಲ್ಲಿಲ್ಲ. ಈ ಕ್ಷಣ ನನ್ನ ಶಿಕ್ಷಕ ತರಬೇತಿಯ ಖಾಲಿ ಹೊಟ್ಟೆಯ ದಿನಗಳು ನೆನಪಾಗುತ್ತಿವೆ. ಈಗ ನನ್ನ ತುತ್ತಿಗೆ ದಾರಿಯಾಗಿರಬಹುದು, ಆದರೆ ಅದೆಷ್ಟು ಎಣಿಸಲಾಗದ ಹಸಿದ ಹೊಟ್ಟೆ ಚೀಲಗಳು ಕಣ್ಣಮುಂದೆಯೇ ಇವೆ. ಇಂದು ಕೇವಲ ಅನ್ನಕ್ಕಾಗಿ ಪರದಾಟ ಮಾತ್ರವಲ್ಲ, ಅದರಾಚೆಗೆ ಬದುಕಿಗೆ ಬೆಳಕಾಗುವ ವಿದ್ಯಾದೀಪದ ಹುಡುಕಾಟದ ದುರಂತವೂ ಇದೆ. ತೀರಾ ಹೊಟ್ಟೆ ಹಸಿದರೆ ಸೊಪ್ಪು ಸೊದೆ ತಿಂದು ಜೀವ ಹಿಡಿಯಬಹುದು, ವಿದ್ಯಗೇ ಕುತ್ತು ಬಂದರೆ? 

ಮೈಯೆಲ್ಲ ಗಾಯ ಮಾಡಿಕೊಂಡು ಬಂದ ನವಿಲೊಂದು ಕುಣಿಯುತ್ತಿದ್ದರೆ, ಅದರ ಕುಣಿತವನ್ನು ಮೆಚ್ಚಿ , ಸಿಂಹಾಸನದ ಮೇಲೆ ಕುಳ್ಳಿರಿಸಿ ದುಡ್ಡು ಕೊಟ್ಟು ಸನ್ಮಾನಿಸುವುದಾದರೆ ಏನು ಹೇಳುವುದು? ವರ್ತಮಾನದ ದುರಾಡಳಿತದ ದಾಳಿಗೆ ಒಳಗಾದ ಜೀವಸಮುದಾಯದಿಂದ ಬಂದ ನವಿಲು ನಾನು. ಗಾಯಗಳು ನನ್ನವಷ್ಟೇ ಅಲ್ಲ , ನನ್ನೆಲ್ಲ ಬಂಧುಗಳವೂ ಇವೆ. ಅವೆಲ್ಲ ತೋರಲಾಗದವು ತೋರಿತೀರದವು. ಇವನ್ನೆಲ್ಲ ಕಾಣುವ ಕಣ್ಣುಗಳನ್ನು ಹುಡುಕುತ್ತಿದ್ದೇನೆ. ಈ ಪುರಸ್ಕಾರದ ನೆಪದಿಂದಾದರೂ ನಮ್ಮನ್ನಾಳುವ ಪ್ರಭುಗಳು ನಮ್ಮ  ಅಭಿವ್ಯಕ್ತಿಯನ್ನು ಗಂಭೀರವಾಗಿ ಪರಿಗಣಿಸುತ್ತಾರಾ..?

ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಲು ನಿಮಗಿದ್ದ ಕಾರಣ ಪ್ರೇರಣೆಗಳೇನು?
      

ತಿರಸ್ಕಾರ ಅವಮಾನಗಳಿಗೆ ಸಿಕ್ಕು ನರಳುತ್ತಿದ್ದ ನಾನು ಬದುಕಿನ ಅರ್ಥವನ್ನು ಬೇರೆ ಬೇರೆ 
ಸಾಧ್ಯತೆಗಳಲ್ಲಿ ಶೋಧಿಸುತ್ತಿದ್ದಾಗ ಸಿಕ್ಕ ಅಪರೂಪದ ದಾರಿ ಸಾಹಿತ್ಯದ ಮಾಧ್ಯಮ. ಮೊದಮೊದಲು ಅದು ಓದಿನ ರೂಪದ್ದಿತ್ತು, ಆಕಸ್ಮಿಕವಾಗಿ ರಚನೆಯತ್ತಲೂ ಹೊರಳಿತು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ನನ್ನ ಗುರುಗಳಾದ ಪಿ.ಎಂ.ಕ್ಯಾತಣ್ಣನವರ, ಎಸ್.ಕೆ ಗಾಡರೆಡ್ಡಿ ಯವರು ಬರೆಯುತ್ತಿದ್ದರು ನಮಗೂ ಬರೆಯಲು ಹುರಿದುಂಬಿಸುತ್ತಿದ್ದರು. ಬಂಡಾಯ ಸಾಹಿತ್ಯ ಸಂಘಟನೆ ತುಂಬ ಕ್ರಿಯಾಶೀಲವಾಗಿದ್ದ ದಿನಗಳವು. ಅದ್ಯಾವುದೂ ತಿಳಿಯುತ್ತಿರದಿದ್ದರೂ ಮನಸಿನಲ್ಲಿ ಆ ಚಟುವಟಿಕೆಗಳು ಅಚ್ಚೊತ್ತಿವೆ. 

ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿಯ ಪ್ರೇರಣೆಗಳು ಒದಗಿದವು. ಕೊಪ್ಪಳದಲ್ಲಿ ಆಕಸ್ಮಿಕವಾಗಿ ಸಿಕ್ಕ ವಿಜಯಅಮೃತರಾಜ ಸಾಹಿತ್ಯದ ಬಗ್ಗೆ ತುಂಬ ತಿಳುವಳಿಕೆ ಉಳ್ಳವರು ಅವರು ನನಗೆ ಮೊದಲಿಗೆ ಲಂಕೇಶ್ ರ ಪುಸ್ತಕಗಳನ್ನು ಪರಿಚಯಿಸಿದರು. ಮುಖ್ಯವಾದದ್ದು ಬಸವರಾಜ ಸೂಳಿಬಾವಿ ಯವರ ಸಂಪರ್ಕ. ಬಸೂ ಉತ್ತರ ಕರ್ನಾಟಕದ ಭೂ ಸಂಬಂಧಿತ ಹೋರಾಟಗಳನ್ನು ಸಂಘಟಿಸುತ್ತಿದ್ದ ಸಮಯದಲ್ಲಿ ನಾನೂ ಅದರಲ್ಲಿ ಭಾಗಿಯಾದೆ. ಅವು ನನ್ನ ಬದುಕಿನ ಕುರಿತಾದ ಗ್ರಹಿಕೆಗಳನ್ನು ತಿಳಿಯಾಗಿಸಿಕೊಳ್ಳುವ ನಿಟ್ಟಿನಲ್ಲಿ ಬಹಳ ಮುಖ್ಯವಾದವು.

ನಾಡಿನ ಹಿರಿಯ ಸಾಹಿತಿಗಳು ಮತ್ತು ಸಾಹಿತ್ಯದ ಓದು ನಿಮ್ಮ ಮೇಲೆ ಬೀರಿರುವ ಪ್ರಭಾವ ಯಾವ ಬಗೆಯದ್ದು? 

ಹಿರಿಯ ಸಾಹಿತಿಗಳ ಒಡನಾಟ ನನ್ನ ಬದುಕಿನ ವಿಸ್ಮಯಗಳಲ್ಲಿ ಮುಖ್ಯವಾದದ್ದು. ಅದು ವೈಯಕ್ತಿಕವಾಗಿ ಮತ್ತು ಓದಿನಿಂದ. ಇವೆರಡೂ ಇಲ್ಲದಿದ್ದರೆ ನನ್ನ ಬದುಕು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಓದು ನನಗೆ ಬದುಕು ಕೊಟ್ಟಿದೆ.

ಒಬ್ಬ ಯುವ ಬರಹಗಾರರಾಗಿ ಇಂದಿನ ಕನ್ನಡ ಸಾಹಿತ್ಯ ಪಡೆದಿರುವ ದಿಕ್ಕನ್ನು ಯಾವ ರೀತಿಯಾಗಿ ಪರಿಭಾವಿಸುತ್ತೀರಿ?

ನಿಜವಾದ ಸಮಾಜಮುಖಿ ನೆಲೆಯಲ್ಲಿ ಇಂದಿನ ಕನ್ನಡ ಸಾಹಿತ್ಯ ಚಲಿಸುತ್ತಿದೆಯೆಂಬುದೇ ನನ್ನ ಭಾವನೆ ಮತ್ತು ನಂಬಿಕೆ. ಆದರೆ ಈ ಚಲನೆ ತುಂಬ ಸಂಕೀರ್ಣವಾದದ್ದು. ವಚನ ಬಂಡಾಯದ ಕಾಲಘಟ್ಟದ ಸಾಹಿತ್ಯವೇ ನಮ್ಮ ನಿಜವಾದ ಮಾದರಿ. ಆದರೆ ಈ ಕಾಲ ಹಿಂದೆಂದಿಗೂ ಇಲ್ಲದಂಥ ದುಸ್ಥಿತಿಗೆ ನಮ್ಮನ್ನು ತಳ್ಳಿದೆ. ನಮಗೆ ನೋವಿರುವುದು ಈ ಕಾಲದ ಅವಘಡಗಳಿಗೆ ಮುಖಾಮುಖಿಯಾಗುವ ದಿಸೆಯಲ್ಲಿ ನಮ್ಮ ಸಾಹಿತ್ಯದ ತೋಳು ಇನ್ನೂ ಬಲಿಯದೇ ಇರುವುದು. 

ಸಾಹಿತ್ಯ - ಸಾಹಿತಿಗೆ ಇರುವಂತಹ ಸಾಮಾಜಿಕ ಹೊಣೆಗಾರಿಕೆ ಯಾವ ತೆರನಾದದ್ದು?

 ಹೊಣೆಗಾರಿಕೆ ಎಂಬುದು ಸಾಹಿತ್ಯ-ಸಾಹಿತಿಗೆ ಸಂಬಂಧಿಸಿದ್ದು ಎಂದು ನಾನು ಭಾವಿಸಿಲ್ಲ.               ಜೀವಂತಿಕೆ ಇರುವ ಮಾನವೀಯತೆಯನ್ನು ಉಳಿಸಿಕೊಂಡಿರುವ ಎಲ್ಲ ಮನಸ್ಸಿಗೆ ಇರಲೇಬೇಕಾದದ್ದು ಎನಿಸುತ್ತಿದೆ. ಸಾಹಿತ್ಯ ಮತ್ತು ಅಸಾಹಿತ್ಯದ ವ್ಯತ್ಯಾಸವಿಲ್ಲದಂತೆ ಇಂದಿನ ಬರವಣಿಗೆಯನ್ನು ವ್ಯಾಖ್ಯಾನಿಸಲಾಗುತ್ತಿದೆ. ಇದು ಗಾಬರಿ ಹುಟ್ಟಿಸುವ ಸಂಗತಿ. ಜೀವಪರ ಎನ್ನುವ ಪದವನ್ನೇ ಅಪಹಾಸ್ಯಕ್ಕೊಳಪಡಿಸುವ ಹಲವು ಜನ ಸಾಹಿತಿಗಳನ್ನು ನಾನು ನೋಡಿದ್ದೇನೆ. ಇವರಿಗೆ ಕ್ರೌರ‍್ಯವೂ ಸಹಜವಾಗಿಯೇ ಕಾಣುತ್ತದೆ. ಎಂದಿಲ್ಲದ ಎಚ್ಚರದ ಹೊಣೆಗಾರಿಕೆಯಲ್ಲಿ ನಾವು ನಮ್ಮ ಬರವಣಿಗೆ ಹೆಜ್ಜೆಯಿಡಬೇಕಾದ ನಿರ್ಣಾಯಕ ಸಂದರ್ಭದಲ್ಲಿ ನಾವಿದ್ದೇವೆ.

ಚಳವಳಿಗಳೆಲ್ಲಾ ಮುಸುಕಾಗಿರುವ ಈ ಹೊತ್ತಿನಲ್ಲಿ ಸಾಹಿತ್ಯವು ಯಾವ ಪಾತ್ರವನ್ನು ವಹಿಸುತ್ತಿದೆ ಎಂದು ನಿಮ್ಮ ಭಾವನೆ?

ಚಳುವಳಿಗಳೆಲ್ಲಾ ಮುಸುಕಾಗಿವೆ ಎನ್ನುವ ನಿಲುವಿನಲ್ಲೇ ದೋಷವಿದೆ. ಪ್ರಭುತ್ವದ ದಮನಕಾರಿ ನೀತಿಗೆ ಜೀವವನ್ನೇ ಪಣಕ್ಕಿಟ್ಟು ದಿನಾಲು ಸಾವರ ಸಾವಿರ ಜನ ಬೀದಿಗಿಳಿಯುತ್ತಾರಲ್ಲ ಇದಕ್ಕೆ ಬೇರೆ ಹೆಸರಿದೆಯೆ? ಪ್ರತಿರೋಧವೊಂದೇ ಕರ್ನಾಟಕದ ಈ ಕರಾಳ ವಾಸ್ತವವನ್ನು ಬದಲಿಸುವ ಸಶಕ್ತ ದಾರಿ. ಅದನ್ನು ಎದೆಯಲ್ಲಿಟ್ಟುಕೊಂಡೇ ನಮ್ಮ ಸಾಹಿತ್ಯ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಸಾಮಾಜಿಕ ಕ್ರೌರ‍್ಯದ ಆತ್ಯಂತಿಕ ಸ್ಥಿತಿಯಲ್ಲಿರುವ ನಮಗೆ ಈ ದುರಾಡಳಿತವನ್ನು ಕೊನೆಗಾಣಿಸುವ ಇಚ್ಛಾಶಕ್ತಿಯೊಂದೇ ಪರ್ಯಾಯ. ಇಂಥ ಸಂದರ್ಭಗಳಲ್ಲಿ ಸಾಹಿತಿಗಳಾದವರೆ ಬೀದಿಯಲ್ಲಿ ನಿಂತು ಚಳುವಳಿಗಳನ್ನು ಮುನ್ನಡೆಸುತ್ತಿದ್ದಾರೆ. ಪ್ರತಿರೋಧದ ಹೊಸ ಮಾದರಿಗಳನ್ನು ಸೃಜನಶೀಲವಾಗಿ ಕಟ್ಟುತ್ತಿದ್ದಾರೆ.

ಊರು ಹಾಗೂ ಊರೊಳಗಿನ ದಲಿತರ ಕೇರಿಗಳ ನಡುವಿನ ಕಂದಕ ಹೆಚ್ಚುತ್ತಿರುವ ಘಟನೆಗಳು ನಿರಂತರವಾಗಿ ಸಂಭವಿಸುತ್ತಿರುವಾಗ ನಮ್ಮ ಚಳವಳಿಗಳು ನಿಷ್ಕ್ರಿಯವಾಗಿವೆ ಎನ್ನಿಸುವುದಿಲ್ಲವೆ? ಈ ಕುರಿತು ಏನು ಹೇಳುತ್ತೀರಿ?

ಊರು ಮತ್ತು ಕೇರಿಗಳ ನಡುವಿನ ಕಂದಕವಷ್ಟೇ ಅಲ್ಲ, ಕೇರಿ ಕೇರಿಯ ಜನ ಅದರಲ್ಲೂ ಮಹಿಳೆಯರು, ಮಕ್ಕಳು ಇಂದು ಉಳಿವಿಗಾಗಿ ಹೋರಾಟ ನಡೆಸುವ ದುರಂತದಲ್ಲಿ ನಾವಿದ್ದೇವೆ. ತಿರುಮಲದೇವರಕೊಪ್ಪ ದಲ್ಲಿ ಬಸವರಾಜ ನೆಂಬ ಹುಡುಗನನ್ನು ಮನೆಶಾಂತಿಗಾಗಿ ಬಲಿಕೊಟ್ಟದ್ದು, ಭೋಜ ಎಂಬ ಹಳ್ಳಿಯಲ್ಲಿ ಕೇರಿಯ ಮೇಲಿನ ಸವರ್ಣೀಯರ ಅಟ್ಟಹಾಸಕ್ಕೆ ಬಲಿಯಾಗಿ ಅರೆಜೀವವಾಗಿ ಪ್ರಾಣ ಹಿಡಿದಿರುವ ಅಭೀಷೇಕ ಎಂಬ ಹುಡುಗನ ದಯನೀಯ ಸ್ಥತಿಯಾಗಲೀ, ಆಡುಗಳು ತಪ್ಪಿಸಿಕೊಂಡು ತೋಟಕ್ಕೆ ನುಗ್ಗಿದವು ಎಂಬ ಕಾರಣಕ್ಕೆ ಹತ್ತು ವರ್ಷದ ದಲಿತ ಹುಡುಗಿಯನ್ನ ಗಿಡಕ್ಕೆ ಕಟ್ಟಿ ಬಾರಿಸುವ ಕ್ರೌರ‍್ಯವನ್ನು ಕಂಡಾಗ ಎದೆತುಂಬಿ ಬಂದು ಎಂಥವರಿಗೂ ಈ ವ್ಯವಸ್ಥೆಯ ಕುರಿತು ರೇಸಿಗೆ ಹುಟ್ಟದೆ ಇರುವುದು. ಆದರೆ ನಾವು ಈ ಚಿತ್ರಗಳಲ್ಲಿರುವ ಆಂತರ್ಯದ ಕ್ರೌರ‍್ಯವನ್ನು ಮನಗಾಣಿಸಿ ಆರೋಗ್ಯವಂತ ಮನಸ್ಸುಗಳನ್ನು ಕಟ್ಟುವಲ್ಲಿ ನಮ್ಮ ಶ್ರಮ ಸಾಲದು ಎನಿಸುತ್ತಿದೆ. 

ನಮ್ಮೆದುರು ಸಂಭವಿಸುತ್ತಿರುವ ಸಮಾಜೋ - ಆರ್ಥಿಕ ವಿಪ್ಲವಗಳಿಗೆ ನಮ್ಮ ದೇಸೀಯ ಸಂಸ್ಕೃತಿ ಮತ್ತು ಸಾಹಿತ್ಯಗಳು ಯಾವ ಬಗೆಯಲ್ಲಿ ಪ್ರತಿಕ್ರಿಯಿಸುತ್ತಿವೆ? 

ಸಮಾಜೋ - ಆರ್ಥಿಕ ವಿಪ್ಲವಗಳನ್ನು ತುಂಬ ವಸ್ತುನಿಷ್ಠವಾಗಿ ಸಮರ್ಥವಾಗಿ ಕಟ್ಟಿಕೊಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ಪರಿಣಾಮಕಾರಿಯಾಗಿ ನಡೆಯುತ್ತಿವೆ. ಆದರೆ ಇದಾವುದನ್ನು ನಿರ್ಲಕ್ಷಿಸುವ ಪ್ರಭುತ್ವದ ಉದಾಸೀನತೆ ಬೇಸರ ಹುಟ್ಟಿಸುತ್ತದೆ. 

ನಮ್ಮ ಮುಂದೆ ನಡೆಯುತ್ತಿರುವ ’ಅಭಿವೃದ್ಧಿ’ಯ ದಾರಿ - ಪರಿಣಾಮಗಳ ಬಗ್ಗೆ ನಿಮ್ಮ ಅವಗಾಹನೆ ಏನು?

ಅಭಿವೃದ್ಧಿ ಎನ್ನುವ ಪದವನ್ನು ಪ್ರಭುತ್ವ ವ್ಯಾಖ್ಯಾನಿಸಿಕೊಂಡಿರುವ ರೀತಿ ಮತ್ತು ಜನಸಾಮಾನ್ಯರು ಅಪೇಕ್ಷಿಸುವ ರೀತಿ ತದ್ವಿರುದ್ಧವಾಗಿವೆ. ಲಕ್ಷಕೋಟಿ ಬಜೆಟ್ಟು ಯಾರ ಅಭಿವೃದ್ಧಿಗೆ ಎಂಬುದು ಪ್ರಶ್ನೆ. ಸಾವಿರ ಸಾವಿರ ಗುಡಿಸಲುಗಳು ಕಣ್ಣಮುಂದೆಯೇ ಇವೆ. ನಮಗೆ ಅನ್ನ ನೀಡಿದ ರೈತ ಆತ್ಮಹತ್ಯೆಗೆ ಹೊರಟಿರುವ ಕರಾಳತೆಯ ಅರಿವು ಈ ಪ್ರಭುತ್ವಕ್ಕಿಲ್ಲ. 
ಅಭಿವೃದ್ಧಿಯಲ್ಲ ಉಳಿವಿಗಾಗಿ ನಮ್ಮ ಜನ ಹೋರಾಡುತ್ತಿರುವಾಗ ಕೋಟಿ ಕೋಟಿ ಬಜೆಟ್ಟನ್ನು ಮಂಡಿಸುವ ನಾಡಪ್ರಭುಗಳಿಗೆ ಮನುಷ್ಯತ್ವವಿದೆಯೆ ಎಂಬ ಪ್ರಶ್ನೆ ಮೂಡುತ್ತದೆ. 

ಕನ್ನಡ ಸಾಹಿತ್ಯಲೋಕದಲ್ಲಿ ಕಂಡುಬರುವ ವ್ಯಕ್ತಿಗಳ ಅಥವಾ ಗುಂಪುಗಳ ನಡುವಿನ ಅಭಿಪ್ರಾಯ ಭೇಧಗಳನ್ನು ಒಬ್ಬ ಯುವ ಸಾಹಿತಿಯಾಗಿ ಹೇಗೆ ನೋಡುತ್ತೀರಿ?

ಅಭಿಪ್ರಾಯ ಭೇದವಷ್ಟೇ ಆದರೆ ಸರಿ ನಡೆಯಲಿ ಎನ್ನಬಹುದು. ಆದರೆ ಜೀವವಿರೋಧಿ ಪ್ರಭುತ್ವದ ಸಮರ್ಥನೆಗಿಳಿದರೆ ಸಹಿಸುವುದು ಕಷ್ಟ. ಖಾವಿಯೊಂದೇ ಅನೈತಿಕ ಸಂಬಂಧವನ್ನು ಆಳುವ ಪ್ರಭುತ್ವದೊಂದಿಗೆ ಹೊಂದಿಲ್ಲ. ಕೆಲವರ ಚಿಂತನೆಗಳನ್ನು ಗಮನಿಸಿದರೆ ಈ ಕಾಲದ ಅವಘಡಗಳಿಗೆ ಸಾಹಿತ್ಯದ ಕೊಡುಗೆಯೂ ಇಲ್ಲದಿಲ್ಲ. 




5 ಕಾಮೆಂಟ್‌ಗಳು:

lingadahalli chethankumar ಹೇಳಿದರು...

madivalare thumba santhoshavaythu hasirele inda e sandarshana nodi thumbakushiyathu kanri.lingadahalli chethankumar

Unknown ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Unknown ಹೇಳಿದರು...

prashanthkemman123@gmail.com

Naniwritings ಹೇಳಿದರು...

ನಿಮ್ಮ ಕಾವ್ಯಯಾನದ ನೆಲೆಗಳು ಜೀವಪರವಾಗಿವೆ .ನೀವು ತಲ್ಲಣಿಸುವ ಖಾಲಿ ಹೊಟ್ಟೆಗಳ ಪಟ್ಟಿಯಲ್ಲಿ ನಾನೂ ಇದೀನಿ.
ನಿಮ್ಮ ನಡೆಗೆ ನನ್ನ ಕೃತಜ್ಞತೆ. ಮತ್ತೊಮ್ಮೆ ಅಭಿನಂದನೆಗಳು

Naniwritings ಹೇಳಿದರು...

ನಿಮ್ಮ ಕಾವ್ಯಯಾನದ ನೆಲೆಗಳು ಜೀವಪರವಾಗಿವೆ .ನೀವು ತಲ್ಲಣಿಸುವ ಖಾಲಿ ಹೊಟ್ಟೆಗಳ ಪಟ್ಟಿಯಲ್ಲಿ ನಾನೂ ಇದೀನಿ.
ನಿಮ್ಮ ನಡೆಗೆ ನನ್ನ ಕೃತಜ್ಞತೆ. ಮತ್ತೊಮ್ಮೆ ಅಭಿನಂದನೆಗಳು

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.