ಮಾರ್ಚ್ 08, 2014

ಹಾಲಿವುಡ್ ನಟಿಯ ಅಂತರಂಗದ ಮಾತುಗಳು


ಹಾಲಿವುಡ್ ನಟಿ ಲುಪಿತಾ ನ್ಯೋಂಗೊಗೆ ಮೊನ್ನೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಸ್ಟೀವ್ ಮಕೀನ್ ನಿರ್ದೇಶನದ 12 Years a Slave  ಚಿತ್ರದಲ್ಲಿ ಪಾಟ್ಸಿ ಪಾತ್ರದಲ್ಲಿ ಅತ್ಯದ್ಭುತವಾಗಿ ನಟಿಸಿದ ಈಕೆಗೆ ’ಅತ್ಯುತ್ತಮ ಪೋಷಕನಟಿ’ ಪ್ರಶಸ್ತಿ ಲಭಿಸಿದೆ. ಈ ಕೀನ್ಯಾ ಮೂಲತ ಪೋಷಕರನ್ನು ಹೊಂದಿರುವ ಮೆಕ್ಸಿಕನ್ ಕಪ್ಪು ವರ್ಣದ ತಾರೆಗೆ ಆಸ್ಕರ್ ಪ್ರಶಸ್ತಿ ಲಭಿಸುವ ಮುನ್ನ 'ಎಸೆನ್ಸ್ ಮ್ಯಾಗಜೀನ್’  ಎಂಬ ಪ್ರಸಿದ್ಧ ಸಿನಿಮಾ ಪತ್ರಿಕೆ ’ಬ್ಲಾಕ್ "ಮೆನ್ ಇನ್ ಹಾಲಿವುಡ್’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಆ ಪ್ರಶಸ್ತಿ ಆಕೆ ಸ್ವೀಕರಿಸುವಾಗ ಮಾಡಿದ ಭಾಷಣದಲ್ಲಿ ತನ್ನ ಅಂತರಂಗದ ಸೌಂದರ್ಯವನ್ನು ಬಿಚ್ಚಿಟ್ಟಳು. ಅವಳಾಡಿದ ಮಾತುಗಳನ್ನು ಅನುವಾದಿಸಿ ಬರಹ ರೂಪದಲ್ಲಿರಿಸಿದ್ದೇನೆ.
                                                       *****  
"ಹುಡುಗಿಯೊಬ್ಬಳು ನನಗೆ ಬರೆದಿದ್ದ ಪತ್ರದ ಒಂದೆರಡು ಸಾಲುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. 'ಪ್ರಿಯ ಲುಪೀಟಾ, ರಾತ್ರೋ ರಾತ್ತಿ ಹಾಲಿವುಡ್‌ನಲ್ಲಿ ಯಶಸ್ಸು ಕಂಡ ನೀನು ಇಷ್ಟು ಕಪ್ಪಗಿರಲಿಕ್ಕೆ ನಿಜಕ್ಕೂ ಅದೃಷ್ಟ ಮಾಡಿದ್ದೆ ಅನ್ನಿಸುತ್ತ್ತಿದೆ. ನಾನು ನನ್ನ ಚರ್ಮವನ್ನು ಬೆಳ್ಳಗಾಗಿಸಲು ಫೇರ್‌ನೆಸ್ ಕ್ರೀಮ್ ಒಂದನ್ನು ಕೊಳ್ಳುವುದರಲ್ಲಿದ್ದೆ. ಅಷ್ಟರಲ್ಲಿ ನೀನು ಪ್ರಪಂಚದ ಭೂಪಟದಲ್ಲಿ ಕಾಣಿಸಿಕೊಂಡು ನನ್ನನ್ನು ಉಳಿಸಿದೆ". 
ಆ ಹುಡುಗಿ ಬರೆದ ಪತ್ರದ ಈ ಸಾಲುಗಳನ್ನು ಓದಿದ ನನ್ನ ಹೃದಯದಿಂದ ಕೊಂಚ ರಕ್ತ ಒಸರಿದಂತಾಯಿತು. ಶಾಲೆಯಿಂದ ಹೊರಬಿದ್ದೊಡನೆ ನಾನು ಆರಿಸಿಕೊಂಡ ಕೆಲಸ ನನ್ನನ್ನು ಈ ಮಟ್ಟಕ್ಕೆ ಪ್ರಭಾವಿಯನ್ನಾಗಿ ಮಾಡುತ್ತದೆ ಎಂಬ ಕಲ್ಪನೆಯೂ ನನಗಿರಲಿಲ್ಲ. 'ಕಲರ್ ಪರ್ಪಲ್'ನ ಆ ಮಹಿಳೆಯರು ನನ್ನ ಪಾಲಿಗೆ ಹೇಗೆ ಆಶಾಭಾವನೆ ತುಂಬಿದ್ದರೋ ಅದೇ ರೀತಿಯಲ್ಲಿ ನಾನೂ ಇತರರಿಗೆ ಸ್ಪೂರ್ತಿಯಾಗಿ ನಿಲ್ಲುವ ದೃಶ್ಯವನ್ನು ನಾನು ಕಲ್ಪಸಿಕೊಂಡೂ ಇರಲಿಲ್ಲ.
'ನಾನು ಸುಂದರವಾಗಿಲ್ಲ; ಕಪ್ಪಾಗಿದ್ದೇನೆ' ಎಂದು ನನಗೆ ನಾನೇ ಪದೇಪದೇ ಹೇಳಿಕೊಳ್ಳುತ್ತಿದ್ದ ದಿನಗಳು ನನಗೆ ನೆನಪಾಗುತ್ತವೆ. ಟಿ.ವಿ ಆನ್ ಮಾಡಿದರೆ ಸಾಕು ಬರೀ ಬಿಳಿಮುಖಗಳನ್ನು ನೋಡುತ್ತಿದ್ದೆ. ನನ್ನ ನಿಶಾವರ್ಣದ ಬಗ್ಗೆ ಅಪಹಾಸ್ಯ ಪರಿಹಾಸ್ಯಕ್ಕೊಳಗಾಗುತ್ತಿದ್ದೇನೆನಿಸುತ್ತಿತ್ತು. ಪವಾಡಗಳನ್ನೇ ಜರುಗಿಸುವ ಆ ದೇವರಿಗೆ ನನ್ನ ಒಂದೇ ಒಂದು ಪ್ರಾರ್ಥನೆ ಏನಾಗಿತ್ತೆಂದರೆ ನಾನು ಬೆಳಿಗ್ಗೆ ಹಾಸಿಗೆ ಬಿಟ್ಟು ಏಳುತ್ತಿದ್ದಂತೆ ನನ್ನ ತ್ವಚೆ ಬೆಳ್ಳಗಾಗಲಿ ಎಂದಾಗಿತ್ತು. ಏಳುವಾಗ ದೇವರೇನಾದರೂ ನನ್ನ ವಿನಂತಿ ಆಲಿಸಿ ಕೃಪೆ ತೋರಿರಬಹುದೇ ಎಂಬ ಆಸೆಯ ಕಣ್ಣುಗಳಿಂದ ಕನ್ನಡಿ ಬಳಿ ಓಡುತ್ತಿದ್ದೆ. ಕತ್ತು ಬಗ್ಗಿಸಿ ಮೈ ನೋಡಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ನಾನು ಮೊದಲು ನೋಡಿಕೊಳ್ಳಬಯಸುತ್ತಿದ್ದುದು ಬೆಳ್ಳಗಾಗಿ ಬದಲಾದ ನನ್ನ ಮುಖಾರವಿಂದವನ್ನು! ಆದರೆ ಪ್ರತಿದಿನವೂ ನನಗೆ ಅದೇ ಆಶಾಭಂಗವಾಗುತ್ತಿತ್ತು. ರಾತ್ರಿ ಮಲಗುವಾಗ ಹೇಗಿತ್ತೋ ಬೆಳಗೆದ್ದು ನೊಡಿಕೊಂಡಾಗಲೂ ಹಾಗೇ ಇರುತ್ತಿತ್ತು ನನ್ನ ಮುಖ. ಕೊನೆಗೆ ದೇವರೊಂದಿಗೆ ಒಂದು ಚೌಕಾಸಿ ಕುದುರಿಸಲು ನೋಡಿದೆ. ಆತನೇನಾದರೂ ನನ್ನ ಬೇಡಿಕೆ ಈಡೇರಿಸಿದರೆ ನಾನು ಸಕ್ಕರೆ ಉಂಡೆಗಳನ್ನು ಕದಿಯುವುದನ್ನು ನಿಲ್ಲಿಸಿಬಿಡುವ ಮಾತುಕೊಟ್ಟೆ. ಮಾತ್ರವಲ್ಲದೇ ದೇವರೇನಾದರೂ ನನ್ನನ್ನು ಸ್ವಲ್ಪವಾದರೂ ಬೆಳ್ಳಗೆ ಮಾಡಿದ್ದೇ ಆದಲ್ಲಿ ಅಮ್ಮ ಹೇಳುವ (ಇಲ್ಲೇ ಕುಳಿತಿದ್ದಾರೆ ಅಮ್ಮ) ಪ್ರತಿ ಮಾತನ್ನೂ ಚಾಚೂ ತಪ್ಪದೆ ಪಾಲಿಸುತ್ತೇನೆ ಮತ್ತು ಸ್ಕೂಲ್ ಸ್ವೆಟರ್‌ನ್ನು ಎಂದೂ ಕಳೆದುಕೊಂಡು ಮನೆಗೆ ಬರಲ್ಲ ಎಂದೂ ಮಾತುಕೊಟ್ಟೆ. ಆದರೆ ಈ ಯಾವ ಭರವಸೆಗಳೂ ದೇವರ ಮೇಲೆ ಪರಿಣಾಮ ಬೀರಲಿಲ್ಲ. ಅವನು ನನ್ನ ಮಾತುಗಳನ್ನು ಕೆಳಿಸಿಕೊಂಡೇ ಇರಲಿಲ್ಲ.
ನಾನು ಹದಿವಯಸ್ಸಿನವಳಾದಾಗ ನನ್ನ ಬಣ್ಣದ ಮೇಲೆ ನನಗಿದ್ದ ದ್ವೇಶ ಇನ್ನೂ ಹೆಚ್ಚಾುತು. ನನ್ನ ಅಮ್ಮನೇನೋ ಆಗಾಗ ನನ್ನನ್ನು 'ನೀನು ಚೆಂದ ಇದ್ದೀಯ ಕಣೆ’ ಎಂದು ಉಸುರುತ್ತಿದ್ದಳು. ಆದರೆ ಅದು ನನಗೇನೂ ಸಮಾಧಾನ ತರುತ್ತಿಲಿಲ್ಲ. ಎಷ್ಟೆಂದರೂ ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೇ. ಅಮ್ಮ ಹೇಳುತ್ತಿದ್ದುದೂ ಹಾಗೇ ಅಂದುಕೊಳ್ಳುತ್ತಿದ್ದೆ. ಆ ಹೊತ್ತಿನಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಮಾಡೆಲ್ ತಾರೆ  ಅಲೆಕ್ ವೆಕ್ ತೆರೆಯ ಮೇಲೆ ಕಾಣಿಸಿಕೊಂಡರು ನೋಡಿ. ಆಕೆಯೂ ಕತ್ತಲಿನಷ್ಟೇ ಕಡುಗಪ್ಪು ವರ್ಣದವಳು. ಆದರೂ ಪ್ರತಿಯೊಂದು ಮ್ಯಾಗಝೀನ್ ಹಾಗೂ ಪ್ರತಿಯೊಬ್ಬರ ಬಾಯಲ್ಲಿ ಆಕೆಯ ಚೆಲುವಿನ ಬಗ್ಗೆ ಪುಂಖಾನುಪುಂಖವಾಗಿ ಮಾತುಗಳು ಕೇಳಿಬರುತ್ತಿದ್ದವು. ಓಪ್ರಾ ಕೂಡಾ ಆಕೆಯನ್ನು ಚೆಲುವೆ ಎಂದು ಹೇಳಿದ ಮೇಲೆ ಅದು ನಿಜಸಂಗತಿಯೇ ಸರಿ.
 ನನ್ನದೇ ಬಣ್ಣದ ಮಹಿಳೆಯೊಬ್ಬಳನ್ನು ಜನರು ಸುಂದರಿ ಎಂದು ಸ್ವೀಕರಿಸುತ್ತಿರುವುದು ನನಗೆ ನನ್ನ ಕಣ್ಣುಗಳನ್ನೇ ನಂಬದಂತೆ ಮಾಡಿತ್ತು. ನನ್ನಲ್ಲಿ ನನ್ನ ಮುಖದ ಬಣ್ಣವೇ ನನಗೆ ಒಂದು ದೊಡ್ಡ ತಡೆ ಎಂದುಕೊಂಡಿದ್ದವಳು ನಾನು. ಆದರೆ ಇಲ್ಲಿ ಒಪ್ರಾ ಅದು ಹಾಗಲ್ಲ ಎನ್ನುತ್ತಿದ್ದರು. ನಾನು ನಿಜಕ್ಕೂ ಗೊಂದಲಕ್ಕೆ ಬಿದ್ದೆ. ನನ್ನ ಮನಸ್ಸು ಓಪ್ರಾ ಮಾತನ್ನು ನಿರಾಕರಿಸತೊಡಗಿತ್ತು. ಯಾಕೆಂದರೆ ನನ್ನದೇ ಅಸಮರ್ಪಕತೆಯ ಮೋಹಕ್ಕೆ ನಾನು ಹೊಂದಿಕೊಂಡಿದ್ದೆ. ಆದರೂ ನನ್ನೊಳಗೇ ಇದ್ದ ಹೂವೊಂದು ಅರಳುತ್ತಿತ್ತು. ಅಲೆಕ್ ಅವರನ್ನು ನೋಡಿದಾಗ ನಾನು ಆಕೆಯಲ್ಲಿ ನನ್ನನ್ನೇ ಕಂಡುಕೊಂಡಿದ್ದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೂ ನನ್ನ ಸುತ್ತಲಿನ ವಾತಾವರಣದಲ್ಲಿ ಬಿಳಿಚರ್ಮಕ್ಕೆ ಆದ್ಯತೆ ನೀಡುವುದು ಇದ್ದೇ ಇತ್ತು. ಎಲ್ಲರ ದೃಷ್ಟಿಯಲ್ಲಿ ನಾನು ಸುಂದರವಲ್ಲ ಎಂಬ ಭಾವನೆ ಕೊರೆಯುತ್ತಲೇ ಇತ್ತು. ಆ ಕುರಿತು ಯೋಚಿಸಿದಾಗಲೆಲ್ಲ ಮತ್ತೆ ನಾನು ಸುಂದರಳಲ್ಲ ಎನ್ನಿಸತೊಡಗುತ್ತಿತ್ತು. ಆಗ ಅಮ್ಮ ಹೇಳುತ್ತಿದ್ದ ಮಾತು ಇಷ್ಟೆ- "ಸೌಂದರ್ಯವನ್ನು ತಿನ್ನೋಕಾಗಲ್ಲ, ಅದೇನೂ ನಿನಗೆ ಹೊಟ್ಟೆ ತುಂಬಿಸಲ್ಲ". ಅವಳ ಈ ಮಾತುಗಳು ನನಗೆ ಬಹಳ ತಾಗಿದವು. ಸೌಂದರ್ಯ ಎನ್ನುವುದು ನಾವು ಸ್ವಾದೀನಪಡೆದುಕೊಳ್ಳಬಹುದಾದ ಅಥವಾ ನಾವು ಭೋಗಿಸುವಂತಹದ್ದಲ್ಲ. ಸೌಂದರ್ಯ ಏನಿದ್ದರೂ ನಾನು ಇರಬೇಕಾದ ಸ್ಥಿತಿ, ರೀತಿ ಎಂದು ನನಗೇ ಸ್ವತಃ ಮನವರಿಕೆಯಾಗುವವರೆಗೂ ಅಮ್ಮ ಹೇಳಿದ್ದ ಆ ಮಾತಿನ ಅರ್ಥ ಏನೆಂದು  ನನಗಾಗಿರಲಿಲ್ಲ.  'ನೀನು ನಿನ್ನ ಸೌಂದರ್ಯವನ್ನು ತಿನ್ನೋಕಾಗಲ್ಲ’ ಎಂದು ಅಮ್ಮ ಹೇಳಿದ್ದರ ಅರ್ಥ ನಮ್ಮನ್ನು ನಾವು ಉಳಿಸಿಕೊಳ್ಳುವುದು ನಾವು ಹೇಗೆ ಕಾಣುತ್ತೇವೆ ಎನ್ನುವುದನ್ನು ಅವಲಂಬಿಸಿಲ್ಲ ಎಂದು. ನಿಜದಲ್ಲಿ ನಮ್ಮನ್ನು ಉಳಿಸುವುದು ಮತ್ತು ಮೂಲಭೂತವಾಗಿ ಸುಂದರವಾದದ್ದು ಎಂದರೆ ನಮ್ಮೊಳಗಡೆ ನಮ್ಮ ಬಗೆಗೆ ಮತ್ತು ನಮ್ಮ ಸುತ್ತಲಿರುವವರ ಬಗೆಗೆ ನಾವು ಹೊಂದಿರುವ  ದಯೆ; ಕರುಣೆ ಮಾತ್ರ. ಈ ಬಗೆಯ ಸೌಂದರ್ಯ ಹೃದಯವನ್ನು ಬೆಳಗಿಸಬಲ್ಲದು ಮತ್ತು ಆತ್ಮಕ್ಕೆ ಆಹ್ಲಾದವನ್ನುಂಟುಮಾಡಬಲ್ಲದು.
ನಾನು ಅಭಿನಯಿಸಿದ ಪಾತ್ರವಾದ ಪ್ಯಾಟ್ಸಿ ತನ್ನ ಒಡೆಯನೊಂದಿಗೆ ಅಷ್ಟೊಂದು ತೊಂದರೆ ಎದುರಿಸಿದ್ದೂ ಇದಕ್ಕಾಗಿಯೇ. ಅಲ್ಲದೆ ಆಕೆಯ ಈ ಕತೆಯನ್ನು ಇಲ್ಲಿಯವರೆಗೆ ಉಳಿಸಿಕೊಂಡು ಬಂದಿದ್ದೂ ಇದೇ. ಅವಳ ದೇಹದ ಸೌಂದರ್ಯ ಮಸುಕಾದ ಮೇಲೂ ಅವಳಲ್ಲಿನ ಸ್ಪೂರ್ತಿಯ ಸೌಂದರ್ಯವನ್ನು ನಾವು ನೆನಪಿಸಿಕೊಳ್ಳಬಹುದು.
ನೀವು ಓದುವ ಮ್ಯಾಗಝೀನ್‌ಗಳಲ್ಲಿ, ಮತ್ತು ನಿಮ್ಮ ಟಿವಿಗಳ ಪರದೆಗಳ ಮೇಲೆ ನನ್ನ ಬರುವಿಕೆ ಯುವತಿಯರನ್ನೆಲ್ಲಾ ನನ್ನದೇ ಬಗೆಯ ಪಯಣದಕ್ಕೆ ಮುನ್ನಡೆಸಲಿ. ಬಾಹ್ಯ ಸೌಂದರ್ಯವನ್ನು ಗುರುತಿಸಿಕೊಳ್ಳುವುದರ ಜೊತೆಗೆ ಅಂತರಂಗದಲ್ಲಿ ಸುಂದರವಾಗಿ ಕಾಣುವ ಉದ್ದಿಮೆಯಲ್ಲಿ ಇನ್ನೂ ಆಳವಾಗಿ ತೊಡಗಿಸಿಕೊಳ್ಳುವ ಪಯಣ ನಿಮ್ಮದೂ ಆಗಲಿ ಎಂದು ಆಶಿಸುತ್ತೇನೆ. ನಾನು ಹೇಳಿದ ಈ ಅಂತರಂಗದ ಸೌಂದರ್ಯಕ್ಕೆ ಕಪ್ಪುಛಾಯೆ ಇರುವುದಿಲ್ಲ ಎಂದು ನೆನಪಿರಲಿ.
ಧನ್ಯವಾದಗಳು.  

****

ಈ ಮೇಲಿನ ಮಾತುಗಳನ್ನು ಇಲ್ಲಿ ಕೇಳಿ


ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.