ಮೇ 28, 2012

ಫೇಸ್ ಥ್ರೀ ಫೇಸ್!




ಇದು ಮೂರು ವ್ಯಕ್ತಿಗಳ ಆರು ಮುಖಗಳ ಕತೆ. ಮೊನ್ನೆಯಷ್ಟೇ  ಶಾಂತಿನಗರದ 'ಗ್ಯಾಲರಿ ಸುಮುಖ’ದಲ್ಲಿ  ಮುಕ್ತಾಯವಾದ  ’ಫೇಸ್ ಟೂ ಫೇಸ್’ (Face 2 Face)  ಛಾಯಾಚಿತ್ರ ಹಾಗೂ ವಿಡಿಯೋ ಪ್ರದರ್ಶನದ ವೇಳೆ ಕಂಡ ಮುಖಗಳಿವು.

ಫೇಸ್ ವನ್:
ಆ ವ್ಯಕ್ತಿ ಹೆಸರು ಬಗಡೆ ಹಳ್ಳಿ ಬಸವರಾಜು. ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಗಾಂಧೀಜಿ. ಅದೇ ಮಹಾತ್ಮ ಗಾಂಧೀಜೀನೇ!. ಗಾಂಧೀಜಿಯವರ ತತ್ವಗಳಿಂದ ಪ್ರೇರಿತನಾಗಿದ್ದ ಈ ಯುವಕ ಅವನ್ನು ಜನಮಾನಸದಲ್ಲಿ ಮತ್ತಷ್ಟು ದಟ್ಟಗೊಳಿಸಲು ಆಯ್ಕೆ ಮಾಡಿಕೊಂಡ ದಾರಿ ವಿಶಿಷ್ಟವಾದದ್ದು. ಅದೆಂದರೆ ಗಾಂಧೀಜಿಯವರನ್ನು ಹೋಲುವಂತೆಯೇ ಮೈತುಂಬಾ ಬೆಳ್ಳಿಯ ಬಣ್ಣ ಬಳಿದುಕೊಂಡು ಗಾಂಧೀಜಿಯವರ ಜೀವಂತ ವಿಗ್ರಹದಂತೆ  ಕೋಲೊಂದನ್ನು ಹಿಡಿದು ಜನರ ಮಂದೆ ಓಡಾಡುವುದು. ಈ ವೇಶದಲ್ಲಿ ಬಸವರಾಜ್ ನಾನಾ ಸಾರ್ವಜನಿಕ ಸಮಾರಂಭಗಳಲ್ಲಿ ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದಾರೆ. ಈ ’ಗಾಂಧೀ’ ಬಸವರಾಜ್‌ರನ್ನು ಕಂಡು ಜನರು ಗೌರವಿಸಿದ್ದಿದೆ, ಕೈ ಮುಗಿದಿದ್ದಿದೆ, ಅಪಹಾಸ್ಯ ಮಾಡಿ ಚುಡಾಯಿಸಿದ್ದಿದೆ, ವಿಚಿತ್ರವಾಗೊ ನೋಟ ಬೀರಿದ್ದೂ ಇದೆ. ಆದರೆ ಈ ಎಲ್ಲಾ ಪ್ರತಿಕ್ರಿಯೆಗಳಿಗೂ ಬಸವರಾಜ್‌ದು ಒಂದೇ ಉತ್ತರ. ಅದೇ ಗಾಂಧೀ ಸ್ಮೈಲು

ಫೇಸ್ ಟೂ:
ಈ ವ್ಯಕ್ತಿಯ ಹೆಸರು ವಿದ್ಯಾಸಾಗರ. ತಮ್ಮ ಯೌವನದಿಂದಲೂ ಇವರಿಗೆ ತಮಿಳು ನಟ ಎಂ.ಜಿ.ಆರ್ ಅವರನ್ನು ಕಂಡರೆ ವಿಚಿತ್ರ ಅಭಿಮಾನ. ತಮ್ಮ ಶಾಲಾ ಕಾಲೇಜು ದಿನಗಳಿಂದಲೇ ಎಂ.ಜಿ.ಆರ್‌ರನ್ನು ಅನುಕರಿಸಲು ತೊಡಗಿದವರು. ಮಾತ್ರವಲ್ಲ ಒಂದು ಬಗೆಯ ಗೀಳನ್ನೇ ಹಚ್ಚಿಕೊಂಡು ಬಿಟ್ಟರು. ಎಂಜಿಆರ್ ರಂತೆಯೇ ಮಾತು, ನಡಿಗೆ, ಉಡುಗೆ, ತೊಡುಗೆ, ಕೊನೆಗೆ ಕೂದಲು ಬಾಚಿಕೊಳ್ಳುವುದೂ ಎಂಜಿಆರ್ ತರಾನೇ. ನಂತರ ವಿದ್ಯಾಸಾಗರ್ ಸಿವಿಲ್ ಇಂಜಿನಿಯರ್ ಆದರು. ಆಗಲೂ ಈ ಗೀಳು ಬಿಡಲಿಲ್ಲ. ಇಂದಿಗೂ ಬಿಟ್ಟಿಲ್ಲ. ’ನನಗೆ ಎಂಜಿಆರ್ ಎಂದರೆ ನನಗೆ ಜೀವ, ಅವರು ಬೇರೆ ನಡರಂತಲ್ಲ್ಲ. ತಾವು ಸಿನಿಮಾದಲ್ಲಿ ದುಡಿದಿದ್ದೆಲ್ಲವನ್ನೂ ಬಡ ಬಗ್ಗರಿಗೆ ಹಂಚಿದ ಮಹಾತ್ಮ. ಅವರನ್ನು ಬಿಟ್ಟರೆ ಕನ್ನಡದಲ್ಲಿ ನನಗೆ ಇಷ್ಟವಾಗುವುದು ಡಾ. ರಾಜ್‌ಕುಮಾರ್ ಮಾತ್ರ’ ಎಂದು ಅರೆ ಬರೆ ಇಂಗ್ಲಿಷಿನಲ್ಲಿ ಎಂಜಿಆರ್ ಶೈಲಿಯಲ್ಲೇ ಹೇಳುತ್ತಾರೆ ವಿದ್ಯಾಸಾಗರ್.


ಫೇಸ್ ಥ್ರೀ:
ಇವರ ಹೆಸರು ಶಿವರಾಜು ಬಿ. ಎಸ್ ವೃತ್ತಿಯಲ್ಲಿ ಪೊಲೀಸ್. ಹಾಗಾಗಿ ಇವರು ಕಾಪ್ ಶಿವ. ಪ್ರವೃತ್ತಿಯಲ್ಲಿ ಛಾಯಾಗ್ರಾಹಕ. ಮೇಲಿನ ಎರಡೂ ವ್ಯಕ್ತಿಗಳ ಅಭಿನಯಗಳನ್ನು ಅದ್ಭುತವೆನ್ನುವಂತೆ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಕಾಪ್ ಶಿವ ಕೂಡಾ ಒಮ್ಮೆ ಪೊಲೀಸ್ ಆಗಿ ಮತ್ತೊಮ್ಮೆ ಛಾಯಾ ಚಿತ್ರ ಕಲಾವಿದನಾಗಿ ದ್ವಿಪಾತ್ರದಲ್ಲಿ ಬದುಕು ನಡೆಸುತ್ತಿದ್ದಾರೆ. ಪೊಲೀಸ್ ವೃತ್ತಿಯ ಒತ್ತಡದಲ್ಲಿ ತಮ್ಮೊಳಗಿನ ಕಲಾವಿದನನ್ನು ಪೊರೆಯುವುದು ಅಷ್ಟು ಸುಲಭದ ಮಾತಲ್ಲ. ಆದರೆ ಕಷ್ಟವನುಂಡೇ ಬೆಳೆದಿರುವ ಶಿವರಾಜು ಅವರಲ್ಲಿರುವ ಕಲಾವಿದನ ಬದ್ಧತೆ, ಆಸಕ್ತಿ ಅವರಿಗೆ ವಿಶೇಷ ಶಕ್ತಿ ನೀಡಿರಿಲಿಕ್ಕೂ ಸಾಕು. ಮೊದಮೊದಲಿಗೆ ಯಾವುದೇ ತರಬೇತಿಯನ್ನೂ ಪಡೆಯದೆ ಫೋಟೊಗ್ರಫಿಗಿಳಿದ ಶಿವ ಕ್ರಮೇಣ ಹಿರಿಯ ಛಾಯಾಗ್ರಾಹಕರ ಸಲಹೆ ಸಹಕಾರಗಳ ಮೂಲಕ ತನ್ನದೇ ಛಾಪನ್ನು ಒತ್ತಿದ್ದಾರೆ. ರಾಜ್ಯ, ದೇಶಗಳ ಗಡಿಯಾಚೆಗೂ ಕಾಪ್ ಶಿವ ಅವರ ಚಿತ್ರಗಳು ಪ್ರದರ್ಶನಗೊಂಡಿವೆ. ಪ್ರಾಯಶಃ ತಾನು ಈ ರೀತಿ ತನ್ನ ವೃತ್ತಿ ಮತ್ತು ಪ್ಯಾಷನ್‌ಗಳನು ನಿಭಾಯಿಸುವ ಸಂಘರ್ಷದಲ್ಲೇ ಕಾಪ್ ಶಿವ ಅವರಿಗೆ ತನ್ನಂತೆಯೇ ಇರುವ ಮೇಲಿನ ಎರಡು ಅದ್ಭುತ ವ್ಯಕ್ತಿತ್ವಗಳ ಕುರಿತು ಆಲೋಚಿಸುವಂತಾಗಿ ತನ್ನ ಕ್ಯಾಮೆರಾ ಕಣ್ಣನ್ನು ಆ ಕಡೆ ತಿರುಗಿಸುವಂತೆ ಮಾಡಿರಬಹುದು.


ಮೊನ್ನೆ ಈ ಚಿತ್ರ ಪ್ರದರ್ಶನ ಇನ್ನು ಕೇವಲ ಒಂದೇ ದಿನ ಬಾಕಿ ಇರುವಾಗ ನಾನು ಹೋದೆ. ’ಛೇ! ಮಿಸ್ ಮಾಡ್ಕೊಂಡು ಬಿಡ್ತಾ ಇದ್ನಲ್ಲಾ' ಎನ್ನಿಸಿತು.


ಡಬ್ಬಿಂಗ್ : ‘ಗುಮ್ಮ’ನೂ ಅಲ್ಲ ‘ಅಮ್ಮ’ನೂ ಅಲ್ಲ



(ದ ಸಂಡೆ ಇಂಡಿಯನ್ ಪಾಕ್ಷಿಕದಲ್ಲಿ ಪ್ರಕಟವಾದ ಮುಖಪುಟ ಲೇಖನ)

ಡಬ್ಬಿಂಗ್ ‘ಗುಮ್ಮ’ ಮತ್ತೆ ಎದುರಾಗಿದೆ. ಡಬ್ಬಿಂಗ್ ಪರವಾಗಿ ವಾದಗಳು, ಮಾತುಗಳು ಹಾಗೂ ‘ಡಬ್ಬಿಂಗ್ ಗುಮ್ಮನ’ ವಿರುದ್ಧವಾದ ವಾದಗಳು ಮತ್ತು ಬೆದರಿಕೆಗಳು ಟೀವಿ, ಪತ್ರಿಕೆ ಮತ್ತು ಸಾಮಾಜಿಕ ತಾಣಗಳಲ್ಲಿ ರಾರಾಜಿಸುತ್ತಿವೆ. ಅದರಲ್ಲೂ ಅಮಿರ್ ಖಾನ್ ಅವರ ಸಾಮಾಜಿಕ ಕಳಕಳಿಯ ‘ಸತ್ಯ ಮೇವ ಜಯತೇ’ ಕಾರ್ಯಕ್ರಮದ ಡಬ್ ಮಾಡಲಾದ ಕನ್ನಡ ಅವತರಣಿಕೆಯನ್ನು  ಸುವರ್ಣ ವಾಹಿನಿಯವರು ಪ್ರಸಾರ ಮಾಡದಂತೆ ನಿರ್ಬಂಧಿಸುವ ಪ್ರಯತ್ನಗಳು ಆರಂಭವಾಗುತ್ತಿದ್ದಂತೆ ಈ ಡಬ್ಬಿಂಗ್ ಬೇಕು-ಬೇಡ ಚರ್ಚೆಗಳು ಜೋರಾಗಿ ನಡೆದಿವೆ. ಇಡೀ ಚರ್ಚೆಯಲ್ಲಿ ಒಂದೋ ಡಬ್ಬಿಂಗ್ ಎಂದರೆ ಕನ್ನಡ ಚಿತ್ರರಂಗವನ್ನು, ಕನ್ನಡ ಭಾಷೆ - ಸಂಸ್ಕೃತಿಗಳನ್ನು ಕ್ಷಣಾರ್ಧದಲ್ಲಿ ತಿಂದು ತೇಗಿ ನೀರು ಕುಡಿದು ಬಿಡುವ ಭಯಂಕರ ಗುಮ್ಮನಂತೆ ತೋರಿಸಲಾಗುತ್ತಿದೆ ಇಲ್ಲವೇ ‘ಗುಮ್ಮನಿಗೆ ಬೆದರಿ ಅಮ್ಮನಿಗೂ ಬಾಗಿಲು ತೆರೆಯದಂತಾಗಿದೆ’ ಎಂದು ಹೇಳುತ್ತಾ ಕನ್ನಡವನ್ನು ಉಳಿಸಿ ಬೆಳೆಸಲು ಇರುವ ಏಕೈಕ ‘ಅಮ್ಮ’ ಈ ಡಬ್ಬಿಂಗ್‌ನ್ನು ಎಂಬಂತೆ ತೋರಿಸಲಾಗುತ್ತಿದೆ. ಇದೆರಡರಲ್ಲಿ ಯಾವುದು ಎಷ್ಟು ಸತ್ಯ? ಯಾವುದು ಎಷ್ಟು ಮಿಥ್ಯ? ಈ ಡಬ್ಬಿಂಗ್ ‘ಬೇಕು- ಬೇಡ’ದ ವಾದ-ವಿವಾದಗಳಲ್ಲಿ ಹೊರಬರುತ್ತಿರುವ ಸತ್ಯಸಂಗತಿಗಳಾದರೂ ಏನು ಎಂದು ಪರಾಂಬರಿಸಲು ಇದು ಸಕಾಲ ಎಂದೆನಿಸುತ್ತದೆ.
ಡಬ್ಬಿಂಗ್ ಪರವಾಗಿ ಮಾತುಬಂದೊಡನೆ ನಮ್ಮ ಚಿತ್ರರಂಗ ಹಿಂದಿನಿಂದಲೂ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾ ಬಂದಿದೆಯೋ ಈ ಸಲವೂ ಅದೇ ರೀತಿ ಪ್ರತಿಕ್ರಿಯೆ ಬಂದಿದೆ. ಅದೂ ನಟ ಶಿವಣ್ಣ ಅವರ ‘ಧಮಕಿ’ಶೈಲಿಯ ಮಾತುಗಳ ಮೂಲಕ. ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ಶಿವಣ್ಣ ಅವರಿಗೆ ಒಬ್ಬ ನಟರಾಗಿ ಅವರನ್ನು ಅತ್ಯಂತ ಮೆಚ್ಚಿಕೊಳ್ಳುವ ಅವರ ಕಟ್ಟಾ ಅಭಿಮಾನಿ ದೇವರುಗಳೂ ಸಹ ಇಂದು ಡಬ್ಬಿಂಗ್ ಪರವಾದ ಅಭಿಪ್ರಾಯ ಹೊಂದಿರಬಹುದಲ್ಲವೇ ಎಂಬ ಸಣ್ಣ ಸಂಶಯವೂ ಅವರಿಗೆ ಇದ್ದಂತಿಲ್ಲ. ಇಂದು ಡಬ್ಬಿಂಗ್ ವಿರುದ್ಧವಾಗಿ ವ್ಯಕ್ತವಾಗುತ್ತಿರುವ ಎಷ್ಟು ಅನಿಸಿಕೆಗಳು ಪ್ರಾಮಾಣಿಕವಾದವು? ಎಷ್ಟು ಆತಂಕಗಳು ವಸ್ತುಸ್ಥಿತಿಯನ್ನಾಧರಿಸಿರುವಂತವು ಎಂಬುದನ್ನೂ ಕೊಂಚ ನೋಡುವ ಅಗತ್ಯವಿದೆ. 
ಮೊದಲನೆಯದಾಗಿ, ಡಬ್ಬಿಂಗ್‌ನಿಂದಾಗಿ ಕನ್ನಡ ಸಿನಿಮಾ ಬೆಳೆಯಲು ಸಾಧ್ಯವಾಗುವುದಿಲ್ಲ ಎಂದು ಅ.ನ.ಕೃಷ್ಣರಾಯರಂತ ಕನ್ನಡ ಸಾಹಿತಿವರೇಣ್ಯರು ನಿಷೇಧಿಸಿದ್ದರು. ಶಿವಣ್ಣರಿಗೆ ಅಪ್ಪಾಜಿಯೂ, ಕೋಟಿ ಕೋಟಿ ಕನ್ನಡಿಗರ ಮೇರುನರೂ ಆದ ಡಾ. ರಾಜ್‌ಕುಮಾರ್ ಅಂತವರು ಇದಕ್ಕಾಗಿ ಹೋರಾಡಿದ್ದರು. ಹೀಗಾಗಿ ಆ ನಿಷೇಧವನ್ನೇ ಇಂದೂ ಮುಂದುವರೆಸಿಕೊಂಡು ಹೋಗಬೇಕೆಂಬುದು ಇವರ ಒತ್ತಾಯ. ನಿಜ. ೧೯೪೦ ರಿಂದ ೧೯೬೦ರ ದಶಕವು ಕನ್ನಡ ಸಿನಿಮಾಗಳೇ ಅತ್ಯಂತ ವಿರಳವಾಗಿದ್ದ ಕಾಲ. ಅಂದು ಸಿನಿಮಾ ನಿರ್ಮಿಸುವವರು ಪರಭಾಷೆಯವರೇ ಆಗಿದ್ದು ಪರಭಾಷೆಗಳಿಂದ ಕನ್ನಡಕ್ಕೆ ಡಬ್ ಆದ ಸಿನಿಮಾಗಳು ಬಿಡುಗಡೆಯಾಗುತ್ತಿದ್ದ ಕಾಲ ಅದು. ಕನ್ನಡ ಸಿನಿಮಾಗಳನ್ನೂ ಬೇರೆಯವರೇ ನಿರ್ಮಿಸಬೇಕಾಗಿತ್ತು. ಅಂದು ಕನ್ನಡ ಕಲಾವಿದರು ತಮ್ಮ ಅಸ್ತಿತ್ವಕ್ಕಾಗಿ ಹರಸಾಹಸಪಡಬೇಕಾಗಿತ್ತು. ಈ ಕಾರಣದಿಂದಾಗಿ ಡಬ್ಬಿಂಗ್ ನಿಷೇಧಿಸಿ ಕನ್ನಡ ಚಿತ್ರರಂಗ ತನ್ನ ಕಾಲಮೇಲೆ ತಾನು ನಿಂತುಕೊಳ್ಳಲು ಅನುವು ಮಾಡಿಕೊಟ್ಟಿದ್ದು ಅನಿವಾರ್ಯವಾದ ಮತ್ತು ಸರಿಯಾದ ಕ್ರಮವೇ ಆಗಿತ್ತು. ನಂತರದ ೫೦ ವರ್ಷಗಳಲ್ಲಿ ಇಂದು ಚಿತ್ರರಂಗ ಬಹು ಎತ್ತರಕ್ಕೆ ಬೆಳೆದು ನಿಂತಿದೆ. ನೂರಾರು ನಟ ನಟಿಯರು ಸಾವಿರಾರು ಕಲಾವಿದರು, ತಂತ್ರಜ್ಞರು ಇಂದು ಹಿರಿತೆರೆ ಮತ್ತು ಕಿರುತೆರೆಗಳನ್ನು ಓಡಿಸುತ್ತಿದ್ದಾರೆ. ಈ ಹೊತ್ತಿನಲ್ಲೂ ನಾಲ್ಕು ದಶಕಗಳ ಹಿಂದೆ ನೀಡಿದ್ದ ಕಾರಣಗಳನ್ನೇ ಇಟ್ಟುಕೊಂಡು ನಮ್ಮವರು ಇಂದಿಗೂ ಡಬ್ಬಿಂಗ್ ವಿರೋಧಿಸುತ್ತಿದ್ದಾರೆಂದರೆ ಎಂಥಹ ಸ್ಥಿತಿ! ಈ ದುಸ್ಥಿತಿಗೆ ನಿಜಕ್ಕೂ ಕಾರಣ ಏನು ಎನ್ನುವುದನ್ನು ಗಂಭೀರವಾಗಿಯೇ ಆಲೋಚಿಸಬೇಕಾಗಿದೆ. 

ಇಂದಿನ ನಮ್ಮ ಚಿತ್ರರಂಗದ ದುರಂತದ ದುಸ್ಥಿತಿಯೇ ಎಲ್ಲವನ್ನೂ ಹೇಳುತ್ತದೆ. ನಮ್ಮಲ್ಲಿ ಈಗ ಬಿಡುಗಡೆಯಾಗುತ್ತಿರುವ ಸಿನಿಮಾಗಳಲ್ಲಿ ರಿಮೇಕ್ ಸಿನಿಮಾಗಳೇ ಬಹುತೇಕವೇ ಎನ್ನುವುದಕ್ಕೆ ಸಾಕ್ಷಿ ಪುರಾವೆ ಏನೂ ಬೇಕಿಲ್ಲ ತಾನೇ? ಶಿವರಾಜ್ ಕುಮಾರ್‌ನಂತಹ ನಟ ಮಾತ್ರ ತಾನು ರಿಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ನಿರ್ಧರಿಸಿರಬಹುದು. ಆದರೆ ಕನ್ನಡದ ಬಹುತೇಕ ನಿರ್ಮಾಪಕರು, ನಿರ್ದೇಶಕರ ಚಿತ್ರಕತೆಗಳ ಕತೆ ಬೇರೆಯದೇ. ಕಳೆದ ಕೆಲವು ವರ್ಷಗಳಲ್ಲಿ ಬಿಡುಗಡೆಯಾಗಿರುವ ಸಾಲು ಸಾಲು ಸಿನಿಮಾಗಳಲ್ಲಿ ಇವರು ಹೇಳುವ ‘ಕನ್ನಡತನ’ ಏನಿದೆ ಎಷ್ಟಿದೆ ಎಂದು ನೊಡಿದರೆ ನಿರಾಸೆಯಾಗುತ್ತದೆ. ‘ತಮಿಳಿನ ‘ಸುಬ್ರಹ್ಮಣ್ಯಪುರಂ’ನ್ನು ‘ಅಡ್ಡ’ ಹೆಸರಿನಲ್ಲಿ ಕೊಳ್ಳೆಗಾಲದಲ್ಲಿ ಚಿತ್ರೀಕರಿಸಿದೊಡನೆ ಅದಕ್ಕೆ ಕನ್ನಡತನ ಬರುವುದು ಸಾಧ್ಯವಾ? ಕೆಲ ಸಿನಿಮಾಗಳಲ್ಲಂತೂ ಮುಖಗಳು ಮಾತ್ರ ಈ ರಾಜ್ಯದವರು ಎಂಬುದನ್ನು ಬಿಟ್ಟರೆ ಚಿತ್ರಕತೆ, ನಿರೂಪಣೆ, ಸೆಟ್, ಪ್ರತಿಯೊಂದು ಕನ್ನಡಿಗರಿಗೆ ಪರಕೀಯವೇ ಆಗಿರುತ್ತದೆಯಲ್ಲವೇ?. ಸುದೀಪ್, ದರ್ಶನ್, ಉಪೇಂದ್ರgಂತವರು ನಡಿಸುವ ರಿಮೇಕ್ ಸಿನೆಮಾಗಳನ್ನು ನೋಡುತ್ತಿದ್ದರೆ ಈ ನಟರನ್ನು ಹಾಕಿಕೊಂಡು ತಮಿಳು ಅಥವಾ ತೆಲುಗಿನವರು ತೆಗೆದ ಸಿನಿಮಾಗಳನ್ನೇ ‘ಡಬ್ಬಿಂಗ್’ ಮಾಡಿ ತೋರಿಸಲಾಗುತ್ತಿದೆ ಎಂದು ಅನ್ನಿಸದಿದ್ದರೆ ಕೇಳಿ. ಇವರಲ್ಲಿ ಯಾರಾದರೂ ಕನ್ನಡ ಸಿನೆಮಾವನ್ನು ಕನ್ನಡದ ನೆಲದ ಸೊಗಡಿಗೆ ತಕ್ಕಂತೆ ಉಳಿಸಿ ಬೆಳೆಸುವ ರಿಸ್ಕ್ ತೆಗೆದುಕೊಳ್ಳಲು ತಯಾರಿದ್ದಾರಾ? ಕೇವಲ ಹಣಕ್ಕಾಗಿ ಮತ್ತು ಕೆಲಸಕ್ಕಾಗಿ ‘ಕನ್ನಡತನವನ್ನೇ’ ಹರಾಜಿಗಿಟ್ಟಿರುವ ದಂಧೆಯಲ್ಲವಾ ಈ ರಿಮೇಕ್ ದಂಧೆ? ಈ ರಿಮೇಕ್ ದಂಧೆಯಲ್ಲಿ ಲಾಭದ ರುಚಿ ನೋಡಿರುವ ನಿರ್ಮಾಪಕ, ನಿರ್ದೇಶಕರು, ನಟರು ಒಂದೊಮ್ಮೆ ‘ಡಬ್ಬಿಂಗ್’ಗೆ ಅವಕಾಶವಾದರೆ ಈಗ ಕೈ ಹತ್ತಿರುವ ಇಂತಹ ಸುಲಭದ ಲಾಭದ ದಾರಿಯೇ ಮುಚ್ಚೀ ಹೋಗುತ್ತದಲ್ಲಾ ಎಂದು ಯೋಚಿಸಿಯೇ ಈಗ ಒಂದಾಗುತ್ತಿದ್ದಾರೆ ಎಂಬ ಗುಮಾನಿ ಜನರಲ್ಲಿದ್ದರೆ ಅದಕ್ಕೆ ಯಾರು ಕಾರಣ? ಡಬ್ಬಿಂಗ್‌ಗೆ ಇಷ್ಟು ದೊಡ್ಡ ದನಿಯಲ್ಲಿ ವಿರೋಧ ಪಡಿಸುತ್ತಿರುವವರು ಸಿನಿಮಾಗಳಲ್ಲಿ ಕನ್ನಡತನವನ್ನು ಕೊಲೆ ಮಾಡುತ್ತಿರುವ ರಿಮೇಕ್ ಚಿತ್ರಗಳನ್ನೂ ತಿರಸ್ಕರಿಸುವ ಘೋಷಣೆ ಹೊರಡಿಸಲಿ. ಇದು ಇವರಿಂದ ಸಾಧ್ಯವೇ?
ಎರಡನೆಯದಾಗಿ, ಟೀವಿ ಚರ್ಚೆಗಳಲ್ಲಿರಬಹುದು ಅಥವಾ ಬೇರೆಡೆ ಇರಬಹುದು ನಮ್ಮ ಸಿನಿಮಾದ ಮಂದಿ ‘ಡಬ್ಬಿಂಗ್’ ವಿರೋಧಿಸಲು ನೀಡುತ್ತಿರುವ ಅತ್ಯಂತ ಬಾಲಿಶ ಮತ್ತು ಹಾಸ್ಯಾಸ್ಪದ ಕಾರಣ ಎಂದರೆ ಡಬ್ಬಿಂಗ್‌ನಿಂದ ಕನ್ನಡ ಸಂಸ್ಕೃತಿ ಹಾಳಾಗುತ್ತದೆ ಹಾಗೂ ಕನ್ನಡ ಭಾಷೆ ಹಾಳಾಗುತ್ತದೆ. ಹೀಗೆ ಮಾತನಾಡುವಾಗ ಅವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬ ಅರಿವೂ ಇದ್ದಂತಿರುವುದಿಲ್ಲ. ಯಾಕೆಂದರೆ ಕಳೆದ ಹತ್ತಾರು ವರ್ಷಗಳಲ್ಲಿ ಕನ್ನಡಿಗರ ಅಭಿರುಚಿ, ಭಾಷೆ ಸಂಸ್ಕೃತಿಗಳೇನಾದರೂ ಪಾತಾಳಕ್ಕೆ ಸೇರಿದ್ದರೆ ಅದಕ್ಕೆ ಇತರೆಲ್ಲ ಸಾಮಾಜಿಕ ರಾಜಕೀಯ ಕಾರಣಗಳ ಜೊತೆಗೆ ನಮ್ಮ ಚಿತ್ರರಂಗದ ಕೊಡುಗೆಯೂ ಬಹಳಷ್ಟಿದೆ ಎಂಬುದರ ಆತ್ಮಾವಲೋಕನಕ್ಕೆ ನಮ್ಮವರು ತಯಾರಿದ್ದಾರಾ? ಲಾಗಾಯ್ತಿನಿಂದಲೂ ಎಂದಿಗೂ ಮಚ್ಚು ಲಾಂಗು ರೌಡಿಸಂಗಳು ಕನ್ನಡದ ಉತ್ತಮ ಸಂಸ್ಕೃತಿಯ ಭಾಗವಾಗಿರಲಿಲ್ಲ. ಆದರೆ ‘ಓಂ’ ಸಿನಿಮಾದಿಂದ  ಶುರುವಾಗಿ ಇಂದಿನವರೆಗೂ ಬಂದಿರುವ ಈ ಕಡಿ-ಕೊಚ್ಚು ಹೊಡಿಮಗ ಹೊಡಿಮಗ ಸಂಸ್ಕೃತಿಯನ್ನು ಬಿಂಬಿಸುವ ಸಿನಿಮಾಗಳು ನಾಡಿನ ಎಷ್ಟು ಯುವಕರನ್ನು ಹಾದಿ ತಪ್ಪಿಸಿವೆ, ಎಷ್ಟು ಕೊಲೆ ಸುಲಿಗೆಗಳಿಗೆ ಪ್ರಚೋದಿಸಿವೆ ಎಂಬುದರ ಲೆಕ್ಕವನ್ನು ಗಳಿಸಿದ ಹಣದ ಲೆಕ್ಕದಂತೆ ಇಟ್ಟಿದ್ದಾರಾ ಸಿನಿಮಾ ಮಂದಿ? ಸಮಾಜದ ದೌರ್ಬಲ್ಯಗಳಿಗೇ ಹೆಂಡ ಕುಡಿಸುವ ‘ಉಪೇಂದ್ರ’, ಹಲವಾರು ಹೆಣ್ಣುಮಕ್ಕಳ ಕಣ್ಣೀರಿಗೆ ಕಾರಣವಾದ ‘ಪ್ರೀತ್ಸೆ’ಯಂತಹ ಸಿನೆಮಾಗಳು ತರುಣರ ಮೇಲೆ ಬೀರಿದ ಅಡ್ಡ ಪರಿಣಾಮಗಳ ಬಗ್ಗೆ ಯೋಚಿಲು ಇವರಿಗೆ ಪುರುಸೊತ್ತು ಸಿಕ್ಕಿದೆಯಾ? ಅತ್ತ ಕಿರುತೆರೆಯಲ್ಲಿ ತೆಗೆದುಕೊಂಡರೂ ವರ್ಷಗಟ್ಟಲೆ ಮೆಲ್ಲಗೆ ಕಾಲು ಹಾಕುವ ಮೇಲ್ಮಧ್ಯಮ ವರ್ಗದ ಕುಟುಂಬಗಳಲ್ಲಿನ ಕತೆಗಳೇ ತುಂಬಿರುವ ಮೆಗಾ ಸೀರಿಯಲ್ ಧಾರಾವಾಹಿಗಳು ಬಿಂಬಿಸುತ್ತಿರುವ ‘ಸಂಸ್ಕೃತಿ’ಯಾವುದು? ಹೆಣ್ಣನ್ನು ದುಷ್ಟತೆಯ ಸಂಕೇತವನ್ನಾಗಿಸಿಬಿಟ್ಟಿರುವ ಈ ಬಹುತೇಕ ಧಾರವಾಹಿಗಳು ‘ಕನ್ನಡ ಸಂಸ್ಕೃತಿ’ಯನ್ನು ಪೊರೆಯುತ್ತಿವೆಯಾ?  ಟಿ. ಎನ್. ಸೀತಾರಾಂ, ಮತ್ತೊಂದಿಬ್ಬರನ್ನು ಬಿಟ್ಟರೆ ಇತರರಿಗೆ ಅನೈತಿಕ ಸಂಬಂಧ, ಮೌಢ್ಯ ಮಾಟ ಮಂತ್ರ ಬಿಟ್ಟರೆ ಬೇರೆ ವಿಷಯಗಳೇ ನಾಡಿನಲ್ಲಿ ಸಿಗುವುದಿಲ್ಲವೇ? 

ಭಾಷೆಯ ವಿಷಯಕ್ಕೆ ಬಂದರೂ ಇವರು ಹೇಳುವಂತೆ ನಮ್ಮ ಕನ್ನಡ ಚಿತ್ರಗಳು ಕನ್ನಡ ನುಡಿಯ ಬೆಳವಣಿಗೆಗೆ 
ನೆರವಾಗುತ್ತಿದೆಯಾ ಎಂದು ನೋಡಿದರೆ ನಿರಾಸೆಯಾಗುತ್ತದೆ. ಡಗಾರು, ಫಿಗರ್ರು, ಮಚ್ಚ, ಇಂತಹ ಕೀಳು ದರ್ಜೆಯ ಪದಗಳೇ ಇದುವರಗೆ ಚಿತ್ರರಂಗ ನೀಡಿರುವ ಬಳುವಳಿಗಳು. ಅಪ್ಪಾ ಲೂಸಾ, ಅಮ್ಮಾ ಲೂಸಾ, ಹಳೇ ಕಬ್ಣಾ ಹಳೇ ಪೇಪರ್‌ಗಳ ನಡುವೆ ಕಾಯ್ಕಿಣಿಯಂತವರ ಇತ್ತೀಚಿನ ಮುಂಗಾರು ಮಳೇ ಸಿನಿಮಾ ಹಾಡುಗಳು ಶವಕ್ಕೆ ಮಾಡಿದ ಶೃಂಗಾರದಂತಾಗಿದೆ ಅಷ್ಟೆ.  
ಇದೇ ಹೊತಿನಲ್ಲಿ ನಾವು ಒಂದು ಮುಖ್ಯ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಹಾಗಂತ ಕಳೆದ ಐದು ಹತ್ತು ವರ್ಷಗಳಲ್ಲಿ ಕನ್ನಡದ್ದೇ ಮಣ್ಣಿನ ಉತ್ತಮ ಸಿನಿಮಾಗಳನ್ನು ಸೃಷ್ಟಿವ ನಿಟ್ಟಿನಲ್ಲಿ ಸಾಹಿತ್ಯ ಬಂದಿಲ್ಲವಾ? ವರ್ಷಂಪ್ರತಿ ರಚನೆಯಾಗುವ ಸಾವಿರಾರು ಕತೆ ಕಾದಂಬರಿಗಳಲ್ಲಿ ಒಳ್ಳೆಯ ಜನ ನೋಡುವ ಸಿನಿಮಾಗಳಿಗೆ ಕತೆಗಳೇ ದಕ್ಕಿಲ್ಲವೇ? ನಾಗತಿಹಳ್ಳಿಯಂತವರು ಬಿಟ್ಟರೆ ಬೇರಾರಿಗೂ ಈ ಪ್ರಯತ್ನಗಳೇ ಒಗ್ಗುವುದಿಲ್ಲ ಯಾಕೆ? ಎಷ್ಟೇ ದುಡ್ಡು ಚೆಲ್ಲಲಿ ಸಿನಿಮಾಗಳು ನೆಲಕಚ್ಚುವುದೇ ಖಾಯಂ ಆಗಿದ್ದಾಗ ಇಂತಹ ನಮ್ಮ ನೆಲದ ಪ್ರಯತ್ನಗಳಿಗೆ ಇವರೇಕೆ ಮನಸ್ಸು ಮಾಡುವುದಿಲ್ಲ? ಈ ನೆಲದ ತಾಜಾತನವನ್ನುಳಿಸಿಕೊಳ್ಳುವ ಚಿತ್ರಕತೆ ಬರೆಯುವಂತವರಿಗೆ ನಾಡಿನಲ್ಲಿ ಬರವಿದೆಯೋ ಅಥವಾ ಅಂಥವರನ್ನು ಹುಡುಕಿ ಪ್ರೋತ್ಸಾಹಿಸಲು ನಮ್ಮ ನಿರ್ಮಾಪಕರ ತಲೆಯಲ್ಲಿರುವ ‘ದುಡ್ಡಿನ ದೆವ್ವ’ ಬಿಡುತ್ತಿಲ್ಲವೋ? ಹೀಗೆ ಸಂಸ್ಕೃತಿ-ಭಾಷೆಗಳ ವಿಷಯಕ್ಕೆ ಬಂದರೆ ನಮ್ಮ ನಿರ್ಮಾಪಕರಿಗಾಗಲೀ ನಿರ್ದೇಶಕರಿಗಾಗಲೀ ಮಾತನಾಡಲು ಮುಖವಿಲ್ಲದಂತಾಗುತ್ತದೆ. ಆದರೆ ಡಬ್ಬಿಂಗ್ ವಿಷಯಕ್ಕೆ ಬಂದೊಡನೆ ಸಂಸ್ಕೃತಿ ರಕ್ಷಣೆಯ ಮಾತು ಬರಲು ಹೇಗೆ ಸಾಧ್ಯ? ಡಬ್ಬಿಂಗ್‌ನ್ನು ’ಸಂಸ್ಕೃತಿ ಆಚರಣೆ ದೇಸೀಯತೆ ಮತ್ತು ಕನ್ನಡತನಗಳನ್ನು ನಾಶಮಾಡಿಬಿಡುವಂತಹ ಸುನಾಮಿ’ ಎಂದು ಹೇಳುವವರು ಡಬ್ಬಿಂಗ್ ಇಲ್ಲದೆಯೇ ಇವೆಲ್ಲವೂ ಈಗಾಗಲೇ ಸರ್ವನಾಶ ಮಾಡಿರುವ ಚಂಡಮಾರುತ ಯಾವುದು ಎಂದು ತಿಳಿಸಿಕೊಡಬೇಕು.  

ಕನ್ನಡ ಚಿತ್ರರಂಗದಲ್ಲಿ ‘ಕನ್ನಡತನ’ವೆನ್ನುತ್ತಿದ್ದಂತೆಯೇ ಮತ್ತೊಂದು ವಿಷಯವನ್ನೂ ಪರಿಗಣಿಸೋಣ. ನಯನತಾರಾ (ಸೂಪರ್), ಸದಾ (ಮೈಲಾರಿ), ಭಾವನಾ (ಜಾಕಿ, ವಿಷ್ಣುವರ್ಧನ, ರೋಮಿಯೋ), ಚಾರ್ಮಿ (ದೇವ್), ಭಾವನಾ), ನಿಖಿತಾ (ನಾರಿಯ ಸೀರೆಕದ್ದ, ಸಂಗೊಳ್ಳಿ ರಾಯಣ್ಣ), ನಮಿತಾ (ಹೂ), ಸುಮಿತ್ ಕೌರ್ (ಜೋಗಯ್ಯ), ಕರಿಷ್ಮಾ ತನ್ನಾ (ಸಾರಿ...ಮತ್ತೆ ಪ್ರೀತ್ಸೋಣ ), ಮಂಜರಿ (ಮುಂಜಾನೆ), ರೋಮಿಯೋ (ಭಾವನಾ), ಭಾಮಾ (ಶೈಲು), ಸಮೀರಾ ರೆಡ್ಡಿ (ವರದನಾಯಕ), ಆಕಾಂಕ್ಷಾ ಭಟ್ (ದಶಮುಖ), ಇಲಿಯಾನಾ (ಹುಡುಗಾ ಹುಡುಗಿ), ಉದಯತಾರಾ (ಪ್ರೀತ್ಸೆ ಪ್ರೀತ್ಸೆ), ಸಲೋನಿ (ತೀರ್ಥ, ಬುದ್ಧಿವಂತ), ಪಾರ್ವತಿ ಮೆನನ್ (ಮಿಲನ, ಮಳೆಯೂ ಬರಲಿ ಮಂಜೂ ಇರಲಿ, ಅಂದರ್ ಬಾಹರ್), ಇವರೆಲ್ಲ ನಮ್ಮ ಸೂಪರ್ ಸ್ಟಾರ್‌ಗಳ ಫೇಮಸ್ ಸಿನಿಮಾಗಳ ಹೀರೋಯಿನ್‌ಗಳು! ಇವರನ್ನೆಲ್ಲಾ ಚಿತ್ರಗಳಲ್ಲಿ ತೊಡಗಿಸುವಾಗ ಕನ್ನಡದ ಪ್ರತಿಭಾವಂತ ನಟಿಯರೇಕೆ ಇವರ ಕಣ್ಣೀಗೆ ಬೀಳುವುದಿಲ್ಲ? ರಾಜೇಶ್ ಕೃಷ್ಣನ್‌ನಂತಹ ಅದ್ಭುತ ಗಾಯಕರನ್ನು ಕಡೆಗಣಿಸಿ ಸೋನು ನಿಗಮ್, ಶ್ರೇಯಾ, ಕೈಲಾಶ್ ಖೇರ್‌ರಂತಹ ಕನ್ನಡ ಬಾರದವರಿಗೆ ಅವಕಾಶ ನೀಡುವ ಹಕೀಕತ್ತೇನು? ಡಬ್ಬಿಂಗ್ ಬಂದುಬಿಟ್ಟರೆ ಕನ್ನಡದ ಚಿತ್ರ ಕಲಾವಿದರಿಗೆ ಭಾರೀ ಅನ್ಯಾಯವಾಗುತ್ತದೆ ಎಂದು ಆಕಾಶ ಭೂಮಿ ಒಂದು ಮಾಡುವವರ ಅಪ್ರಮಾಣಿಕತೆ ಮತ್ತೆ ಇಲ್ಲಿ ಧುತ್ ಎಂದು ಎದುರಾಗುತ್ತದೆ. 
ಡಬ್ಬಿಂಗ್ ಎನ್ನುವುದು ಒಂದು ನಾಡಿನ ಭಾಷೆಯನ್ನು, ಉದ್ದಿಮೆಯನ್ನು ಹಾಳುಗೆಡವುತ್ತದೆಯೆನ್ನುವುದಾದರೆ ಕನ್ನಡದ ಸಿನೆಮಾಗಳಿಗೂ ಅದೇ ಅನ್ವಯಿಸುತ್ತದೆ ತಾನೇ? ಆದರೆ ಜಾಕಿ, ಸೂಪರ್‌ನಂತಹ ಚಿತ್ರಗಳು ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಿವೆ. ಅಲ್ಲಿನವರಿಗೆ ನಾವು ಹೇಳುವ ಯಾವ ನಿಯಮಗಳೂ ಅನ್ವಯಿಸುವುದಿಲ್ಲವೆಂದರೆ ಈ ಮಾತುಗಳ ಮೇಲೆಯೇ ನಂಬಿಕೆ ಹುಟ್ಟುವುದಿಲ್ಲ. 
ಈ ಮೇಲೆ ಹೇಳಿದ ಗಂಭೀರ ಸಮಸ್ಯೆಗಳನ್ನು ಕನ್ನಡ ಚಿತ್ರರಂಗ ಎದುರಿಸುತ್ತಿರುವ ಹೊತ್ತಿನಲ್ಲಿ ಚಿತ್ರರಂಗದವರ ಮಾತುಗಳಲ್ಲಿ ಕನ್ನಡಿಗರಿಗೆ ನಂಬಿಕೆ ಬರುತ್ತಿಲ್ಲ ಎನ್ನುವುದನ್ನು ಅವರೂ ಪರಿಗಣಿಸಲೇಬೇಕಾಗಿದೆ. ಸಮಾಜದ ನಾನಾ ವರ್ಗಗಳ ಜನರು ಇಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬೇರೆಲ್ಲೂ ಅವಕಾಶವಿರದ ಕಾರಣ ಫೇಸ್‌ಬುಕ್, ಬ್ಲಾಗ್‌ನಂತಹ ಸಾಮಾಜಿಕ ತಾಣಗಳಲ್ಲಿ ಜೋರು ದನಿಯಲ್ಲಿ ಸದ್ದು ಮಾಡುತ್ತಿದ್ದಾರೆ. ಈ ಸದ್ದು ದಿನಪತ್ರಿಕೆ, ಟಿವಿ ಚರ್ಚೆಗಳಲ್ಲಿ ಅನುರಣನೆಗೊಳ್ಳುತ್ತಿದೆ. ಇದು ಐನೂರು ಮಂದಿಯ ಚೀರಾಟ ಹಾರಾಟ ಎಂದು ಡಬ್ಬಿಂಗ್ ಪರವಾಗಿ ಎದ್ದಿರುವ ಧ್ವನಿಯನ್ನು ಕಡೆಗಣಿಸುವ ಸ್ಥಿತಿಯಂತೂ ಇಲ್ಲಿಲ್ಲವೆಂದೇ ತೋರುತ್ತದೆ. ಅಷ್ಟಕ್ಕೂ ಡಬ್ಬಿಂಗ್ ಎನ್ನುವಂತಹ ಒಂದು ಮಾಹಿತಿ ಪ್ರಸರಣ ವಿಧಾನ ಚಿತ್ರರಂಗದ ಮಂದಿ ಹಾಗೂ ಇತರ ಕೆಲವರು ಭೂತಗನ್ನಡಿಯಿಟ್ಟು ತೋರಿಸುತ್ತಿರುವಂತೆ ‘ದೊಡ್ಡ ಗುಮ್ಮ’ ಅಂತೂ ಅಲ್ಲ. ಯಾಕೆಂದರೆ ಜಗತ್ತಿನಲ್ಲಿ ನಾನಾ ಕಡೆಗಳಲ್ಲಿ ಕರ್ನಾಟಕಕ್ಕಿಂತಲೂ ಕಡಿಮೆ ಜನಸಂಖ್ಯೆಯ ದೇಶಗಳಲ್ಲಿ, ರಾಜ್ಯಗಳಲ್ಲಿ ಡಬ್ಬಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಲೆಲ್ಲೂ ಮೂಲ ಚಿತ್ರರಂಗವೇ ನಾಶವಾಗಿ ಹೋದ ಅಥವಾ ಡಬ್ಬಿಂಗ್‌ನ ಕಾರಣಕ್ಕಾಗಿಯೇ ಭಾಷೆ ಸಂಸ್ಕೃತಿಗಳು ಹಳ್ಳಹಿಡಿದ ಉದಾಹರಣೆಗಳಿಲ್ಲ. ೧೯೯೬ರಲ್ಲಿ ಸ್ಪೇನ್‌ನ ಬಾರ್ಸೆಲೋನಾದಲ್ಲಿ ವಿಶ್ವಸಂಸ್ಥೆಯ ಯುನೆಸ್ಕೋ ನಡೆಸಿದ ಭಾಷಾ ಹಕ್ಕುಗಳ ವಿಶ್ವ ಸಮ್ಮೇಳನದಲ್ಲಿಅಂಗೀಕರಿಸಲಾದ ಸಂವಿಧಾನದ ೪೪ ನೇ ವಿಧಿಯು ಡಬ್ಬಿಂಗ್‌ನ್ನೂ ಕೂಡ ಸಂಸ್ಕೃತಿಯ, ಭಾಷೆಯ ಬೆಳವಣಿಗೆಗೆ ಸಹಾಕಾರಿಯಾದ ಒಂದು ಉಪಯುಕ್ತ ಸಾಧನ ಎಂದೇ ಗುರುತಿಸಿದೆ. ಹಾಗಂತ ಲಂಗು ಲಗಾಮಿಲ್ಲದೆ ಡಬ್ಬಿಂಗ್‌ನ್ನು ಜಾರಿಗೊಳಿಸಿದರೆ ಖಂಡಿತವಾಗಿಯೂ ಸಮಸ್ಯೆಗಳುದ್ಭವಿಸಬಹುದು. ಈ ಬಗ್ಗೆ ನೆರೆಹೊರೆಯವರಿಂದ ಪಾಠ ಕಲಿತು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ಮುಖೇನ ಡಬ್ಬಿಂಗ್‌ಗೆ ಅವಕಾಶ ನೀಡಿದರೆ ಯಾರೂ ಆತಂಕಿತರಾಗಬೇಕಿಲ್ಲ. ವಾಸ್ತವವಾಗಿ ಡಬ್ಬಿಂಗ್ ನಮ್ಮಲ್ಲಿರುವ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚಿ ಕನ್ನಡದಲ್ಲೇ ಉತ್ತಮ ಪ್ರಯತ್ನಗಳಿಗೆ ದಾರಿ ಮಾಡಿಕೊಡುವುದರಲ್ಲೂ ಸಂದೇಹವಿರಬೇಕಿಲ್ಲ. ಡಬ್ಬಿಂಗ್‌ನಿಂದ ನಮ್ಮ ಕಲಾವಿದರೆಲ್ಲರೂ ಮಣ್ಣುತಿನ್ನಬೇಕಾಗುತ್ತದೆ, ಐದು ಸಾವಿರ ಮಂದಿ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂಬಂತಹ ವಾದಗಳು ಇಂದಿನ ಕಾಲಮಾನದಲ್ಲಿ ಅರ್ಥಕಳೆದುಕೊಂಡಿವೆ ಎಂದೇ ಹೇಳಬೇಕು. ಡಬ್ಬಿಂಗ್ ಶುರುವಾದೊಡನೆ ಕನ್ನಡ ಪ್ರೇಕ್ಷಕ ಬರೀ ಡಬ್ಬಿಂಗ್ ಆದ ಸಿನಿಮಾಗಳನ್ನೇ ನೋಡಲಾರಂಭಿಸಿ ಮೂಲ ಕನ್ನಡ ಸಿನಿಮಾಗಳ ಕಡೆ ತಲೆಯೂ ಹಾಕುವುದಿಲ್ಲ ಎಂದು ಸುಖಾ ಸುಮ್ಮನೇ ಆತಂಕ ಸೃಷ್ಟಿಸಿ ಕತ್ತಿ ಗುರಾಣಿ ಹಿಡಿದು ರಣಕಹಳೆ ಊದುವುದಿದೆಯಲ್ಲಾ ಇದು ಇಂದು ಕನ್ನಡ ಚಿತ್ರನಟರಾದಿಯಾಗಿ ಇಡೀ ಚಿತ್ರರಂಗವನ್ನು ದಶಕಗಳ ಕಾಲ ಪೊರೆಯುತ್ತಾ ಬಂದಿರುವ ಕನ್ನಡಿಗರಿಗೆ ಚಿತ್ರರಂಗದವರು ಮಾಡುವ ಅವಮಾನವಲ್ಲದೇ ಬೇರೇನೂ ಅಲ್ಲ. ಉತ್ತಮ ಸಿನಿಮಾಗಳು ಬಂದಾಗ ಎಂದೂ ಕನ್ನಡ ಪ್ರೇಕ್ಷಕ ಆ ಚಿತ್ರಗಳನ್ನು ಎಂಥಹ ಪರಿಸ್ಥಿತಿಯಲ್ಲೂ ಗೆಲ್ಲಿಸದೇ ಬಿಟ್ಟಿಲ್ಲ ಎಂಬುದನ್ನು ಯಾರೂ ಮರೆಯಬಾರದು. ಮುಂದೆಯೂ ಆ ವಿಶ್ವಾಸ ಎಲ್ಲರಿಗೂ ಇರಬೇಕು. ಅಷ್ಟಕ್ಕೂ ಡಬ್ಬಿಂಗ್ ಚಿತ್ರಗಳು ಎಂದೂ ಮೂಲಸಿನಿಮಾ ನೋಡಿದಂತಾಗುವುದಿಲ್ಲ. ಇಡೀ ಸಾಹಿತ್ಯದಲ್ಲಿ ಅನುವಾದ ಸಾಹಿತ್ಯ ಯಾವ ಪಾತ್ರವಹಿಸುತ್ತಿದೆಯೋ ಅಷ್ಟೇ ಪಾತ್ರ ದೃಶ್ಯ ಮಾಧ್ಯಮದಲ್ಲಿ ಡಬ್ಬಿಂಗ್‌ಗೆ ಇರುತ್ತದೆ. ಡಬ್ ಆದ ಚಿತ್ರಗಳು ತೀರಾ ಕೆಟ್ಟದಾಗಿದ್ದರೆ ಅವೂ ಮಕಾಡೆ ಮಲಗಲೇಬೇಕಾಗುತ್ತದೆ. ಡಬ್ಬಿಂಗ್ ವಿಷಯ ಬಂದೊಡನೆ ಚಿತ್ರರಂಗದ ಕಾರ್ಮಿಕರ ಹತೈಷಿಗಳಾಗಿ ಮಾತನಾಡುವವರೆಲ್ಲಾ ನಿಜಕ್ಕೂ ಕಾರ್ಮಿಕರ ಪರವೇ ಇದ್ದಾರೆ ಎಂದುಕೊಳ್ಳೋಣವೇ? ತಮ್ಮ ಕನಿಷ್ಠ ಹಕ್ಕುಗಳಿಗಾಗಿ ಯಾವಾಗೆಲ್ಲಾ ಚಿತ್ರರಂಗದ ಕಾರ್ಮಿಕರು ದನಿ ಎತ್ತಿದ್ದಾರೋ ಆಗೆಲ್ಲಾ ಇದೇ ಸಿನಿಮಾ ಪ್ರಭೃತಿಗಳು ಹೇಗೆ ನಡೆದುಕೊಂಡಿದ್ದಾರೆ ಎಂಬುದು ಯಾರಿಗೂ ತಿಳಿಯದ ವಿಷಯವೇನಲ್ಲ. ಕನಿಷ್ಠ ಕಾರ್ಮಿಕರು ಪ್ರತಿವರ್ಷ ಆಚರಿಸುವ ಮೇ ದಿನಾಚರಣೆಯಲ್ಲಿ ಯಾವ ನಟನೂ ಪಾಲ್ಗೊಳ್ಳಲಾರದಷ್ಟು ಕಾರ್ಮಿಕರ ಮೇಲೆ ಅಕ್ಕರೆ ಇರುವವರು ಕಾರ್ಮಿಕರ ಬಗ್ಗೆ ಕಂಬನಿಗರೆಯುತ್ತಾರೆಂದರೆ ಸುಲಭವಾಗಿ ನಂಬುವುದು ಅಭಿಮಾನಿ ದೇವರುಗಳಿಗೆ ತುಸು ಕಷ್ಟವೇ. 
ಮತ್ತೊಂದು ಕಡೆ ಇಂದು ಕನ್ನಡ ಚಿತ್ರ ರಂಗಕ್ಕೆ ದೊಡ್ಡಮಟ್ಟದಲ್ಲಿ ಪೆಟ್ಟು ನೀಡುತ್ತಿರುವುದು ಪರಭಾಷಾ ಚಿತ್ರೋದ್ಯಮ ಎಂಬುದು ನಿಚ್ಛಳವಾಗಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಹೋಗಿ ನೋಡಿ ಇಂದು ಹೆಚ್ಚು ದಿನ ಪ್ರದರ್ಶನ ಕಾಣುವುದು ತಮಿಳು, ತೆಲುಗು ಹಿಂದಿ ಸಿನಿಮಾಗಳೇ ವಿನಃ ಕನ್ನಡ ಭಾಷೆಯ ಸಿನಿಮಾಗಳಲ್ಲ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಮಾತ್ರ ಬಲ್ಲ ಕನ್ನಡ ಪ್ರೇಕ್ಷಕ ಏನು ಮಾಡಬೇಕು? ಕ್ರಮೇಣ ಕನ್ನಡ ಕೈಬಿಟ್ಟು ಆತನೂ ತಮಿಳು ತೆಲುಗು ಮಲಯಾಳಂ ಭಾಷೆ ಕಲಿತು ಅದೇ ಸಿನಿಮಾಗಳನ್ನು ನೋಡುವುದಾ? ಆಗ ಅವನನ್ನೇ ಕನ್ನಡ ನಿರಭಿಮಾನಿ ಎನ್ನಲು ಸಾಧ್ಯವಾ? ತಮಿಳಿನಲ್ಲೋ, ತೆಲುಗಿನಲ್ಲೋ ಅದ್ಭುತವಾಗಿ ಮೂಡಿ ಬರುವ ಸಿನಿಮಾಗಳು ಕನ್ನಡದಲ್ಲಿ ಪೇಲವವಾಗಿ ಬಂದಾಗ ಎರಡನ್ನೂ ನೋಡಿದ ಪ್ರೇಕ್ಷಕ ಮುಂದಿನ ಸಲ ಯಾವುದರೆಡೆ ವಾಲುತ್ತಾನೆ? ಇದಕ್ಕೆ ತೀರಾ ಇತ್ತೀಚಿನ ಉದಾಹರಣೆ ತಮಿಳಿನ ‘ಮೈನಾ’ ವನ್ನು ಕನ್ನಡದಲ್ಲಿ ಭಟ್ಟಿ ಇಳಿಸಿದ ‘ಶೈಲೂ’. ಇವರು ಮಾಡುವುದೇ ಪರಭಾಷೆಯ ಸಿನಿಮಾ ಎಂದಾದ ಆ ಪರಭಾಷೆಯ ಮೂಲ ಸಿನಿಮಾವನ್ನೇ ಪ್ರೇಕ್ಷಕ ಇಷ್ಟಪಟ್ಟರೆ ತಪ್ಪು ಯಾರದು ಹೇಳಿ. ಡಬ್ಬಿಂಗ್‌ಗೆ ಅವಕಾಶವಾದರೆ ಕನಿಷ್ಟ ಈ ಹಿಂಸೆ ತಪ್ಪುತ್ತದೆ ಎಂದು ಎಷ್ಟೋ ಜನ ಯೋಚಿಸುವವರಿದ್ದಾರೆ. ಈ ಮೂಲಕ ನಮ್ಮ ಭಾಷೆಯಲ್ಲೇ ಪರಭಾಷೆಯ ಸಿನಿಮಾ ನಮಗೆ ದಕ್ಕುತ್ತದಲ್ಲ ಎಂದು ಯೋಚಿಸುವುದು ತಪ್ಪಾಗುವುದಿಲ್ಲ. 

ಒಂದೊಮ್ಮೆ ಕನ್ನಡವನ್ನುಳಿಸಲು ಡಬ್ಬಿಂಗ್ ಬೇಡ ಎಂದು ಧ್ವನಿ ಎತ್ತಿದ್ದ ಕನ್ನಡಿಗ ಇಂದು ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಬೇಕು ಎಂದು ಕೂಗಿ ಹೇಳುತ್ತಿರುವುದು ನಿಜಕ್ಕೂ ಎಂಥಹ ವಿಪರ‍್ಯಾಸವಲ್ಲವೇ?! 

ಕನ್ನಡ ನುಡಿ, ಸಂಸ್ಕೃತಿ ಎಂದೊಡನೆ ಕನ್ನಡ ಸಿನಿಮಾಕ್ಕೆ ಸಮೀಕರಿಸುವುದಾಗಲೀ ಡಬ್ಬಿಂಗ್ ಎಂದ ಕೂಡಲೇ ಚಿತ್ರ ರಂಗಕ್ಕೆ ಮಾತ್ರ ಸೀಮಿತಗೊಳಿಸುವುದಾಗಲೀ ತಪ್ಪು. ಹಿಂದೊಂದು ಕಾಲವಿತ್ತು. ಕನ್ನಡದ ಸಂಸ್ಕೃತಿಯಲ್ಲಿ ಚಿತ್ರರಂಗವೆನ್ನುವುದು ಮಹತ್ತರ ಪಾತ್ರವಹಿಸುತ್ತಿತ್ತು. ಆದರೆ ಇಂದು ಹಾಗಿಲ್ಲ. ಕನ್ನಡ ಸಂಸ್ಕೃತಿಯ ಬೆಳವಣಿಗೆಯಲ್ಲಿ ಚಿತ್ರರಂಗದ ಪಾತ್ರ ಇಂದು ಅತ್ಯಲ್ಪ. ಹಾಗೆಯೇ ಡಬ್ಬಿಂಗ್‌ನ್ನು ಇಂದು ಅನೇಕರು ಬಯಸುತ್ತಿರುವುದು ಹಿರಿತೆರೆಯನ್ನು ಹೊರತುಪಡಿಸಿದ ‘ಜ್ಞಾನದ ಹರಿವಿನ’ ಕಾರಣಕ್ಕೂ ಎಂಬುದನ್ನು ಪರಾಂಬರಿಸಬೇಕು. ತಮಿಳು, ತೆಲುಗಿನವರು ನ್ಯಾಷನಲ್ ಜಿಯಾಗ್ರಫಿಕ್, ಡಿಸ್ಕವರಿ, ಹಿಸ್ಟರಿ, ಪೋಗೋದಂತಹ ವಾಹಿನಿಗಳನ್ನು, ಸ್ಟೀಫನ್ ಹಾಕಿಂಗ್‌ನ ‘ಇನ್ ಟು ದ ಯೂನಿವರ್ಸ್’ನಂತಹ ಅತ್ಯದ್ಭುತ ಕಾರ್ಯಕ್ರಮಗಳನ್ನು ತಮ್ಮ ಭಾಷೆಯಲ್ಲೇ ನೋಡಿ ತಮ್ಮ ಜ್ಞಾನದ ಹಸಿವನ್ನು ಇಂಗಿಸಿಕೊಳ್ಳುತ್ತಿದ್ದರೆ ನಾವು ನಮಗೆ ಸರಿಯಾಗಿ ಅರ್ಥವಾಗದ ಇಂಗ್ಲಿಷ್‌ನಲ್ಲಿ ನೋಡುತ್ತಾ ನಮ್ಮ ಮಕ್ಕಳಿಗೂ ತೋರಿಸುತ್ತಾ ಇರುವುದು ಅನ್ಯಾಯವಲ್ಲವಾ? ಅನೇಕ ಮಕ್ಕಳು ಇಷ್ಟಪಡುವ ‘ಚೋಟಾ ಭೀಮ್’ನನ್ನು ಕನ್ನಡದಲ್ಲೇ ತಮ್ಮ ಮಕ್ಕಳಿಗೆ ತೋರುವಂತಾಗಿದ್ದಿದ್ದರೆ ಎಂದು ಹಂಬಲಿಸುವ ಎಷ್ಟೋ ತಂದೆ ತಾಯಿಯರಿದ್ದಾರೆ. ಜುರಾಸಿಕ್ ಪಾರ್ಕ್, ಬೇಬೀಸ್ ಡೇಔಟ್, ಕಿಂಗ್ ಕಾಂಗ್, ಟೈಟಾನಕ್, ಅವತಾರ್‌ನಂತಹ ತಾಂತಿಕ ಅದ್ದೂರಿಯ ಹಾಗೂ ಮನರಂಜನಾ ಸಿನಿಮಾಗಳನ್ನು ಕನ್ನಡದಲ್ಲಿ ತಯಾರಿಸಲಾಗದಿದ್ದರೂ ಕನಿಷ್ಠ ಕನ್ನಡ ಭಾಷೆಯಲ್ಲಾದರೂ ನೋಡುವ ಅವಕಾಶ ಡಬ್ಬಿಂಗ್‌ನಿಂದ ಬರುತ್ತದೆಯಾದರೆ ಅದಕ್ಕೆ ಅಡ್ಡಗಾಲು ಹಾಕುವುದಾದರೂ ಯಾಕೆ? ನಮ್ಮದೇ ನಾಡಿನಲ್ಲಿ ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ‘ಬ್ಯಾರಿ’ಯಂತಹ ಬ್ಯಾರಿ ಭಾಷೆಯ ಹಾಗೂ ತುಳು ಭಾಷೆಯ ಸಿನಿಮಾಗಳು ಇಂಗ್ಲಿಷ್ ಸಬ್‌ಟೈಟಲ್ ಅರ್ಥವಾಗದ ಕನ್ನಡಿಗರಿಗೆ ತಲುಪುವ ದಾರಿ ‘ಡಬ್ಬಿಂಗ್’ ಅಲ್ಲವೇ? ಕನ್ನಡಿಗರೇ ಹಿಂದಿಯಲ್ಲಿ ನಿರ್ಮಿಸಿ ನಿರ್ದೇಶಿಸಿ ನಟಿಸಿದ ಮಾಲ್ಗುಡಿ ಡೇಸ್‌ನ್ನೂ ಕನ್ನಡದಲ್ಲಿ ನೋಡಡದಷ್ಟು ದೌರ್ಭಾಗ್ಯ ಕನ್ನಡಿಗರಿಗೇಕೆ? ಇವೆಲ್ಲವನ್ನೂ ಕನ್ನಡದಲ್ಲಿ ನೋಡುವುದು ನಮ್ಮ ಹಕ್ಕು ಎಂದು ಕನ್ನಡಿಗರು ಪ್ರತಿಪಾದಿಸುತ್ತಿದ್ದರೆ ‘ಅಲ್ಲ’ ಎನ್ನಲು ಯಾರಿದ್ದಾರೆ. ಆದರೆ ಚಿತ್ರರಂಗವು ತನ್ನದೇ ಲೆಕ್ಕಾಚಾರಗಳಿಂದ ಕನ್ನಡಿಗರ ಈ ಹಕ್ಕನ್ನು ಕಿತ್ತುಕೊಳ್ಳುತ್ತಿದೆ ಎನ್ನುವುದು ಸುಳ್ಳೇನೂ ಅಲ್ಲ. 
ಇಷ್ಟು ಹೇಳಿದ ಮಾತ್ರಕ್ಕೆ ಡಬ್ಬಿಂಗ್ ಇಂದು ಕನ್ನಡಿಗರ ವಿಮೋಚನೆಯ ಏಕೈಕ ಮಾರ್ಗ ಎಂದುಕೊಳ್ಳುವುದಾಗಲೀ ಡಬ್ಬಿಂಗ್ ಗುಮ್ಮನಲ್ಲವೆಂದೊಡನೆ ಅಮ್ಮನೇ ಎಂದು ಭ್ರಮಿಸುವುದು ಮತ್ತೊಂದು ಅತಿರೇಕವಾದೀತು. ಜಾಗತಿಕರಣದ ಹಾವಳಿಯಲ್ಲಿ ಇಡೀ ಸಿನಿಮಾ ರಂಗವೇ ದೊಡ್ಡ ಉದ್ದಿಮೆಯಾಗಿ ಮಾರ್ಪಟ್ಟು ಪ್ರೇಕ್ಷಕನನ್ನೂ ಗ್ರಾಹಕನನ್ನಾಗಿ ಮಾರ್ಪಡಿಸಿರುವ ಇಂದಿನ ದಿನಗಳಲ್ಲಿ ಪ್ರೇಕ್ಷಕರ ಅಭಿರುಚಿಗಳೂ ಕೆಟ್ಟು ನಿಂತಿವೆ. ಒಳ್ಳೆಯದು ಕೆಟ್ಟದ್ದರ ನಡುವಿನ ಅಂತರವನ್ನೂ ಗ್ರಹಿಸಲಾಗದ ಮಟ್ಟಿಗೆ ಜನಮಾನಸವೆಂಬುದು ಸಂವೇದನೆ ಕಳೆದುಕೊಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಇಂದು ಕನ್ನಡದಲ್ಲೇ ಬಿಡುಗಡೆಯಾಗುತ್ತಿರುವ  ಬದುಕಿಗೆ ಹತ್ತಿರವಾದ ಒಳ್ಳೆಯ ಸಿನೆಮಾಗಳನ್ನೂ ಕನ್ನಡ ಪ್ರೇಕ್ಷಕ ಸಲೀಸಾಗಿ ಸ್ವೀಕರಿಸುತ್ತಿಲ್ಲ ಎನ್ನುವುದೂ ವಾಸ್ತವ. ಗಿರೀಶ್ ಕಾಸರವಳ್ಳಿ, ಬಿ. ಸುರೇಶ್, ಪಿ.ಶೇಷಾದ್ರಿಯಂತವರ ಅತ್ಯುತ್ತಮ ಸಿನಿಮಾಗಳು ಸೀಮಿತವಲಯಕ್ಕೇ ಸೀಮಿತವಾಗುತ್ತಿರುವುದರಲ್ಲಿ ಈ ನಿರ್ದೇಶಕರ ‘ಅಪ್ಪಟ ಪರಿಶುದ್ಧತೆಯ’ ನೀತಿ ಕಾರಣವಾಗುವ ಜೊತೆಯಲ್ಲಿ  ಅಭಿರುಚಿಹೀನ ಕನ್ನಡ ಪ್ರೇಕ್ಷಕರ ಪಾಲೂ ಇದೆ. ಇಂತಹ ವಿಷಮ ಗಳಿಗೆಯಲ್ಲಿ ಎಗ್ಗಿಲ್ಲದೇ ಬಿಟ್ಟುಕೊಂಡರೆ ಡಬ್ಬಿಂಗ್ ವ್ಯತಿರಿಕ್ತ ಪರಿಣಾಮ ಬೀರಬಹುದು. ಎಲ್ಲಾ ಕ್ಷೇತ್ರಗಳಂತೆ ಡಬ್ಬಿಂಗ್ ಕ್ಷೇತ್ರದಲ್ಲೂ ಕೋಟ್ಯಧಿಪತಿಗಳೇ ಕೈಯಾಡಿಸುವುದರಿಂದ ಅವರು ಕನ್ನಡಕ್ಕೆ ಬೇಡವಾದ ಕಸವನ್ನೂ ತಂದು ರಾಶಿ ಹಾಕಬಹುದು. ಇದಕ್ಕೆ ನಾವ್ಯಾರೂ ಕುರುಡರಾಗಿರಬೇಕಿಲ್ಲ. ಆದರೆ ಇಂದಿನ ಬದಲಾದ ಸನ್ನಿವೇಶಗಳಲ್ಲಿ, ಕನ್ನಡಿಗರ ಹೆಚ್ಚುತ್ತಿರುವ ಆಕಾಂಕ್ಷೆ, ಅಭಿಲಾಷೆ ಮತ್ತು ಕನ್ನಡ ಭಾಷೆಯ ಹಿತದಿಂದ ಡಬ್ಬಿಂಗ್‌ಗೆ ಅವಕಾಶ ನೀಡುವುದು ಅತ್ಯವಶ್ಯ. ಅದೇ ರೀತಿ ನಮ್ಮ ಸೀಮಿತ ಸಿನಿಮಾ ಮಾರುಕಟ್ಟೆಯಲ್ಲಿ ಡಬ್ಬಿಂಗ್‌ನ್ನು ಎಷ್ಟರ ಮಟ್ಟಿಗೆ ಒಳಬಿಟ್ಟುಕೊಳ್ಳಬೇಕು, ಏನನ್ನು ಬಿಟ್ಟುಕೊಳ್ಳಬೇಕು ಇತ್ಯಾದಿಗಳನ್ನೂ ನಿರ್ದಿಷ್ಟೀಕರಿಸಿಕೊಂಡು ಮುಂದಡಿಯಿಡುವುದೂ ಅಷ್ಟೇ ಅವಶ್ಯಕ. ಇದೇನೂ ಆಗದ ಕೆಲಸವಲ್ಲ. ಆದರೆ ಈ ಕುರಿತು ಕನಿಷ್ಠ ಆರೋಗ್ಯಕರವಾದ ಚರ್ಚೆಗೂ ಅವಕಾಶ ನೀಡದೇ ಕನ್ನಡಿಗರ ನಾಲ್ಗೆ ಸೀಳ್ಸಿ, ಬಾಯಿ ಹೊಲ್ಸಾಕಲು ಯತ್ನಿಸುತ್ತಿರುವ ಪ್ರಯತ್ನಗಳು ಮಾತ್ರ ಅನಾರೋಗ್ಯಕರ. 



‘ಸತ್ಯಮೇವ ಜಯತೇ’ ಹಚ್ಚಿದ ಕಿಚ್ಚು




ಈ ಬಾರಿ ಡಬ್ಬಿಂಗ್ ವಿವಾದ ಮುನ್ನೆಲೆಗೆ ಮತ್ತೆ ಬಂದಿದ್ದೇ ಬಾಲಿವುಡ್‌ನ ನಟ ಅಮೀರ್ ಖಾನ್‌ನ ಮಹತ್ವಾಕಾಂಕ್ಷೆಯ ‘ಸತ್ಯ ಮೇವ ಜಯತೇ’ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡುವ ವಿಷಯದಲ್ಲುಂಟಾದದ ಕಿರಿಕ್‌ನಿಂದ. ಮೊದಲಿಗೆ ಸುವರ್ಣ ಸ್ಟಾರ್ ನಿರ್ದೇಶಕರು ಅದನ್ನು ಕರ್ನಾಟಕದಲ್ಲಿ ಕನ್ನಡದಲ್ಲೇ ಪ್ರಸಾರ ಮಾಡುವುದಾಗಿ ಹೇಳಿದ್ದರು. ಆ ಕೂಡಲೇ ಕಾರ್ಯಪ್ರವ್ರತ್ತರಾದ ಚಲನ ಚಿತ್ರ ಮಂಡಳಿ ಹಾಗೂ ಕಿರುತೆರೆ ಕಲಾವಿದರ ಸಂಘದ ಪದಾಧಿಕಾರಿಗಳು ಒತ್ತಡ ತಂದು ಸುವರ್ಣದ ನಿರ್ದೇಶಕರಿಂದ ಕನ್ನಡದಲ್ಲಿ ಪ್ರಸಾರ ಮಾಡುವುದಿಲ್ಲ ಎಂದು ಮರುಹೇಳಿಕೆ ಕೊಡಿಸಿದರು. ಮೊದಲಿನ ಘೋಷಣೆಯಿಂದ ಸಹಜವಾಗಿ ಸಂತಸಗೊಂಡಿದ್ದ ಪ್ರೇಕ್ಷಕರು ಈಗ ತೀವ್ರ ನಿರಾಸೆಗೊಳಗಾಗಿದ್ದರು. ಕೂಡಲೇ ಒಂದು ಅನ್‌ಲೈನ್ ಅರ್ಜಿ ಸಾವಿರಾರು ಜನರಿಂದ ಸಹಿ ಹಾಕಿಸಿಕೊಂಡು ಸುವರ್ಣ ಕಛೇರಿ ತಲುಪಿತ್ತು. ಇದಾದ ಬಳಿಕ ‘ಸತ್ಯಮೇವ ಜಯತೆ’ ಕಾರ್ಯಕ್ರಮದ ಕನ್ನಡ ಅವತರಣಿಕೆಯನ್ನು ಯೂಟ್ಯೂಬ್‌ನಲ್ಲಿ ವೆಬ್‌ಕಾಸ್ಟ್ ಮಾಡುವುದಾಗಿ ಭರವಸೆ ಬಂದು ಅದರಂತೆ ಮಾಡಲಾಯಿತು. ಈ ಕಾರ್ಯಕ್ರಮದ ಕನ್ನಡದ ಡಬ್ ಆಗಿ ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡ ಎರಡೇ ದಿನಗಳಲ್ಲಿ ೩೦,೦೦೦ ಜನರು ವೀಕ್ಷಿಸಿದ್ದರು! ಹಿಂದಿ ಬಾರದ ಅದೆಷ್ಟೋ ಕನ್ನಡಿಗರು ಆ ಕಾರ್ಯಕ್ರಮದಲ್ಲಿ ಭ್ರೂಣಹತ್ಯೆಯ ಕುರಿತು ನತದೃಷ್ಟ ಹೆಣ್ಣುಮಕ್ಕಳ ಮಾತುಗಳನ್ನು ಕನ್ನಡದಲ್ಲಿ ಕೇಳಿಸಿಕೊಂಡು ಕಣ್ಣೀರಿಟ್ಟಿದ್ದರಲ್ಲದೆ ಇಂತಹ ಒಂದು ಸಾಮಾಜಿಕ ಕಳಕಳಿಯ ಅದ್ಭುತ ಕಾರ್ಯಕ್ರಮವನ್ನು ನಡೆಸಲು ಹೊರಟಿರುವ ಅಮೀರನ ಹೃದಯ ಶ್ರೀಮಂತಿಕೆಗೆ ಮನದಲ್ಲೇ ಅಭಿನಂಸಿದಿದ್ದರು. ಆದರೆ ಸಾಮಾಜಿಕ ತಾಣ ಯೂಟ್ಯೂಬ್‌ನಲ್ಲಿ ಅಷ್ಟು ಜನರು ನೋಡಿದ್ದೇ ತಪ್ಪಾಗಿ ಮೂರನೇ ದಿನ ಅಲ್ಲಿಂದಲೂ  ದನ್ನು ಕಿತ್ತು ಹಾಕಿಸಿ ಕನ್ನಡಿಗರಿಗೆ ಅನ್ಯಾಯವೆಸಗಲಾಗಿತ್ತು. ಆಗ ಕನ್ನಡಿಗರು ಕೇಳಿಕೊಂಡ ಮೊದಲ ಪ್ರಶ್ನೆ ಕನ್ನಡ ನಾಡಿನಲ್ಲಿ ಸತ್ಯಕ್ಕೆ ಜಯ ದೊರೆವುದು ಯಾವಾಗ ? ಎಂದು. ಸತ್ಯಮೇವ ಜಯತೆಯು ಝೀ ಕನ್ನಡದ ರಿಯಾಲಿಟಿ ಶೋಗಳಂತಲ್ಲದೆ ಸ್ಪಷ್ಟ ಸಾಮಾಜಿಕ ಸಂದೇಶವನ್ನೂ ಬೀರುವ, ಪ್ರಜೆಗಳ ಅರಿವನ್ನು ಹೆಚ್ಚಿಸುವ, ಹಾಗೂ ದೇಶದ ಆಡಳಿತಗಾರರ ಮೇಲೆ ಒತ್ತಡವನ್ನು ಹೇರುವಂತಹದು. ಇದರ ಎರಡನೇ ಕಾರ್ಯಕ್ರಮದ ಪರಿಣಾಮವಾಗಿ ಸಂತ್ತಿನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಮಸೂದೆಯೊಂದು ಅನುಮೋದನೆಗೊಂಡಿದೆ. ದೇಶದ ಆರೋಗ್ಯ ರಂಗದ ದುಸ್ಥಿತಿಯನ್ನೂ, ಔಷಧಿ ಕ್ಷೇತ್ರದ ಅವ್ಯವಹಾರಗಳನ್ನೂ, ಸರ್ಕಾರಗಳು ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳನ್ನೂ ಮನಮುಟ್ಟುವ ಇತ್ತೀಚಿನ ಎಪಿಸೋಡ್ ಕೂಡಾ ಪರಿಣಾಮಕಾರಿಯಾಗಿತ್ತು. ಹೇಳಿ. ಇಂತಹ ಕಾರ್ಯಕ್ರಮ ಯಾಕೆ ಡಬ್ ಆಗಬಾರದು??

ಮೇ 26, 2012

ಕನ್ನಡಕ್ಕೆ ಬಂದ ಮತ್ತಷ್ಟು ಫ್ರೆಂಚ್ ಕತೆಗಳು




ಕೃತಿ: ಕಡಲಾಚೆಯ ಚೆಲುವೆ: ಫ್ರೆಂಚ್ ಕಥಾ ಸಾಹಿತ್ಯ.
ಅನುವಾದಕರು: ಕೇಶವ ಮಳಗಿ
ಪ್ರಕಾಶಕರು: ಕಥನ ಪ್ರಕಾಶನ
ಪುಟಗಳು: ೨೦೮
ಬೆಲೆ’ ೧೨೦ ರೂಪಾಯಿ


'ಕಥನ ಪ್ರಕಾಶನ’ವು ಪ್ರಕಟಿಸಿರುವ, ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ಕೇಶವ ಮಳಗಿಯವರ ’ಕಡಲಾಚೆಯ ಚೆಲು’ ಮತ್ತು ’ಸಂಕಥನ’ ಎಂಬ ಎರಡು ಕೃತಿಗಳು ಅವುಗಳ ವಿಷಯ ವಸ್ತುವಿನ ಕಾರಣಕ್ಕೆ ಅತ್ಯಂತ ಪ್ರಾಮುಖ್ಯತೆ ಇರುವಂತವು. ಎರಡೂ ಕೃತಿಗಳು ಫ್ರೆಂಚ್ ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳನ್ನು ಕನ್ನಡಕ್ಕೆ ಪರಿಚಯಿಸುವಲ್ಲಿ ಮಹತ್ವದ ಕೊಡುಗೆ ನೀಡಿವೆ. ಇದರಲ್ಲಿ ’ಸಂಕಥನ’ವು ಫ್ರೆಂಚ್ ನೆಲದ ವೈಚಾರಿಕ ಧಾರೆಯನ್ನು, ಸಿದ್ದಾಂತಿಗಳನ್ನು ಅವರ ತಾತ್ವಿಕ ಬರೆಹಗಳ ಸಮೇತ ಪರಿಚಯಿಸಿಕೊಟ್ಟರೆ ’ಕಡಲಾಚೆಯ ಚೆಲುವೆ’ ಕೃತಿಯು ಫ್ರೆಂಚ್ ಕಥೆಗಳನ್ನು ಅವುಗಳೆಲ್ಲಾ ಸತ್ವದೊಂದಿಗೆ ಕನ್ನಡದ ಓದುಗರಿಗೆ ದಾಟಿಸುತ್ತದೆ.
ಫ್ರೆಂಚ್ ಸಾಹಿತ್ಯಲೋಕವನ್ನು ಕನ್ನಡ ಓದುಗರಿಗೆ ತೆರೆದಿಡುವ ಪ್ರಯತ್ನವನ್ನು ಈ ಹಿಂದೆ ಅನೇಕರು ಮಾಡುತ್ತಲೇ ಬಂದಿದ್ದಾರೆ. ಡಾ. ಡಿ.ಎ.ಶಂಕರ್ ಅನುವಾದಿಸಿದ್ದ ಅಲ್ಬರ್ಟ್ ಕಮುವಿನ ’ಅನ್ಯ’ ಲಂಕೇಶರ ಅನೇಕ ಬರಹಗಳು ಮತ್ತು ಎಸ್. ದಿವಾಕರ್, ಬಸವರಾಜ ರಾಯ್ಕರ್, ಕೆ.ವಿ.ತಿರುಮಲೇಶ್, ಚಂದ್ರಶೇಖರ್ ಆಲೂರು, ಮುಂತಾದವರು ಅನುವಾದಿಸಿರುವ ಹಲವಾರು ಬಿಡಿಬಿಡಿ ಕಥೆಗಳು ಕನ್ನಡಿಗರಿಗೆ ಫ್ರೆಂಚ್ ಮಣ್ಣಿನ ಸೊಗಡನ್ನು ಅನುಭವಿಸುವ ಅವಕಾಶ ಒದಗಿಸಿವೆ. ಆದರೆ ಫ್ರೆಂಚ್ ಕಥಾ ಸಾಹಿತ್ಯವನ್ನು ಹಾಗೂ ವಿಚಾರ ಸಾಹಿತ್ಯವನ್ನು ಸಾರಸಂಗ್ರಹವಾಗಿ ಕನ್ನಡಕ್ಕೆ ತರುತ್ತಿರುವುದು ಈಗ ಇದೇ ಮೊದಲು. ಕೇಂದ್ರ ಸಂಸ್ಕೃತಿ ಇಲಾಖೆಯ ಫೆಲೋಶಿಪ್ ಭಾಗವಾಗಿ ಬಂದಿರುವ ಕೇಶವ ಮಳಗಿಯವರ ಈ ಅನುವಾದ ಕೃತಿಗಳು ಓದುಗರನ್ನು ಫ್ರೆಂಚ್ ಮನೋಲೋಕಕ್ಕೆ ಸಲೀಸಾಗಿ ಕರೆದುಕೊಂಡು ಹೋಗುತ್ತಲೇ ಕನ್ನಡದೊಂದಿಗಿನ ’ಫ್ರೆಂಚ್ ಕನೆಕ್ಷನ್’ನ್ನು ಗಟ್ಟಿಗೊಳಿಸುವಲ್ಲಿ ಸಂಶಯವೇ ಇಲ್ಲ.
ಕಡಲಾಚೆಯ ಚೆಲುವೆಯಲ್ಲಿ ಒಟ್ಟು ೨೨ ಲೇಖಕರ ೨೭ಕಥೆಗಳಿವೆ. ಇದರಲ್ಲಿ ೧೦ ಮಹಿಳಾ ಲೇಖಕಿಯರ ಆತ್ಮ ಕಥನಗಳ ಬರಹಗಳೂ ಕಥೆಗಳೂ ಸೇರಿವೆ. ಇಡೀ ಕೃತಿಯ ಒಂದೊಂದು ಕತೆಗಳೂ ವಿಶಿಷ್ಟವಾದವು. ಅನರೆ ದ ಬ್ಲಾಕ್‌ನ ಸಂದೇಶ ಕತೆಯಲ್ಲಿ ವ್ಯಕ್ತವಾಗುವ ಉತ್ಕಟ ಪ್ರೇಮ ನಮ್ಮನ್ನು ಬಹುವಾಗಿ ಪ್ರಭಾವಿಸುವಂತಹ ಕತೆ. ಎಮಿಲಿ ಜೋಲಾನ ’ಹುಚ್ಚನ ಕತೆ’ ಒಂದು ಹದಗೆಟ್ಟ ವೈವಾಹಿಕ ಸಂಬಂಧ ಉಂಟು ಮಾಡುವ ಪರಿಣಾಮದ ಸುತ್ತ ಕೊಂಡೊಯ್ಯುತ್ತದೆ. ಮುಗ್ಧತೆ ಹಾಗೂ ಕ್ಷಮಿಸುವ ಗುಣವನ್ನು ತುಸು ಹೆಚ್ಚೇ ಹೊಂದಿರುವ ಇಸಡೋರ್ ಹುಚ್ಚನಾಗಿ ದುರಂತ ಅಂತ್ಯ ಕಾಣಲು ಆಕೆಯ ಹೆಂಡತಿ ಹಾಗೂ ಸಡಿಲ ನಾಲಗೆಯ ಸಮಾಜಗಳು ಕಾರಣವಾಗುವ ಚಿತ್ರಣ ನಮ್ಮನ್ನು ಗಾಢವಾಗಿ ತಟ್ಟುತ್ತದೆ. ಕನ್ನಡ ಓದುಗರಿಗೆ ಬಹು ಪರಿಚಿತವಿರುವ ಗೇ ದ ಮೊಪಾಸನ ’ಪರಿತ್ಯಕ್ತ’ ಕತೆ ಬದುಕಿನ ಮತ್ತೊಂದು ವಿಚಿತ್ರ ಸನ್ನಿವೇಶವನ್ನು ಬಿಚ್ಚಿಡುತ್ತದೆ. ವಿವಾಹಕ್ಕೆ ಮೊದಲೇ ಪ್ರಿಯಕರನಿಂದ ಮಗುವನ್ನು ಪಡೆದು, ಒಂದೇ ದಿನದ ಮಗುವನ್ನು ಬೇರೆಯವರ ಪಾಲಾಗಿಸಿ ಬೇರೊಬ್ಬನೊಂದಿಗೆ ವಿವಾಹವಾಗಿರುವ ಮಹಿಳೆಯೊಬ್ಬಳು ನಲವತ್ತು ವರ್ಷಗಳ ಬಳಿಕ ಮತ್ತೆ ಅದೇ ಪ್ರಿಯಕರನೊಂದಿಗೆ ತನ್ನ ಮಗನನ್ನು ನೋಡಲು ಹೊರಡುವ ವಿಚಿತ್ರ ಸನ್ನಿವೇಶವನ್ನು ಈ ಕತೆ  ತಣ್ಣಗೆ ಬಿಚ್ಚಿಡುತ್ತದೆ. ಆ ತಾಯಿಯ ಕುಂತೀಯಾತನೆ ನಮ್ಮನ್ನು ಕಾಡುತ್ತದೆ. ಈಗಾಗಲೇ ಬೇರೆಯವರು ಅನುವಾದಿಸಿರುವ ಕಮುವಿನ ದ ’ಅಡಲ್ಟ್ರಸ್ ವುಮನ್’ ಇಲ್ಲಿ ’ಚಂಚಲೆ’ ಹೆಸರಿನಲ್ಲಿ ಅನುವಾದವಾಗಿದೆ. ಹೆಣ್ಣೊಬ್ಬಳು ತಾನು ಹಂಬಲಿಸುವ ಸುಖವನ್ನು ಕೊನೆಯಲ್ಲಿ ನಿಸರ್ಗದಲ್ಲಿ ಪಡೆಯುವ ಈ ಕತೆಯ ಒಂದೊಂದು ವಿವರಗಳೂ ಅನನ್ಯವಾಗಿವೆ. ಇಲ್ಲಿ ಕಮುವಿನ ಇನ್ನಿತರ ಎರಡು ಕತೆಗಳೂ ಇವೆ. ಜಾನ್ ಪಾಲ್ ಸಾರ್ತ್ರ್‌ನ ನಿದ್ರೆ ಇರದ ಇರುಳು ಎರಡನೆಯ ಮಹಾಯುದ್ಧದಲ್ಲಿಜರ್ಮನಿ ಆಕ್ರಮಣಕ್ಕೆ ಒಳಗಾಗುವ ಫ್ರಾನ್ಸ್ ಮತ್ತು ಅದರಿಂದ ತಳಮಳಕ್ಕೆ ಒಳಗಾಗುವ ಫ್ರೆಂಚ್ ತರುಣರ ಉದ್ವೇಘವನ್ನೂ ಹಾಗೂ ಅವರ ವಯುಕ್ತಿಕ ನೆಲೆಯ ಬಡಾಯವನ್ನು ಚಿತ್ರಿಸುತ್ತದೆ. ಸೆಂಬೇನ್ ಉಸ್ಮಾನ್‌ನ ನಕಲಿ ಪ್ರವಾದಿ ಎಂಬ ಕಥೆ ನಂಬಿಕೆ ಮತ್ತು ಆಚರಣೆಗಳ ಪ್ರಶ್ನೆಯನ್ನು ಎತ್ತುವದರೊಂದಿಗೆ ಡೋಂಗಿ ಸ್ವಾಮಿಗಳೇ ತುಂಬಿರುವ ನಮ್ಮ ಪರಿಸರಕ್ಕೆ ಹತ್ತಿರವಾಗಿರುವ ಕತೆಯಾಗಿದೆ. ಇಲ್ಲಿನ ಬಹುತೆಕ ಕತೆಗಳು ಒಂದಲ್ಲಾ ಒಂದು ಬಗೆಯಲ್ಲಿ ನಮ್ಮದೇ ಪರಿಸರದಲ್ಲಿ ಮೂಡಿಬಂದ ಕತೆಗಳಂತೆ ತೋರುವುದರಲ್ಲಿ ಕತೆಗಳ ಸಾರದೊಂದಿಗೆ ಅನುವಾದಕರ ಪರಿಶ್ರಮ ಎದ್ದು ತೋರುತ್ತದೆ. ಕೆಲವು ಕತೆಗಳೊಳಗಿನ ಸಂಭಾಷಣೆಯನ್ನು ಬಯಲು ಸೀಮೆಯ ಕನ್ನಡದಲ್ಲಿ ಕನ್ನಡಿಸಿರುವ ಕಾರಣ ಅವುಗಳಿಗೆ ಒಂದು ಸಾಮೀಪ್ಯತೆ ಬಂದೊದಗಿದೆ.
ಫ್ರೆಂಚ್ ಮಹಿಳಾ ಲೇಖಕಿಯರಲ್ಲಿ ಸಿಮನ್ ದ ಬೊವ, ಅನೀಸ್ ನಿನ್, ನಫೀಸ ದಿಯಾ ಮುಂತಾದವರ ಬರಹಗಳಿವೆ. ಈ ಕೃತಿಯ ವಿಶೇಷತೆಯೆಂದರೆ, ಇಲ್ಲಿ ಕೇವಲ ಪ್ರಾನ್ಸ್ ಮೇನ್‌ಲ್ಯಾಂಡಿನ ಲೇಖಕರ ಬರೆಹಗಳನ್ನು ಮಾತ್ರವಲ್ಲದೆ ಸೆನೆಗಲ್‌ನಂತಹ ಪ್ರಾನ್ಸ್‌ನ ವಸಾಹತುಗಳ ಲೇಖಕರ ಹಾಗೂ ಕೆನಡದಂತ ದೇಶಗಳಲ್ಲಿದ್ದುಕೊಂಡೇ ಫ್ರೆಂಚ್ ಕೃತಿಗಳನ್ನು ಬರೆದವರ ಕತೆಗಳನ್ನೂ ಇದು ಒಳಗೊಂಡಿದೆ.
ಇಲ್ಲಿ ಎಲ್ಲಾ ೨೨ ಲೇಖಕರ ಬಗೆಗೂ ಒಂದು ಕಿರುಪರಿಚಯವನ್ನು ಕೇಶವ ಮಳಗಿಯವರು ನೀಡಿರುವುದ ಬಹು ಉಪಯುಕ್ತವಾಗಿದೆ. ಮಾತ್ರವಲ್ಲದೆ ಆ ಲೇಖಕರ ಯಾವುದಾದರೂ ಕೃತಿ ಈಗಾಗಕೇ ಅನುವಾದಗೊಂಡಿದ್ದರೆ ಅದರ ಮಾಹಿತಿಯನ್ನೂ ನೋಡುವ ಮೂಲಕ ಅನುವಾದಕರು ಮಾದರಿಯಾಗಿದ್ದಾರೆ. ಹೀಗೆ ಬರಹಗಳ ಲೇಖಕರ ಆಯ್ಕೆ, ಕಥೆಗಳ ವಸ್ತುವಿಷಯ ಆಯ್ಕೆ, ಕೃತಿಯ ಸಂರಚನೆ, ಅನುವಾದದ ಭಾಷಾ ಸೊಗಡು, ಈ ಎಲ್ಲಾ ರೀತಿಯಿಂದಲೂ ’ಕಡಲಾಚೆಯ ಚೆಲುವು’ ಓದಲೇಬೇಕಾದ ಕೃತಿಯಾಗಿದ್ದರೆ ಕನ್ನಡೇತರ ಕೃತಿಗಳನ್ನು ಅನುವಾದಿಸುವವರಿಗೂ ಒಂದು ವಿಶಿಷ್ಠ ಹಾಗೂ ಆಕರ್ಷಕ ಮಾದರಿಯನ್ನು ಮುಂದಿಡುತ್ತದೆ.

ಕೃತಿಯ ಪುಟಗಳಿಂದ..
"ಈ ನಲ್ವತ್ತು ವರ್ಷಗಳ್ಲಲಿ ಅಲ್ಲಿಗೆ ಹೋಗಿ ಆತನನ್ನು ಕಂಡು, ತಬ್ಬಿಕೊಳ್ಳಬೇಕು ಎಂದಾಕೆ ಆಸೆಪಟ್ಟಿದ್ದು ಎಷ್ಟುಸಲವೋ! ಆತ ಬೆಳೆದು ದೊಡ್ಡವನಾಗಿರುತ್ತಾನೆ, ಎಂದು ಕೂಡ ಆಕೆ ಕಲ್ಪಿಸಿಕೊಳ್ಳಲಾರಳು! ಆತನಿನ್ನೂ ತಾನು ಒಂದು ದಿನದ ಮಟ್ಟಿಗೆ ತನ್ನ ತೋಳುಗಳಿಂದ ಬಳಸಿ, ಮಡಿಲಲ್ಲಿ ಮಲಗಿಸಿಕೊಂಡಿದ್ದ ಪುಟ್ಟ ಜೀವ ಎಂದೇ ಯಾವಾಗಲೂ ಆಕೆ ಚಿತ್ರಿಸಿಕೊಳ್ಳುತ್ತಿದ್ದಳು. ಈ ಯಾತನೆ ತಡೆಯುವುದು ನನ್ನಿಂದ ಸಾಧ್ಯವಿಲ್ಲ; ನಾನು ಮಗುವನ್ನು ನೋಡಲೇಬೇಕು! ಎಂದು ಅಪರೀವಲ್‌ಗೆ ಆಕೆ ಎಷ್ಟೋ ಸಲ ಹೇಳಿದ್ದುಂಟು...."


(ದ ಸಂಡೆ ಇಂಡಿಯನ್ ನ  ಈ ಹೊತ್ತಗೆ ವಿಭಾಗಕ್ಕೆ ಬರೆದದ್ದು)

ಮೇ 17, 2012

"ಲೇಖಕನಾದವನು ತಾನು ಕಂಡ ಸತ್ಯವನ್ನು ಪರೀಕ್ಷಿಸುತ್ತಿರಬೇಕು" - ಡಾ. ನಟರಾಜ್ ಹುಳಿಯಾರ್




ಡಾ. ನಟರಾಜ್ ಹುಳಿಯಾರ್ ಅವರು ಕಥೆಗಾರರಾಗಿ, ವಿಮರ್ಶಕರಾಗಿ ಮತ್ತು ಅಂಕಣಕಾರರಾಗಿ ಚಿರಪರಿಚಿತರು. ಲೋಹಿಯಾ ಚಿಂತನೆಗಳನ್ನು ಕನ್ನಡಕ್ಕೆ ತರುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಇತ್ತೀಚೆಗಷ್ಟೇ ನಟರಾಜ್ ಹುಳಿಯಾರ್ ಅವರ ಮೂರು ದಶಕಗಳ ಕತೆಗಳ ಸಂಕಲನ ’ಮಾಯಾಕಿನ್ನರಿ’ ಹಾಗೂ ಸಾಂಸ್ಕೃತಿಕ ಬರಹಗಳ ಸಂಕಲನ ’ಗಾಳಿ ಬೆಳಕು’ ಬಿಡುಗಡೆಯಾಗಿವೆ. ಇದೀಗ ಹಲವು ವಿಚಾರಗಳನ್ನು ಕುರಿತು  ತಮ್ಮ ನಿಲುವುಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ. 



ಸಾಹಿತ್ಯ ವಿಮರ್ಶೆಯನ್ನೂ ಬರೆದಿರುವ  ನೀವು ಸಾಹಿತ್ಯ ವಿಮರ್ಶೆ ಇಂದು ಪಡೆದುಕೊಂಡಿರುವ ಪ್ರಾಮುಖ್ಯತೆ ಬಗ್ಗೆ ಏನು ಹೇಳುತ್ತೀರಿ? 

ಸಾಹಿತ್ಯ ಇರುವವರೆಗೂ ಸಾಹಿತ್ಯ ವಿಮರ್ಶೆ ಇರಲೇಬೇಕಾಗುತ್ತದೆ. ಸಾಹಿತ್ಯ ವಿಮರ್ಶೆ ಇಂದು ಬೇರೆಯದೇ ಸ್ವರೂಪ ತಾಳಿದೆ. ಇಂದು ಅದು ಸಾಹಿತ್ಯ ಸಿದ್ಧಾಂತವಾಗುವ ಕಡೆ ಹೊರಳಿಕೊಂಡಿದೆ. ಸಾಹಿತ್ಯವಿಮರ್ಶೆ ಒಂದು  ಸ್ವತಂತ್ರ ಚಿಂತನಾ ಕ್ರಮವೂ ಹೌದು. ಸಂಸ್ಕೃತಿವಿಮರ್ಶೆ ಚಾಲ್ತಿಗೆ ಬಂದಾದ ಮೇಲೆ ಸಾಹಿತ್ಯವಿಮರ್ಶೆ ಕೇವಲ ಕೃತಿಯೊಂದನ್ನು ಕುರಿತ  ವಿಮರ್ಶೆಯಾಗಿ ಉಳಿದಿಲ್ಲ. ಅದು ಸಂಸ್ಕೃತಿ, ನಾಗರಿಕತೆಗೆ ಸಂಬಂಧಿಸಿದ ವಿಶಾಲ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಕೀರ್ತಿನಾಥ ಕುರ್ತಕೋಟಿಯಂಥವರು ಆರಂಭಿಸಿದ ಸಾಹಿತ್ಯ ವಿಮರ್ಶೆಗೂ ಇಂದಿನ ಸಾಹಿತ್ಯ ವಿಮರ್ಶೆಗೂ ವ್ಯತ್ಯಾಸ ಇಲ್ಲಿದೆ. ಹೀಗಾಗಿ ಇಂದಿನ ಸಾಹಿತ್ಯ ವಿಮರ್ಶೆ ಸಾಹಿತ್ಯ ಕೃತಿಗಳಿಂದ ಹೆಚ್ಚು ಸ್ವತಂತ್ರವಾಗಿದೆ. ಹಾಗೇ ಸಾಹಿತ್ಯ ವಿಮರ್ಶೆ ಸಾಹಿತ್ಯ ಸಂಶೋಧನೆಗೂ ದೊಡ್ಡ ಮಟ್ಟದಲ್ಲಿ ಬಳಕೆಯಾಗುತ್ತಿದೆ. 

ಕನ್ನಡದಲ್ಲಿ ಸಾಹಿತ್ಯವೇನೋ ಅಪಾರ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ. ಆದರೆ ಈ ಸಾಹಿತ್ಯ ಯಾವ ಮೌಲ್ಯಗಳನ್ನು ಬಿಂಬಿಸುತ್ತಿದೆ?  
ಇಂದು ಸಹಸ್ರಾರು ಪುಸ್ತಕಗಳು ಬರುತ್ತಿರುವುದರಿಂದ ಎಲ್ಲಾ ಕೃತಿಗಳೂ ಎಲ್ಲರ ಕಣ್ಣಿಗೂ ಬೀಳದಿರಬಹುದು. ಆದರೆ ಎಲ್ಲಾ ಕಾಲದಲ್ಲೂ ಆ ಕಾಲದ ಶ್ರೇಷ್ಠ ಸಾಹಿತ್ಯ ಎನ್ನುವುದು ಬರುತ್ತಲೇ ಇರುತ್ತದೆ. ನಾನು ಜಗತ್‌ಸಾಹಿತ್ಯದ ವಿದ್ಯಾರ್ಥಿಯೂ ಆಗಿರುವುದರಿಂದ ಯಾಕೋ ನಮ್ಮ ಇತ್ತೀಚಿನ ಕೃತಿಗಳು ಆ ಮಟ್ಟವನ್ನು ತಲುಪುತ್ತಿಲ್ಲ್ಲವೇನೋ ಎಂದು ನನಗೆ ಅನ್ನಿಸಿದೆ. ಕುವೆಂಪು,ಅನಂತಮೂರ್ತಿ,ಲಂಕೇಶ್, ತೇಜಸ್ವಿ, ಬೇಂದ್ರೆ, ದೇವನೂರರಂತೆಯೇ ಕನ್ನಡೇತರ ಲೇಖಕರಾದ ಮಾರ್ಕ್ವೆಜ್, ನೆರೂಡ, ಮಿಲನ್ ಕುಂದೇರಾ ಕೂಡ ದೊಡ್ಡ ಲೇಖಕರು ಎಂಬ ಅರಿವು ಕೂಡ ನಮಗೆ ಬೇಕು. ಇದನ್ನು ಗ್ರಹಿಸುವಲ್ಲಿ ಅನೇಕರು ಸ್ಥಗಿತಗೊಂಡಿದ್ದಾರೆ ಅನ್ನಿಸುತ್ತದೆ. 

ಬರಹಗಾರರ ಮೇಲೆ ಇರುತ್ತಿದ್ದ ಪಾಶ್ಚಾತ್ಯ ಸಾಹಿತ್ಯ ಸಿದ್ಧಾಂತಗಳ ಪ್ರಭಾವ ಇಂದು ಆ ಮಟ್ಟಕ್ಕಿಲ್ಲ. ಈ ಕುರಿತು ಏನು ಹೇಳುತ್ತೀರಿ? 
ಪ್ರಾಯಶಃ ಕನ್ನಡಸಂಸ್ಕೃತಿ ತನ್ನನ್ನು ತಾನು ಸ್ವಯಂಪೂರ್ಣ ಎಂದುಕೊಂಡಿರಬಹುದು.ಆದರೆ,ನೋಮ್ ಚಾಮ್‌ಸ್ಕಿಯಂತಹ ಈ ಕಾಲದ ದೊಡ್ಡ ಸಿದ್ಧಾಂತಿಗಳಿದ್ದಾರೆ. ಅವರಿಂದ ನಾವು ಪಡೆಯದಿದ್ದರೆ ಹೇಗೆ?ಇಂದು  ಸಾಹಿತ್ಯದಲ್ಲಿ ಪೂರ್ವ,ಪಶ್ಚಿಮಗಳ ಕಲ್ಪನೆ ಹಿಂದಿನಂತೆ ಇಲ್ಲ. ಯೂರೋಪಿನ ಕಾರ್ಲ್‌ಮಾರ್ಕ್ಸ್ ಸಮಾಜವನ್ನು ನಿರ್ದಿಷ್ಟ ದಿಕ್ಕುಗಳಿಂದ ವಿವರಿಸದಿದ್ದಲ್ಲಿ ನಂತರ ಲೋಹಿಯಾ, ಅಂಬೇಡ್ಕರ್‌ರಿಗಾಗಲೀ, ಸ್ತ್ರೀವಾದಿಗಳಿಗಾಗಲೀ, ಚಾಮ್‌ಸ್ಕಿಯಂತವರಿಗಾಗಲೀ ಹೊಸ ಹಾದಿಗಳು ತೆರೆಯುತ್ತಲೇ ಇರಲಿಲ್ಲ. ವಿಮೋಚನಾ ಸಿದ್ಧಾಂತ ಜಗತ್ತಿನ ಯಾವುದೇ ಮೂಲೆಯಿಂದ ಬರಲಿ,ಅದನ್ನು ನಾವು ಸ್ವೀಕರಿಸಬೇಕಾಗುತ್ತದೆ. ಈಗಿನ ವಸಾಹತೋತ್ತರ ಸನ್ನಿವೇಶವನ್ನು ವಿವರಿಸಲು ಕನ್ನಡದಲ್ಲೇ ಹೆಚ್ಚು ಥಿಯರಿಗಳಿವೆ ಎಂದು ನಾನು ತಿಳಿದಿಲ್ಲ. ಇದೇ ಕಾಲದಲ್ಲೇ ಇರುವ ಆಫ್ರಿಕಾದ ಗೂಗಿ ವಾ ಥಿಯಾಂಗೋ, ಚಿನುವಾ ಅಚಿಬೆ ಕೂಡ ಸಿದ್ಧಾಂತಗಳನ್ನು ಕಟ್ಟುತ್ತಿದ್ದಾರಲ್ಲ? ಎಡ್ವರ್ಡ್ ಸೈದ್ ಪ್ಯಾಲೆಸ್ತೀನಿಯರ ಪರವಾಗಿ ಚಿಂತಿಸ್ತಾ ಇದ್ದರಲ್ಲ? ಪೂರ್ವ, ಪಶ್ಚಿಮ ಎನ್ನುವ ಆಯ್ಕೆ ಕೂಡ ಅನೇಕ ಸಲ ಅವರವರ ಅಭಿರುಚಿ, ಸಂವೇದನೆಗೆ ಬಿಟ್ಟಿದ್ದು. ಉದಾಹರಣೆಗೆ ನನ್ನ ಹದಿನೇಳನೇ ವಯಸ್ಸಿನಲ್ಲಿ ಸಿಕ್ಕಿದ ಆಲ್ಬರ್ಟ್ ಕಾಮುವಿನ ’ಅನ್ಯ’ ನನ್ನನ್ನು ಎಲ್ಲೆಲ್ಲೋ ಕರೆದುಕೊಂಡು ಹೋಯಿತು. ನಮಗೆ ವ್ಯಕ್ತಿಯ ವರ್ತನೆಯನ್ನು ಅರಿಯುವುದಕ್ಕೆ ದೇವನೂರರ ’ದತ್ತ’, ಅನಂತಮೂರ್ತಿಯವರ ’ಕಾರ್ತೀಕ’, ತೇಜಸ್ವಿಯವರ ’ಸ್ವರೂಪ’...ಹೀಗೆ ಎಲ್ಲ ಕತೆಗಳೂ ಬೇಕು;ಹಾಗೆಯೇ ಕಾಫ್ಕಾನ  ’ದ ಟ್ರಯಲ್’ ಕೂಡ ಬೇಕು.ಇವತ್ತು ಜಗತ್ತಿನ ಶ್ರೇಷ್ಠ ಲೇಖಕ ಮಾರ್ಕ್ವೆಜ್ ನಮ್ಮೊಂದಿಗಿದ್ದಾರೆ. ಝೆಕೋಸ್ಲವಾಕಿಯಾದ ಮಿಲನ್ ಕುಂದೇರ ನನಗೆ ಪ್ರಿಯವಾದ ಲೇಖಕ. ಅವರೊಂದಿಗೂ ನಾವು ಮಾತಾಡಿಕೊಳ್ಳಬೇಕಲ್ಲವೇ? ನಾವು ಪಶ್ಚಿಮದಿಂದ ಏನನ್ನೂ ಪಡೆಯಬಾರದು ಎಂದು ಒಂದು ತಡೆ ನಿರ್ಮಿಸಿಕೊಂಡು ಬಿಟ್ಟಿದ್ದೇವೆ.  ಆದರೆ ಪಶ್ಚಿಮ  ಎನ್ನುವುದು ಇಂದು ಏನೇನೋ ಆಗಿಬಿಟ್ಟಿದೆ. ಇಂದು ಇಂಗ್ಲೆಂಡ್‌ನಿಂದ ಯಾವ ದೊಡ್ಡ ಬರಹಗಾರನೂ ಬರುತ್ತಿಲ್ಲ. ಆದರೆ ಇಸ್ತಾನ್‌ಬುಲ್‌ನ ಒರಾನ್ ಪಾಮುಕ್ ಬರೆಯುತ್ತಿರುವುದು ನನಗೆ ಬಹಳ ಮುಖ್ಯ ಅನ್ನಿಸ್ತಿದೆಯಲ್ಲ? 

ಬರಹಗಾರನಾದವನು ತನ್ನ ಅನುಭವಗಳಿಗೆ ನಿಷ್ಠನಾಗಿರಬೇಕೋ ಅಥವಾ ಸಮಾಜಕ್ಕೋ? 
ಇದು ಯಾವತ್ತಿಗೂ ದೊಡ್ಡ ಪ್ರಶ್ನೆಯೇ. ನನ್ನ ಪ್ರಕಾರ ಬರಹಗಾರ ತಾನು ಕಂಡ ಸತ್ಯಕ್ಕೆ ನಿಷ್ಠವಾಗಿರಬೇಕು; ಜೊತೆಗೆ ಆ ಸತ್ಯವನ್ನು ಪರೀಕ್ಷಿಸುತ್ತಿರಬೇಕು. ನಾನು ಕಂಡ ಸತ್ಯವನ್ನು ಬರೆಯಲು ಸ್ವಾತಂತ್ರ್ಯ ಇರುವುದು ಸಾಹಿತ್ಯದಲ್ಲಿ ಮಾತ್ರ. ಅದು ಪತ್ರಿಕೋದ್ಯಮದಲ್ಲಿಲ್ಲ, ಟೀವಿಯಲ್ಲಿಲ್ಲ, ಟೀಚಿಂಗ್‌ನಲ್ಲೂ ಇಲ್ಲ. ಸಾರ್ವಜನಿಕ ಜೀವನದಲ್ಲಂತೂ ಇಲ್ಲವೇ ಇಲ್ಲ. ಆಳವಾದ, ನಿಷ್ಠುರವಾದ ಸತ್ಯಗಳನ್ನು ಹೇಳುವುದಕ್ಕೆ ಉಳಿದಿರುವ ಏಕಮಾತ್ರ ವೇದಿಕೆ ಸಾಹಿತ್ಯ. 

ಲೇಖಕರಿಗೆ ಸಾಮಾಜಿಕ ಬದ್ಧತೆ ಎಂಬುದೊಂದು ಇರಬಾರದೇ?
ಜವಾಬ್ದಾರಿ ಇರಲೇಬೇಕು. ಬದ್ಧತೆ ಎನ್ನುವುದು ಬಹಳ ವಿಸ್ತಾರವಾದ,ಸೂಕ್ಷ್ಮವಾದ ಪ್ರಶ್ನೆ.ನಮಗೆ ಯಾವುದೋ ಒಂದರ ಬಗೆಗೆ ಬದ್ಧತೆ ಇದೆ ಎನ್ನುವ ಕಾರಣಕ್ಕೆ ಸಾಹಿತ್ಯ ರಚನೆಯಲ್ಲಿ ಕೆಲವು ರೀತಿಯ ಪೂರ್ವಗ್ರಹ, ಪಕ್ಷಪಾತಗಳನ್ನು ಮಾಡಬಾರದು. ಅದು ಸಾಹಿತ್ಯರಚನೆಯ ಮನೋಧರ್ಮಕ್ಕೆ ವಿರುದ್ಧವಾಗಿರುತ್ತದೆ. ಆದ್ದರಿಂದ ವ್ಯಕ್ತಿನಿಷ್ಠತೆಯೂ ಅಂತಿಮವಲ್ಲ, ಸಮಾಜ ನಿಷ್ಠತೆಯೂ ಅಂತಿಮವಲ್ಲ. ಎರಡೂ ಅತಿರೇಕಗಳು. 

ಸಾಹಿತ್ಯದಲ್ಲಿ ಹಲವಾರು ಸಂವೇದನೆಗಳನ್ನು ಕಂಡಿದ್ದೇವೆ. ಇಂದು ಒಂದು ಬಗೆಯ ನಿರ್ದಿಷ್ಟ ಸಂವೇದನೆಯ ಚೌಕಟ್ಟಿಗೆ ಸಾಹಿತ್ಯವನ್ನು ಒಳಪಡಿಸಬಹುದಾ? 
ಇಂದು ಜನರು ವಾಸ್ತವವನ್ನು ನೋಡುವ ಕ್ರಮವೇ ಬದಲಾಗಿದೆ. ಇದಕ್ಕೆ ಕಾರಣ ಮಾರುಕಟ್ಟೆ. ಇದರ ಪ್ರಭಾವದಿಂದಾಗಿ ನಮ್ಮ ದಿನನಿತ್ಯದ ಭಾಷೆಯೊಳಗೆ ಒಂದು ಗಿಲೀಟು ಬಂದು ಸೇರಿಕೊಂಡಿದೆ. ಲಾಭ ಬರುವುದಿದ್ದರೆ ಯಾವ ಭಾಷೆಯನ್ನಾದರೂ ಬಳಸಬಹುದು ಎಂದು ಈಗ ನಂಬಿಸಲು ಯತ್ನಿಸಲಾಗುತ್ತಿದೆ. ’೧೯೨೦ರ ಸುಮಾರಿಗೆ  ಪಶ್ಚಿಮದ ಮನುಷ್ಯನ ಸ್ವಭಾವ ಬದಲಾಗಿದೆ’ ಎಂದು ವರ್ಜೀನಿಯಾ ವುಲ್ಫ್ ಹೇಳುತ್ತಿದ್ದರು. ತೊಂಬತ್ತರ ದಶಕದಲ್ಲಿ ಮನುಷ್ಯನ ಭಾಷೆ ಮತ್ತು ಸ್ವಭಾವ ಎರಡೂ ಬದಲಾಗಿರುವುದನ್ನು ನೋಡುತ್ತೇವೆ. ನಗರಗಳಲ್ಲಿ ಮತ್ತು ಸಣ್ಣ ಊರುಗಳಲ್ಲಿ ಮೊಬೈಲ್ ಬಳಕೆ ಹೆಚ್ಚಿದ ಮೇಲೆ ನಾವು ಅಗತ್ಯವೇ ಇಲ್ಲದೇ ಸುಳ್ಳು ಹೇಳುತ್ತಿದ್ದೇವಲ್ಲವೇ? ಆದ್ದರಿಂದ ಒಂದು ಕತೆಯಲ್ಲಿ ಅನುಭವವನ್ನು ಶೋಧಿಸುವಾಗ ಮನುಷ್ಯವರ್ತನೆಯ ಸರಿ-ತಪ್ಪುಗಳನ್ನು ಪುರಾಣಗಳ ಕಾಲದ ರೀತಿ ಗೆರೆ ಕೊಯ್ದು ಹೇಳುವುದು ಕಷ್ಟ. ನೀತಿ, ಅನೀತಿ, ಭ್ರಷ್ಟತೆ ಮುಂತಾದವನ್ನು ಬಹಳ ಸಂಕೀರ್ಣವಾಗಿ ನೋಡುವ ಸ್ಥಿತಿ ಬಂದಿದೆ. ಇದನ್ನೆಲ್ಲಾ ಶೋಧನೆ ಮಾಡಲು ಸಾಹಿತ್ಯದಲ್ಲಿ ಹೆಚ್ಚು ಅವಕಾಶ ಇದೆ. ಇನ್ನು ವಿಶಿಷ್ಟ ಸಂವೇದನೆಗಳ ವಿಷಯಕ್ಕೆ ಬಂದರೆ, ಇಂದು ದಲಿತ ಸಂವೇದನೆ ಒಂದು ಪ್ರತ್ಯೇಕವಾದ ವಿಶಿಷ್ಟ ಸಂವೇದನೆ ಎನ್ನಿಸುವುದಿಲ್ಲ. ಯಾಕೆಂದರೆ ಈಗ ಅದನ್ನು ಎಲ್ಲ ಪ್ರಗತಿಪರರೂ ಒಪ್ಪಿಕೊಂಡಿದ್ದಾರೆ. ಇಂದು ದಲಿತ ಸಂವೇದನೆಯನ್ನು ದಲಿತೇತರ ಬರಹಗಾರರೂ, ಮಹಿಳಾ ಸಂವೇದನೆಯನ್ನು ಪುರುಷ ಬರಹಗಾರರೂ ಸ್ವೀಕರಿಸುತ್ತಿದ್ದಾರೆ. ತೇಜಸ್ವಿಯವರ ’ಕಿರಗೂರಿನ ಗಯ್ಯಾಳಿಗಳು’ ಅಥವಾ ಮಹಾದೇವರ ’ಒಡಲಾಳ’ದ ಸಾಕವ್ವನ ಸೃಷ್ಟಿಗೆ ಸ್ತ್ರೀವಾದವೂ ಕಾರಣವಾಗಿದೆ. ಹೀಗಾಗಿ ಒಂದು ಕಾಲದಲ್ಲಿ ಒಂದು ನಿರ್ದಿಷ್ಟ ಸಂವೇದನೆ ಬೆಳೆದು ಕ್ರಮೇಣ ಅದು ಎಲ್ಲ ಲೇಖಕ,ಲೇಖಕಿಯರಿಗೂ ಹಬ್ಬಿ ಕನ್ನಡ ಸಾಹಿತ್ಯ ಸಂವೇದನೆಯಲ್ಲಿ ಬೆರೆತು ಹೋಗುತ್ತದೆ. 
ಲೇಖಕಿಯರ  ಸಂಖ್ಯೆ ಹಿಂದೆಂದಿಗಿಂತ ಹೆಚ್ಚಿರುವ ಇಂದಿನ ಸಂದರ್ಭದಲ್ಲಿ ಸ್ತ್ರೀವಾದ ಯಾವ ದಿಕ್ಕಿನಲ್ಲಿ ವಿಸ್ತರಿಸಿಕೊಂಡಿದೆ?
ಇವತ್ತಿನ ಸ್ತ್ರೀವಾದ ಹೊಸ ಹೊಸ ಅಧಿಕಾರ ಕೇಂದ್ರಗಳನ್ನು ಗುರುತಿಸುವ ಪ್ರಯತ್ನದಲ್ಲಿದೆ. ಇಂದು ದಲಿತ ಸ್ತ್ರೀವಾದ ಬರುತ್ತಿದೆ. ಪರಿಸರಕ್ಕೆ ಸಂಬಂಧಿಸಿದ  ಸ್ತ್ರೀವಾದ ಬರುತ್ತಿದೆ. ಭಾರತೀಯ ನೆಲದಲ್ಲೇ ದಲಿತ, ಹಿಂದುಳಿದ ವರ್ಗಗಳ ಮಹಿಳೆಯರ ಕಷ್ಟಗಳು ಬೇರೆ ಬೇರೆ ರೀತಿ ಇದೆ. ಅದಕ್ಕೆ ತಕ್ಕಂತೆ ಸ್ತ್ರೀವಾದವೂ ವಿಸ್ತರಿಸುತ್ತಿದೆ. ದುಡಿಯುವ ವರ್ಗದ ಬಡ ಮಹಿಳೆಯರ ದೃಷ್ಟಿಯಿಂದ ಸ್ತ್ರೀವಾದವನ್ನು ವ್ಯಾಖ್ಯಾನಿಸುವ ಅಗತ್ಯವೂ ಇದೆ. ಐವತ್ತರ ದಶಕದಲ್ಲಿ ಸ್ತ್ರೀವಾದ ಹೇಗಿತ್ತೋ ಅದೇ ರೀತಿ ಇಂದು ಇಲ್ಲ. 


ಒಂದು ಕಾಲದಲ್ಲಿ ತಾವು ಪ್ರತಿನಿಧಿಸಿದ ಆಶಯಗಳಿಗೇ ವಿರುದ್ಧವಾದ ಸ್ಥಾನದಲ್ಲಿ ಸಿದ್ಧಲಿಂಗಯ್ಯನವರಂತಹ ಸಾಹಿತಿ ನಿಂತಿದ್ದಾರಲ್ಲ?
ಬರಹಗಾರರು ಅಧಿಕಾರ ಮತ್ತು ಅಧಿಕಾರಸ್ಥರನ್ನು ವಿಮರ್ಶೆಗೆ ಒಳಪಡಿಸುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲಾಗದಿದ್ದರೆ ತಮ್ಮ ಬರವಣಿಗೆಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಆಗ ಬರವಣಿಗೆಯಲ್ಲೂ ಸಾರ್ವಜನಿಕತೆ ನುಸುಳುತ್ತದೆ. ಬರಹಗಾರನೊಬ್ಬ ತಾನು ಪ್ರತಿನಿಧಿಸಿದ ಆಶಯಗಳಿಗೆ ವಿರುದ್ಧವಾಗಿ ಹೋದಾಗ ಅವರನ್ನು ಒಪ್ಪಿಕೊಂಡು ಬಂದ ಓದುಗರಿಗೆ ನಿರಾಸೆ ಅಥವಾ ಅಸಹನೆ ಖಂಡಿತಾ ಹುಟ್ಟುತ್ತದೆ. ಪ್ರತಿ ಬರಹಗಾರನೂ ಸಹ ತನಗೆ ಸಾಹಿತ್ಯ ಮುಖ್ಯವೋ ಅಥವಾ  ಯಾವುದೋ ಅಧಿಕಾರ ಬೇಕೋ ಎಂಬ ಬಗ್ಗೆ ಖಚಿತವಾಗಿರಬೇಕು.ಮೌಲ್ಯಗಳನ್ನು ಪ್ರತಿಪಾದಿಸುವವರು, ಸಾಹಿತಿಗಳು ಅಧಿಕಾರಕ್ಕೆ, ರಾಜಕಾರಣಕ್ಕೆ ಹೋಗುವುದು ತಪ್ಪಲ್ಲ. ಒಬ್ಬ ಅರ್ಥಶಾಸ್ತ್ರಜ್ಞ, ಒಬ್ಬ ಸಾಫ್ಟ್‌ವೇರ್ ತಂತ್ರಜ್ಞ ಅಥವಾ ಒಬ್ಬ ಸ್ತ್ರೀವಾದಿ ವಿಧಾನ ಸೌಧಕ್ಕೆ ಹೋಗಬೇಕು. ಅದು ಒಳ್ಳೆಯದು ಕೂಡ. ಆದರೆ ಹಾಗೆ ಹೋದವರು ತಮ್ಮ ನಿಲುವು ಹಾಗೂ ಭಾಷೆಗಳನ್ನು ಬಳಸಬೇಕು.ಅದಕ್ಕೆ ಬದಲಾಗಿ ಅಲ್ಲಿನವರು ಕೊಟ್ಟ ಭಾಷೆಯಲ್ಲಿ ಅವರು ಮಾತನಾಡಲಾರಂಭಿಸುವುದು  ದುರದೃಷ್ಟಕರ. 

ಬರಹಗಾರನೊಬ್ಬನ ಬರಹ  ಮತ್ತು ಆತನ ವ್ಯಕ್ತಿತ್ವಗಳಲ್ಲಿ ವೈರುಧ್ಯಗಳು ಕಾಣಿಸಿಕೊಂಡಾಗ ಓದುಗರಾದವರು ಹೇಗೆ ಪ್ರತಿಕ್ರಿಯಿಸಬೇಕೆನ್ನುತ್ತೀರಿ?

ಬರಹ ಎನ್ನುವುದು ವ್ಯಕ್ತಿತ್ವದ ವಿಸ್ತರಣೆಯೂ ಹೌದು. ಬರಹಗಾರ ಒಂದು ರೀತಿಯ ಗಾಢ ಆಶಯಗಳನ್ನು ಕೃತಿಯಲ್ಲಿ ಬರೆದು, ಅದಕ್ಕೆ ತದ್ವಿರುದ್ಧವಾಗಿ  ನಡೆಯುವುದು ಸರಿಯಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ನಮ್ಮ ಓದಿನ ಕ್ರಮದಲ್ಲಿ ಕೃತಿಯನ್ನು ಕೃತಿಕಾರನಿಂದ ಬಿಡಿಸಿಕೊಂಡು ಸ್ವತಂತ್ರವಾಗಿ ಓದಬೇಕು. ಎಷ್ಟೋ ಸಲ ಒಬ್ಬ ಬರಹಗಾರ ತನ್ನ ಹಳೆಯ ನಿಲುವುಗಳನ್ನು ಬದಲಿಸಿಕೊಂಡು ಮುಂದೆ ಹೋದಾಗಲೂ ನಾವು ಆತ ಮೊದಲಿನ ರೀತಿಯಲ್ಲಿಯೇ ಬರೆಯಬೇಕೆಂದು ನಿರೀಕ್ಷಿಸುತ್ತೇವೆ. ಈ ಥರದ ಓದುಗರ ಸರ್ವಾಧಿಕಾರವೂ ಬಹಳ ವಿಚಿತ್ರವಾಗಿರಬಲ್ಲದು. ಹೀಗಾಗಿ ನಾವು ಬಲ್ಲ ಬರಹಗಾರನ ವ್ಯಕ್ತಿತ್ವಕ್ಕೂ ಅವನ ಸಾಹಿತ್ಯ ಕೃತಿಗೂ ವೈರುಧ್ಯ ಏರ್ಪಟ್ಟಾಗ ನಾವು ಆ ಕೃತಿ ಹೇಳುವ ಸತ್ಯವನ್ನೇ ಹೆಚ್ಚು ಅವಲಂಬಿಸಬೇಕು. ಆದರೆ ಕೃತಿಯಾಚೆಗೆ ಲೇಖಕನ ಸಾಮಾಜಿಕ ನಿಲುವಿನಲ್ಲಿ ವೈರುಧ್ಯಗಳು ಕಂಡಾಗ ಖಂಡಿತ ಪ್ರಶ್ನೆ ಮಾಡಬೇಕಾಗುತ್ತದೆ. ಆದರೆ ಮನುಷ್ಯ ಎಂದರೆ ವಿರೋಧಾಭಾಸಗಳ ಮೊತ್ತ ಎಂಬ ಸತ್ಯವನ್ನೂ ನಾವು ಮರೆಯಬಾರದು. 

ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿ ಆಡಳಿತ ಮಂಡಳಿಗಳು ಹಿಂದೇಟು ಹಾಕುತ್ತಿವೆಯಲ್ಲ?
ಅವಕಾಶ ಇಲ್ಲದವರಿಗೆ ಅವಕಾಶ ನೀಡದಿದ್ದರೆ ಮುಂದೆ ದೊಡ್ಡ ದಂಗೆಯೇ ಆಗುತ್ತದೆ ಎಂದು ಸರ್ಕಾರವೇ ಎಚ್ಚೆತ್ತುಕೊಂಡಿದೆ. ಆದರೆ ಇಂದು ಖಾಸಗಿ ಆಡಳಿತ ಮಂಡಳಿಗಳು ತಮ್ಮ ವರ್ಗಹಿತಾಸಕ್ತಿಯ ಕಾರಣದಿಂದ  ಶಿಕ್ಷಣ ಹಕ್ಕು ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇದರಲ್ಲಿ ಜಾತೀಯತೆಯೂ ಇದೆ. ಆದರೆ ಈ ಕಾಯ್ದೆ  ಸರಿಯಾಗಿ ಜಾರಿಯಾಗದಿದ್ದಲ್ಲಿ ಒಂದು ಆಂದೋಲನವೇ ಸೃಷ್ಟಿಯಾಗಬೇಕಾಗುತ್ತದೆ. ಈ ಕಾಯ್ದೆಯಲ್ಲಿ ಲೋಪದೋಷಗಳಿವೆಯೇ ಎನ್ನುವುದನ್ನು ನಂತರ ನೋಡೋಣ. ಮೊದಲು ಅದು ಜಾರಿಯಾಗುವಂತೆ ನೋಡಬೇಕಾದ್ದು ಜಾಗೃತ ಶಕ್ತಿಗಳ ಕೆಲಸ. 

ಯಾವುದೇ ಸಾಹಿತ್ಯ ಚಳವಳಿಗಳಿಲ್ಲದಿರುವ ಈ ಕಾಲ ಬರೆಯುವವರಿಗೆ ಪೂರಕವೇ? 
ಸಾಮಾನ್ಯವಾಗಿ ದೊಡ್ಡ ವಾಗ್ವಾದಗಳು ನಡೆಯುವುದು ಒಂದು ಸಾಹಿತ್ಯ ಚಳವಳಿ ಹುಟ್ಟುವ ಸಮಯದಲ್ಲಿ. ಆದರೆ ಈ ಕಾಲದಲ್ಲಿ ಎಲ್ಲಾ ಸಾಹಿತ್ಯ ಚಳವಳಿಗಳ ಮಾದರಿಗಳೂ ಇರುವಂತೆ ನಮಗೆ ಕಾಣುತ್ತದೆ. ನಿರ್ದಿಷ್ಟ ಸಾಹಿತ್ಯ ಚಳವಳಿ ಇಲ್ಲದಿರುವುದು ಕೂಡ ಬರೆಯುವವರ ದೃಷ್ಟಿಯಿಂದ ಒಳ್ಳೆಯದೇ ಆಗಬಹುದಲ್ಲ? ಒಂದು ಸಾಹಿತ್ಯ ಚಳವಳಿ ಇದ್ದಾಗ ಯಾವುದೋ ಕಟ್ಟುಪಾಡುಗಳಿಗೆ ಒಳಗಾಗಿ ಬರೆಯುವ ಒತ್ತಡವಿರಬಹುದು. ಅದಿಲ್ಲದಿದ್ದಾಗ ಯಾವುದೇ ಆತಂಕವಿಲ್ಲದೆ ಪ್ರಯೋಗಗಳನ್ನು ನಡೆಸಬಹುದು. ಈ ಕಾಲವನ್ನು ನವಪ್ರಯೋಗಗಳ ಕಾಲ ಅಂತಲೂ ಕರೆಯಬಹುದು. 




ಸಾಮಾಜಿಕ ಚಳವಳಿಗಳು ವಿಘಟಿತಗೊಂಡಿರುವುದಕ್ಕೆ ಯಾರು ಕಾರಣ? 
ಚಳವಳಿಗಳು ಯಾವಾಗಲೂ ಒಂದೇ ರೀತಿ ನಡೀತಾ ಇರಲ್ಲ. ಕೆಲವೊಮ್ಮೆ ಚಳವಳಿಗಳು ಹೊಸ ರೂಪ ಪಡೆಯುತ್ತವೆ. ಇಂದು ಚಳವಳಿಗಳು ಒಡೆಯುವುದಕ್ಕೆ ಅನೇಕ ಶಕ್ತಿಗಳು  ಕಾರಣವಿರಬಹುದು. ಕೆಲವರಿಗೆ ಚಳವಳಿಗಳ ಬಗ್ಗೆ ನಂಬಿಕೆಗಳು ಕುಸಿದಿರಬಹುದಾದರೂ ಹೊಸ ತಲೆಮಾರುಗಳಿಗೆ  ಈ ಬಗ್ಗೆ ನಿರೀಕ್ಷೆ ಇದ್ದೇ ಇರುತ್ತದೆ. ಆದರೆ ಅದನ್ನು ಸಾಕಾರಗೊಳಿಸುವ ಪಡೆ ಹೊಸ ತಲೆಮಾರಿನಲ್ಲೂ ಹುಟ್ಟಬೇಕು. ಅದಕ್ಕೆ ಪೂರಕವಾದ ಒಂದು ಇಶ್ಯೂ  ಹುಟ್ಟಬೇಕು. ಸಮಾಜದ ಹಲವಾರು ವಲಯಗಳಲ್ಲಿ ಈ ಚಳವಳಿಯ ಶಕ್ತಿಗಳು ಇವೆ. ಆದರೆ ದೊಡ್ಡ ಮಟ್ಟದಲ್ಲಿ ಇವು ಒಂದಾಗಿ ಕ್ರಿಯೆಗಿಳಿಯುವ ಸಾಧ್ಯತೆಗಳು ಎದ್ದು ಕಾಣುತ್ತಿಲ್ಲ. ಹಾಗೆಯೇ ಚಳವಳಿಗಳಿಗೆ ಹಲವು ದಿಕ್ಕುಗಳಿಂದ ಬರುತ್ತಿದ್ದ ಬೆಂಬಲ ನಿಂತುಹೋಗಿದೆ. ನಮ್ಮ ಮಾಧ್ಯಮಗಳಿಗೆ  ಈ ಇಶ್ಯೂಗಳು ಮುಖ್ಯ ಎನ್ನಿಸುತ್ತಿಲ್ಲ ಅಥವಾ ಅವು ಚಳವಳಿಗಳ ಬಗ್ಗೆ ಸಿನಿಕತೆ ಬೆಳೆಸಿಕೊಂಡಿವೆ.’ಇಷ್ಟೊಂದು ದಲಿತ ಗುಂಪುಗಳಿವೆ; ನಾವು ಇವರ ಸುದ್ದಿ ಏನು ಹಾಕೋದು?’ ಎನ್ನುವ ಧೋರಣೆ ಕೆಲವು ಪತ್ರಿಕೆಗಳಲ್ಲಿದೆ. ಆದರೆ, ಇಷ್ಟೊಂದು ಜಾತಿ,ಧರ್ಮಗಳ ಗುಂಪುಗಳ ಸುದ್ದಿಗಳನ್ನು ಪ್ರಕಟಿಸುವಾಗ  ಅವರು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿಲ್ಲ. ನಮ್ಮ ಮಾಧ್ಯಮಗಳಲ್ಲಿ ಚಳವಳಿಗಳ ಬಗ್ಗೆ ಅಭಿಪ್ರಾಯ ರೂಪಿಸುವ ಕೆಲಸ ನಡೆಯುತ್ತಿಲ್ಲ. ಹಾಗೆಯೇ ಚಳವಳಿಗಳಿಗೆ ಕಾಲೇಜು, ಯೂನಿವರ್ಸಿಟಿಗಳಿಂದ ಒದಗುತ್ತಿದ್ದ ದೊಡ್ಡ ಬೌದ್ಧಿಕ ಬೆಂಬಲ ನಿಂತುಹೋಗಿದೆ. ಚಳವಳಿಗಳು ಹಿನ್ನೆಲೆಗೆ ಸರಿಯಲು ಚಳವಳಿಗಾರರು ಮಾತ್ರ  ಕಾರಣವಲ್ಲ. ಅವರು ಚಳವಳಿಗಳನ್ನೇ ಮಾಡಿಕೊಂಡಿರಲಿ ಎಂದು ನಾವು ಅವರನ್ನು ನೇಮಿಸಿಲ್ಲ ಮತ್ತು ಹಾಗೆ ಹೇಳಲು ನನಗೆ ಹಕ್ಕಿಲ್ಲ. ನಾನು ಸಂಬಳ ತೆಗೆದುಕೊಳ್ಳುತ್ತೇನೆ.ಚಳವಳಿಗಾರರಿಗೆ ಸಂಬಳ ಬರುತ್ತಿಲ್ಲವಲ್ಲ?ಅದರ ಜೊತೆಗೆ, ಚಳವಳಿಗಳಿಗೆ ಹಿಂದಿನಂತೆ ತಾತ್ವಿಕ ಸ್ಪೂರ್ತಿಮೂಲಗಳೂ ಕಡಿಮೆಯಾಗಿವೆ. ಉಳಿದ ವರ್ಗಗಳು ತಾವು ಆರಾಮಾಗಿದ್ದು, ಚಳವಳಿಗಾರರ ಮೇಲೆಯೇ ಎಲ್ಲ ಹೊಣೆ ಹೊರಿಸಿ ಅವರು ಮಾತ್ರ ಈ ಕೆಲಸ ಮಾಡಬೇಕು ಎನ್ನುವುದು ಸರಿಯಲ್ಲ. 

ಲೋಹಿಯಾವಾದ ಒಂದು ಸಾಮಾಜಿಕ ತತ್ವವಾಗಿ ಕರ್ನಾಟಕದಲ್ಲಿ ಬೀರಿರುವ ಪರಿಣಾಮ ಎಂಥದ್ದು?  
ನಮ್ಮ ರೈತ ಚಳವಳಿ ಮಹಾರಾಷ್ಟ್ರ ಅಥವಾ ಉತ್ತರ ಪ್ರದೇಶದ ರೈತ ಚಳವಳಿಗಿಂತ ಭಿನ್ನವಾಗಿರಲು ಅದನ್ನು ಇಲ್ಲಿ ಮುನ್ನಡೆಸಿದ ನಂಜುಂಡಸ್ವಾಮಿಯವರು ಲೋಹಿಯಾವಾದಿಯಾಗಿದ್ದು ಕೂಡ ಕಾರಣ. ರೈತರನ್ನು ಒಂದು ವರ್ಗವಾಗಿ ರೂಪಿಸಿ ವ್ಯವಸ್ಥೆಯ ವಿರುದ್ಧದ ಚಳವಳಿಗೆ ತೊಡಗಿಸುವುದು ಲೋಹಿಯಾರ ಕನಸಾಗಿತ್ತು. ನಂಜುಂಡಸ್ವಾಮಿ ಅದನ್ನು ಇಲ್ಲಿ ಸಾಕಾರಗೊಳಿಸಿದರು. ಅವರು ದಲಿತ ಚಳವಳಿಯ ಪ್ರೇರಕರಲ್ಲೊಬ್ಬರಾಗಿದ್ದರು. ದಲಿತ ಸಂಘರ್ಷ ಸಮಿತಿಯಲ್ಲಿ ಲೋಹಿಯಾವಾದವೂ ಇದ್ದುದರಿಂದ ಅದು ಎಲ್ಲ ವರ್ಗದವರನ್ನೂ ಒಳಗೊಳ್ಳಲು ಸಾಧ್ಯವಾಯಿತು. ಹಾಗೆಯೇ ಸಾಹಿತಿಗಳು ನೋಡುವ ಕ್ರಮವನ್ನೇ ಅದು ಬದಲಿಸಿತು. ಚಿಂತಕರು, ಬರಹಗಾರರು ಲೋಹಿಯಾ ಚಿಂತನೆಯನ್ನು ತಾವೇ ಹುಡುಕಿಕೊಂಡು ಹೋಗಿ ಪ್ರಸಾರ ಮಾಡಿದ ಕಾಲದಲ್ಲಿ ಅದು ಹೆಚ್ಚು ಪ್ರಭಾವಶಾಲಿಯಾಗಿತ್ತು. ಆದರೆ ಸರ್ಕಾರವೇ ಕನ್ನಡ ಸಂಸ್ಕೃತಿ ಇಲಾಖೆಯಿಂದ ಲೋಹಿಯಾ ಕೃತಿಗಳನ್ನು ತಂದಾಗ (ಅದರ ಸಂಪಾದಕನಾಗಿ ನಾನು ಹೇಳುತ್ತಿರುವ ಮಾತಿದು) ಅದರ ಪ್ರಭಾವ ಕಡಿಮೆ ಎನಿಸುತ್ತದೆ. ಲೋಹಿಯಾವಾದವನ್ನು ಕೂಡ ನಾವು ಮರು ಓದಿಗೆ ಒಳಪಡಿಸಬೇಕು. ಪ್ರತಿ ತಲೆಮಾರಿನವರೂ ತಮ್ಮ ಲೋಹಿಯಾ, ತಮ್ಮ ಅಂಬೇಡ್ಕರ್‌ರನ್ನು ಹುಡುಕಿಕೊಳ್ಳಬೇಕಾಗುತ್ತದೆ.   

ನಿಮ್ಮ ಮೇಲೆ ಪ್ರಭಾವ ಬೀರಿದ ಕನ್ನಡದ ಲೇಖಕ ಮತ್ತು ಜಾಗತಿಕ ಲೇಖಕರು ಯಾರು? 
ನನಗೆ ಹದಿ ಹರೆಯದಲ್ಲಿ ಬಹಳ ಪ್ರಭಾವ ಬೀರಿದವನು ಆಲ್ಬರ್ಟ್ ಕಾಮು. ಆ ನಂತರ, ವ್ಯಕ್ತಿಗಳ ವರ್ತನೆಗಳನ್ನು, ಅನೇಕ ಬಗೆಯ ಸತ್ಯಗಳನ್ನು ಅರ್ಥ ಮಾಡಿಕೊಳ್ಳಲು ಶೇಕ್ಸ್‌ಪಿಯರ್ ನೆರವಾಗಿದ್ದಾನೆ. ಕನ್ನಡದಲ್ಲಿ ಲಂಕೇಶ್. ನನ್ನ ಜೀವನದ ಕೆಲವು ಶ್ರೇಷ್ಠ ಗಳಿಗೆಗಳನ್ನು ಲಂಕೇಶರ ಜೊತೆ ಕಳೆದಿರುವ ಬಗ್ಗೆ ನನಗೆ ಖುಷಿ ಇದೆ. 

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.