ಆಗಸ್ಟ್ 24, 2011

ಅಣ್ಣಾ ಹೋರಾಟದಾಚೆಯ ಬಿಡಿ ಚಿತ್ರಗಳು


  ಸರ್ಕಾರ ಅಣ್ಣಾ ಹೋರಾಟಕ್ಕೆ ಬಗ್ಗುವ ಸೂಚನೆ ನೀಡಿ  ಮತ್ತೆ ಕೈಕೊಡುವಂತೆ ತೋರುತ್ತಿದೆ. ಸರ್ಕಾರ ಹಾಗೂ ಟೀಂ ಅಣ್ಣಾ ಎರಡೂ ಪಕ್ಷಗಳೂ ಸಹ ತಂತಮ್ಮ ಹಠಮಾರಿತನಗಳನ್ನು ಬಿಟ್ಟು ದೇಶದ ಹಿತವನ್ನು ಕಾಪಾಡಬೇಕೆಂಬುದು ಎಲ್ಲಾ ಪ್ರಜಾತಂತ್ರ ಪ್ರೇಮಿಗಳ ಆಶಯ.
ಒಂದೊಮ್ಮೆ ಜನಲೋಕಪಾಲ ಕಾಯ್ದೆ ಜಾರಿಯಾದರೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಸಾಗಬೇಕಾದ ಹಾದಿ ತುಂಬಾ ದೀರ್ಘವಾದದ್ದು. ಒಂದು ಕಾಯ್ದೆ ಮಾತ್ರ ಭ್ರಷ್ಟಾಚಾರವನ್ನು ಹೋಗಲಾಡಿಸಿಬಿಡುತ್ತದೆ ಎಂಬುದು ಮೂರ್ಖತನವಾಗುತ್ತದೆ.
ಆದರೆ, ಇದುವರೆಗೆ ನಡೆದಿರುವ ಈ ಅಣ್ಣಾ ಹಜಾರೆ ಹೋರಾಟದಿಂದ ಆಗಿರುವ ಒಂದು ಅತ್ಯಂತ ಒಳ್ಳೆಯ ಪರಿಣಾಮ ಏನೆಂದರೆ ನಮ್ಮ ದೇಶದ ಯುವ ಸಮೂಹದಲ್ಲಿ ಭ್ರಷ್ಟಾಚಾರದ ವಿರುದ್ಧ ಒಂದು ಎಚ್ಚರಿಕೆ ಮೂಡಿರುವುದು. ಆದರೆ ಈಗ ವ್ಯಕ್ತಗೊಂಡಿರುವ ಅಸಹನೆ, ಉಂಟಾಗಿರುವ ಜಾಗೃತಿ ಮುಂದೆ ಕೃತಿಯಾಗಿ ಮಾರ್ಪಡುತ್ತದೆಯಾ? ಇಂದು ಈ ಹೋರಾಟದಲ್ಲಿ ಭಾಗಿಯಾದ ಮಧ್ಯಮ ವರ್ಗ ಎಷ್ಟರ ಮಟ್ಟಿಗೆ ಭ್ರಷ್ಟತೆಯಿಂದ ದೂರವಾಗಿ ಬದುಕಲು ಪ್ರಯತ್ನಿಸುತ್ತದೆ? ಅಥವಾ ಸಂದರ್ಭಕ್ಕೆ ತಕ್ಕಂತೆ ಮತ್ತೆ ತನ್ನ ಇದುವರೆಗಿನ ತಟಸ್ಥತೆಗೇ ಹೊರಳಿಕೊಂಡು ಈ ದೇಶಕ್ಕೂ, ಇಲ್ಲಿನ ರಾಜಕೀಯಕ್ಕೂ ತನಗೂ ಸಂಬಂಧವೇ ಇಲ್ಲ ಎಂದು ಮುಗುಮ್ಮಾಗಿಬಿಡುತ್ತದೆಯಾ? ಇವೆಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಬೇಕು.
ನೋಡೋಣ.
ಈಗ ಇಲ್ಲಿ ನಾನು ಹಂಚಿಕೊಳ್ಳಬೇಕಿರೋದು ಈಗ ನಡೆದ ಅಣ್ಣಾ ಹೋರಾಟದ 'ಬೆಂಗಳೂರು ಚಾಪ್ಟರ್‌'ನಲ್ಲಿನ ಕೆಲ ಬಿಡಿ ಚಿತ್ರಗಳು.

ಚಿತ್ರ ಒಂದು
ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿ ಫ್ರೀಡಂ ಪಾರ್ಕ್‌ನಲ್ಲಿ ನಿರಶನ ಧರಣಿ ಪ್ರತಿದಿನ ನಡೆಯುತ್ತಿದೆಯಲ್ಲಾ, ಅಲ್ಲಿ ಒಂದು ದೊಡ್ಡ ಪೆಂಡಾಲ್ ಹಾಕಲಾಗಿದೆ. ವೇದಿಕೆ ಮೇಲೆ ಕೆಲವರು ಉಪವಾಸ ನಡೆಸುತ್ತಿದ್ದಾರೆ. ಈ ಪೆಂಡಾಲ್‌ನ ಪಕ್ಕದಲ್ಲಿ ಒಂದು ಮನೆ ಇದೆ. ಅಲ್ಲಿ ಗುಲ್ಬರ್ಗದಿಂದ ಗುಳೇ ಬಂದು ಕೂಲಿ ಕೆಲಸ ಮಾಡುತ್ತಿರುವ ಒಂದು ಕುಟುಂಬ ಇದೆ. ಈ ಹೋರಾಟದ ಪೆಂಡಾಲ್‌ನ ಪಕ್ಕದಲ್ಲೇ ಇರುವ ಆ ಮನೆಯ ಸದ್ಯರನ್ನು ಅಲ್ಲಿ ಹೋರಾಟ ಶುರುವಾದ ೭ ದಿನಗಳ ನಂತರ ಈ ಪತ್ರಕರ್ತ ಮಾತನಾಡಿಸಲಾಗಿ ಕಂಡು ಬಂದ ಸಂಗತಿ ಏನೆಂದರೆ..
'ಅಕ್ಕಾ, ಇಲ್ಲಿ ಹೋರಾಟ ನಡೀತಾ ಇದೆಯಲ್ಲ. ನಿಮಗೆ ಏನನ್ನಿಸುತ್ತೆ. ಇದರ ಬಗ್ಗೆ?'
'ಇಲ್ಲಾ ಸಾರ್. ನಮಗೆ ಅದರ ಬಗ್ಗೆ ಏನೂ ತಿಳಿಯಾಕಿಲ್ಲ. ಒಟ್ಟು ಒಂದು ವಾರದಿಂದ ಹಿಂಗೇ ಜನ ಬತ್ತಾ ಹೋಗ್ತಾ ಅವ್ರೆ. ಒಂದಿಷ್ಟು ಜನ ಮಕ್ಕಂಡೇ ಇರ್ತಾರೆ. ನಮಗೆ ಏನೋಂದೂ ತಿಳೀವಲ್ದು ಸಾರ್..'
'ಇಲ್ಲಾ ಅಕ್ಕ. ಅದೂ... ಅಣ್ಣಾ ಹಜಾರೆ ಅನ್ನೋರು ಭ್ರಷ್ಟಾಚಾರದ ವಿರುದ್ಧ ಉಪವಾಸ ಹೋರಾಟ ನಡೆಸ್ತಿದಾರೆ. ನೀವು ಅವರಿಗೆ ಬೆಂಬಲ ನೀಡಬೇಕು'
'ಅಣ್ಣಾ....? ಯಾರಣ್ಣ ಅವರು? ನಮಗೇನೂ ಗೊತ್ತಿಲ್ಲ ಸಾರ್.... ಯಾಕೆ ಉಪವಾಸ ಕುಂತವ್ರೆ?'
'ಇಲ್ಲ ಅಕ್ಕ.. ಅದೇ ಈ ರಾಜಕಾರಣಿಗಳು, ಆಫೀಸರ್‌ಗಳು ಲಂಚ ಹೊಡೀತಾರಲ್ಲಾ.. ಅದರ ವಿರುದ್ಧ ಕಾನೂನು ತರೋಕೆ ಉಪವಾಸ ಕುಳಿತಿದ್ದಾರೆ.'
'ಹೌದಾ..?! ನಾವೂ ಬಾಳಾ ದಿನ ಉಪವಾಸನೇ ಇರೋದು ಸಾರ್. ಹಂಗಂತ ಈಗ ನಾವು ಈ ಫಂಕ್ಷನ್‌ಗೆ ಬಂದ್ರೆ ಮತ್ತೆ ಉಪವಾಸಾನೇ ಬೀಳಬೇಕಾಯ್ತದೆ ಸಾರ್. ಅವೊತ್ತಿನ ಗಂಜಿ ಅವತ್ತೇ ದುಡೀಬೇಕು ನಾವು.........'
  --
ನನಗೆ ಮತ್ತೆ ಅವರ ತಲೆ ತಿನ್ನಬೇಕೆನ್ನಿಸಲಿಲ್ಲ. ಆಯ್ತಕ್ಕಾ ಬರ‍್ತೀನಿ ಅಂತ ಹೇಳಿ ಬಂದೆ.

ನೂರಾ ಐವತ್ತು ಕೋಟಿ ಜನರು ಅಣ್ಣಾ ಹೋರಾಟಕ್ಕೆ ಬೆಂಬಲಿಸುತ್ತಿದ್ದಾರೆ ಅನ್ನೋ ಟೀವಿ ಆಂಕರ್ ಗಳ ಭಾವಾವೇಶದ ಮಾತು ನೆನಪಾಯಿತು..

 ಚಿತ್ರ ಎರಡು
ಹೋರಾಟದ ಎಂಟನೇ ದಿನ. ನನಗೆ ನಮ್ಮ ದಿಹಲಿ ಆಫೀಸ್‌ನಿಂದ ಒಂದು ಕೆಲಸ ವಹಿಸಲಾಯ್ತು. ಅಣ್ಣಾ ಹಜಾರೆಯವ ಹೋರಾಟದಲ್ಲಿ ಭಾಗವಹಿಸುತ್ತಿರುವ Underclass ನ ಒಬ್ಬ  ವ್ಯಕ್ತಿಯನ್ನು  ಸಂದರ್ಶನ ಮಾಡಿಕೊಂಡು ಫೋಟೋ ತೆಗೆದುಕೊಂಡು ಬನ್ನಿ.  ಅಂದರೆ ಈ ಹೋರಾಟದಲ್ಲಿ ಕುಳಿತ ಅಗ್ದಿ ಬಡ ಹಿನ್ನೆಲೆಯ ವ್ಯಕ್ತಿಯೊಬ್ಬನ ಸಂದರ್ಶನ.
ಸೈ ಎಂದು ಹೋದವನೇ ಹುಡುಕಲು ಶುರು ಮಾಡಿದೆ. ನೆರೆದವರ ಮುಖ, ಡ್ರೆಸ್ ಎಲ್ಲಾ ಒಂದು ಕಡೆಯಿಂದ ಪರೀಕ್ಷಿಸಿದೆ. ಸಂಜೆ ನಾಲ್ಕೂವರೆಯಿಂದ ರಾತ್ರಿ ಎಂಟೂವರೆಗೆ ಕ್ಯಾಂಡಲ್ ಲೈಟ್ ಮೆರವಣಿಗೆ ಮುಗಿಯುವವರೆಗೂ ಒಬ್ಬರನ್ನೂ ಬಿಡದೇ ಮೈಕ್ರೋಸ್ಕೋಪ್, ಟೆಲಿಸ್ಕೋಪ್ ಹಿಡಿದು ಹುಡುಕುವಂತೆ ಹುಡುಕಿದ್ರೂ ಒಬ್ಬರೂ ಅಲ್ಲಿ ಸಿಗಲಿಲ್ಲ. ಶಾನೇ ಬೇಜಾರಾಗಿಬಿಡ್ತು. ನನಗೆ ವಹಿಸಲಾದ ಕೆಲಸ ಮಾಡಲಾಗಲಿಲ್ಲವಲ್ಲಾ ಎಂದು!

...

ಚಿತ್ರ ಮೂರು.
ಆದರೆ ಈ ಹೋರಾಟದಲ್ಲಿ ಭಾಗವಹಿಸಿದ್ದ ಬಡತನದ ಹಿನ್ನೆಲೆಯ ಒಬ್ಬ ಹುಡುಗ ಸಿಕ್ಕಿದ. ಆತ ನಮ್ಮದೇ ಕಂಪನಿಯಲ್ಲಿ ಈ ಹಿಂದೆ ಆಫೀಸ್ ಬಾಯ್ ಆಗಿದ್ದವನು.ವನಿಗೆ ಮಾತನಾಡಿಸಿದೆ. ''ಸಾರ್, ಅಣ್ಣಾ ಅವರನ್ನು ಅರೆಸ್ಟ್ ಮಾಡಿದಾರೆ ಅಂದ ತಕ್ಷಣ ತಡೆಯೋಕಾಗ್ಲಿಲ್ಲ ಸಾರ್. ಹಿಂದೆ ಮುಂದೆ ನೋಡದೆ ಹೋಗಿ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಕುಳಿತವರ ಜೊತೆ ನಾನೂ ಸೇರಿಕೊಂಡೆ. ಮಾರನೆ ದಿನ ಎಲ್ಲೋ ಒಂದು ಖಾದಿ ಅಂಗಿ ಹೊಂದಿಸಿಕೊಂಡು ಹೋದೆ ಸಾರ್. ಮೂರು ದಿನ ಉಪವಾಸ ಮಾಡಿದೆ. ಆಮೇಲೆ ಆಗಲಿಲ್ಲ. ಈ ಮಧ್ಯೆ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆಮೇಲೆ ಅದು ಹೇಗೋ ಚಾರ್ಜ್ ಮಾಡಿಕೊಂಡು ಆನ್ ಮಾಡುವಷ್ಟರಲ್ಲಿ ನಾನಿದ್ದ ಹೋಟೆಲ್‌ನ ಓನರ್ ಕಾಲ್ ಮಾಡಿ ನಾಳೆಯಿಂದ ಕೆಲಸಕ್ಕೆ ಬರ‍್ಬೇಡ ಅಂದುಬಿಟ್ಟ ಸಾರ್. ..ಪ್ಲೀಸ್..ಈಗ ನಂಗೆ ಕೆಲಸ ಇಲ್ಲ.ಎಲ್ಲಾದ್ರೂ  ಏನಾದ್ರೂ ಕೆಲಸ ಇದ್ರೆ ನೋಡಿ ಸಾರ್"
ನಾನು ಕೇಳಿದೆ-

'ನೀನು ಮೊದಲೇ ಹೇಳಿರಲಿಲ್ವಾ?'

'ಇಲ್ಲ ಸಾರ್. ಹೇಳಿದ್ರೆ ಆವಾಗ್ಲೇ ಹೇಳಿರೋರು. ಆಮೇಲೆ ಬರಬೇಡ ಅಂತ. ನಮ್ಮಂತೋರಿಗೆ ಯಾವ ಕಿಮ್ಮತ್ತು ಸಾರ್?'
...
ವಂದೇ ಮಾತರಂ, ಬೋಲೋ ಭಾರತ್ ಮಾತಾ ಕೀ ಜೈ... ಕೂಗುತ್ತಾ ಒಂದು ಕೈಯಲ್ಲಿ ಬಾವುಟ ಹಿಡಿದು ಎರಡೂ ಕೆನ್ನೆಗಳ ಮೇಲೆ ಮೂರು ಬಣ್ಣಗಳನ್ನು ಹಚ್ಚಿಕೊಂಡು ಫೋಟೋಗೆ ಫೋಸು ನೀಡುತ್ತಿದ್ದ ಮುಖಗಳು ಕಣ್ಣ್ಣೆದುರು ಬಂದಂಗಾಯ್ತು....


ಆಗಸ್ಟ್ 20, 2011

ಇದು ಸಿದ್ಧ ವೈಚಾರಿಕ ಚೌಕಟ್ಟುಗಳನ್ನು ಮೀರುವ ಕಾಲ : ಸಿಎನ್ನಾರ್



ಡಾ. ಸಿ.ಎನ್.ರಾಮಚಂದ್ರನ್ ಅವರು ನಾಡಿನ ಪ್ರಮುಖ ಸಂಸ್ಕೃತಿ ಚಿಂತಕರು. ಇವರ ಅಧ್ಯಯನದ ಕ್ಷೇತ್ರಗಳು ಬಹು ವಿಸ್ತಾರವಾದಂತವು. ಸೃಜನ ಸಾಹಿತ್ಯ, ವಿಮರ್ಷಾ ಸಾಹಿತ್ಯ, ಜಾನಪದ ಅಧ್ಯಯನ, ಅನುವಾದ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಕೊಡುಗೆ ಸಲ್ಲಿಸಿರುವ ಸಿಎನ್ನಾರ್ ಹರ್ಷಕುಮಾರ್ ಕುಗ್ವೆಯೊಂದಿಗೆ ಸಂಸ್ಕ್ಕೃತಿ ವಿಮರ್ಷೆ, ಜಾನಪದ ಅಧ್ಯಯನ, ಮುಂತಾದುವುಗಳ ಕುರಿತಾಗಿ ಹಲವಾರು ಒಳನೋಟಗಳನ್ನು ಹಂಚಿಕೊಂಡಿದ್ದಾರೆ.





'ಸಂಸ್ಕೃತಿ’ಯನ್ನು ನೀವು ಹೇಗೆ ಪರಿಭಾವಿಸುತ್ತೀರಿ? 

ಸಂಸ್ಕೃತಿ ಎಂಬ ಪದವನ್ನು ನಾವು ಅನೇಕ ನೆಲೆಗಳಲ್ಲಿ ಅರ್ಥೈಸಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ನೋಡಿದರೆ ಡಿವಿಜಿ, ಅನಕೃ ಮುಂತಾದವರೆಲ್ಲಾ ಸಂಸ್ಕೃತಿಯನ್ನು ಒಂದು ರೀತಿಯಲ್ಲಿ ಅರ್ಥೈಸುತ್ತಿದ್ದರು. ಸಾಹಿತ್ಯ, ಸಂಗೀತ, ಶಿಲ್ಪಕಲೆ, ಚಿತ್ರಕಲೆ, ಇತ್ಯಾದಿ ಲಲಿತ ಕಲೆಗಳೇನಿವೆ ಅವುಗಳಲ್ಲಿರುವ ಪ್ರೌಢಿಮೆಯನ್ನು ಸಂಸ್ಕೃತಿ ಎಂದು ಅರ್ಥೈಸುತ್ತಿದ್ದರು. ಅದು ಎಷ್ಟು ಹೆಚ್ಚಿದಷ್ಟೂ ಅಷ್ಟು ನಮ್ಮ ಸಂಸ್ಕೃತಿ ಶ್ರೇಷ್ಠವಾಗಿದೆ ಎನ್ನುವ ನಿಲುವು ಅದು. ಅದೇ ಕಾಲಘಟ್ಟದಲ್ಲಿ ಇನ್ನೊಂದು ನೆಲೆಯಲ್ಲಿ ಆಧ್ಯಾತ್ಮಿಕತೆಯೊಂದಿಗೆ ಸಂಸ್ಕೃತಿಯನ್ನು ಸಮೀಕರಿಸಿ ನೋಡುವ ಪರಂಪರೆಯೂ ಇತ್ತು. ಈ ಎರಡು ನೆಲೆಯಲ್ಲಿ ಮಾತ್ರ ಸಂಸ್ಕೃತಿಯ ವ್ಯಾಖ್ಯಾನ ನಡೆಯುತ್ತಿತ್ತು. ಆದರೆ ಸುಮಾರು ೭೦ - ೮೦ರ ದಶಕದ ನಂತರ ಭಾರತದಲ್ಲಿ; ಅದಕ್ಕಿಂತ ಎರಡು ಮೂರು ದಶಕಗಳ ಹಿಂದೆ ಅಮೆರಿಕ, ಬ್ರಿಟನ್‌ಗಳಲ್ಲಿ, ಸಂಸ್ಕೃತಿ ವ್ಯಾಖ್ಯಾನ ಬೇರೆ ನೆಲೆಯಲ್ಲಿ ಆರಂಭವಾಯ್ತು. ಅವರ ಪ್ರಕಾರ ಸಂಸ್ಕೃತಿ ಎಂದರೆ ಒಂದು ಜೀವನ ಕ್ರಮ. ಒಂದು ಸಮುದಾಯದ ನಂಬಿಕೆ, ಭಾಷೆ, ಉಡುಗೆ ತೊಡುಗೆ, ಆಹಾರ, ವೃತ್ತಿ, ನಂಬಿಕೆಗಳು, ದೇವರು, ಇವೆಲ್ಲವೂ ಸಂಸ್ಕೃತಿಯನ್ನು ಸೂಚಿಸುತ್ತದೆ ಎನ್ನುವುದು. ನಾವು ಸಾಮಾನ್ಯವಾಗಿ ಯಾವುದನ್ನು ಎಡಪಂಥೀಯ ಚಿಂತನೆ ಎಂದು ಗುರುತಿಸುತ್ತೀವೋ ಆ ನೆಲೆಯಲ್ಲಿ ಸಂಸ್ಕ್ಕೃತಿಯನ್ನು ಗುರುತಿಸಲು ಆರಂಭಿಸಿದರು. ಈ ನೆಲೆಯಲ್ಲಿ ಬಹಳ ಪ್ರಭಾವಿ ಹಾಗೂ ಪಥಪ್ರವರ್ತಕ ವ್ಯಾಖ್ಯಾನ ನೀಡಿದವರು ರೇಮಂಡ್ ವಿಲಿಯಮ್ಸ್ ಎಂಬ ಬ್ರಿಟಿಷ್ ಎಡಪಂಥೀಯ ಚಿಂತಕ. ಸಂಸ್ಕೃತಿ ಚಿಂತನೆ ಎನ್ನುವ ಸಾಮಾಜಿಕ ಸಾಹಿತ್ಯಕ ಚಿಂತನಾ ಮಾರ್ಗ ಪ್ರಾರಂಭವಾದದ್ದೆ ಆತನ ಪ್ರಭಾವದಿಂದ. ಆತನು ರೂಢಿಗತ ಚಿಂತನೆಗಳಿಗೆ ವಿರುದ್ಧವಾಗಿ ನಿಂತಂತವನು. ಎಲ್ಲಾ ಬಗೆಯ ಬಂಡಾಯ ಚಿಂತನೆಗಳ ಹಿಂದೆ ಆತ ಇದ್ದಾನೆ ಎನ್ನಬಹುದು.

ಸಂಸ್ಕೃತಿ ಚಿಂತನೆಯ ಆರಂಭಿಕ ವ್ಯಾಖ್ಯಾನಗಳ ಸಮಸ್ಯೆಯೇನು?
ನಾವು ಸಂಸ್ಕೃತಿ ಎನ್ನುವುದನ್ನು ಬರೀ ಲಲಿತ ಕಲೆ, ಆಧ್ಯಾತ್ಮಿಕ ಚಿಂತನೆಗಳಿಗೆ ಸೀಮಿತಗೊಳಿಸಿ ನೋಡಿದಾಗ ಅದು ಸಮಾಜದ ಮೇಲುವರ್ಗದ ಜನರ ಸಂಸ್ಕ್ಕೃತಿಯನ್ನು ಮಾತ್ರ ಪ್ರತಿನಿಧಿಸುತ್ತದೆ. ಸಾಹಿತ್ಯದಲ್ಲಿ ಭಾರತೀಯ ಸಂಸ್ಕೃತಿ ಎಂದರೇನು ಎಂದಾಕ್ಷಣ ಕಾಳಿದಾಸನನ್ನು ಹೇಳುತ್ತೇವೆಯೇ ಹೊರತು ಜನಪದ ಸಾಹಿತ್ಯವನ್ನು ಹೇಳುವುದಿಲ್ಲ. ಪಂಪನನ್ನು ಉದಾಹರಿಸುತ್ತೇವೆಯೇ ಹೊರತು ಮಲೆಮಾದೇಶ್ವರರನ್ನು ಉದಾಹರಿಸುವುದಿಲ್ಲ.

ಕನ್ನಡದಲ್ಲಿ ಸಂಸ್ಕೃತಿ  ಚಿಂತನೆಯ ವ್ಯಾಖ್ಯಾನ ಯಾವ ಬಗೆಯದು? ಅದರ ಇತ್ತೀಚಿನ ಒಲವುಗಳೇನು?


ಅದು ಡಿ.ಆರ್. ನಾಗರಾಜ್ ಇರಬಹುದು, ಬರಗೂರು ರಾಮಚಂದ್ರಪ್ಪ, ರಹಮತ್ ತರೀಕೆರೆ ಮುಂತಾದವರೆಲ್ಲರೂ ಹೇಳುವ ಸಂಸ್ಕೃತಿ ಚಿಂತನೆ ಏನೆಂದರೆ ಅದು ಎಲ್ಲಾ ವರ್ಗಗಳಿಗೂ ಅನ್ವಯಿಸುವಂತಿರಬೇಕು ಅನ್ನುವುದು. ಎಲ್ಲರ ಅಪೇಕ್ಷೆ ನಿರೀಕ್ಷೆಗಳನ್ನೂ ಅದು ಒಳಗೊಳ್ಳುವುದಾಗಿರಬೇಕು. ಕೇವಲ ಒಂದು ವರ್ಗವನ್ನಲ್ಲ. ಹಾಗೆಯೇ ನಾವು ಲಿಖಿತ - ಮೌಖಿಕ, ಗ್ರಾಮೀಣ - ನಗರೀಕೃತ, ಲಿಪಿ ಸಹಿತ ಭಾಷೆ - ಲಿಪಿರಹಿತ ಭಾಷೆ, ಮುಂತಗಿ  ನಾವು ಒಪ್ಪಿಕೊಂಡಿರುವ ಎಲ್ಲ ದ್ವಿಮಾನ ವೈರುಧ್ಯಗಳನ್ನು ಒಡೆಯುವಂತಹ ಚಿಂತನೆ ನಮಗೆ ಬೇಕು ಎನ್ನುವುದು. ಇದನ್ನು ನಾವು ಸಂಸ್ಕೃತಿ ಚಿಂತನೆ ಎನ್ನಬಹುದು. ಸಂಸ್ಕೃತಿ ಚಿಂತನೆಯೆಂದರೆ, ಒಂದು ಕಾಲಘಟ್ಟದ ಸಮಾಜದ ಪ್ರತಿಯೊಂದು ವರ್ಗವೂ ಬದುಕುವ ರೀತಿ, ಅದು ಇತರ ವರ್ಗಗಳೊಡನೆ ಹೊಂದಿರುವ ಸಂಬಂಧದ ಸ್ವರೂಪ, ಮತ್ತು ಆ ವರ್ಗ ದೇವರು-ಮಾನವ, ಮಾನವ ಸಂಬಂಧಗಳು, ಮಾನವ-ನಿಸರ್ಗ ಸಂಬಂಧ ಇತ್ಯಾದಿಗಳ ವಿಶ್ಲೇಷಣೆ ಹಾಗೂ ವ್ಯಾಖ್ಯಾನ.  ಈ ದಿಕ್ಕಿನಲ್ಲಿ, ಇತ್ತೀಚೆಗೆ ಸಮಾಜದಂಚಿನಲ್ಲಿ ಬದುಕುತ್ತಿರುವವರ, ಬುಡಕಟ್ಟು ಜನಾಂಗಗಳ, ಇತ್ಯಾದಿ ಜನಾಂಗಗಳ ಹಾಗೂ ಅವರ ಸಾಹಿತ್ಯ-ಕಲೆ ಇತ್ಯಾದಿಗಳ ಅಧ್ಯಯನವನ್ನು ಕನ್ನಡ ಸಂಸ್ಕೃತಿಯ ಇತ್ತೀಚಿನ ಒಲವು ಎಂದು ಹೇಳಬಹುದು.


ಈ ಬಗೆಯ ವ್ಯಾಖ್ಯಾನಗಳಿಗೆ ನಮ್ಮ ಬಲಪಂಥೀಯ ಸಾಹಿತಿಗಳು ಹೇಗೆ ಸ್ಪಂದಿಸಿದ್ದಾರೆ?

ರೇಮಂಡ್ ವಿಲಿಯಮ್ಸ್‌ನ ಹೆಸರನ್ನು ಅವರು ಕೇಳಿದ್ದಾರೋ ಇಲ್ಲವೋ ನನಗೆ ತಿಳಿದಿಲ್ಲ. ಪ್ರಾಯಶಃ ಕೇಳಿದ್ದರೂ ಇರಬಹುದು. ಓದಿದ್ದರೂ ಇರಬಹುದು. ಒಂದೊಮ್ಮೆ ಓದಿದ್ದರೂ ಅದಕ್ಕೆ ಅವರು ಮಹತ್ವ ಕೊಡುವುದಿಲ್ಲ. ಇವನೂ ಒಬ್ಬ ಕಮ್ಯೂನಿಷ್ಟು ಎಂದು ಮೂಲೆಗೆಸೆದಿರುತ್ತಾರೆ ಅಷ್ಟೆ. ಅದರ ಮಹತ್ವ ಗೊತ್ತಿದ್ದರೂ ಅದನ್ನು ತಿಳಿದುಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಉದಾಹರಣೆಗೆ ಭೈರಪ್ಪನವರು ಆವರಣದ ಕೊನೆಯಲ್ಲಿ ಆಕರ ಕೃತಿಗಳ ಪಟ್ಟಿ ಕೊಟ್ಟಿದ್ದಾರಲ್ಲ ಅದರಲ್ಲಿರುವ ಎಲ್ಲವೂ ಬಲಪಂಥೀಯರದ್ದೇ ವಿನಃ ಒಂದೂ ಎಡಪಂಥೀಯ ಚಿಂತಕರು ಎನ್ನುವವರ ಪುಸ್ತಕವೇ ಇಲ್ಲ. ಅದನ್ನು ಗಮನಕ್ಕೇ ತರುವುದಿಲ್ಲ. ರೋಮಿಲಾ ಥಾಪರ್, ಬಿಪಿನ್ ಚಂದ್ರರಂತವರ ಹೆಸರುಗಳೇ ಇಲ್ಲ. ರೇಮಂಡ್ ವಿಲಿಯಮ್ಸ್ ಹೆಸರಿಲ್ಲ. ಇವರುಗಳನ್ನೇ ಬಿಟ್ಟು ಭಾರತೀಯ ಇತಿಹಾಸ, ಸಂಸ್ಕ್ಕೃತಿಯ ಬಗ್ಗೆ ಏನು ಮಾತಾಡಲು ಸಾಧ್ಯ? ಭೈರಪ್ಪನವರಿರಲೀ, ಚಿದಾನಂದ ಮೂರ್ತಿಯವರಿರಲೀ ತಂತಮ್ಮ ಕ್ಷೇತ್ರಗಳಲ್ಲಿ ಬಹಳಷ್ಟು ಕೆಲಸ ಮಾಡಿರುವವರೇ ಎಂಬುದನ್ನು ಒಪ್ಪಿಕೊಂಡೂ, ಅವರ ಬಗ್ಗೆ ಗೌರವದ ಜೊತೆಗೇ ಹೇಳುವುದಾದರೆ, ಇಬ್ಬರೂ ಸಹ ತಮ್ಮ ಐಡಿಯಾಲಜಿಯ ಕುರಿತು ಹೊಂದಿರುವ ಬದ್ಧತೆಯಿಂದಾಗಿ, ತಾವು ನಂಬಿದ್ದೇ ಸತ್ಯ, ಹಾಗಾಗಿ ಅದರ ಬಗ್ಗೆ ಚರ್ಚೆ ಬೇಕಿಲ್ಲ, ಅದು ವಾದ ಮಾಡುವ ವಿಷಯ ಅಲ್ಲ, ಅದು ಪರಮ ಸತ್ಯ ಎಂಬ ನಿಲುವಿನವರು. ’ನಾನು ಹೇಳುವುದು ಸತ್ಯ’ ಎಂಬ ಧೋರಣೆ ಹೊಂದಿರುವುದರಿಂದಾಗಿ ಅವರಿಗೆ ವೈಚಾರಿಕ ಸ್ವಾತಂತ್ರ್ಯ  ಕಡಿಮೆಯಾಗುತ್ತದೆ. ಇದು ಎಡಪಂಥೀಯರ ವಿಷಯದಲ್ಲೂ ಅಷ್ಟೇ ಸತ್ಯ. ಒಂದು ವೈಚಾರಿಕತೆಗೆ ಸಂಪೂರ್ಣ ತಮ್ಮನ್ನು ಒಪ್ಪಿಸಿಕೊಂಡವರು ಸಮತೋಲನವನ್ನು ಸಂಪೂರ್ಣ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಬಲಪಂಥೀಯರು, ಎಡಪಂಥೀಯರು, ಜಾತ್ಯಾತೀತವಾದಿಗಳು, ಜಾತ್ಯಾತೀತರಲ್ಲದವರು, ಯಾರಿಗೆ ಬೇಕಾದರೂ ಅನ್ವಯವಾಗಬಹುದು. ಅಂತಿಮವಾಗಿ ಅದು ಕುರುಡು ನಂಬಿಕೆಯೆಡೆ ವಾಲುವುದು ಶತಃಸಿದ್ಧ.

ವೈಚಾರಿಕ ಸ್ವಾತಂತ್ರ್ಯ ಕಳೆದುಕೊಳ್ಳುವುದರ ಪರಿಣಾಮವೇನು? 

ನಮ್ಮ ಚರಿತ್ರೆಯಲ್ಲೂ ಇಂತಹವು ಆಗಿವೆ. ಅದು ಶೈವ - ವೈಷ್ಣವರ ನಡುವಿನ ಸಂಘರ್ಷವೇ ಇರಬಹುದು. ಶಿವ, ವಿಷ್ಣು, ಕ್ರಿಸ್ತ, ಅಥವಾ ಅಲ್ಲಾ ಹೀಗೆ ನನ್ನ ದೇವರು ಬಿಟ್ಟು ಬೇರೆ ದೇವರಿಲ್ಲ, ನನ್ನ ದೇವರನ್ನು ಯಾರು ಮನ್ನಿಸೋಲ್ಲ ಅವರೆಲ್ಲರೂ ಪಾಖಂಡಿಗಳು, ಎನ್ನುವ ನಿಲುವೂ ಈ ಚೌಕಟ್ಟಿನೊಳಗೇ ಬರುತ್ತದೆ. ಅಂದರೆ ನಮ್ಮ ವೈಚಾರಿಕ ಸ್ವಾತಂತ್ರ್ಯವನ್ನು ನಾವು ಧರ್ಮದ ಹೆಸರಿನಲ್ಲಿ ಅಥವಾ ಸಂಸ್ಕ್ಕೃತಿಯ ಹೆಸರಿನಲ್ಲಿ ಅಥವಾ ದೇಶದ ಹೆಸರಿನಲ್ಲಿ ನಾವೇ ಕುಂಠಿತಗೊಳಿಸಿಕೊಂಡಿರುತ್ತೇವೆ. ಅದರಿಂದಾಗಿ ಕಣ್ಣಿಗೆ ಕಟ್ಟಿದ ಕುದುರೆಯಂತೆ ಒಂದೇ ದಿಕ್ಕಿನಲ್ಲಿ ಓಡುತ್ತಿರುತ್ತೇವೆ. ಅದಕ್ಕೆ ಬದಲು ಭಿನ್ನ ಭಿನ್ನ ದೃಷ್ಟಿಕೋನಗಳನ್ನೂ ಇಟ್ಟುಕೊಂಡು ಅದೂ ತಪ್ಪಿರಬಹುದು ಎಂಬ ಸಂದೇಹಾತ್ಮಕ ಧೋರಣೆಯನ್ನು (ಸ್ಕೆಪ್ಟಿಕಲ್ ಆಟಿಟ್ಯೂಡ್) ಹೊಂದಿರಬೇಕು. ಎಲ್ಲವನ್ನೂ ಪ್ರಶ್ನಿಸುವ ಗುಣ ಏನಿರುತ್ತದಲ್ಲ ಅದೊಂದೇ ಆಧುನಿಕ ಕಾಲದಲ್ಲಿ ಆರೋಗ್ಯಪೂರ್ಣವಾದುದು. ಯಾವುದನ್ನೇ ಪೂರ್ಣವಾಗಿ ನಂಬಿದರೂ ಅದು ಒಂದಲ್ಲಾ ಒಂದು ಕುರುಡು ಓಣಿಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ.


ಕನ್ನಡ ಸಾಹಿತ್ಯದ ಸಮಕಾಲೀನ ನೆಲೆಗಳೇನು?

ಈ ಪ್ರಶ್ನೆಯ ವ್ಯಾಪ್ತಿ ಅಗಾಧವಾಗಿದೆ.  ತುಂಬಾ ಸಂಕ್ಷಿಪ್ತವಾಗಿ ಹೇಳಬೇಕಾದರೆ:   ಕಾವ್ಯದಲ್ಲಿ: ಆದರ್ಶ ಸಮಾಜದ ಸಾಧ್ಯತೆ ಹಾಗೂ ಸ್ವರೂಪಗಳನ್ನು ಕುರಿತ ಚಿಂತನೆ (ವೀರಪ್ಪ ಮೊಯಿಲಿ ಅವರ ಶ್ರೀ ರಾಮಾಯಣ ಮಹಾನ್ವೇಷಣಂ; ಕಂಬಾರರ  ಎಲ್ಲಿದೆ ಶಿವಾಪುರ; ಎಚ್. ಎಸ್. ಶಿವಪ್ರಕಾಶ್ ಅವರ ಮತ್ತೆ ಮತ್ತೆ; ಇತ್ಯಾದಿ); ಜಾನಾಂಗಿಕ ಚರಿತ್ರೆ (ಕಾದಂಬರಿ: ಮಲ್ಲಿಕಾರ್ಜುನ ಹಿರೇಮಠ್, ಹವನ; ವಿಷ್ಣು ನಾಯ್ಕ, ಜಂಗುಂ ಜಕ್ಕುಂ; ಕೆ. ಗೋಪಾಲಕೃಷ್ಣ, ಸ್ವಪ್ನ ಸಾರಸ್ವತ; ಇತ್ಯಾದಿ); ನಾಟಕ: ಸ್ಥಳೀಯ ದೃಷ್ಟಿಕೊನದ ಚರಿತ್ರೆ (ಕಂಬಾರರ ಶಿವರಾತ್ರಿ; ಇತ್ಯಾದಿ).  ಒಟ್ಟಾರೆಯಾಗಿ ಹೇಳಬೇಕಾದರೆ, ಕಳೆದ ಒಂದು-ಒಂದೂವರೆ ದಶಕಗಳ ಕಾಲವನ್ನು ’ನೂತನ ಪ್ರಯೋಗಗಳ ಕಾಲ; ನೂತನ ವೈಚಾರಿಕತೆಯ ಕಾಲ, ಮತ್ತು ಸಿದ್ಧ ವೈಚಾರಿಕ ಚೌಕಟ್ಟುಗಳನ್ನು ಮೀರುವ ಕಾಲ ಎಂದು ಹೇಳಬಹುದು.


ಜಾನಪದ ಅಧ್ಯಯನ ಇತ್ತೀಚೆಗೆ ಪ್ರಾಮುಖ್ಯತೆ ಪಡೆದಿದೆ. ಸಂಸ್ಕೃತಿ ಚಿಂತನೆಯಲ್ಲಿ ಜಾನಪದ ಅಧ್ಯಯನ ಪಡೆದುಕೊಳ್ಳುತ್ತಿರುವ ಪಾತ್ರವೇನು?  
ಜಾನಪದ ಅಧ್ಯಯನ ಶಿಷ್ಟ ವರ್ಗಗಳ ವೈಚಾರಿಕತೆ ಹಾಗೂ ಲೋಕದೃಷ್ಟಿ ಇವುಗಳನ್ನು ಮೀರುವ ಹಾಗೂ ಭಿನ್ನ ವೈಚಾರಿಕತೆ ಮತ್ತು ಲೋಕದೃಷ್ಟಿಗಳನ್ನು ಅರಿಯುವ ಪರ್ಯಾಯ ಮಾರ್ಗಗಳನ್ನು ನಮಗೆ ತೆರೆಯುತ್ತದೆ; ಇದೇ ಹಾದಿಯನ್ನು ಸಂಸ್ಕೃತಿ ಚಿಂತನೆಯೂ ತುಳಿಯುವುದರಿಂದ ಎರಡೂ ಪರಸ್ಪರ ಪೂರಕವಾಗಬಹುದು.
ಜಾಗತಿಕ ಜಾನಪದ ಮಹಾಕಾವ್ಯಗಳ ಅಧ್ಯಯನ ನಡೆಸಿದ್ದೀರಿ. ಕನ್ನಡ ಜಾನಪದಕ್ಕೂ ಇತರೆ ಜಾನಪದಗಳಿಗೂ ತುಲನಾತ್ಮವಾಗಿ ಕಾಣುವ ಸಾಮ್ಯತೆ ಭಿನ್ನತೆಗಳೇನು?
ತುಂಬಾ ಸ್ಥೂಲವಾಗಿ ಹೇಳಬೇಕಾದರೆ, ಕನ್ನಡೇತರ ಜಾನಪದ ಮಹಾಕಾವ್ಯಗಳು ನಾಯಕನ ದೈಹಿಕ ಸಾಹಸ-ಧೈರ್ಯ-ಶೌರ್ಯಗಳಿಗೆ ಒತ್ತು ಕೊಟ್ಟರೆ ಕನ್ನಡದ ಪ್ರಮುಖ ಜಾನಪದ ಮಹಾಕಾವ್ಯಗಳು (ಮಲೆ ಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈಲಾರಲಿಂಗ,  ಇತ್ಯಾದಿ) ನಾಯಕನ ಸಾಮೂಹಿಕ ಕಾರ್ಯಗಳಿಗೆ, ಅವನ ಆಧ್ಯಾತ್ಮಿಕ ಸಾಧನೆಗಳಿಗೆ, ಮತ್ತು ವಿಶ್ವಸೃಷ್ಟಿಯ ಎಲ್ಲಾ ಜೀವಜಂತುಗಳೂ ಸಮಾನ ಜೀವಸೂತ್ರದಿಂದ ಬಂಧಿಸಲ್ಪಟ್ಟಿವೆ ಎಂಬಂತಹ ಪೂರ್ಣ ದೃಷ್ಟಿಗೆ  ಒತ್ತು ಕೊಡುತ್ತವೆ.  ಮಾದೇಶ್ವರ, ಮಂಟೇಸ್ವಾಮಿ ಇವರುಗಳಂತಹ ’ಯೋಗಿ’ಗಳನ್ನು ನಾಯಕರಾಗುಳ್ಳ ಮೌಖಿಕ ಮಹಾಕಾವ್ಯಗಳು, ಮತ್ತು ಬುಡಕಟ್ಟು ಜನಾಂಗಗಳ ’ರಾಮಾಯಣ-ಮಹಾಭಾರತ’ಗಳು ಭಾರತೀಯೇತರ ಮೌಖಿಕ ಪರಂಪರೆಯಲ್ಲಿ (ನನಗೆ ತಿಳಿದಂತೆ ) ಇಲ್ಲ.

ಜಾನಪದ ಸಾಹಿತ್ಯದಲ್ಲಿ ಬರುವ ಪ್ರತಿರೋಧದ ನೆಲೆಗೆ ಕೆಲ ನಿದರ್ಶನ ನೀಡಬಹುದೇ?

     ಮೊದಲಿಗೆ ಮಲೆ ಮಾದೇಶ್ವರನ ಮೌಖಿಕ ಕಾವ್ಯದಲ್ಲಿ ನೋಡುವುದಾದರೆ ಒಂದು ನೆಲೆಯಲ್ಲಿ ಈ ಮಹಾಕಾವ್ಯ ಕಾಲಾಂತರದಲ್ಲಿ ಜೈನ ಧರ್ಮವೂ ಜಾತಿಯಂತಹ ಶ್ರೇಣೀಕೃತ ವ್ಯವಸ್ಥೆಯನ್ನು ಒಪ್ಪಿಕೊಂಡುದನ್ನು ಪ್ರತಿಭಟಿಸುತ್ತದೆ: ರಾಜನು ಮಾದೇಶ್ವರನು ಮಾದಿಗನೆಂದು ತಿರಸ್ಕಾರದಿಂದ ಕಂಡು, ಅವನಿಗೆ ತನಗೋಸ್ಕರ ಒಂದು ಜೊತೆ ಪಾದರಕ್ಷೆಗಳನ್ನು ಹೊಲಿದು ಕೊಡುವಂತೆ ಆದೇಶಿಸುತ್ತಾನೆ. ಮಾದೇಶ್ವರನಾದರೋ ಮಹಾ ಶರಣ ಹರಳಯ್ಯನ ’ಉರಿ ಚಮ್ಮಾಳಿಗೆ’ಗಳನ್ನೇ ತಂದು, ಅವುಗಳಲ್ಲಿ ಕಾಲಿಡಲು ಶ್ರವಣಾಸುರನನಿಗೆ ಹೇಳುತ್ತಾನೆ; ಅದರಂತೆಯೇ, ದರ್ಪದಿಂದ ಆ ಉರಿ ಚಮ್ಮಾಳಿಗೆಗಳನ್ನು ಮೆಟ್ಟಿದ ಕೂಡಲೇ ಶ್ರವಣಾಸುರನು ಉರಿದು ಭಸ್ಮವಾಗುತ್ತಾನೆ.  ಇನ್ನೊಂದು ನೆಲೆಯಲ್ಲಿ ಈ ಕಾವ್ಯ ಸಂಸ್ಥೀಕರಣಗೊಂಡ ಮಠ-ಮಾನ್ಯಗಳನ್ನು ತಿರಸ್ಕರಿಸುತ್ತದೆ: ಇನ್ನೊಂದು ನೆಲೆಯಲ್ಲಿ, ಮಾನವಕೇಂದ್ರಿತ ಲೋಕದೃಷ್ಟಿಯನ್ನು ತಿರಸ್ಕರಿಸಿ, ಹಾವು-ಚೇಳುಗಳನ್ನೂ ಮನುಷ್ಯರ ಕೈಗೆ ಸಿಗದಂತೆ ದೂರವಿಟ್ಟು, ಹುಲಿವಾಹನನಾಗಿ, ತನ್ನ ಸಾಧನೆಯನ್ನು ಮುಂದುವರೆಸುತ್ತಾನೆ.  ಮಂಟೇಸ್ವಾಮಿ ಕಾವ್ಯವು ಸಂಸ್ಥೀಕರಣಗೊಂಡ ವೀರಶೈವ ಧರ್ಮವನ್ನು ವಿಡಂಬಿಸುತ್ತದೆ: ಕಲ್ಯಾಣದ ಶರಣರ ಹಾಗೂ ಬಸವಣ್ಣನವರ ಭಕ್ತಿ-ನಿಷ್ಠೆಗಳನ್ನು ಪರೀಕ್ಷಿಸಲು, ಮಂಟೇಸ್ವಾಮಿ ತನ್ನ ದೇಹವನ್ನೆಲ್ಲ ಕಜ್ಜಿಯಿಂದ ತುಂಬಿಕೊಂಡು, ಒಂದು ತಿಪ್ಪೆಯಲ್ಲಿ ಕುಳಿತಿದ್ದು ಬಸವಣ್ಣನವರನ್ನು ಕಾಣುತ್ತಾನೆ; ಅನಂತರ, ಶರಣರು ಸ್ನಾನಕ್ಕೆ ಹೋದಾಗ, ಅವರ ಲಿಂಗಗಳನ್ನೆಲ್ಲಾ ಮಾಯ ಮಾಡಿ, ಅವುಗಳನ್ನು ಮತ್ತೆ ಪಡೆಯುವಂತೆ ಶರಣರನ್ನು ಆಹ್ವಾನಿಸುತ್ತಾನೆ; ಅವರೆಲ್ಲರೂ ಸೋತು ಓಡಿ ಹೋಗುತ್ತಾರೆ.  ಎಂದರೆ, ಶರಣರಲ್ಲಿ ಎಲ್ಲರಿಗೂ --ದಲಿತರಿಗೆ, ರೋಗಿಗಳಿಗೆ, ದರಿದ್ರರಿಗೆ ಕೂಡಾ -- ಸಮಾನ ಸ್ಥಾನವಿರಬೇಕು ಎಂಬುದನ್ನು; ಮತ್ತು, ಲಿಂಗಧಾರಣೆ, ಪೂಜೆ, ಇತ್ಯಾದಿ ಬಾಹ್ಯಾಚರಣೆಗಳಿಂದ ವ್ಯಕ್ತಿಯೋರ್ವನು ನಿಜ ಶರಣನಾಗಲು ಸಾಧ್ಯವಿಲ್ಲ ಎಂದು ಈ ಕಾವ್ಯದ ಪ್ರಮುಖ ಭಾಗಗಳು ನಿರೂಪಿಸುತ್ತವೆ.  ಹಾಗೆಯೇ, ಮುಂದೆ, ತಾವೇ ಶ್ರೇಷ್ಠರೆಂದು ಕೊಬ್ಬಿದ್ದ ಪಾಂಚಾಳರನ್ನೂ ಮಂಟೇಸ್ವಾಮಿ ಗೆದ್ದು ತನ್ನ ಒಕ್ಕಲಾಗಿ ಮಾಡಿಕೊಳ್ಳುತ್ತಾನೆ.

ಅನುವಾದ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ನಡೆಸಿದ್ದಿರಿ. ಕನ್ನಡದಲ್ಲಿ ಅನುವಾದ ಕ್ಷೇತ್ರದ ಸವಾಲುಗಳೇನು?  
ಅನುವಾದ ಎನ್ನುವ ಕಾರ್ಯ ಎರಡು ಭಾಷಿಕ ಜನಾಂಗಗಳನ್ನು ಹಾಗೂ ಅವರ ಸಂಸ್ಕೃತಿ-ವೈಚಾರಿಕತೆಗಳನ್ನು ಬೆಸೆಯುವ ಕಾರ್ಯ.  ಈ ಕಾರ್ಯದಲ್ಲಿ ಇಂಗ್ಲೀಷ್-ಫ್ರೆಂಚ್ ಇತ್ಯಾದಿ ’ಅಂತಾರಾಷ್ಟ್ರೀಯ’ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸುವಾಗ ತುಂಬಾ ಸ್ವಾತಂತ್ರ್ಯ ವಹಿಸುವುದು; ಮತ್ತು ಕನ್ನಡ-ಹಿಂದಿ ಇತ್ಯಾದಿ ’ನಮ್ಮ’ ಭಾಷೆಗಳಿಂದ ಇಂಗ್ಲೀಷ್-ಫ್ರೆಂಚ್ ಭಾಷೆಗಳಿಗೆ ಅನುವಾದಿಸುವಾಗ ಮೂಲಕ್ಕೆ ತುಂಬಾ ವಿಧೇಯವಾಗಿರುವುದು ಇತ್ತೀಚಿನ ’ವಸಾಹತೋತ್ತರ ಅನುವಾದಗಳ’ ಸ್ವರೂಪವಾಗುತ್ತಿದೆ.  ಇದಕ್ಕೆ ಬದಲಾಗಿ, ಅನುವಾದದ ನಿರೀಕ್ಷಿತ ಓದುಗ ಹಾಗೂ ಮೂಲಕೃತಿಯ ಸಂಸ್ಕೃತಿ ಇವೆರಡಕ್ಕೂ ಬದ್ಧನಾಗಿರುವುದು ಹೇಗೆ ಎಂಬುದು ಎಲ್ಲಾ ಅನುವಾದಕರೂ ಎದುರಿಸುವ ಸವಾಲು; ಇದು ಕನ್ನಡ ಅನುವಾದಕರೂ ಎದುರಿಸುವ ಸವಾಲು.

ಇತ್ತೀಚೆಗೆ ನೊಬೆಲ್ ಪುರಸ್ಕೃತ ವಿ.ಎಸ್.ನೈಪಾಲ್ ಮಹಿಳಾ ಸಾಹಿತ್ಯವನ್ನು, ಮಹಿಳೆಯರನ್ನು ಅವಮಾನಿಸುವ ಹೇಳಿಕೆ ನೀಡಿದರು. ಒಬ್ಬ ಸಾಹಿತಿಯಾಗಿ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೀರಿ? 
ಇದು ಸಂಪೂರ್ಣವಾಗಿ ಅಲಕ್ಷಿಸಬೇಕಾದ ಸಂಗತಿ; ಈ ಬಗೆಯ ಹೇಳಿಕೆ ಸಲ್ಮಾನ್ ರಶ್ದಿಯಿಂದಲೂ ಒಮ್ಮೆ ಬಂದಿತ್ತು (’ಶ್ರೇಷ್ಠ ಭಾರತೀಯ ಸಾಹಿತ್ಯವೆಂದರೆ ಭಾರತೀಯರಿಂದ ಇಂಗ್ಲೀಷ್‌ನಲ್ಲಿ ಬರೆದ ಸಾಹಿತ್ಯ’); ಇಂತಹ ಹೇಳಿಕೆಗಳನ್ನು ನಿರ್ಲಕ್ಷ್ಯದಿಂದ ಕಾಣುವುದೇ ಅವುಗಳಿಗೆ ನಾವು ಕೊಡಬಹುದಾದ ಉತ್ತರ.
ಕನ್ನಡ ವಿಮರ್ಷಾ ಲೋಕದಲ್ಲಿ ಸ್ತ್ರೀಸಂವೇದನೆಯ ಕೊರತೆ ಎಂಬ ಅಭಿಪ್ರಾಯವಿದೆ. ವಿಮರ್ಷಕರಾಗಿ ನಿಮ್ಮ ಅಭಿಮತವೇನು?
ಈ ಪ್ರಶ್ನೆಯ ಅರ್ಥ ’ವಿಮರ್ಶೆಯಲ್ಲಿ ಪುರುಷರ ಹೋಲಿಕೆಯಲ್ಲಿ ಸ್ತ್ರೀಯರ ಸಂಖ್ಯೆ ಕಮ್ಮಿ ಇದೆ’ ಎಂದಾದರೆ, ಆ ಅಭಿಪ್ರಾಯ ಸರಿ. ಆದರೆ, ಈ ಸಂದರ್ಭದಲ್ಲಿ ಕ್ರಿಯಾಶೀಲರಾಗಿರುವ ಸುಮಿತ್ರಾ ಬಾಯಿ, ಆಶಾದೇವಿ, ಪ್ರಭಾವತಿ, ವಿಜಯಾ ಸುಬ್ಬರಾಜ್, ಇತ್ಯಾದಿ ಅನೇಕರ ಅರ್ಥಪೂರ್ಣ ವಿಮರ್ಶೆಯನ್ನು ಮರೆಯುವಂತಿಲ್ಲ.

ಸಾಹಿತ್ಯ ವಿಮರ್ಷೆ ಎನ್ನುವುದು ಸಾಮಾನ್ಯ ಓದುಗರಿಗೆ ಕಬ್ಬಿಣದ ಕಡಲೆಯಂತಾಗಿದೆ. ಇದು ಹೀಗೇ ಇರಬೇಕಾ? 
ಸಾಮಾನ್ಯ  ಓದುಗರು ಎಂದರೆ ಸಾಹಿತ್ಯಾನುಭವ ಅಷ್ಟಾಗಿ ಇಲ್ಲದವರು ಎಂದಾದರೆ ನೀವು ಹೇಳುವ ’ಕಬ್ಬಿಣದ ಕಡಲೆ’ಯ ಉಪಮೆ ಸರಿ.  ಆದರೆ, ಆ ಕ್ಷೇತ್ರದ ಸಾಕಷ್ಟು ಅನುಭವವಿಲ್ಲದೆ ನೀವು ಶಾಸ್ತ್ರೀಯ ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆ, ಇತ್ಯಾದಿಗಳನ್ನು ಗ್ರಹಿಸುವುದು ಸಾಧ್ಯವೆ?  ಈ ಕಾರಣಕ್ಕಾಗಿಯೇ, ವಿಮರ್ಶಕನನ್ನು (ಎಂದರೆ ಸಹೃದಯನನ್ನು) ವರ್ಣಿಸುವಾಗ ಅಭಿನವಗುಪ್ತರು ಅವನ ವ್ಯುತ್ಪತ್ತಿ ಹಾಗೂ ಅನುಭವಕ್ಕೆ ಒತ್ತು ಕೊಡುತ್ತಾರೆ: ಏಷಾಂ ಕಾವ್ಯಾನುಶೀಲಾನಾಂ, ಅಭ್ಯಾಸವಶಾತ್ . . .  ಸ್ವಲ್ಪವೂ ತಯಾರಿಯಿಲ್ಲದೆ, ನಾವು ಯಾವ ಕ್ಷೇತ್ರಕ್ಕೆ ಹೋದರೂ ಅದು ’ಕಬ್ಬಿಣದ ಕಡಲೆ’ಯಂತೆಯೇ ಕಾಣುತ್ತದೆ.

------------------



ಆಗಸ್ಟ್ 19, 2011

ಅಣ್ಣಾ ಹಜಾರೆಗೆ ಜಯವಾಗಲಿ! ಆದರೆ..............................














ಅಣ್ಣಾ ಹಜಾರೆ ಪ್ರಾಮಾಣಿಕರು, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಕುರಿತ ಅವರ ಬದ್ಧತೆ ಪ್ರಶ್ನಾತೀತ. ಕಾಂಗ್ರೆಸ್ ನಾಯಕರು ಮತ್ತು ಯುಪಿಎ ಸರ್ಕಾರ ಏನೇ ಹೇಳಲಿ, ಟೀಂ ಅಣ್ಣಾ ಮೇಲೆ ಏನೇ ಗೂಬೆ ಕೂರಿಸಲಿ ಅದು ಅಣ್ಣಾ ಹಜಾರೆಯವರ ನ್ಯಾಯನಿಷ್ಠೆಗೆ ಧಕ್ಕೆಯುಂಟು ಮಾಡಲಾರದು. ಆದರೆ ಈ ಸಂದರ್ಭದಲ್ಲಿ ನಾವೆಲ್ಲರೂ ಕೇಳಿಕೊಳ್ಳಲೇಬೇಕಾದ ಬಹುಮುಖ್ಯ ಪ್ರಶ್ನೆಯೊಂದಿದೆ.
 ಪ್ರಾಮಾಣಿಕತೆ, ಬದ್ಧತೆ ಹಾಗೂ ನ್ಯಾಯನಿಷ್ಠೆಗಳು ಮಾತ್ರ ಒಂದು ಚಳವಳಿಯನ್ನು ಯಶಸ್ವಿಗೊಳಿಸುತ್ತವಾ?



ಈ ಕುರಿತು ನನ್ನ ಅಭಿಪ್ರಾಯ ಹಂಚಿಕೊಳ್ಳುವ ಮುನ್ನ ಹೇಳಿಬಿಡುತ್ತೇನೆ. ಜನಲೋಕಪಾಲ ಜಾರಿಗಾಗಿ ಬೆಂಗಳೂರಿನಲ್ಲಿ ಚಳವಳಿ ಆರಂಭಗೊಂಡ ಸಂದರ್ಭದಲ್ಲಿ ನಡೆದ ರ‍್ಯಾಲಿಯಲ್ಲಿ, ನಂತರ ಫ್ರೀಡಂ ಪಾರ್ಕಿನಲ್ಲಿ ನಡೆದ ಧರಣಿಯಲ್ಲಿ ನಾನು ಪಾಲ್ಗೊಂಡಿದ್ದೆ. ಸಮಾಜದ ವಿವಿದ ಜನವರ್ಗಗಳು ಸ್ಟ್ರೈಕು, ಧರಣಿ ಅಂತೆಲ್ಲಾ ನಡೆಸುವಾಗ ಮುಖ ಸಿಂಡರಿಸಿಕೊಂಡು ಹೋಗುತ್ತಿದ್ದ ಐಟಿ ಗಯ್‌ಗಳು ಅಲ್ಲಿ ಅಂದು ಹೋರಾಟದ ಹುಮ್ಮಸ್ಸಿನಲ್ಲಿ ಕುಳಿತದ್ದು ಕಂಡು ಬಹಳ ಖುಷಿಗೊಂಡಿದ್ದೆ. ನಂತರ ಇತ್ತೀಚೆಗೆ ಅಣ್ಣಾ, ಕಿರಣ್ ಬೇಡಿ, ಕೇಜ್ರಿವಾಲ್ ತಂಡ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದೆ. ಕೇಜ್ರಿವಾಲ್ ಅವರು ತಮ್ಮ ಕರಡಿನ ಪರವಾಗಿ ಮಂಡಿಸಿದ ಪ್ರತಿಯೊಂದಕ್ಕೂ ಅಲ್ಲಿದ್ದ ಎಲ್ಲರಂತೆ ನಾನೂ ಬೆಂಬಲ ಸೂಚಿಸಿದ್ದೆ. ಸರ್ಕಾರಿ ಲೋಕಪಾಲ ಮಸೂದೆಯನ್ನು ಎಲ್ಲರಂತೆ ನಾನೂ ಖಂಡಿಸಿದೆ. ಅರವಿಂದ ಕೇಜ್ರಿವಾಲ್ ಕರಡು ರಚಿಸಿ ಪ್ರಶಾಂತ್ ಭೂಷಣ್ ಹಾಗೂ ಶಾಂತಿ ಭೂಷಣ್ ತಿದ್ದುಪಡಿ ಮಾಡಿರುವ ಜನಲೋಕಪಾಲ ಕರಡನ್ನು ಪೂರ್ತಿ ಓದಿ ಅರ್ಥಮಾಡಿಕೊಂಡ ಮೇಲೆ ನನಗೆ ಪ್ರಾಮಾಣಿಕವಾಗಿ ಅನ್ನಿಸಿರುವುದೇನೆಂದರೆ ಅದು ಜಾರಿಯಾಗಲೇಬೇಕು ಎನ್ನುವುದು. ಅದು ಭ್ರಷ್ಟಾಚಾರವನ್ನು ಪೂರ್ತಿ ನಿರ್ಮೂಲಿಸುವುದಿಲ್ಲ ಎನ್ನುವುದು ನಿಜವಾದರೂ ಭ್ರಷ್ಟರಿಗೆ ಮೂಗುದಾಣವನ್ನಂತೂ ಹಾಕುವುದರಲ್ಲಿ ಸಂಶಯವಿಲ್ಲ.  ಈ ದೇಶದಲ್ಲಿ ತಾಂಡವವಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಕಂಡು ಸಹಜವಾದ ಸಿಟ್ಟು ಆಕ್ರೋಶ ಎಲ್ಲರಿಗಿರುವಂತೆ ನನಗೂ ಇರುವುದು ವಿಶೇಷವೇನಲ್ಲ. ಅದಕ್ಕಾಗಿ ಏನಾದರೂ ಪರಿಹಾರ ಬೇಕೆಂದು ಪರಿತಪಿಸುತ್ತಿರುವ ಕೋಟ್ಯಾಂತರ ಜನರಲ್ಲಿ ನಾನೂ ಒಬ್ಬ. ಭ್ರಷ್ಟಾಚಾರದ ಕಾರ್ಗತ್ತಲಿನಲ್ಲಿ ಜನಲೋಕಪಾಲವು ಒಂದು ಸಣ್ಣ ಬೆಳಕಿಂಡಿ ಎನ್ನುವುದು ನನ್ನ ಅಭಿಪ್ರಾಯ.
ಇದಿಷ್ಟು ನನ್ನ ಆಂಟಿಸಿಪೇಟರಿ ಬೇಲ್.

ಈಗ ವಿಷಯಕ್ಕೆ ಬರೋಣ. ಬರೀ ಪ್ರಾಮಾಣಿಕತೆ, ಬದ್ಧತೆಗಳು ಯಾವ ಹೋರಾಟವನ್ನೂ ಯಶಸ್ವಿಗೊಳಿಸಲು ಸಾಧ್ಯವಿಲ್ಲ. ಚಳವಳಿಯ ಯಶಸ್ಸಿಗೆ ಅತ್ಯವಶ್ಯಕವಾಗಿ ಬೇಕಾದದ್ದು ವ್ಯವಸ್ಥಿತ ಸಂಘಟನೆ ಹಾಗೂ ದೂರದೃಷ್ಟಿ. ಅಣ್ಣಾ ಹಜಾರೆಯವರು ಬಂಧಿತರಾದ ನಂತರದಲ್ಲಿ ಇಡೀ ಚಳವಳಿ ಒಂದು ನೆಗೆತವನ್ನು  ಸಾಧಿಸಿರುವ ಹೊತ್ತಿನಲ್ಲಿ ಕೊಂಚ ಹಿಂತಿರುಗಿ ನೋಡಿದರೆ ಸ್ಪಷ್ಟವಾಗಿ ತೋರುವುದೆಂದರೆ ಈ ಚಳವಳಿಗೆ ವ್ಯವಸ್ಥಿತ ಸಂಘಟನೆಯಾಗಲೀ ದೂರದೃಷ್ಟಿಯಾಗಲೀ ಇಲ್ಲ ಎನ್ನುವುದು. ಈ ಸಂಘಟನೆ ಎಷ್ಟೊಂದು ಜಾಳುಜಾಳಾಗಿದೆ ಎಂದರೆ ಅಣ್ಣಾ ಹಜಾರೆಗೆ ಬಿಡಿ ಸ್ವತಃ ಕೇಜ್ರೀವಾಲ್, ಕಿರಣ್ ಬೇಡಿಯವರಿಗೇ ಅದರ ಮೇಲೆ ಹಿಡಿತ ಇಲ್ಲ. ಉದಾಹರಣೆಗೆ, ಬೆಂಗಳೂರಿನಲ್ಲಿ ಚಳವಳಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವವರು ಲೋಕಸತ್ತಾ ಪಾರ್ಟಿ ಹಾಗೂ ರವಿಶಂಕರ್ ಗುರೂಜಿಸಿಷ್ಯರು. ಇವರಿಬ್ಬರಿಗೂ ಪ್ರತ್ಯೇಕ ಅಜೆಂಡಾಗಳಿವೆ. ಬಿಜೆಪಿ ಹಾಗೂ ಅಬ್ಬರಿಸಿ ಬೊಬ್ಬಿಡುವ ವಿದೂಷಕರ ಪರಿಷತ್ತಿನವರು ಹೋರಾಟವನ್ನು ಬೆಂಬಲಿಸಿ ಪ್ರತಿಭಟನೆ ಮಾಡಿದ್ದಾರೆ. ಆದರೆ ಅಣ್ಣಾ ಅವರ ಜನಲೋಕಪಾಲದ ಬಗೆಗೆ ಅವರಿಗೆ ಸಂಪೂರ್ಣ ಭಿನ್ನಾಭಿಪ್ರಾಯವಿದೆ. ಅಂದರೆ ಅವರಿಗೆ ಈ ದೇಶದಲ್ಲಿ ಭ್ರಷ್ಟಾಚಾರ ನಿಯಮತ್ರಣವಾಗುವುದು ಬೇಕಾಗೇ ಇಲ್ಲ. ಅವರ ಹಿಡನ್ ಅಜೆಂಡಾ ಏನಿದ್ದರೂ ಕಾಂಗ್ರೆಸ್ ಬೀಳಿಸುವುದು. ಮೊನ್ನೆ ಸಂತೋಷ್ ಹೆಗಡೆ ವರದಿ ನೀಡಿದ್ದ ದಿನವೇ ಎಬಿವಿಪಿ ಕೇಂದ್ರದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿತ್ತು. ಯಡಿಯೂರಪ್ಪನವರ ಭ್ರಷ್ಟಾಚಾರವನ್ನು  ಖಂಡಿಸುವ ಕನಿಷ್ಠ ಪ್ರಾಮಾಣಿಕತೆಯನ್ನು ಎಬಿವಿಪಿ ತೋರಲಿಲ್ಲ ಎನ್ನುವುದೇ ಅದರ ಇಬ್ಬಂದಿತನವನ್ನು ತೋರಿಸುತ್ತದೆ. ಇದೆಲ್ಲಾ ಟೀಂ ಅಣ್ಣಾಗೆ ತಿಳಿದಿಲ್ಲವೇ?. ತಿಳಿದೂ ಇಂತಹವರನ್ನು ದೂರ ಇಟ್ಟು ಚಳವಳಿಯ ಪರಿಶುದ್ಧತೆಯನ್ನು ಕಾಪಾಡಿಕೊಳ್ಳದಿದ್ದರೆ ಅಂತಿಮವಾಗಿ ದುರ್ಬಲಗೊಳ್ಳುವುದು ಇಡೀ ಚಳವಳಿಯೇ ಅಲ್ಲವೇ? ಬೆಂಗಳೂರಿನಲ್ಲಿ ಭಾಷಣ ಮಾಡಿದ ಅಣ್ಣಾ ರಾಜ್ಯಸರ್ಕಾರದ ಬ್ರಷ್ಟಾಚಾರದ ಬಗ್ಗೆ ಒಂದೇ ಒಂದು ಮಾತಾಡಿದ್ದರೂ ಸಮಾಧಾನವಾಗುತ್ತಿತ್ತು. ಆದರೆ ಅವರಿಗ್ಯಾಕೆ ಜಾಣಕುರುಡು ಎಂದು ತಿಳಿಯಲಿಲ್ಲ.
ನಿಜ. ಇಂದು ಇಡೀ ದೇಶದಲ್ಲಿ ಒಂದು ಗಣನೀಯ ಮಟ್ಟದ ಜನರನ್ನು ಕದಲಿಸುವ ಶಕ್ತಿ ಇದ್ದರೆ ಅದು ಅಣ್ಣಾ ಹಜಾರೆಗೆ ಮಾತ್ರ. ಅದು ಮಾದ್ಯಮಗಳ ಹೈಪ್ ಇರಲಿ ಮತ್ತೇನೇ ಇರಲಿ. ಇಂದು ಸಹಸ್ರಾರು ಯುವಕರು, ವಿದ್ಯಾರ್ಥಿಗಳು, ನಾಗರಿಕರಿಗೆ ಅಣ್ಣಾ ಒಂದು ಆಶಯ. ಹೀಗಾಗಿಯೇ ಅಣ್ಣಾ ಅವರ ಮೇಲೆ ಇರುವ ಹೊಣೆಗಾರಿಕೆಯೂ ಹೆಚ್ಚಿನದ್ದು. ತಮ್ಮ ಪ್ರತಿಯೊಂದು ಹೆಜ್ಜೆಯನ್ನೂ ದೇಶದ ಹಿತದಿಂದ ಹುಷಾರಾಗಿ ಇಡಬೇಕಾದ ಜವಾಬ್ದಾರಿ ಅವರದ್ದಾಗಿದೆ. ಆದರೆ ಇಲ್ಲಿ ಅಂತಹ ತಾಳ್ಮೆಯ, ಹುಷಾರಿತನದಲ್ಲಿ ಅವರು ಹೋಗುತ್ತಿಲ್ಲ. ಬರೀ ಭಾವೋನ್ಮಾದದಲ್ಲೇ ಚಳವಳಿಯನ್ನು ಕೊಂಡೊಯ್ಯುತ್ತಿರುವುದು ನಿಚ್ಚಳವಾಗಿದೆ.
ಈ ಚಳವಳಿ ಮಧ್ಯಮವರ್ಗದ ಜೊತೆ ಸಮಾಜದ ಬಹುದೊಡ್ಡ ವರ್ಗವಾದ ರೈತಾಪಿ, ಕಾರ್ಮಿಕರು, ಆದಿವಾಸಿಗಳನ್ನು, ಹಾಗೂ  ಇಂತಹ ಹೋರಾಟದಲ್ಲಿ ಅತ್ಯಂತ ಸಮರ್ಥವಾಗಿ ನಿಲ್ಲಬಲ್ಲ ದಲಿತ ವರ್ಗವನ್ನು ಒಳಗೊಳ್ಳಲು ಏನು ಮಾಡುತ್ತಿದೆ?. ಕೇಜ್ರಿವಾಲ್‌ರ ಸಂಘಟನೆಗೆ ಅದರ ಅಗತ್ಯವೇ ಕಾಣುತ್ತಿಲ್ಲ.
ಈಗ ಈ ಚಳವಳಿಯ ತಾಂತ್ರಿಕ ಅಂಶವನ್ನು ನೋಡೋಣ. ಜನಲೋಕಪಾಲವು ಜಾರಿಯಾಗಬೇಕು ನಿಜ. ಟೀಂ ಅಣ್ಣಾ ಹೇಳುವ ಒಂದು ಬಲವಾದ ಲೋಕಪಾಲ್ ಕಾಯ್ದೆಯನ್ನು ಜಾರಿಗೆ ತರಲು ಯಾವೊಂದು ಸಂಸದೀಯ ಪಕ್ಷಕ್ಕೂ ಇಚ್ಛೆಯಿಲ್ಲ. ಯಾಕೆಂದರೆ ಅಂತ ಒಂದು ಕಾಯ್ದೆ ಅವರ ಭ್ರಷ್ಟಾಚಾರದ ಉದ್ಯ,ಕ್ಕೆ ದೊಡ್ಡ ಬ್ರೇಕ್ ಹಾಕುತ್ತದೆ. ಹೀಗಾಗಿ ಅವರು ಒಪ್ಪಿಗೆ ಕೊಡುವುದಿಲ್ಲ. ಆದರೆ ಅಂತಹ ಕಾಯ್ದೆ ಜಾರಿಯಾಗಬೇಕಾದರೆ ಸಂವಿಧಾನಬದ್ಧವಾಗಿ ಸಂಸತ್ತಿನ ಮೂಲಕವೇ ಜಾರಿಯಾಗಬೇಕು. ಹೀಗಿರುವಾಗ ಇಲ್ಲಿ ಎರಡೇ ದಾರಿ. ಒಂದೋ ಅಣ್ಣಾ ಚಳವಳಿ ಎಲ್ಲಾ ಕ್ಯಾಬಿನೆಟ್ ಸದಸ್ಯರ ಮನವೊಲಿಸಿ ಅದು ಮಂಡನೆಯಾಗುವಂತೆ ನೋಡಿಕೊಳ್ಳುವುದು. ನಂತರ ಸಂಸತ್ ಸದಸ್ಯರ (ಸರಳ ಬಹಮತಕ್ಕೆ ಬೇಕಾದಷ್ಟು) ಮನವೊಲಿಸುವುದು. ಒಂದಿಲ್ಲೊಂದು ಕಾರಣ ಹೇಳಿ ಕಳೆದ 40 ವರ್ಷಗಳಿಂದ ಒಂದು ದುರ್ಬಲ ಲೋಕಪಾಲವನ್ನೇ ಜಾರಿಗೊಳಿಸದ ರಾಜಕೀಯ ಪಕ್ಷಗಳೂ ಕೊನೆಗೂ ಇದನ್ನು ಜಾರಿಗೊಳಿಸುವ ಸಾಧ್ಯತೆ ತೀರಾ ಕಡಿಮೆ. ಇದು ಸಾಧ್ಯವಾಗದ ಕಾಲಕ್ಕೆ ಸ್ವತಃ ಟೀಂ ಅಣ್ಣಾ ಒಂದು ರಾಜಕೀಯ ಪಕ್ಷ ರಚಿಸಿ ಸಂಸತ್ತಿನೊಳಗೆ ಪ್ರವೇಶಿಸಿ ಇದಕ್ಕಾಗಿ ಹೋರಾಟ ನಡೆಸುವುದು. ಈ ಎರಡು ದಾರಿಗಳನ್ನು ಬಿಟ್ಟು ಬೇರೆ ದಾರಿ ಎಲ್ಲಿದೆ?? ಇದರ ಕುರಿತು ಸುಪ್ರೀಂ ಕೋರ್ಟೂ ಕೂಡಾ ಬೆಂಬಲ ಸೂಚಿಸುವ ಸಾಧ್ಯತೆ ಕಡಿಮೆ. ಯಾಕಂದರೆ ನ್ಯಾಯಾಂಗ ಕೂಡಾ ಲೋಕಪಾಲದ ಸುಪರ್ದಿಯಲ್ಲಿ ಇರಬೇಕು ಎನ್ನುವ ಬೇಡಿಕೆಯನ್ನು ಇಂದು ಬಹುಮಟ್ಟಿಗೆ ಭ್ರಷ್ಟಗೊಂಡಿರುವ ನ್ಯಾಯಾಧೀಶರೇ ಬೆಂಬಲಿಸಲಾರರು.

ಹೀಗಿರುವಾಗ ಈ ಚಳವಳಿಯ ಗುರಿಯಾದರೂ ಏನು? ಅಂಧಕನ ಕೈಯ ಅಂಧಕ ಹಿಡಿದಂತೆ ಹಜಾರೆಯ ಕೈಯನ್ನು ನಾವುಗಳು ಹಿಡಿಯುತ್ತಿದ್ದೇವೆ ಅನ್ನಿಸುವುದಿಲ್ಲವೇ. ಮಾತ್ರವಲ್ಲಾ 'ಅಣ್ಣಾ ನಿಮ್ಮ ಹಿಂದೆ ನಾವಿದ್ದೇವೆ. ನೀವು ಪ್ರಾಣ ತ್ಯಾಗಮಾಡಿದರೂ ಅಡ್ಡಿ ಇಲ್ಲ 'ಎನ್ನುವ ಧೋರಣೆ ತೋರುತ್ತಿರುವ ನಮಗೆ ಯಾವ ಮಟ್ಟಿಗಿನ ಸಿದ್ಧತೆ ಇದೆ?. ಹೆಚ್ಚೆಂದರೆ ಫೇಸ್‌ಬುಕ್ ಟ್ವಿಟ್ಟರ್‌ಗಳಲ್ಲಿ ನಮ್ಮ ಆಕ್ರೋಶ ತೋರಿಸಬಹುದಷ್ಟೇ?.

ಚಳವಳಿ ಯಾವ ದಿಕ್ಕಿನಲ್ಲಿ ಹೋಗಬೇಕು ಎನ್ನುವ ಕುರಿತು ಯಾವ ಸ್ಪಷ್ಟತೆಯೂ ಇಲ್ಲದೇ ಹೀಗೆ ಭಾವೋನ್ಮಾದದಿಂದ ಮುನ್ನುಗ್ಗುವುದು ಈ ದೇಶಕ್ಕೆ ಒಳ್ಳೆಯದು ಮಾಡುತ್ತದೆಯಾ?

ಇಲ್ಲಿ ನಡೆಯುತ್ತಿರುವ ಚಳವಳಿಯ ಉದ್ದೇಶ ಕೇವಲ ಒಂದು ಕಾಯ್ದೆಯನ್ನು ಜಾರಿ ಮಾಡುವುದು. ಆದರೆ ಅದು ಪಡೆದುಕೊಳ್ಳುತ್ತಿರುವ ಪ್ರಚಾರವ್ಯಾಪ್ತಿ ಮಾತ್ರ ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡುವುದು. ಅಣ್ಣಾ ಇನ್ನೂ  ಹೆಚ್ಚೆಚ್ಚು ದಿನ ಉಪವಾಸ ಮಾಡಿದಂತೆ ಇಡೀ ದೇಶದಲ್ಲಿ (ಮಾಧ್ಯಮ ತಲುಪುವ ದೇಶ) ಇನ್ನಷ್ಟು ಆತಂಕ ಹೆಚ್ಚುತ್ತದೆ. ಆದರೆ ಆಳುವ ಪಕ್ಷ ಹಾಗೂ ವಿರೋಧ ಪಕ್ಷಗಳು ಬಗ್ಗುವುದು ಕಡಿಮೆ.
ಇಂತಹ ಭಾವೋನ್ಮಾದದ ಹಾಗೂ ಆತಂಕಪೂರಿತ ವಾತಾವರಣದಲ್ಲಿ ಏನಾಗಬಹುದು ಎಂಬ ಆಲೋಚನೆ ನಮ್ಮಲ್ಲಿದೆಯೆ? ಇಲ್ಲಿ ಚಳವಳಿಯಲ್ಲಿ ಅಪ್ರಾಮಾಣಿಕವಾಗಿ ಭಾಗವಹಿಸುತ್ತಿರುವ ಸಂವಿಧಾನ ವಿರೋಧಿ ಶಕ್ತಿಗಳು ದೇಶದಾದ್ಯಂತ ಒಂದು ಪ್ರಕ್ಷೋಬೆ ಸೃಷ್ಟಿಸಲು ಅದನ್ನು ಬಳಸಿಕೊಳ್ಳ ಬಹುದು. ಸರ್ಕಾರ ಹೋರಾಟವನ್ನು ಬಗ್ಗುಬಡಿಯಲು ಇನ್ನಷ್ಟು ಆಕ್ರಮಣ ಕಾರಿಯಾಗಬಹುದು. ಲಾಟಿ ಚಾರ್ಜು, ಗೋಲೀಬಾರ್‌ಗಳು ಟೀವಿಗಳಲ್ಲಿ ಮತ್ತಷ್ಟು ರಂಜಕವಾಗಿ ಪ್ರಸಾರವಾಗಬಹುದು. ಟಿಆರ್‌ಪಿ ರೇಟ್ ಹೆಚ್ಚಬಹುದು. ಆದರೆ ಜನಲೋಕಪಾಲ ಜಾರಿಯಾಗುವುದಿಲ್ಲ! ನೆನಪಿರಲಿ.

ಇಲ್ಲವಾದರೆ ಅಣ್ಣಾ ಹಜಾರೆ ಮತ್ತು ತಂಡ ಇಡೀ ಸಂಸದೀಯ ಪ್ರಜಾಪ್ರಭುತ್ವವನ್ನು ಬದಲಾಯಿಸಿ ಇನ್ನೂ ಉತ್ತಮ ವ್ಯವಸ್ಥೆ ಜಾರಿಗೊಳಿಸುವ ಪರ್ಯಾಯ ಸೂಚಿಸಲಿ. ಒಪ್ಪುವುದು ಬಿಡುವುದು ಜನರಿಗೆ ಬಿಟ್ಟದ್ದು. ಆದರೆ ಈಗ ಮಾಡುತ್ತಿರುವಂತೆ ಈ ಚಳವಳಿ ಎಲ್ಲಿಗೆ ತಲುಪುತ್ತದೆ ಎಂಬ ಕನಿಷ್ಠ ದೂರದೃಷ್ಟಿಯಿಲ್ಲದೇ ವಿಚ್ಚಿದ್ರಕಾರಿಗಳಿಗೆ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಅವಕಾಶ ನೀಡುವುದು ಬೇಡ. ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ಈಜಿಪ್ಟ್‌ನಲ್ಲಿ, ಟುನಿಷಿಯಾದಲ್ಲಿ ಹೀಗೇ ಸ್ವಪ್ರೇರಿತ ದಂಗೆಗಳಾದವು. ಅಧಿಕಾರ ಹಸ್ತಾಂತರವಾಯಿತು. ಆದರೆ ಇಂದು ಈ ದೇಶಗಳಲ್ಲಿ ಅಧಿಕಾರ ವಹಿಸಿಕೊಂಡಿರುವ ಈ ಹಿಂದಿನ 'ಕ್ರಾಂತಿಕಾರಿ'ಗಳು ಹೊಸ ವ್ಯವಸ್ಥೆಯನ್ನು ತಾವೇ ನಡೆಸಬೇಕಾಗಿ ಬಂದಿರುವಾಗ ಎಂಥಾ ಗಂಭೀರ ಪಡಿಪಾಟಲುಗಳನ್ನು ಎದುರಿಸುತ್ತಿದ್ದಾರೆ ನೋಡಿ. ಇದೇ ಪರಿಸ್ಥತಿ ಕಳೆದೆರಡು ಮೂರು ವರ್ಷಗಳಲ್ಲಿ ಪಕ್ಕದ ನೇಪಾಳದಲ್ಲೂ ಏರ್ಪಟ್ಟಿದೆ.


ಒಂದು ವಿಷಯವನ್ನು ಮರೆಯದಿರೋಣ. ಚಳವಳಿಯ ಸಂಘಟನೆ, ದಾರಿ ಸರಿಯಿರದಿದ್ದರೆ ಅದು ಸಫಲಗೊಳ್ಳುವ ಸಾಧ್ಯತೆಯೂ ಕಡಿಮೆ. ಒಂದೊಮ್ಮೆ ಈ ಚಳವಳಿ ಕೆಟ್ಟ ರೀತಿಯಲ್ಲಿ ಪರ್ಯಾವಸಾನವಾದರೆ, ವಿಫಲವಾದರೆ ಏನಾಗುತ್ತದೆ? ಆಗುವುದಿಷ್ಟೆ- ಮುಂದಿನ ೫೦ ವರ್ಷ ಬ್ರಷ್ಟಾಚಾರದ ವಿರುದ್ಧ ಮಾತನಾಡುವ ಒಬ್ಬನೇ ಒಬ್ಬ ಈ ದೇಶದಲ್ಲಿರುವುದಿಲ್ಲ. ಅಂತಹ ಹತಾಷೆ, ನಿರಾಸೆ ಎಲ್ಲೆಡೆ ಆವರಿಸಿಕೊಳ್ಳುತ್ತೆ. ಟೀಂ ಅಣ್ಣಾ ಈ ವಿಷಯವನ್ನು ಪರಿಗಣಿಸಿದೆಯಾ? ಇಲ್ಲವೇ ಇಲ್ಲ. ಇದ್ದಿದ್ದರೆ ಅಣ್ಣಾ ಈಗ ಮಾಡುತ್ತಿರುವಂತೆ ಮಾಡುವ ಬದಲು ಮೊದಲು ದೇಶದಾದ್ಯಂತ ಉತ್ತಮ ಸಂಘಟನೆಗೆ ಮುಂದಾಗುತ್ತಿದ್ದರು. ಈಗ ವ್ಯಕ್ತವಾಗುತ್ತಿರುವ ಬೆಂಬಲದ ಮಹಾಪೂರವನ್ನು ಸಾಂಘಿಕ ಶಕ್ತಿಯಾಗಿ ಮಾರ್ಪಡಿಸುತ್ತಿದ್ದರು. ನಿಜವಾದ ದೇಶನಾಯಕವಾಗುತ್ತಿದ್ದರು. ಬೇಕಾದರೆ ಇನ್ನೂ ನಾಲ್ಕು ವರ್ಷ ತಯಾರಿ ನಡೆಸಿ ನಿಜವಾದ ಬದಲಾವಣೆಯ ಹರಿಕಾರನಾಗುತ್ತಿದ್ದರು. ಆದರೆ ಇಲ್ಲಿ ಅಂತಹ ಯಾವ ಲಕ್ಷಣಗಳೂ ಇಲ್ಲ.
ಹೀಗಾಗಿ ಈ ಹಿಂದೆ ಉತ್ಸಹಾದಿಂದಲೇ ಅಣ್ಣಾ ಚಳವಳಿಯನ್ನು ಒಂದು ಆಶಯವಾಗಿ ನೋಡಿದ ನನ್ನಂತವರಿಗೆ ಇಂದು ನಿರಾಸೆಯಾಗುತ್ತಿದೆ.
ಇವೆಲ್ಲವನ್ನೂ ಹೊರತು ಪಡಿಸಿದ ಮತ್ತೊಂದು ಮುಖ್ಯವಾದ ವಿಷಯವಿದೆ.
 ಇಂದು ಅಣ್ಣಾ ಚಳವಳಿಯಲ್ಲಿ ಭಾಗವಹಿಸುತ್ತಿರುವವರು ಒಂದು ಭ್ರಮೆಯಲ್ಲಿರುವುದಂತೂ ಸತ್ಯ. ಅಣ್ಣಾ ಗೆದ್ದರೆ ಭ್ರಷ್ಟಾಚಾರ ಸಂಪೂರ್ಣ ನಿಯಂತ್ರಣವಾಗಿಬಿಡುತ್ತದೆ ಎಂಬ 'ಫೂಲ್ಸ್ ಪ್ಯಾರಡೈಸ್' ಅದು. ನಾವು ಅರ್ಥ ಮಾಡಿಕೊಳ್ಳಬೇಕಿರುವುದಿಷ್ಟೆ. ಈ ದೇಶದಲ್ಲಿ ನೂರು ಜನಲೋಕಪಾಲಗಳು ಬಂದರೂ ಭ್ರಷ್ಟಾಚಾರ ಪೂರ್ತಿ ನಿರ್ಮೂಲನೆಯಾಗುವುದಿಲ್ಲ.  ಎಲ್ಲಿಯವರೆಗೆ? ಭ್ರಷ್ಟಾಚಾರಕ್ಕೆ ಮೂಲವಾಗಿರುವ ಒಂದು ಆರ್ಥಿಕ ಸಾಮಾಜಿಕ ವ್ಯವಸ್ಥೆ ಇರುವವರೆಗೆ.
ಅಷ್ಟಕ್ಕೂ ಭಾರತದಲ್ಲಿ ಭ್ರಷ್ಟಾಚಾರ ವ್ಯಾಪಕಗೊಂಡಿದ್ದು ಯಾವಾಗ? ಮತ್ತು ಹೇಗೆ? ಸಂಶಯವೆ ಇಲ್ಲ. ಯಾವಾಗ ನವ ಉದಾರವಾದಿ ನೀತಿಗಳು (Neo Liberal Policies)ಇಲ್ಲಿ ಜಾರಿಯಾದವೋ, ಯಾವಾಗ ಬಹುರಾಷ್ಟ್ರೀಯ ಕಂಪನಿಗಳ ಬಂಎವಾಳ ನಿದೇಶಿ ನೇರ ಹೂಡಿಕೆ (FDI) ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆಗಳ (FII)ಹೆಸರಲ್ಲಿ ಬಂಡವಾಳ ಬಂಡವಾಳ ೆನ್ದುನುವುದು ದಂಡಿದಂಡಿಯಾಗಿ ನುಗ್ಗತೊಡಗಿತೋ? ಯಾವಾಗ ಖಾಸಗೀಕರಣ ಈ ದೇಶದ ಸಾರ್ವಜನಿಕ ಕ್ಷೇತ್ರವನ್ನು ನುಂಗಿ ಹಾಕತೋಡಗಿತೋ, ಯಾವಾಗ ಸರ್ಕಾರ ನಡೆಸುವವರಿಗೆ ಕೈಗಾರಿಕೆಗಳನ್ನು ನಡೆಸುವ ಕೆಲಸ ತಪ್ಪಿ ಬರೀ ಎಂಒಯುಗಳಿಗೆ (Memorandum Of Understanding) ಸಹಿ ಹಾಕುವ, ಹೂಡಿಕೆ ಅಪಹೂಡಿಕೆಗಳನ್ನು ಮ್ಯಾನೇಜ್ ಮಾಡುವ ಕೆಲಸ ಮಾತ್ರ ಉಳಿಯಿತೋ, ಭ್ರಷ್ಟಾಚಾರಕ್ಕೆ ಇನ್ನಿಲ್ಲದ ಅವಕಾಶ ದೊರೆತು ಯಾವಾಗ ದೊಡ್ಡ ದೊಡ್ಡ ಖಾಸಗಿ ಕಾರ್ಪೊರೇಷನ್‌ಗಳು, ಕಂಪನಿಗಳು ದೊಡ್ಡ ಮೊತ್ತದ ಆಮಿಷಗಳನ್ನು ಒಟ್ಟತೊಡಗಿದರೋ ಆಗಲೇ ತಾನೆ ಬ್ರಷ್ಟಾಚಾರ ಎನ್ನುವುದು ಸರ್ವಾಂತರ್ಯಾಮಿಯೂ, ಸರ್ವಶಕ್ತವೂ, ಸರ್ವವ್ಯಾಪಿಯೂ ಆದದ್ದು? ಈ ದೇಶದ ಆರ್ಥಿಕ ನೀತಿಗಳಲ್ಲೇ ಭ್ರಷ್ಟಾಚಾರದ ಮೂಲವಡಗಿರುವ ಅದರ ಕುರಿತು ಏನೂ ಮಾತನಾಡದ ಜನಲೋಕಪಾಲವಾಗಲೀ ಲೋಕಪಾಲವಾಗಲೀ ಭ್ರಷ್ಟಾಚಾರವನ್ನು ಹೇಗೆ ನಿಯಂತ್ರಿಸುತ್ತದೆ ಹೇಳಿ? ಹೆಚ್ಚೆಂದರೆ ಈಗ ನಾವು ಕರ್ನಾಟಕದಲ್ಲಿ ಹೇಗೆ 'ಲೋಕಾಯುಕ್ತ ಬಲೆಗೆ ಬಿದ್ದ ಹೆಗ್ಗಣ'ಗಳನ್ನು ದಿನನಿತ್ಯ ನೋಡುತ್ತಿದ್ದೇವೆಯೋ ಹಾಗೆ ದೇಶದಾದ್ಯಂತ ಹೆಗ್ಗಣಗಳ ಪಟ್ಟಿ ಬೆಳೆಯುತ್ತಾ ಹೋಗಬಹುದು. ಇಂದು ರಾಜಕಾರಣಿಗಳು ಭಾಗಿಯಾಗಿರುವ ಯಾವುದೇ ಹಗರಣಗಳನ್ನು ನೋಡಿ. ಅಲ್ಲಿ ಬ್ರಷ್ಟರು ರಾಜಕಾರಣಿಗಳು ಮಾತ್ರವಲ್ಲ. ಅವರಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ನೀಡುವ ಕಾರ್ಪೊರೇಷನ್‌ಗಳೂ ಇವೆ. ಆದರೆ ಜನಲೋಕಪಾಲ ಅವುಗಳ ಬಗ್ಗೆ ಎಲ್ಲೂ ಮಾತನಾಡುವುದಿಲ್ಲವಲ್ಲ?. ಭ್ರಷ್ಟಾಚಾರ ಒಂದು ಬೃಹತ್ ಆಲದ ಮರವಿದ್ದಂತೆ. ಜನಲೋಕಪಾಲದ ಶಕ್ತಿ ಇರುವುದು ಒಂದು ಕೊಂಬೆಯನ್ನು ಅಲ್ಲಾಡಿಸುವುದು ಮಾತ್ರ. ಅದರಿಂದಾಗಿ ಅಕ್ಕ ಪಕ್ಕದ ಇನ್ನಷ್ಟು ಕೊಂಬೆಗಳು ಅಲ್ಲಾಡಬಹುದೇ ವಿನಃ ಮರದ ಬುಡ ಅಲ್ಲಾಡುವುದಿಲ್ಲ. ಇನ್ನು ಆ ಮರವನ್ನು ಉರುಳಿಸುವ ಮಾತು ಬಹಳ ದೂರದ್ದು.




ಫೋಟೋಗಳು- ಹರ್ಷ

ಆಗಸ್ಟ್ 10, 2011

ಮಂಜು ಯಾಕೋ ಹೀಗೆ ಮಾಡಿಕೊಂಡುಬಿಟ್ಟೆ??




Manju




Manju and Chitra

ಮಂಜು ಕಳೆದ ಬುಧವಾರ ಅಂದರೆ ೩ ನೇ ತಾರೀಖು ಸಂಜೆ ಹೊತ್ತಿಗೆ ಕಾಲ್ ಮಾಡಿದ. ಅಂದು ನಮಗೆ ಎಡಿಷನ್ ದಿನವಾದ ಕಾರಣ ಆಹೋರಾತ್ರಿ ಕೆಲಸ. ಹೀಗಾಗಿ ಬ್ಯುಸಿ ಇದ್ದ ಕಾರಣ 'ಮಂಜೂ ಇವತ್ತು ಬ್ಯುಸಿ ಇದೀನಿ ನಾಳೆ ಕಾಲ್ ಮಾಡ್ತೀನಿ ಕಣೋ'  ಎಂದು ಹೇಳಿ ಫೋನ್ ಇಟ್ಟು ನನ್ನ ಪಾಡಿಗೆ ಕೆಲಸದಲ್ಲಿ ತೊಡಗಿದೆ. ಆದರೆ ಮರುದಿನ ಅವನು ಕರೆ ಮಾಡಿದ್ದು ಮರೆತೇಬಿಟ್ಟಿದ್ದೆ. 
ನೆನ್ನೆ ಮನೆಯಿಂದ ಅಪ್ಪ ನನಗೆ ಕರೆ ಮಾಡಿ 'ಹರ್ಷ, ಇವತ್ತು ಪ್ರಜಾವಾಣಿಯಲ್ಲಿ ಲೋಕಲ್ ಪೇಜಿನಲ್ಲಿ ಒಂದು ಸುದ್ದಿ ಬಂದಿದೆ. ಕೊಳಚೆಗಾರಿನಲ್ಲಿ ಮಂಜುನಾಥ ಎಂಬ ಹುಡುಗ ಸೂಸೈಡ್ ಮಾಡಿಕೊಂಡಿದಾನೆ ಅಂತಿದೆ. ಯಾರ ಅವ್ನು? ನಿನ್ನನ್ನು ಬಹಳ ಹಚ್ಚಿಕೊಂಡಿದ್ನಲ್ಲಾ ಅವನೇನಾ?' ಕೇಳಿದ್ರು. ಅಲ್ಲಿ ಮಂಜುನಾಥ ಎನ್ನುವ ಹುಡುಗ ಅವನನ್ನು ಬಿಟ್ರೆ ಬೇರೆ ಯಾರೂ ಇಲ್ಲ. ನೋಡ್ತೀನಿ ತಡಿ ಎಂದು ಇಟ್ಟವನೇ ಮಂಜು ನಂಬರ್‌ಗೆ ಕರೆ ಮಾಡಿದೆ. ಅದು ಸ್ವಿಚ್ ಆಫ್ ಆಗಿತ್ತು. ಕೊನೆಗೆ ಯಾವ್ಯಾವುದೋ ನಂಬರ್‌ಗೆಲ್ಲ ಮಾಡಿ ಕೊನೆಗೆ ಅವರಪ್ಪ ಸಿಕ್ಕಿದರು. "ಶಂಕ್ರಣ್ಣಾ ನಾನು ಕೇಳಿದ ಸುದ್ದಿ ನಿಜವಾ?'
ಅದಕ್ಕೆ ಅವರು,
ಹೌದು ಮಾರಾಯಾ, ಮೊನ್ನೆ ೫ ನೇ ತಾರೀಖು ಹೀಗೆ ಮಾಡಿಕೊಂಡು ಬಿಟ್ಟ’ ಎಂದರು. ಕಾರಣ ಏನೂ ಇರಲಿಲ್ಲ. ಯಾಕೆ ಮಾಡಿಕೊಂಡ ಅಂತಾನೂ ಗೊತ್ತಿಲ್ಲ. ಬ್ರಾಂಡಿ ಬಾಟಲಿಯಲ್ಲಿ ಅರ್ಧ ಲೀಟರು ವಿಷ ಹಾಕಿಕೊಂಡು ಕುಡಿದಿದ್ದ. ಸಾಗರಕ್ಕೆ ಕರೆದುಕೊಂಡು ಹೋಗೋವಷ್ಟರಲ್ಲಿ ಹೋಗಿಬಿಟ್ಟ ಎಂದರು.  
......
......
......
ಶೀರ್ಷಿಕೆ ಸೇರಿಸಿ
ಮನೆಯಲ್ಲಿ ಒಬ್ಬನೇ ಗಂಡು ಮಗನಾದ ಈತ ಓದು ತಲೆಗೆ ಹತ್ತಿಸಿಕೊಳ್ಳದೇ ಗಾರೆ ಕೆಲಸ ಮಾಡುತ್ತಿದ್ದ. ಕೆಲ ದಿನ ಬೆಂಗಳೂರಿಗೂ ಬಂದರೂ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲೇ ಇಲ್ಲ. ಈಗ್ಗೆ ಮೂರು ತಿಂಗಳ ಹಿಂದೆ ಕುಂದಾಪುರದಲ್ಲಿ ಮನೆಯೊಂದರಲ್ಲಿ ಗಾರೆ ಕೆಲಸ ಮಾಡುವಾಗ ಸಾರೆಯ ಮೇಲಿಂದ ಬಿದ್ದು ಕಾಲು ಮುರಿದುಕೊಂಡಿದ್ದ. ಕೂಲಿ ಕೆಲಸ ಮಾಡುವ ಅಪ್ಪ ಅಮ್ಮ ಮುರು ವರ್ಷದ ಹಿಂದೆ ಮಾಡಿದ್ದ ಮಗಳ ಮದುವೆಗೆ ಆಗಿದ್ದ ಸಾಲವನ್ನು ಆದಷ್ಟೂ ಬೇಗ ತೀರಿಸಲೇಬೆಂಕೆಂಬ ಹಟದಿಂದ ಕೆಲಸ ಮಾಡುತ್ತಿದ್ದರು. ಆ ಹೊತ್ತಿನಲ್ಲಿ ಇವನ ಆಸ್ಪತ್ರೆ ಖರ್ಚು ಮತ್ತಷ್ಟು ಸೇರಿಕೊಂಡು ಜರ್ಜರಿತರಾಗಿಬಿಟ್ಟಿದ್ದರು. ಒಮ್ಮೆ ತನಗೆ ಒದಗಿ ಬಂದ ಒತ್ತಡಗಳನ್ನು ಹೇಳಿಕೊಂಡು ಫೋನ್‌ನಲ್ಲೇ ಅತ್ತುಬಿಟ್ಟ ಮಂಜು. ಸಮಾಧಾನ ಮಾಡಿದ್ದೆ. ಇರೋ ಸಾಲವನ್ನೇ ತೀರಿಸಲು ಆಗ್ತಾ ಇಲ್ಲ. ಇಂತಾದ್ದರಲ್ಲಿ ನಾನೂ ಕೆಲಸ ಮಾಡಲು ಆಗದಂತೆ ಆಯ್ತು. ಏನು ಮಾಡಬೇಕೆಂದೇ ತಿಳೀತಾ ಇಲ್ಲ... ಅಂತೆಲ್ಲಾ ಒಂದು ಬಗೆಯ ಹತಾಶೆಯಿಂದ ಮಾತಾಡಿದಾಗ, ನಾನು ಸ್ವಲ್ಪ ಬೈದು ’ಇದೆಲ್ಲಾ ಏನು ಕಷ್ಟಾ ಮಂಜೂ. ಏನೂ ಆಗಲ್ಲ. ಸ್ವಲ್ಪ ದಿನದಲ್ಲಿ ಸರಿ ಹೋಗುತ್ತೆ ಬಿಡು. ಜೀವ ಒಂದಿದ್ದರೆ ಯಾಕೆ ಚಿಂತೆ ಮಾಡಬೇಕು. ಕಷ್ಟ ಮನುಷ್ಯನಿಗೆ ಬರದೇ ಮತ್ಯಾರಿಗೆ ಬರಬೇಕು ಹೇಳು ಎಂದು ಸಮಾಧಾನ ನೀಡಿ ಭರವಸೆ ತುಂಬುವ ಹೇಳುವ ಪ್ರಯತ್ನ ಮಾಡಿದ್ದೆ. ಎರಡೇ ತಿಂಗಳಲ್ಲಿ ಮತ್ತೆ ಕೆಲಸಕ್ಕೆ ಹೋಗುತ್ತಿದ್ದ. ’ಕಾಲು ಪೂರ್ತಿ ಸರಿ ಹೋಯ್ತೇ? ಎಂದು ಕೇಳಿದ್ದಕ್ಕೆ ಇಲ್ಲ. ಸ್ವಲ್ಪ ನೋವಿದೆ. ಹಾಗಂತ ಮನೆಯಲ್ಲಿ ಸುಮ್ಮನೇ ಕೂರುವ ಸ್ಥಿತಿ ಇಲ್ಲ ಹರ್ಷಣಾ ಎಂದಿದ್ದ. 
Manju and Me

ಮೊನ್ನೆ ನನಗೆ ಅವನು ಸಾಯುವ ಮುನ್ನ ಕರೆ ಮಾಡಿದ್ದಾಗ ಯಾವ ಒತ್ತಡದಲ್ಲಿದ್ದನೋ? 
ನಾನು ಅವನು ಮಾಡಿದ್ದ ಕರೆಯನ್ನು ಸ್ವೀಕರಿಸದಿದ್ದದ್ದು ತಪ್ಪಾಯ್ತಾ? ಅಟ್‌ಲೀಸ್ಟ್ ಅವನಿಗೆ ಹೇಳಿದಂತೆ ನಾನು ಮರುದಿನವಾದರೂ ಕರೆ ಮಾಡಿದ್ದರೆ ಏನಾದರೂ ಹೇಳಿಕೊಳ್ಳುತಿದ್ನಾ..? ನನ್ನ ಮಾತುಗಳೇನಾದರೂ ಅವನು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುತ್ತಿದ್ದವಾ?.... 
ಗೊತ್ತಿಲ್ಲ. 
ನೆನ್ನೆ ಆಫೀಸ್‌ನಿಂದ ಮನೆಗೆ ಹೋದವನೇ ಸಿಸ್ಟಂ ಆನ್ ಮಾಡಿ ಫೋಟೋಸ್ ತೆರೆದೆ. ಐದಾರು ತಿಂಗಳ ಹಿಂದೆ ಗೆಳೆಯ ರೋರ್ಕಿಚಾಂದ್ ಹಾಗೂ ಚಿತ್ರಾರನ್ನು ಕರೆದುಕೊಂಡು ಹೋಗಿ ಅವರ ಮನೆಯಲ್ಲಿ ತಂಗಿದ್ದ ದಿನ ತೆಗೆದ ಪೋಟೋ ನೋಡುತ್ತಾ ಕುಳಿತುಕೊಂಡೆ. ಜೋಗ್ ಫಾಲ್ಸ್ ನೋಡಲು ಹೋಗಿದ್ದಾಗ ಸಂಜೆ ಮಂಜು ಮನೆಗೆ ಹೋಗಿ ತಂಗಿದ್ದೆವು. ಮರುದಿನ ಮಂಜುನೇ ಊರಿನಲ್ಲಿ ಉಕ್ಕಡವೊಂದನ್ನು ನಮಗಾಗಿ ಅರೇಂಜ್ ಮಾಡಿ ನಾವು ನಾಲ್ವರೂ ಶರಾವತಿ ಹಿನ್ನೀರಿನಲ್ಲಿ ಅಡ್ಡಾಡಿ ಬಂದಿದ್ದೆವು. ಅಂದು ರಾತ್ರಿ ಮಂಜು ಹೆಂಡತಿ ಪ್ರೇಮ ನನ್ನ ಬಳಿ ದೂರು ಹೇಳಿ ಅವನಿಗೆ ’ಕುಡಿದು ಮನೆಯಲ್ಲಿ ಗಲಾಟೆ ಮಾಡುವುದನ್ನು ನಿಲ್ಲಿಸಲು ಹೇಳಿ ಅಣ್ಣಾ ಎಂದಿದ್ದಳು. ಅದರಂತೆ ಬರುವಾಗ ಆದಷ್ಟು ತಿಳಿಹೇಳಿ ಬಂದಿದ್ದೆ. ಆದರೆ ಈ ಗೆಳೆಯನ ಭೇಟಿ ಅದೇ ಕೊನೆ ಆಗುತ್ತೆ ಎಂದು ನಾನಾದರೂ ಹೇಗೆ ಊಹಿಸಲು ಸಾಧ್ಯವಿತ್ತು?
ಉಕ್ಕಡವನ್ನು ನೀರಿಗಿಳಿಸುವಾಗ, ಉಕ್ಕಡದಲ್ಲಿ, ಮನೆಯಲ್ಲಿ, ಅವರ ಮನೆಯ ಹೊರಗೆ, ನಾನು ಕ್ಲಿಕ್ಕಿಸಿದ ಫೋಟೋಗಳಲ್ಲಿ ಆದಷ್ಟು ಹೊತ್ತು ನೋಡಿದೆ. ತೀರಾ ಅಸಮಾಧಾನ ಕಾಡತೊಡಗಿತು. ಅಳು ತಡೆಯಲಾಗಲಿಲ್ಲ.  
ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ ಹೀಗೇ ಡಿಪ್ರೆಶನ್‌ಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಆತ್ಮೀಯ ಸ್ನೇಹಿತ ಪ್ರಶಾಂತನ ನೆನಪಾಗಿ ಯಾಕೋ ಅವನೀಗ ಇರಬೇಕಿತ್ತು ಎಂದು ಅನ್ನಿಸಲು ತೊಡಗಿತ್ತು. ಶಿವಮೊಗ್ಗದಲ್ಲಿದ್ದಾಗ ಅದೆಷ್ಟು ಹಚ್ಚಿಕೊಂಡಿದ್ವಿ ಇಬ್ಬರೂ... ಆತ ಬೆಂಗಳೂರು ಸೇರಿಕೊಂಡ ಮೇಲೆ ಇಬ್ಬರ ಜಗತ್ತೂ ದೂರವಾಗಿತ್ತು. ಆದರೆ ಆತ ಸಾಕಷ್ಟು ಒತ್ತಡದಲ್ಲಿದ್ದನೆಂದು ನನಗೆ ಗೊತ್ತಿತ್ತಾದರೂ ಮತ್ತೆ ಒಬ್ಬರೊಬ್ಬರು ಕುಳಿತು ಮಾತಾಡಿದ್ದೇ ಇಲ್ಲ. ಅವನೀಗ ಇದ್ದಿದ್ದರೆ ಹಾಗಾಗುತ್ತಿರಲಿಲ್ಲ. ತಿಂಗಳಲ್ಲಿ ಕೆಲ ಗಂಟೆಗಳಾದರೂ ನಾನು ಅವನೊಂದಿಗೆ ಕಳೆಯುತ್ತಿದ್ದೆ..... ಹೀಗೇ ನನ್ನಷ್ಟಕ್ಕೇ ನಾನು ಮಾತಾಡಿಕೊಂಡು ಹದಿನೈದು ದಿನವಾಗಿಲ್ಲ. 
ಅಕಾಲ ಸಾವಿಗೀಡಾದ ನನ್ನೊಂದಿಗರು, ಗೆಳೆಯ ಹಾಗೂ ಅವರನ್ನು ಕೊಂಡೊಯ್ದ ಸಾವು ಯಾವಾಗಲೂ ನನಗೆ ವಿಚಿತ್ರ ನೋವು ನೀಡುತ್ತಲೇ ಇರುತ್ತದೆ. ಕಳೆದ ವರ್ಷ ಗೆಳತಿ ಸಿರೀನ್‌ಳ ಸಾವನ್ನು ತೀರಾ ಹತ್ತಿರದಿಂದ ನೋಡಿ ಅವಳ ನೆನಪಾದಾಗಲೆಲ್ಲಾ ವಿಚಿತ್ರ ಸಂಕಟವಾಗುತ್ತಿರುತ್ತದೆ. ನನ್ನ ಊರಿನ ಆತ್ಮೀಯ ಮಿತ್ರ ಧರ್ಮ ಅಪಘಾತಕ್ಕೀಡಾಗಿ ಸಾವು ಕಂಡು ಇನ್ನೂ ಒಂದು ವರ್ಷವಾಗಿಲ್ಲ. ಮೊನ್ನೆ ಊರಿಗೆ ಹೋದಾಗ ಧರ್ಮನ ತಾಯಿಯನ್ನು ಮಾತನಾಡಿಸಲು ಹೋದ ನನ್ನನ್ನು ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಮಗನ ನೆನೆಸಿಕೊಂಡು ಬಿಕ್ಕಳಿಸಿದರು. ನಮ್ಮಿಬ್ಬರ ಸ್ನೇಹಕ್ಕೆ ಸಾಕ್ಷಿಯಾಗಿದ್ದುದೂ ಅವರೊಬ್ಬರೇ. ಆಕೆಯ ಎದುರು ನಿಂತುಕೊಂಡು ಸಮಾಧಾನ ಮಾಡುವವರೆಗೂ ಸುಮ್ಮನಿದ್ದ ನನಗೆ ಹೊರಟು ಬಂದ ಮೇಲೆ ನನಗೆ ನನ್ನನ್ನೇ ಸಮಾಧಾನ ಮಾಡಿಕೊಳ್ಳುವುದು ಕಷ್ಟವಾಗಿತ್ತು.  
ಅದಕ್ಕೂ ಹಿಂದಿನ ವರ್ಷ ಅಗಲಿದ ನನ್ನೂರಿನ ಗೋಪಾಲಣ್ಣನ ಮುಖವನ್ನು ಈಗಲೂ ಶಿವಮೊಗ್ಗದ ರಸ್ತೆಗಳಲ್ಲಿ ಹುಡುಕುತ್ತಿರುತ್ತವೆ ನನ್ನ ಕಣ್ಣುಗಳು. ಯಾಕಂದರೆ ಅವರು ಊರಿಂದ ಬಂದಾಗೆಲ್ಲಾ ಶಿವಮೊಗ್ಗದ ಕರ್ನಟಕ ಸಂಘದ ಬಳಿ ಸಿಕ್ಕು ಇಬ್ಬರೂ ಟೀ ಕುಡಿಯುತ್ತಾ ಊರಿನ ಆಗುಹೋಗುಗಳ ಬಗ್ಗೆ ಶಿವಮೊಗ್ಗದ ನಮ್ಮ ’ಕ್ರಾಂತಿ’ಗಳ ಬಗ್ಗೆ ಹರಟುತ್ತಿದ್ದೆವು. ಇಬ್ಬರ ನಡುವೆ ಕ್ರಾಂತಿಗೀತೆಗಳ ವಿನಿಮಯವಾಗುತ್ತಿತ್ತು. ಊರಿಗೆ ಹೋದಾಗಲೂ ಅಷ್ಟೆ ನಾನು ಬಂದಿದ್ದು ತಿಳಿದೊಡನೆಯೇ ಗೋಪಾಲಣ್ಣ ಮನೆಗೆ ಹಾಜರ್.... 
ಮೊನ್ನೆ ಒಂದು ತಿಂಗಳ ಕಾಲ ಮನೆಯಲ್ಲಿದ್ದಾಗ ಗೋಪಾಲಣ್ಣ ಇದ್ದಿದ್ದರೆ ಅದೆಷ್ಟು ಸಲ ಬರುತ್ತಿದ್ದರೋ.....

...
Manju Rorrky
ಪಟ್ಟಿಯಲ್ಲಿ ಈಗ ಮಂಜು ಸೇರಿದ್ದಾನೆ.....  ’50 rupis karensi hako’ ಎಂದು ಆಗಾಗ ನನ್ನ ಮೊಬೈಲ್‌ಗೆ ಬರುತ್ತಿದ್ದ ಮೆಸೇಜು ಇನ್ನು ಬರುವುದಿಲ್ಲ ಎನ್ನುವುದನ್ನು ನೆನೆಸಿಕೊಂಡು ನೋವಾಗುತ್ತಿದೆ. ಪ್ರತಿ ಸಲ ಕರೆನ್ಸಿ ಹಾಕಿಸುವಾಗ ನನಗೆ ಅವರ ಮನೆಯಲ್ಲಿ ಸಿಗುವ ಪ್ರೀತಿ ಕಾಳಜಿಯನ್ನು ನೆನೆದು ಅದರ ಮುಂದೆ ಈ ಐವತ್ತು ರೂಪಾಯಿ ಯಾವ ದೊಡ್ಡದು ಎಂದುಕೊಳ್ಳುತ್ತಿದ್ದೆ. 
.....
ಶೀರ್ಷಿಕೆ ಸೇರಿಸಿ
ಮಂಜುನ ಇಬ್ಬರು ಮುದ್ದು ಮಕ್ಕಳು ಕಣ್ಣ ಮುಂದೆ ಬರುತ್ತಿದ್ದಾರೆ.

ಆಗಸ್ಟ್ 06, 2011

ನೆನೆಪುಗಳ ’ಮಾಯಾಚಾಪೆ’ಯಲ್ಲಿ ಕೂರಿಸುವ ಡೋರ್ ನಂಬರ್ 142




ನೆನಪುಗಳು, ಅದರಲ್ಲೂ ಬಾಲ್ಯದ ನೆನಪುಗಳು ಪ್ರತಿಯೊಬ್ಬರಿಗೂ ಮುದನೀಡುವಂತವವು. ದೊಡ್ಡವರಾಗುತ್ತಾ ಹೋದಂತೆಲ್ಲಾ ಆ ನೆನಪುಗಳು ನಮಗೆ ಹೆಚ್ಚು ಕಾಡುತ್ತಾ ಹೋಗುವುತ್ತವೆ. ಹೀಗೆ ದಿನನಿತ್ಯದ ಬದುಕಿನಲ್ಲಿ ಇಣುಕುವ, ಕಾಡುವ ನೆನಪುಗಳನ್ನು ವಿಶಿಷ್ಟ ರೀತಿಯಲ್ಲಿ ತೆರೆದಿಡುತ್ತದೆ ಅಂಕಿತ ಪ್ರಕಾಶನ ಪ್ರಕಟಿಸಿರುವ ಜಿ.ಎನ್.ಮೋಹನ್ ಅವರ ಡೋರ್ ನಂಬರ್ ೧೪೨.
 ’ಡೋರ್ ನಂಬರ್ ೧೪೨’ರ ಒಳಕ್ಕೆ ಪ್ರವೇಶಿಸಿದಂತೆ, ಲೇಖಕರು ತಮ್ಮ ಬದುಕಿನ ನೆನಪುಗಳನನ್ನು ಒಂದಿಒಂದಾಗಿ ಹೇಳುತ್ತಾ ಹೋದಂತೆ ನಮ ಒಂದೊಂದಾಗಿ ನಮ್ಮವೇ ನೆನಪುಗಳು ಬಿಚ್ಚಿಕೊಳ್ಳುತ್ತವೆ. ವ್ಯಕ್ತಿ, ಸನ್ನಿವೇಶ ಬೇರೆ. ಅನುಭವ ಒಂದೇ ಎನ್ನಿಸುವಂತೆ. ಈ ಕೃತಿಯ ವೈಶಿಷ್ಟ್ಯವೆಂದರೆ ಲೇಖಕರು ಅವರು ಬಾಲ್ಯದ ನೆನಪುಗಳನ್ನು ಬಿಚ್ಚುವಾಗ ಬಾಲ್ಯದಲ್ಲೇ ಮುಳುಗಿ ಬರೆಯುವುದಿಲ್ಲ. ಬದಲಾಗಿ ಅವರ ಒಂದೊಂದು ನೆನಪುಗಳ ಹಿಂದೆಯೂ ವರ್ತಮಾನದ ಯಾವುದೋ ಒಂದು ಘಟನೆಯಿದೆ. ಗೆಳೆಯನೊಬ್ಬನ ಮಾತು ನೆನಪಿಸಿದ ನಂಜನಗೂಡು ಟೂತ್ ಪೌಡರ್, ಚೀತಾಫೈಟ್ ಬೆಂಕಿಪೊಟ್ಟಣ, ಎಂಜಿ ರೋಡಿನ ಬುಕ್ ಸ್ಟಾಲ್‌ನಲ್ಲಿರೋ ಪುಸ್ತಕ ನೆನಪಿಸಿದ ಡಾಕ್ಟರ್ ಆಂಟಿಯ ಡೈಲಾಗ್, ಟೈಮ್ಸ್ ಆಫ್ ಇಂಡಿಯಾದ ಶಾರೂಕ್ ಜಾಹೀರಾತು ನೆನಪಿಸಿದ ಅಂಟವಾಳ ಸಿಪ್ಪೆ.... ಹೀಗೆ ಪ್ರತಿಯೊಂದು ನೆನಪೂ ಇಂದಿನ ಯಾವುದೋ ಸಂದರ್ಭದ ಹಿನ್ನೆಲೆಯಲ್ಲಿ ಮೂಡುತ್ತಾ ಹೋಗುವುದು ವಿಶಿಷ್ಟವಾಗಿದೆ. 
ಎಲ್ಲರಿಗೂ ನೆನಪುಗಳಿರುತ್ತವಾದರೂ ಮೋಹನ್‌ರ ರೀತಿ ದಟ್ಟವಾಗಿ ದಾಖಲಿಸುವುದು ಆಗುವುದಿಲ್ಲವೇನೋ ಎಂಬಷ್ಟು ತೀವ್ರವಾಗಿದೆ ಅವರ ಬರಹ. ’ಜೀವನ ಅಂದ್ರೆ ಕೆಂಪು ಡಬ್ಬಿ ಇದ್ದಂU’, ’ಸುಬ್ಬಣ್ಣ ಮೇಸ್ಟ್ರ ಸುತ್ತಮುv’, ’ತಂಗಿಗೆ ಕೊಟ್ಟ ಪೆನ್ಸಿಲ್’, ’ನಿದ್ರಾ ಸುಂದರಿಯ ನೆನಪಲ್ಲಿ’, ’ಅತ್ತಾರೆ ಅತ್ತು ಬಿಡು ಹೊನಲು ಬರಲಿ’, ಮುಂತಾದವು ಬರೀ ನೆನಪುಗಳು ಮಾತ್ರವಾಗಿರದೇ ಬದುಕಿನ ಸಾರವನ್ನೂ ತಿಳಿಸುತ್ತವೆ. 
ಕೃತಿ ಓದಿವ ಯಾರಿಗಾದರೂ ಲೇಖಕರ ಅನುಭವಗಳ ವೈವಿಧ್ಯತೆ ಅಚ್ಚರಿ ಮೂಡಿಸುತ್ತದೆ ಮಾತ್ರವಲ್ಲ ತಮಾಷೆ ಎನಿಸುವ, ಕಚಗುಳಿ ಇಡುವ, ಕಣ್ಣಂಚಿನಲ್ಲಿ ನೀರಹನಿಯನ್ನು ಉಕ್ಕಿಸುವ, ವಿಷಾಧವೆನಿಸುವ, ಅಚ್ಚರಿದಯಕ ಎನಿಸುವ ಅನುಭವಗಳು ದಂಡಿಯಾಗಿವೆ ಈ ಡೋರ್‌ನಂಬರ್ ೧೪೨ರಲ್ಲಿ. 
ಜಿಎನ್‌ಅವರು ತಮ್ಮ ನೆನಪುಗಳನ್ನು ಅನಾವರಣಗೊಳಿಸಲು ಬಳಸಿರುವ ಭಾಷೆಯೂ ಅವರ ಹಿಂದಿನ ಕೃತಿಗಳಲ್ಲಿರುವಂತೆಯೇ ಆಪ್ಯಾಯವೆನಿಸುತ್ತದೆ. ದೂರದ ಕ್ಯೂಬಾದ ಅನುಭವಗಳನ್ನೇ ನಮ್ಮೊಳಗೆ ಇನ್ನಿಲ್ಲದಂತೆ ದಾಖಲಿಸಿರುವ ಜಿ.ಎನ್.ರಿಗೆ ಇನ್ನು ತಮ್ಮದೇ ಬದುಕಿನ ಅನುಭವಗಳನ್ನು ನಮಗೆ ದಾಟಿಸುವುದು ಕಷ್ಟವಾಗಲು ಹೇಗೆ ಸಾಧ್ಯ?. ’ಅವ್ರು ನಮ್ದೆಲ್ಲಾ ಬರೆದವ್ರೆ ಅಂದ್ರೆ ನಂ ಥರಾನೇ’ ಎಂಬ ಬರಹದಲ್ಲಿ ಲಂಕೇಶ್ ಲೇಖಕರನ್ನು ಪ್ರಭಾವಿದ ಬಗೆಯನ್ನು ತಿಳಿಸಿರುವುದು ವಿಶಿಷ್ಟವಾಗಿದೆ. ’ರೋಷದ ರಾಗಗಳು’ ಲೇಖಕರ ಲೋಕದೃಷ್ಟಿಯನ್ನು ಬದಲಾಯಿಸಿದ ಬಗೆಯೂ ಕೂಡಾ. ಹಾಗೆಯೇ ಅಣ್ಣನಾದವನು ತಮ್ಮನ ನಡೆನುಡಿಯ ಮೇಲೆ ಬೀರುತ್ತಾ ಬರತೊಡಗಿದ ಪ್ರಭಾವಗಳಿಗೂ ಮತ್ತು ಅಪ್ಪ ಬೀರಿದ ಪ್ರಭಾವಗಳಿಗೂ ಅಜಗಜಾಂತರ. ಅಪ್ಪ ಲೇಖಕರಿಗೆ ಎಂದೂ  ನೆಗೆಟಿವ್ ವ್ಯಕ್ತಿಯೇ ಆಗಿರುವುದು ವಿಷಾಧವನ್ನು ತರಿಸುತ್ತದೆ. ಆದರೂ, ನೀನು ಥೇಟ್ ನಿಮ್ಮನ ಥರಾನೇ’ ಎಂದು ಅಮ್ಮ ಹೇಳಿದ ದಿನ ಲೇಖಕರ ಮನದಲ್ಲಿ ಚೇಳು ಕುಟುಕಿದಂತಾಗುತ್ತದೆ. ’ಹುಚ್ಚು ಕುದುರೆಯ ಬೆನ್ನನೇರಿ’ದಾಗ ಅಣ್ಣ ತಂದ ’ಪುಸ್ತಕ’ಗಳನ್ನು ನೋಡಿ ಲೇಖಕರಿಗಾದ ಅನುಭವಗಳನ್ನು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. 
ಕೃತಿಯಲ್ಲಿ ಒಂದೆಡೆ ’ನೀ ಯಾರೋ ಏನೋ ಎಂತೋ, ಅಂತು ಪೋಣಿಸಿತು ಕಾಣದ ತಂತೂ....’ ಸಾಲುಗಳ ಉಲ್ಲೇಖವಿದೆ. ವಾಸ್ತವದಲ್ಲಿ ಡೋರ್ ನಂಬರ್ ೧೪೨ಕೃತಿಗೂ ಕೂಡಾ ಇದೇ ಸಾಲು ಅನ್ವಯವಾಗುತ್ತವೆ. ಲೇಖಕರು ದಾಖಲಿಸುವ  ಅನುಭವಗಳನ್ನೂ, ಓದುಗರ ಭಾವನೆಗಳನ್ನೂ ಪೋಣಿಸುತ್ತಾ ಹೋಗುತ್ತದೆ ಕೃತಿ. ಕೃತಿಯಲ್ಲಿ ಬಹಳವಾಗಿ ಕಾಡುವುದು ಬಾಲ್ಯದ ಅನುಭವಗಳೇ ಆದರೂ ಕೃತಿ ಅಷ್ಟಕ್ಕೇ ಸೀಮಿತವಾಗೇನೂ ಇಲ್ಲ. ಯೌವನಕ್ಕೆ ಕಾಲಿಟ್ಟ, ಪ್ರೀತಿಸಿದ, ಮದುವೆಯಾದ ಹಾಗೂ ನಂತರದ ಬದುಕಿನ ಚಿತ್ರಗಳೂ ಕೆಲವಾರು ಲೇಖನಗಳಲ್ಲಿ ಪ್ರತಿಬಿಂಬಿತವಾಗಿವೆ. ಆದರೆ ಬಾಲ್ಯದ ದೃಶ್ಯಗಳಷ್ಟು ತೀವ್ರವಾಗಿ ಅಲ್ಲ. ದಿಸ್ ಈಸ್ ಮೈ ಬಾಡಿ- ಐ ಎಂಜಿನೀರ್ ಇಟ್, ಆರ್ ಯು ವರ್ಜಿನ್?, ಮಾತಾಡೋನೇ ಮಹಾಶೂರ, ಬಿಚ್ಚ ಬೇಕಾದ ಕಟ್ಟಡಗಳು, ಆಲಿಸಬೇಕಾದ ದನಿಗಳು, ಮುಂತಾದ ಶೀರ್ಷಿಕೆಗಳಲ್ಲಿ ಲೇಖಕರು ಲೈಂಗಿಕತೆಯ ವಿಚಾರಗಳ ಬಗೆಗೆ ಪ್ರಾಸ್ತಾಪಿಸುತ್ತಾರೆ. ಇವುಗಳಲ್ಲಿ ಬಹುತೇಕವು ಈ ಮನೋವೈಜ್ಞಾನಿಕ ಲೇಖನಗಳಂತೆ ಭಾಸವಾಗಿ ಅವುಗಳಲ್ಲಿ ಆತ್ಮಕತೆಯ ಅಂಶಗಳು ಗೌಣವಾಗಿಬಿಡುತ್ತವೆ. ಲೇಖಕರ ಬಾಲ್ಯದ ವಿವರಗಳನ್ನು ಸವಿಯುತ್ತಾ ಬರುವ ಓದುಗರಿಗೆ ಕ್ರಮೇಣದ ಬದುಕಿನ ವಿವರಗಳು ಕ್ಷೀಣವಾಗುತ್ತಾ ಹೋಗಿಬಿಡುತ್ತವಾದ್ದರಿಂದ ಎಲ್ಲೋ ಅಸಮಾಧಾನವಾಗತೊಡಗುತ್ತದೆ. ಅಥವಾ ಆ ವಿವರಗಳು ಮನೆ ನಂಬರ್ ೧೪೨ರ ಹೊರಗಿನವಾದ್ದರಿಂದ ಲೇಖಕರು ಅವುಗಳನ್ನು ದಾಖಲಿಸಲು ಹೋಗಿಲಲ್ಲವೇನೋ?. 
ಇಡೀ ಕೃತಿಯಲ್ಲಿ ಜಿ.ಎನ್.ಮೋಹನ್ ತಮ್ಮ ಎಂದುನ ನವಿರಾದ ಭಾಷೆಯಲ್ಲಿ ಪ್ರತಿಯೊಂದು ಅನಿಸಿಕೆ, ಅನುಭವ, ಘಟನೆಗಳನ್ನೂ ಪೋಣಿಸುತ್ತಾ ಹೋಗುವುದರಿಂದ ಕೃತಿ ಸುಲಭವಾಗಿ ಓದಿಸಿಕೊಂಡು ಹೋಗಿಬಿಡುತ್ತದೆ. ಅಲ್ಲಲ್ಲಿ ಲೇಖಕರು ಹಲವಾರು ಕವಿತೆಗಳನ್ನು, ಹೇಳಿಕೆಗಳನ್ನು ಉಲ್ಲೇಖಿಸುತ್ತಾ ಹೋಗುತ್ತಾರೆ. ಓದುಗರ ಮಟ್ಟಿಗೆ ಹೊಸದೆನ್ನಿಸುವ ಮಾಹಿತಿಗಳನ್ನು ನೀಡುತ್ತಾರೆ. ಆದರೆ ಅವುಗಳ ಮೂಲವನ್ನು ಹೇಳುವ ತೊಂದರೆ ತೆಗೆದುಕೊಳ್ಳುವುದಿಲ್ಲ. ಅಷ್ಟು ತೊಂದರೆ ತೆಗೆದುಕೊಂಡಿದ್ದರೆ ಓದುಗರಿಗೆ ಅನುಕೂಲವಾಗುತ್ತಿತ್ತು. ಕೃತಿಯ ಒಳಪುಟಗಳಲ್ಲಿನ ಅನುಭವಗಳಿಗೆ ಪೂರಕವಾಗಿ ಪ.ಸ.ಕುಮಾರ್ ಗೀಚಿರುವ ಚಿತ್ರಗಳು ಹಾಗೂ ಕೊನೆಯಲ್ಲಿರುವ ಕವಿತೆ ಇಡೀ ಕೃತಿಗೆ ಕಸುವು ತುಂಬಿವೆ. ಅಪಾರ ಅವರ ಮುಖಪುಟ ವಿನ್ಯಾಸ ಕೂಡಾ ಸೊಗಸಾಗಿದೆ. 

                                                           *********************************
ಒಂದು ಕಾಕತಾಳೀಯ.................
  ಡೋರ್ ನಂ 142ರ ಬಗ್ಗೆ ಬರೆದ ಈ ಬರೆಹವು  ಸಂಡೆ ಇಂಡಿಯನ್ ಪತ್ರಿಕೆಯ ಈ ಹೊತ್ತಗೆ ಕಾಲಂನಲ್ಲಿ  ಪ್ರಕಟ ಆದ ಮೇಲೆ ಒಂದು ತಮಾಷೆ ನಡೆಯಿತು.  ಆಮೇಲೆ ನನಗೆ ತಿಳಿದಿದ್ದೇನೆಂದರೆ ಈಗ 15  ವರ್ಷಗಳ ಹಿಂದೆ ನಾನೂ ಕೂಡಾ ಇದೇ ಡೋರ್. ನಂಬರ್ ೧೪೨ರ ಸದಸ್ಯನಾಗಿದ್ದೆ!!  ಈ ಕೃತಿಯ   ಅಮ್ಮನೊಂದಿಗೆ ಐದಾರು ತಿಂಗಳು ಕಳೆದಿದ್ದೆ!. ನಾನು ಇದನ್ನು ಓದಿ ಬರೆಯುವವರೆಗೂ ಈ ವಿಷಯ ಹೊಳೆದೇ ಇರಲಿಲ್ಲ. ಯಾವಾಗ   ಈ  ಪತ್ರಿಕೆಯನ್ನು ಕಳುಹಿಸಲು ಮೋಹನ್ ಸರ್ ಅಡ್ರೆಸ್ ಕಳುಹಿಸಿದರೋ ಆಗಲೇ ನನಗೆ ಫ್ಲಾಷ್ ಆದದ್ದು. ಅರೆ ಈ ಅಡ್ರೆಸ್ ನಂಗೆ ತುಂಬಾ ಫೆಮಿಲಿಯರ್ ಇದೆಯಲ್ಲಾ ಅಂತ...

      ನಾನು ಏಳನೇ ತರಗತಿ ಇದ್ದಾಗ ಜಿ.ಎನ್.ಮೋಹನ್‌ರ ಅಣ್ಣ ಎಸ್.ಎಲ್.ಎನ್ ಸ್ವಾಮಿ ಹಾಗೂ ಅವರ ಪತ್ನಿ ನೊಮಿಟೋ ಮೇಡಂ ನಮ್ಮ ಮನೆಗೆ ಆಗಾಗ ಬರ್ತಾ ಇದ್ರು.  ಆಗ ಬೇಸಿಗೆ ರಜೆ ಬಂದಿತ್ತು.  ಸರಿ ಬೆಂಗಳೂರು ನೋಡುವಂತೆ ಬಾ ಎಂದು ನನ್ನನ್ನು ಅವರ ವ್ಯಾನ್‌ನಲ್ಲಿ ಎತ್ತಿ ಹಾಕ್ಕೊಂಡು ಹೋದರು. ಅಲ್ಲಿಂದ ಮಂಗಳೂರಿನಲ್ಲಿದ್ದ ಮೋಹನ್ ಸರ್ ಅವರ ಮನಗೆ, ನಂತರ ಬೆಂಗಳೂರಿನ ಈ ಡೋರ್ ನಂಬರ್ ೧೪೨ರಲ್ಲಿ ನನ್ನನ್ನು ಬಿಟ್ಟರು.  ನಾನು ಒಂದು ಮನೆಯಲ್ಲಿ ರಾಶಿ ರಾಶಿ ಪುಸ್ತಕಗಳ ಸಂಗ್ರಹ ನೋಡಿದ್ದು ಅಂದು ಮೋಹನ್ ಸರ್ ಮನೆಯಲ್ಲೇ . ಮರುದಿನ ಬಂಗಳೂರಿಗೆ ಕರೆದುಕೊಂಡು ಹೋದರು. ಅದು ನನ್ನ ಮೊತ್ತ ಮೊದಲ ಬೆಂಗಳೂರು ಭೇಟಿ.   ಕುಗ್ವೆಯಿಂದ ಸೀದಾ ಬೆಂಗಳೂರಿಗೆ ಬಂದು ಬಿದ್ದಿದ್ದೆ. ಮರುದಿನವೇ  ಒಂದು ಸೈಕಲ್‌ನ್ನೂ ಕೊಟ್ಟು  "ನಡಿ ಬೆಂಗಳುರು ತಿರುಗು" ಎಂದಿದ್ರು.  ನಾನು ಸೈಕಲ್ ಹೊಡೆಯೋಕೆ ಬರುತ್ತಿತ್ತಾದರೂ ಬೆಂಗಳೂರಿನ ರಸ್ತೆಯಲ್ಲಾ.... ಅಬ್ಬಬ್ಬಾ.. ಭಾರೀ ಹೆದರಿಕೆ ಆಗಿತ್ತು. ಆದರೆ ಕೊನೆಗೆ ನೋಡೇ ಬಿಡಾನ  ಒಂದು ಕೈ ಅಂತ ಹೇಳಿ ಸೈಕಲ್ ಹತ್ತಿದ್ದೆ.  ನಿಜ ಎಂದರೆ ನಾನು ಈ ಮನೆಯಿಂದ ರಾಜಾಜಿ ನಗರ ಮುಖ್ಯ ಅಂಚೆ ಕಛೇರಿಯ ನಡುವಿನ ರಸ್ತೆಯಲ್ಲಿ ಯಾವಾಗ ಸೈಕಲ್ ಹೊಡೆಯೋಕೆ ಶುರು ಮಾಡಿದ್ನೋ ಆಮೇಲೇನೆ ಸೈಕಲ್ ಹೊಡೆಯೋದರಲ್ಲಿ ಪಕ್ಕಾ ಆದದ್ದು. ನಂತರದಲ್ಲಿ  ಜೀವನ ನನಗೆ ಬಹಳಾನೇ 'ಸೈಕಲ್' ಹೊಡೆಸಿದೆಯಾದರೂ ಇಲ್ಲಿ ಸೈಕಲ್ ಹೊಡೆದ ಗಳಿಗೆ ಮರೆಯುವಮತಿಲ್ಲ.  ಬೆಂಗಳೂರಿನ   ಆ ಮೊದಲ ಭೇಟಿ, ಹಾಗೂ ಡೋರ್ ನಂಬರ್ 142 ರ  ಅನುಭವಗಳು ಮರೆಯಲಾಗದ್ದು.  
      ಆಮೇಲೆ ಒಂದು ವರ್ಷದ ನಂತರ  ಸ್ವಾಮಿ, ನೊಮಿಟೋ, ಲೀಸಾ ಗಾರ್ಫಿಂಕಲ್, ವೆಂಕಿ ಮುಂತಾದವರು ಸೇರಿ ಹುಟ್ಟು ಹಾಕಿದ್ದ ಅಡ್ವೆಂಚರರ‍್ಸ್ ಸಂಸ್ಥೆ ಹೊನ್ನೆಮರಡುವಿನಲ್ಲಿ ತನ್ನ ಜಲ ಸಾಹಸ ಚಟುವಟಿಕೆಗಳನ್ನು ಜೋರಾಗಿ ನಡೆಸುತ್ತಿದ್ದ ಸಂದರ್ಭದಲ್ಲಿ  ಅವರೆಲ್ಲರೊಂದಿಗೆ ನಿಕಟ ಸಂಪರ್ಕ  ಇತ್ತು. ನನ್ನಪ್ಪ ಕೂಡಾ ಅದರ ಭಾಗವಾಗಿ ಸಕ್ರಿಯವಾಗಿದ್ದರು.  ಅಲ್ಲಿ ಶುರುವಾಗಿದ್ದ ’ನೇಚರ್ ಸ್ಕೂಲ್’ ಎಂಬು ’ಶಾಂತಿನಿಕೇತನ’ ಶಾಲೆಯ  ಮೊದಲ ಹಾಗೂ ಕೊನೆಯ  ತಂಡದಲ್ಲಿ ನಾನೂ ಇದ್ದೆ.  ಅಗ ಬೆಂಗಳೂರಿನ ಡೋರ್ ನಂಬರ್ 142 ರಲ್ಲಿ ನಾಲ್ಕು  ತಿಂಗಳು ಇದ್ದೆ.  
ಆದರೆ ಆ ಹೊತ್ತಿಗೆ ಮೋಹನ್ ಸರ್ ಬೇರಡ ಕಡೆ ಇದ್ದಿದ್ದರಿಂದ  ಅಲ್ಲಿ ನಮಗೆ ಎಂದೂ ಅವರ ದರ್ಶನ  ಆಗಿರಲಿಲ್ಲ. 

ಹೀಗೆ ನಾನು  ಆ  ಮನೆಯಲ್ಲಿ ಇದ್ದಿದ್ದು, ಅದರ ಬಗ್ಗೆ ಮೋಹನ್ ಸರ್ ಬರೆದದ್ದು, ಅದರ ಬಗ್ಗೆ ನಾನು ನನಗರಿವಿಲ್ಲದೇ ವಿಮರ್ಷೆ ಬರೆದಿದ್ದು....... ಎಂತಹಾ ತಮಾಷೆಯ ಕೊ ಇನ್ಸಿಡೆನ್ಸ್ ಅಲ್ವಾ.....???? 
                                                                      **************************

ಆಗಸ್ಟ್ 05, 2011

ಇದು ಯಡಿಯೂರಪ್ಪನವರ ದುರಂತ ಹಾಗೂ ನಮ್ಮೆಲ್ಲರ ದುರಂತವೂ ಸಹ: ಪ್ರೊ.ಎನ್. ಮನು ಚಕ್ರವರ್ತಿ





ಸಿನಿಮಾ ಮತ್ತು ಸಾಹಿತ್ಯಕ್ಕಿರುವ ಸಂಬಂಧವನ್ನು ಹೇಗೆ ನೋಡುತ್ತೀರಿ?
ಮೂಲಭೂತವಾಗಿ ಸಿನಿಮಾಸಾಹಿತ್ಯದ ನಡುವೆ ಒಂದು ಸೃಜನಶೀಲ ಸಂಬಂಧ ಇದ್ದೇ ಇರುತ್ತದೆ. ಸಾಹಿತ್ಯ ಕೃತಿ ಒಂದು ಸಿನಿಮಾ ಆದಾಗಲೇ ಸಂಬಂಧ ಉಂಟಾಗುತ್ತದೆ ಎಂದು ನಾವು ನೋಡಬೇಕಾಗಿಲ್ಲ. ಅದೊಂದು ರೀತಿ ನೇರ ಸಂಬಂಧವಾದರೂ ಎರಡೂ ಕೂಡ ಪಠ್ಯಕೃತಿಗಳೇ ಎಂದು ನೋಡಬೇಕು. ಎರಡರಲ್ಲೂ ಒಂದೇ ರೀತಿಯಲ್ಲಿ ಪ್ರತಿಮೆಗಳಿರುತ್ತವೆ. ಸಿನಿಮಾವನ್ನು ಕೂಡ ಓದಬೇಕು ಎನ್ನುತ್ತೇನೆ.


ಆದರೆಸಾಮಾನ್ಯ ಜನರಿಗೆ ಓದುವ’ ಪರಿಕಲ್ಪನೆ ಬರುವುದು ಹೇಗೆ?
ಒಂದು ಪಠ್ಯವನ್ನು ಮೊದಲ ಬಾರಿ ಓದುವಾಗ ಎಲ್ಲರೂ ಸಮಾನ್ಯ ಓದುಗರೇ. ಅಸಾಮಾನ್ಯ ಓದುಗರು ಎಂಬುದು ಇರುವುದಿಲ್ಲ. ಈ ಅರ್ಥದಲ್ಲಿ ಸಿನಿಮಾ ನೋಡುಗರೂ ಅದನ್ನು ಓದುತ್ತಿರುತ್ತಾರೆ. ಸಿನಿಮಾ ನೋಡುತ್ತಾ,ಸಿನಿಮಾ ಮೀಮಾಂಸೆ ಓದುತ್ತಾಫಿಲಂ ಥಿಯರಿ ಓದುತ್ತಿರುವವರಿಗೆ ಕೆಲವೊಮ್ಮೆ ಕೆಲ ಸಂಗತಿಗಳು ಅರ್ಥವೇ ಆಗಿರುವುದಿಲ್ಲ. ಅನೇಕ ಶಿಬಿರಗಳಲ್ಲಿ ನನಗೆ ಅನುಭವವಾಗಿರುವುದೆಂದರೆ ಹಳ್ಳಿಯ ಜನರುಕಾರ್ಪೋರೇಷನ್ ಕೆಲಸ ಮಾಡುವವಂತವರೇ ಎಷ್ಟೋ ಸಲ ಬೌದ್ಧಿಕ ಎನ್ನುವ ಸಂಪ್ರದಾಯದಿಂದ ಬಂದವರಿಗಿಂತಲೂ ಚೆನ್ನಾಗಿ  ಸಿನಿಮಾವನ್ನು ಅನಾವರಣ ಮಾಡಿಬಿಡುತ್ತಾರೆ. ಕೆ.ವಿ. ಸುಬ್ಬಣ್ಣ ಅವರಿದ್ದಾಗ ಹೆಗ್ಗೋಡಿನಲ್ಲಿ ಬರ್ಗ್‌ಮನ್‌ರಸೆವೆನ್ ಸೀಲ್’ ತೋರಿಸಿದ್ದರು. ಹಳ್ಳಿಯವರು ಅಂದರೆ ನಾವು ಯಾರಿಗೆ ಇಲ್ಲಿಟರೇಟ್ಅನಕ್ಷರಸ್ತರುಫಿಲಂ ಥಿಯರಿ ಗೊತ್ತಿಲ್ಲದವರು ಅಂತೀವೋ ಅವರು ಇದು ಬದುಕು ಸಾವಿನ ಮಧ್ಯೆ ನಡೆಯುತ್ತಿರುವ ಘರ್ಷಣೆ. ಇದನ್ನು ಬರ್ಗ್‌ಮನ್ ಸೆವೆನ್ ಸೀಲ್ ನಲ್ಲಿ ಚಿತ್ರಿರಿಸಿದ್ದಾರೆ ಎಂದು ವ್ಯಾಖ್ಯಾನ ಮಾಡಿದ್ರಂತೆ. ನಮ್ಮ ಲಾವಣಿಕತೆಗಳುಹಾಡುಗಳನ್ನು ನೋಡಿ. ಅದು ನಿಜವಾದ ಜೀವಂತ ಪರಂಪರೆಯಾದ್ದರಿಂದ ಅದೆಷ್ಟು ರೂಪಕಪ್ರತಿಮೆಗಳಿರುತ್ತವೆ ಅದರಲ್ಲಿ. ನನ್ನ ಇನ್ನೊಂದು ವಾದ ಏನೆಂದರೆ ಈ ಮೌಖಿಕ ಸಂಪ್ರದಾಯದಲ್ಲಿ ಸಿನಿಮಾ ಎನ್ನುವುದು ಮೊದಲು ಅಭಿವ್ಯಕ್ತಿಗೊಳ್ಳುತ್ತೆ. ಸ್ವೀಕಾರ ಮಾಡಲ್ಪಡುತ್ತೆ. ಹೀಗಾಗಿ ನಮ್ಮಂತವರುವಿಶೇಷವಾಗಿ ಸಿನಿಮಾ ವಿಮರ್ಷೆ ಬರೆಯುವವರು ನಾವೇನೋ ಬಹಳ ಅಸಾಮಾನ್ಯ ವರ್ಗಕ್ಕೆ ಸೇರಿದವರು ಎಂದುಕೊಳ್ಳುವುದು ದುರಹಂಕಾರಮೂರ್ಖತನ. 


ಸಿನಿಮಾ ನೋಡುಗರಲ್ಲಿ ಅಥವಾ ಸಾಹಿತ್ಯ ಓದುಗರಲ್ಲಿ ದೃಷ್ಟಿಕೋನದ ಪಾತ್ರವೇನು?
ಒಂದು ದೃಷ್ಟಿಕೋನದಿಂದ ಎಲ್ಲರೂ ನೋಡುವುದಿಲ್ಲ. ಒಂದು ವೀಕ್ಷನೆಯಲ್ಲಿ ಹಲವಾರು ಜನರಿದ್ದರೆ ನಾನಾ ರೀತಿಯ ದೃಷ್ಟಿಕೋನಗಳು ಹುಟ್ಟುತ್ತವೆ. ನೋಡುವವರ ನೆಲೆಗಳು ತಮ್ಮಲ್ಲೇ ಮೌಲ್ಯಮಾಪನ ನಡೆಸುತ್ತವೆ. ಉದಾಹರಣೆಗೆ ಪುನೀತ್ ರಾಜ್‌ಕುಮಾರ್‌ರ ಪೃಥಿ’ ಬಂತು. ಪುನೀತ್‌ರ ಫ್ಯಾನ್‌ಗಳೇ ಇದ್ಯಾಕೋ ಸರಿ ಇಲ್ಲ ಎಂದು ತಿರಸ್ಕರಿಸಿದರು. ವಾಸ್ತವದಲ್ಲಿ ಜನಪ್ರಿಯ ಸಿನಿಮಾಗಳಲ್ಲಿ ಇದು ಅತ್ಯಂತ ಒಳ್ಳೆಯ ಸಿನಿಮಾವಾಗಿತ್ತು. ವ್ಯವಸ್ಥೆಯನ್ನುರೆಡ್ಡಿಗಳನ್ನು ಧೈರ್ಯವಾಗಿ ಎದುರು ಹಾಕಿಕೊಂಡ ಸಿನಿಮಾ ಅದು. ಸಿನಿಮಾದ ಉತ್ಪ್ರೇಕ್ಷಿತ ನುಡಿಗಟ್ಟನ್ನು ಆದಷ್ಟು ಕಡಿಮೆ ಮಾಡಿಕೊಂಡ ಹೊಸ ಶೈಲಿಯ ಸಿನೆಮಾ ಅದು. ಆದರೆ ಪ್ರೇಕ್ಷಕರು ಅದನ್ನು ಏಕೆ ತಿರಸ್ಕರಿಸಿದರುಅವರಲ್ಲೂ ಒಂದು ಮೌಲ್ಯಮಾಪನ ಇರುತ್ತೆಚಿಕಿತ್ಸಕ ವಿಶ್ಲೇಷಣೆಯ ಪ್ರಜ್ಞೆ ಕೆಲಸ ಮಾಡುತ್ತಿರುತ್ತವೆ. ಸರಿ ತಪ್ಪು ವಿಷಯ ಬೇರೆ. ಹೀಗೆ ಒಂದು ದೃಷ್ಟಿಕೋನ ಅಂತ ಇರಲ್ಲ. ದೃಷ್ಟಿಕೋನಗಳಿರುತ್ತೆ. ಇವರನ್ನು ನಾವು ಅಧ್ಯಯನ ಮಾಡಬೇಕು.

ಮತ್ತೆ ಏಕೆ ವಿಫಲವಾಯತು ಅಂತೀರಿ?
ಏಕೆಂದರೆ ಒಬ್ಬ ಸೂಪರ್ ಸ್ಟಾರ್‌ನ ಜನಪ್ರಿಯ ಇಮೇಜಿಗೆ ವಿರುದ್ಧವಾಗಿತ್ತು ಅದು. ಪೃಥ್ವಿಯಲ್ಲಿ ಪುನೀತ್‌ರ ಪಾತ್ರ ಅದನ್ನು ಪಲ್ಲಟಗೊಳಿಸಿದಾಗ ಅಭಿಮಾನಿಗಳು ಬಯಸುವ ರಂಜನೆಯ ಅಂಶ ಅವರಿಗೆ ಸಿಗಲಿಲ್ಲ. ಅವರ ಕನಸುಗಳನ್ನು ನುಚ್ಚುನೂರು ಮಾಡಿದ ಸಿನಿಮಾ ಅದು. ಹೀಗೆ ಒಂದೆಡೆ ಕನಸುಗಳೂ ಕೆಲಸ ಮಾಡುತ್ತಿರುತ್ತವೆಅವೂ ಒಂದು ದೃಷ್ಟಿಕೋನ ರೂಪಿಸುತ್ತಿರುತ್ತವೆಹಾಗಾಗಿ ಆ ಕನಸುಗಳನ್ನು ಮಾರುವವರೂ ಇರುತ್ತಾರೆ. ನನ್ನ ಪ್ರಕಾರ ಪೃಥ್ವಿಯ ಯಶಸ್ಸೇನೆಂದರೆ ಅದು ಹಾಗೆ ಕನಸ್ಸುಗಳನ್ನು ಮಾರದೇ ಇದ್ದ ಸಿನಿಮಾ ಆಗಿದ್ದು. ಹೀಗೆ ಕನಸುಗಳನ್ನು ಮಾರುತ್ತಾ ಸುಳ್ಳು ಹೇಳುತ್ತಾ ಒಂದು ದೃಷ್ಟಿಕೋನ ಬೆಳೆಸುವುದಿದೆಯಲ್ಲಾ ಅದನ್ನು ಮುರಿಯುವಂತಹ ದೃಷ್ಟಿಕೋನ ಹುಟ್ಟಿಸುವ ಸಿನಿಮಾ ಬರುತ್ತಲ್ಲಾ ಅದನ್ನು ನಾವು ಬೆಳೆಸಬೇಕು. ಕನ್ನಡ ಸಿನೆಮಾ ಉದ್ಧಾರ ಆಗುವುದಿದ್ದರೆ ಅದರಿಂದ ಮಾತ್ರ.

ಕಳೆದ ಎರಡು ದಶಕಗಳಲ್ಲಿ ವ್ಯಾಪಕವಾಗಿರುವ ಗ್ರಾಹಕ ಸಂಸ್ಕೃತಿ ಸಿನಿಮಾಗಳ ಮೇಲೆ ಬೀರಿರುವ ಪರಿಣಾಮ ಏನು?
ಕನ್ನಡವಿರಲಿ ಇನ್ನಾವುದೇ ಸಿನಿಮಾ ರಂಗವಿರಲಿ ಅಲ್ಲಿ ಜಾಗತೀಕರಣ ಬರುವವರೆಗೆ ಸ್ಥಳೀಯ ವಿಷಯಗಳು ಮುಖ್ಯವಾಗುತ್ತಿತ್ತು. ಸಿನಿಮಾಗಳು ಮಧ್ಯಮ ವರ್ಗದ ಸಮುದಾಯದ ಪ್ರಜ್ಞೆಯ ಚೌಕಟ್ಟಿನಲ್ಲಿರುತ್ತಿದ್ದವು. ಅವು ಸೂಪರ್ ಬಡ್ಜೆಟ್ ಸಿನಿಮಾಗಳಾಗಿರುತ್ತಿರಲಿಲ್ಲ. ತಂತ್ರಜ್ಞಾನ ಸಹ ಈ ಮಟ್ಟದಲ್ಲಿರಲಿಲ್ಲ. ಆದರೆ ಜಾಗತೀಕರಣ ಛಿದ್ರಗೊಂಡ ಸುಳ್ಳು ಸುಳ್ಳು ಬಿಡಿ ಬಿಡಿ ಪ್ರತಿಮೆಗಳನ್ನು ನಿರ್ಮಿಸತೊಡಗಿತು. ಸ್ಥಳೀಯತೆ ಮಾಯವಾಯಿತು. ಒಂದು ಹಂತದ ನಂತರ ಸ್ಥಳ ಕಾಲಕ್ಕೆ ಸಂಬಂಧಪಟ್ಟಂತೆ ಛಿದ್ರೀಕರಣ ಆರಂಭವಾಯಿತು. ಸಿನಿಮಾ ಒಂದು ನಿಧಾನಗತಿಯಲ್ಲಿ ನಮ್ಮ ಕತೆ ಹೇಳಿದರೆ ಅದು ನಮ್ಮದಲ್ಲ ಎನ್ನಿಸತೊಡಗಿತು. ಅವಾಸ್ತವಿಕವಾದುದನ್ನು ಸೂಪರ್‌ಸ್ಪೀಡ್‌ನಲ್ಲಿ ಹೇಳಿದಾಗ ಅದರ ಜೊತೆಗೆ ನಾವು ಗುರುತಿಸಿಕೊಳ್ಳತೊಡಗಿದೆವು. ಸಿನಿಮಾದಲ್ಲಾದ ಈ ಬದಲಾವಣೆ ಮಧ್ಯಮ ವರ್ಗವನ್ನೂ ಅಳಿಸಿಹಾಕಿತುಬಡವರನ್ನೂ ಶೋಷಿತರನ್ನೂ ಅಳಿಸಿ ಹಾಕಲು ಶುರು ಮಾಡಿತು. ಹೀಗೆ ನಿಜವಲ್ಲದ ಜಗತ್ತೇ ಜಗತ್ತು ಎಂಬುದನ್ನು ಹಾಗೂ ಅಲ್ಲಿ ತೋರಲ್ಪಡುವ ಪ್ರತಿಮೆಗಳು ನಮ್ಮ ಜೀವನದಲ್ಲಿ ಯಾವತ್ತೂ ಬರಲು ಸಾಧ್ಯವಿಲ್ಲವಾದರೂ ಅದೇ ನಿಜ ಎಂಬ ಭ್ರಮಾತ್ಮಕ ಒತ್ತಡವನ್ನು ಸೃಷ್ಟಿಮಾಡಲಾರಂಭಿಸಿತು. ಇದೆಲ್ಲದರ ಮೂಲವನ್ನು ಹುಡುಕಲು ನಾವು ತೊಡಗಬೆಕು. ಸಮಾಜದಲ್ಲಿ ಹೇಗೆ ಸಣ್ಣ ಪುಟ್ಟ ಅಂಗಡಿಗಳು ನಾಶವಾಗಿ ಮಾಲ್ ಸಂಸ್ಕೃತಿ ಶುರುವಾಯಿತೋ ಹಾಗೇ ಸಿನಿಮಾ ಪ್ರಪಂಚವೂ ಅದೇ ಬೆಳವಳಿಗೆಯನ್ನು ಸೂಚಿಸುತ್ತದೆ. ಇದನ್ನು ಚಿತ್ರರಂಗದ ತರ್ಕದೊಳಗೇ ಅರ್ಥೈಸಲಾಗುವುದಿಲ್ಲ.
ಈ ಸಾಂಸಕೃತಿಕ ಬದಲಾವಣೆಗೆ ಯಾವುದೇ ಪ್ರತಿರೋಧ ಸಿನಿಮಾ ರಂಗದಲ್ಲಿ ವ್ಯಕ್ತಗೊಂಡಿಲ್ಲವೇ?  ಖಂಡಿತಾ ಅಂತಹ ಪ್ರತಿರೋಧ ವ್ಯಕ್ತವಾಗಿದೆ. ಪೃಥ್ವಿ ಕೂಡಾ ಆ ಬಗೆಯದೇ. ಗಿರೀಶ್ ಕಾಸರವಳ್ಳಿ,ಪಿ.ಶೇಷಾದ್ರಿಯವರಂತವರು ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನದಲ್ಲಿದ್ದಾರೆ. ಹಾಗೆಯೇ ಮರಾಠಿಯಲ್ಲಿಭೋಜ್‌ಪುರಿಪಂಜಾಬಿಯಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಹಿಂದಿ ಸಿನಿಮಾರಂಗದಲ್ಲೂ ಕೂಡಾ ಇಂತಹ ದನಿಗಳು ಬರುತ್ತಿವೆ. ಇವೆಲ್ಲಾ ತಮ್ಮ ಭಾಷೆಸಂಸ್ಕೃತಿಗಳ ಪರವಾದ ಆಂದೋಲನಗಳ ಸೂಚನೆಯಾಗಿಯೂ ಬರುತ್ತಿವೆ.

ಇಂದು ಕಲಾತ್ಮಕ ಸಿನಿಮಾ ಕಮರ್ಷಿಯಲ್ ಸಿನಿಮಾ ಎಂದು ವಿಂಗಡನೆ ಮಾಡಿ ನೋಡಲಾಗುತ್ತಿದೆ. ಇದು ಎಷ್ಟು ಸರಿ?
ಈ ಪ್ರಶ್ನೆಯನ್ನು ಕೇಳಬೇಕಾದ ಕಾಲ ಬಂದಿದೆ. ಹೀಗೆ ವರ್ಗೀಕರಣ ಮಾಡಿದವರು ಯಾರುಹಾಗೆ ಮಾಡಬೇಕಾದ ಅನಿವಾರ್ಯತೆ ಯಾರಿಗೆ ಬಂತು ಯಾಕೆ ಬಂತುಸೊಕಾಲ್ಡ್ ಕಲಾತ್ಮಕ ಸಿನಿಮಾಗಳನ್ನು ಜನಗಳು ನೋಡುವುದಿಲ್ಲ ಎನ್ನುವ ಮಾತಿನ ಬದಲಾಗಿ ಅವು ರಿಲೀಸ್ ಆಗದೇನೇ ಜನಗಳ ಹತ್ತಿರ ಹೋಗದೇ ಇರುವಂತೆ ಮಾಡಿಬಿಡುವ ಶಕ್ತಿಗಳಾವುವು ಎಂದು ನೋಡಬೇಕುಕಾಸರವಳ್ಳಿ ಮಾಡಿದ್ದು ಒಳ್ಳೇ ಸಿನಿಮಾನೋ ಕೆಟ್ಟ ಸಿನಿಮಾನೋ ಎಂದು ಮಾತನಾಡಬೇಕೇ ಹೊರತು ಇದು ಆರ್ಟ್ ಸಿನಿಮಾಜನ ನೋಡಲ್ಲ ಎಂದು ಹೇಳುವುದರ ಮೂಲವನ್ನು ನೋಡದೇ ಒಪ್ಪಿಕೊಂಡುಬಿಡುವುದು ಸರಿಯಲ್ಲ. ಅಂತಹ ಮಾತುಗಳಲ್ಲಿ ಸಹ ಬಂಡವಾಳದ ಲಾಭಿ ಇದೆ. ನಿಜವಾಗಿಯೂ ಈ ಸಿನಿಮಾಗಳನ್ನು ಒಂದಕ್ಕೊಂದು ವಿರೋಧಿನೆಲೆಯಲ್ಲಿ ನೋಡಬೇಕಾದುದಿಲ್ಲ. ಜನಪ್ರಿಯ ಸಿನಿಮಾಗಳ ಅನೇಕ ಅಂಶಗಳನ್ನು ಒಪ್ಪಿಕೊಳ್ಳುವ ನೆಲೆಯಲ್ಲಿ ಗಿರೀಶ್ ಅಂಹವರಿದ್ದಾರೆ. ಹಾಗೆಯೇ ಜನಪ್ರಿಯ ಸಿನಿಮಾ ಮಾಡುವವರು ಕಾಸರವಳ್ಳಿಯಂತವರು ಮಾಡುವ ಸಿನಿಮಾಗಳಿಗೆ ತೆರೆದುಕೊಂಡರೆ ಅವರಿಗೆ ಕಲಿಯಲು ಬೇಕಾದಷ್ಟಿದೆ. ಹೀಗೆ ಎರಡರ ನಡುವೆ ಕೊಡುಕೊಳೆ ಸಂಬಂಧವನ್ನು ನಾವು ಕಟ್ಟಬೇಕಿದೆ. 

ಹೀಗೆಲ್ಲಾ ನಡೆಯುತ್ತಿರುವಾಗ ನಮ್ಮ ಚುನಾಯಿತ ಸರ್ಕಾರಗಳ ಹೊಣೆಗಾರಿಕೆ ಎನು?
ನಿಜವಾದಗಟ್ಟಿಯಾದ ರಾಜಕೀಯ ಪ್ರಜ್ಞೆಯ ಕೊರತೆ ನಮ್ಮ ಎಲ್ಲಾ ರಾಜಕೀಯ ಪಕ್ಷಗಳಿಗಿರುವುದರಿಂದ ಇಲ್ಲಿ ಸರ್ಕಾರಗಳಿವೆಯೇ ಹೊರತು ನಿಜವಾದ ಪ್ರಜಾಪ್ರಭುತ್ವವಾದಿ ನೆಲೆಯನ್ನಿಟ್ಟುಕೊಂಡು ಘನವಾದ ರಾಜಕೀಯ ನಡೆಸುವ ಪ್ರಭುತ್ವವೇ ನಾಶವಾಗಿದೆ. ಸೈದ್ಧಾಂತಿಕ ನೆಲೆಯ ರಾಜಕೀಯ ಇಲ್ಲಿಲ್ಲ. ರಾಜಕೀಯ ಪ್ರಜ್ಞೆ ಕುಸಿದಿದೆ. ಇದರಿಂದಾಗಿ ಇಲ್ಲಿ ಇಂದು ಶತ್ರುನಾಳೆ ಸ್ನೇಹಿತಹಣಲಾಭಿಲಿಕರ್ ಲಾಭಿಪವರ್ ಲಾಭಿಗ್ರಾನೈಟ್ ಲಾಭಿ,ಇವೆಲ್ಲದರಿಂದ ಸರ್ಕಾರದ ಅಧಿಕಾರ ಹಿಡಿದಿಡುವ ರಾಜಕೀಯ ಪಕ್ಷ ಮಾತ್ರವೆ ಇಲ್ಲಿದೆ. ಹಾಗೇನೇ ವಿರೋಧ ಪಕ್ಷಕ್ಕೂ ಕೂಡ ಪ್ರಗತಿಜನರ ಅಭಿವೃದ್ಧಿ ಇವ್ಯಾವೂ ಕಾಳಜಿಗಳಲ್ಲ. ಅವರ ಒಂದೇ ಕಾಳಜಿ ಆಳುತ್ತಿರುವ ಪಕ್ಷವನ್ನು ಉರುಳಿಸುವುದು ಅಷ್ಟೆ. ಹೀಗಾಗಿ ಇವರಿಂದ ಏನನ್ನೂ ನಿರೀಕ್ಷೆ ಮಾಡಲು ಆಗಲ್ಲ.


ತತ್ವಬದ್ಧ ರಾಜಕೀಯ ತಮ್ಮದು ಎಂದುಕೊಳ್ಳುತ್ತಿದ್ದ ಎಡಪಂಥೀಯರು ಬಂಗಾಳದಲ್ಲಿ ಸೋತಿರುವ ಬಗ್ಗೆ ಏನಂತೀರಿ?
ನಿಜವಾಗಿಯೂ ಸತ್ಯ ಬಯಲಿಗೆ ಬಂತು. ಅವರಿಗೆ ರಾಜಕೀಯವೂ ಇರಲಿಲ್ಲ. ಎಡಪಂಥೀಯತೆನೂ ಇಲ್ಲಸಮಾಜವಾದದ ಕಲ್ಪನೇನೂ ಇಲ್ಲ್ಲ. ಇದ್ದ ಕಾಲ ಒಂದಿತ್ತು. ಕಳೆದ ಮೂವತ್ತೈದು ವರ್ಷಗಳಲ್ಲಿ ನಾನಾ ರೀತಿಯ ಕುತಂತ್ರಗಳನ್ನುಷಡ್ಯಂತ್ರಗಳನ್ನು ಮಾಡಿಕೊಂಡು ಬಂದಿದ್ದೇ ಸಿಪಿಎಂ. ನೈಜ ರಾಜಕೀಯ ಅವರದ್ದಾಗಿದ್ದರೆ ಕೇರಳದಲ್ಲಿ ಅಚ್ಯುತಾನಂದನ್‌ನ್ನು ಇಳಿಸಲು ಹೊರಟಿದ್ದೇಕೆ?. ಸೋಕಾಲ್ಡ್ ಎಡಪಂಥೀಯ ಪಕ್ಷದೊಳಗೇ ಒಂದು ರೀತಿಯ ಸ್ಟಾಲಿನ್‌ವಾದವಿದೆ. ಪ್ರಕಾಶ್ ಕಾರಟ್ ಪ್ರತಿನಿಧಿಸುವುದು ಪ್ರಜಾತಾಂತ್ರಿಕ ರಾಜಕೀಯವನ್ನಲ್ಲ. ಬಲಪಕ್ಷಗಳು ಹೇಗಿವೆಯೋ ಹಾಗೇ ಇವೆ ಎಡಪಕ್ಷಗಳು.


ಜಾಗತೀಕರಣವು ಸಾಹಿತ್ಯದ ಸಂವೇದನೆಗಳನ್ನು ಯಾವ ರೀತಿಯಲ್ಲಿ ಪ್ರಭಾವಿಸಿದೆ?
ಕನ್ನಡವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಹೊಸ ಪೀಳಿಗೆಯ ಬರಹಗಾರರಲ್ಲಿ ಆಧುನಿಕತೆಪರಂಪರಸಂಪ್ರದಯಗಳ ಬಗೆಗೆ ದರ ಬಗ್ಗೆ ಗಂಬೀರವಾಗಿ ಯೋಚನೆ ಮಾಡುವ ಬೆಳವಣಿಗೆ ಇದೆ. ಜಗತ್ತಿನ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳುತ್ತಲೇ ಕನ್ನಡದಲ್ಲಿ ತಮ್ಮ ಸಂವೇದನೆಯನ್ನು ರೂಪಿಸಿ ಅಭಿವ್ಯಕ್ತಿಗೊಳಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಜಯಂತ್ ಕಯ್ಕಿಣಿ ಇರಬಹುದುವಿವೇಕ್ ಶಾನಭಾಗ್ಮೊಗಳ್ಳಿ ಗಣೇಶ್,ವಸುದೇಂದ್ರ ಇರಬಹುದುಲೇಖಕಿಯರಿರಬಹುದು ಎಲ್ಲರಲ್ಲೂ ಆ ಪ್ರಯತ್ನ ಇದೆ. ಮೊಗಳ್ಳಿ ಗಣೇಶ್ ಅವರನ್ನೇ ನೋಡಿ. ಅವರು ಮೊದಲು ಜಾಗತೀಕರಣದ ಪರವಾಗಿದ್ದವರು. ಆದರೆ ಇಂದು ಅದರಲ್ಲೇನೋ ಕೆಟ್ಟದಿದೆ ಎಂದು ಅದರ ವಿರುದ್ಧ ತಿರುಗುತ್ತಿದ್ದಾರೆ.

ನವ್ಯಬಂಡಾಯಗಳ ನಂತರದಲ್ಲಿ ಇಂದಿನ ಸಾಹಿತ್ಯ ಚಳವಳಿಯ ದಿಕ್ಕುದೆಸೆ ಏನಾಗಿದೆ?
ಒಂದು ಅನುಕೂಲಕ್ಕಾಗಿ ಮಾತ್ರ ಆ ಬಗೆ ಮಾಡಿಕೊಂಡ ಚೌಕಟ್ಟುಗಳಷ್ಟೇ. ಹೊರತು ಒಂದು ಮಟ್ಟದ ನಂತರ ಅವೆಲ್ಲಾ ಕೃತಕವಾದವು. ನವ್ಯ ಎನ್ನುವವರಲ್ಲೇ ಹಲವಾರು ಭಿನ್ನತೆಗಳಿರಲಿಲ್ಲವೇಎಂದು ಯಾವುದರಲ್ಲೂ ಏಕರೂಪತೆ ಇರಲಿಲ್ಲ. ಇಂದಿನ ಕಾಲ ಅನೇಕ ಸ್ಥಿತ್ಯಂತರಗಳನ್ನುತವಕ ತಲ್ಲಣಗಳನ್ನು ಅಭಿವ್ಯಕ್ತಿಸುವಪ್ರತಿನಿಧಿಸುವವಿರೋಧಿಸುವ ಕಾಲ ಇದು ಎನ್ನಬಹದು. ಸಂಸ್ಕಾರದ ಅನಂತಮೂರ್ತಿಯವರಿಗೂ ದಿವ್ಯದ ಅನಂತಮೂರ್ತಿಯವರಿಗೂ ಬಹಳ ಪಲ್ಲಟವಾಗಿದೆ ಎನ್ನುವುದನ್ನು ನೋಡಬೇಕು. ಇಂದಿನ ಕನ್ನಡದ ಮನಸ್ಸು ವಿರೋಧಾಭಾಸವಿಪರ‍್ಯಾಸ ದ್ವಂದ್ವವಿರೋಧಿ ನೆಲೆಗಳನ್ನು ಪ್ರತಿನಿಧಿಸುತ್ತಿದೆ. ಇದು ಕನ್ನಡದ ನಿಜವಾದ ಗುಣ ಕೂಡಾ. ಒಂದೇ ಸಿದ್ಧಾಂತ ಸರಿ ಎಂದು ಹೇಳದಿರುವಂತದ್ದು ಇದು.

ಕನ್ನಡ ಸಾಹಿತ್ಯ ರಚನೆಯಲ್ಲಿ ಮಹಿಳೆಯರ ತೊಡಗುವಿಕೆ ಹೆಚ್ಚುತ್ತಿರುವಿಕೆ ಅದು ಸಾಹಿತ್ಯದಲ್ಲಿ ಬೀರುತ್ತಿರುವ ಗುಣಾತ್ಮಕ ಪರಿಣಾಮ ಏನು?
ಇದನ್ನು ನಾವು ಎಂ.ಕೆ. ಇಂದಿರಾತ್ರಿವೇಣಿ ಅವರಿಂದಲೂ ನೋಡುವುದಾದರೆ ಇಂದು ಬರೆಯುತ್ತಿರುವವರು ಹೊಸ ನುಡಿಗಟ್ಟು ಕಂಡಿಕೊಂಡವರು ಎಂದು ನಾನು ಹೇಳುವುದಿಲ್ಲ. ಇಲ್ಲಿ ವಿಮರ್ಷೆಯಲ್ಲೇ ಒಂದು ಲೋಪವಾಗಿರುವುದೇನೆಂದರೆ ಸ್ತ್ರೀ ಕೃತಿಗಳನ್ನು ಸ್ತ್ರೀವಾದಿ ವಿಮರ್ಷೆಸ್ತ್ರೀವಾದಿ ಮೀಮಾಂಸೆ ಬರುವ ತನಕವೂ ಗಂಭೀರವಾಗಿ ಓದುವ ಪರಂಪರೆಯೇ ಇಲ್ಲಲ್ಲೊತ್ತಡ ಸುರುವಾದ ಮೇಲೆಯೇ ಅದು ಶುರುವಾಗಿದ್ದು. ದೊಡ್ಡ ದೊಡ್ಡ ವಿಮರ್ಶಕರೂ ಕೂಡ ಸ್ತ್ರೀಯರ ಬರಹವನ್ನು ಗೌಣಗೊಳಿಸಿದ್ದಾರೆ. ಹೀಗಾಗಿ ನಮ್ಮ ಮಹಿಳೆಯರ ಕೃತಿಗಳ ಅಧ್ಯಯನ ಇಂದಿನಿಂದ ಆರಂಭವಾಗಬಾರದು. ಇದೇ ಕಾಲೇಜಿನಲ್ಲೇ ಆವಿಷ್ಕಾರಗೊಂಡ ೨೦ ನೇ ಶತಮಾನದ ಪ್ರಪ್ರಥಮ ಬರಹಗಾರ್ತಿ ನಂಜನಗೂಡು ತಿರುಮಲಾಂಬ ಕಾಲದಿಂದಲೂ ಬಂದ ಪರಂಪರೆಯನ್ನು ಗುರುತಿಸಬೇಕು. ಹೊಸ ಅಧ್ಯಯನ ಶುರುವಾಗಬೇಕು. ಗಟ್ಟಿಯಾಗಿ ಆಗಬೇಕು.


ದಲಿತ ಚಳವಳಿಯ ಛಿದ್ರಗೊಂಡ ನಂತರದಲ್ಲಿ ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ ಯಾವ ಗತಿ ಪಡೆದುಕೊಂಡಿದೆ?
ಇಂತು ಚಳವಳಿಗಳ ಸ್ವರೂಪವೇ ಅನೇಕ ಒಳಪದರುಗಳನ್ನು ಹುಟ್ಟಿಸಿಕೊಂಡಿದೆ. ಅದೇ ರೀತಿ ದಲಿತ ಚಳವಳಿಯ ಒಳಗೆನೇ ಕವಲುಗಳು ಒಳದಾರಿಯನ್ನು ಕಂಡುಕೊಳ್ತಾ ಇದೆ. ಅದರಲ್ಲಿ ಸಂಕುಚಿತ ಸಣ್ಣ ಪುಟ್ಟ ಒಳಜಗಳಗಳಿರಬಹುದಾದರೂ ಅದನ್ನು ಮುಖ್ಯವಾಗಿ ನೋಡಬೇಕೆನ್ನಿಸುವುದಿಲ್ಲ. ಆದರೆ ಅಲ್ಲಿ ಪ್ರಾಮಾಣಿಕವಾಗಿಯೇ ಜಾತಿಗೆ ಸಂಬಂಧ ಪಟ್ಟಂತೆಜಾಗತೀಕರಣಒಳಮೀಸಲಾತಿದಲಿತ ಆದಿಮ ಪ್ರಜ್ಞೆಇತ್ಯಾದಿಗಳಿಗೆ ಸಂಬಂಧಿಸಿದಂತೆ ತಾತ್ವಿಕ ಜಗಳಗಳಿವೆ. ದೇವನೂರುಸಿದ್ದಲಿಂಗಯ್ಯಕೋಟಕಾನ ಹಳ್ಳಿ ರಾಮಯ್ಯಕೆ.ಬಿ.ಸಿದ್ದಯ್ಯ ಮುಂತಾರವರು ಇಂತಹ ತಾತ್ವಿಕ ಜಗಳಗಳ ನಾಯಕರು. ದಲಿತ ಚಳವಳಿಯನ್ನು  ಛಿದ್ರವಾಯ್ತುಮುಗಿದು ಹೋಯ್ತು ಎಂದೆಲ್ಲಾ ಸುಲಭವಾಗಿ ಹೇಳಿಬಿಡುವುದು ಅದರ ಬಗ್ಗೆ ಗೌರವ ಇಲ್ಲದವರು ಹೇಳುವ ಮಾತು. ಎಲ್ಲಾ ಕಡೆ ಆಗುವುದು ಅಲ್ಲಿಯೂ ಆಗ್ತಿದೆ. ಆದರೆ ಯಾಕೆ ಹೀಗೆ ಅನೇಕ ಪದರುಗಳಾಯ್ತು ಎಂದು ಅಧ್ಯಯನ ಮಾಡಬೇಕು. ಹೊರಗೆ ನಿಂತವರು ನಾವು ಅದಕ್ಕಿರುವ ತಾತ್ವಿಕ ಆಯಾಮವನ್ನೇ ಮುನ್ನೆಲೆಗೆ ತರಬೇಕು. ಒಳಜಗಳೇನೇ ಇರಲಿ ಅಲ್ಲಿರುವ ತಾತ್ವಿಕಸೈದ್ಧಾಂತಿಕ ನೆಲೆಯನ್ನೇ ಕಟ್ಟಿಕೊಡುವುದು ನಮ್ಮ ನೈತಿಕ ಜವಾಬ್ದಾರಿ. ದಲಿತ ಸಾಹಿತ್ಯದ ಬಗ್ಗೆ ಮಾತಾಡುವುದಾದರೆ ಅದರೊಳಗೆನೇ ಸಾಕಷ್ಟು ಒಳವಿಮರ್ಷೆ ಇದೆ. ದೇವನೂರರ ಕುಸುಮಬಾಲೆ ದಲಿತ ಚಳುವಳಿಗೆ ಪೂರಕವಾಗಿರದ ಕೃತಿ ಎಂಬ ವ್ಯಾಖ್ಯಾನವೂ ಹುಟ್ತಾ ಇದೆ.

ಜಾಗತೀಕರಣವನ್ನು ಕೇವಲ ದೇಸೀ ನೆಲೆಯಲ್ಲಿ ಬರೀ ಸಾಂಸಕೃತಿಕ ಪರಿಕರಗಳಿಂದ ಎದುರಿಸಬಹುದೆನ್ನುವ ಒಂದು ವಾದ ಇದೆಯಲ್ಲಾಇದು ಕಾರ್ಯ ಸಾದುವೇ?
ಇಲ್ಲ. ಇಂದು ಯಾವ ಪ್ರಶ್ನೆಯೂ ಅದು ಹುಟ್ಟುವ ಸೀಮಿತ ಮಟ್ಟಕ್ಕೆ ಇರುವುದಿಲ್ಲ. ಶುರುವಾಗುವಾಗ ಒಂದು ನೆಲೆಯಲ್ಲಿ ಶುರುವಾಗುವ ಒಂದು ಆಂದೋಲನಸಂಘರ್ಷ ಅದೇ ನೆಲೆಯಲ್ಲೇ ಸ್ಥಲೀಯವಾಗೇ ಇರುವುದಿಲ್ಲ. ಅಂತಹ ಜಾಗತಿಕ ಪ್ರಪಂಚಕ್ಕೆ ಬೇಕೋ ಬೇಡವೋ ನಾವು ನುಗ್ಗಿಯಾಗಿದೆ. ಸ್ಥಲೀಯ ಪ್ರಶ್ನೆ ಸ್ಥಳೀಯವಾಗಿ ಇತ್ಯರ್ಥವಾಗಲ್ಲ.ದೀ ರೀತಿ ಪ್ರಜ್ಞೆ ಮೂಎಉವ ಅನಿವಾರ್ಯತೆ ಎದುರಾಗಿದೆ. ಇದು ಸಾಧ್ಯವಾಗುವಂತಹ ಅನೇಕ ಚಿಕ್ಕಪುಟ್ಟ ಆಂದೋಲನಗಳು ಆಗುತ್ತಿವೆ. ಪರಿಸರ ಚಳವಳಿ ಇರಬಹುದುಡ್ಯಾಂ ವಿರೋಧ ಚಳವಳಿ ಇರಬುದುಕಾರ್ಪೊರೇಟ್ ಕ್ಷೇತ್ರದ ವಿರುದ್ಧದ ಚಳುವಳಿಗಳು ಹರಿದು ಹಂಚಿಹೋದ ನೂರಾರು ಆಂದೋಲನಗಳಾಗುತ್ತಿವೆ. ಜಗತ್ತಿನ ಎಲ್ಲಾ ಕಡೆಯೂ ಇಂತವು ಆಗುತ್ತಿವೆ. ಇವೆಲ್ಲಾ ಹೇಗೆ ಕೂಡಿಕೊಳ್ಳುತ್ತವೆಎನು ಸಕ್ತಿ ಪಡೆದುಕೊಳ್ಳುತ್ತಿವೆ ಎಂದು ನೋಡಬೇಕಿದೆ. ಒಂದು ಸಿದ್ಧಾಂತದ ಮೂಲಕ ಉತ್ತರ ಹುಡುಕುತ್ತೇವೆ ಎಂದರೆ ಅಕ್ಕಿಂತ ದೊಡ್ಡ ಭ್ರಮೆ ಯಾವುದೂ ಇರಲ್ಲ. ಅದು ಇನ್ನು ಸಾಧ್ಯವಿಲ್ಲ.


ನವ ಶಿಕ್ಷಣ ನೀತಿ ಜಾರಿಯಾದ ನಂತರ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಾಗಿರುವ ಬದಲಾವಣೆಗಳನ್ನು ನೀವು ಹೇಗೆ ಗ್ರಹಿಸುತ್ತೀರಿಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಂದ ಪ್ರೊ.ಯಶ್‌ಪಾಲ್ ವರದಿಗಿರುವ ಪ್ರಾಮುಖ್ಯತೆ ಏನು?

ಖಾಸಗೀಕರಣದ ನೀತಿಯನ್ನು ವರೋಧಿಸಲೇ ಬೇಕು. ಅದು ಬಂಡವಾಳಶಾಹಿಯ ನೀತಿ. ಶ್ರೇಷ್ಠತೆಯ ಹೆಸರಿನಲ್ಲಿ ಬಂಡವಾಳಶಾಹಿ ನೀತಿಯನ್ನು ತಂದಿಡುತ್ತಿದ್ದಿವಿ. ಸರ್ಕಾರ ತನ್ನ ಜವಾಬ್ದಾರಿ ಕಳಚಿಕೊಂಡಿದೆ. ಅಲ್ಲಿ ನಿಜವಾಗಿಯೂ ಸಾಮಾಜಿಕ ನ್ಯಾಯವೂ ಇರಲ್ಲಜ್ಞಾನದ ಶ್ರೇಷ್ಠತೆಯೂ ಇರಲ್ಲ. ಈ ನಿಟ್ಟಿನಲ್ಲಿ ಯಶಪಾಲ್ ವರದಿ ಪ್ರಗತಿಪರವಾದದ್ದುಆಶಾದಾಯಕವಾದದ್ದು. ಇದರಲ್ಲಿ ಪ್ರಭುತ್ವ ಎಷ್ಟು ಹಣ ನೀಡಬೇಕುಪ್ರಭುತ್ವದ ಪಾತ್ರ,ಖಾಸಗಿ ಸಂಸ್ಥೆಗಳ ಪಾತ್ರವೇನು ಎನ್ನುವುದರೀಮದ ಹಿಡಿದು ಪರೀಕ್ಷಾ ಯೋಜನೆಗಳವರೆಗೂ ಚರ್ಚೆಯಾದಮತಹ ವರದಿ ಇದು. ಪರೀಕ್ಷೆಗಳನ್ನು ತೆಗೆಯಬೆಕು ಎನ್ನುತ್ತದೆ ಅದು. ನಾವು ಶಿಕ್ಷಣಕೃಷಿಆರೋಗ್ಯಗಳಲ್ಲಿ ಖಾಸಗೀಕರಣಗಳನ್ನು ವಿರೋಧಿಸಲೇಬೇಕು. ಐಐಟಿಐಐಎಂಗಳ ಸ್ಥಾನಮಾನಅಂತರರಾಷ್ಟ್ರೀಯ ಸ್ಟಾಂಡರ್ಡ್‌ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ನಾವು ನಿಜಕ್ಕೂ ಯಾವ ಸ್ಟಾಂಡರ್ಡ್‌ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇಲ್ಲಿ ನ್ಯಾಯದ ಪರಿಕಲ್ಪನೆ ಏನು?, ಶ್ರೇಷ್ಠತೆಯ ಅಂದರೆ ಏನೆಂದುಕೊಳ್ತಿದೀವಿಇಲ್ಲಿ ಮಾರುಕಟ್ಟೆಯ ರೇಸ್‌ನಲ್ಲಿ ಯಾವುದು ಓಡುತ್ತದೆಯೋ ಅದು ಮಾತ್ರವೇ ಮಾರಾಟವಾಗುವಂತ ಕೋರ್ಸು. ಬಯೋಟೆಕ್ನಾಲಜಿಮೂಲ ವಿಜ್ಞಾನದ ಕೋರ್ಸುಗಳುಮಾನವಿಕ ಶಾಸ್ತ್ರಗಳು ಯಾಕೆ ಮುಚ್ಚುತಿವೆಕೇವಲ ಬಿಬಿಎಂಎಂಬಿಎಗಳು ಮಾತ್ರ ಓಡುತ್ತಿವೆ ಏಕೆ?. ಈ ಎಲ್ಲಾ ವಿಧ್ಯಾಕ್ಷೇತ್ರದ ಸಮಸ್ಯೆಗಳಿಗೆ ಹಿನ್ನೆಲೆಯಲ್ಲಿರುವ ಆರ್ಥಿಕಸಾಮಾಜಿಕ ವಿಷಯಗಳ ಅಧ್ಯಯನ ಆಗಬೇಕಿದೆ. ನಡೆಯುತ್ತಿದೆ ಕೂಡಾ. ಇದಾವುದೂ ಹೊಸ ವಿಷಯವಲ್ಲ.


ನಮ್ಮ ಸಮಾಜವನ್ನು ತೀವ್ರವಾದಿ ಬಾಧಿಸುತ್ತಿರುವ ಪ್ರಮುಖ ಸಮಸ್ಯೆ ಯಾವುದು ಎಂದು ನಿಮ್ಮ ಅನಿಸಿಕೆ? ಮತ್ತು ಅದರಿಂದ ಮುಕ್ತಿ ಹೇಗೆ?
ಆರೋಗ್ಯವಿದಾಭ್ಯಾಸಅನ್ನಾಹಾರ ಸಂಬಂಧಿಸಿದ್ದು. ಮತ್ತು ಅಷ್ಟೇ ಮುಖ್ಯವಾದದ್ದಯ ಮಾನವ ಹಕ್ಕುಗಳ ಉಲ್ಲಂಘನೆ. ಯಾವುದೇ ಪ್ರತಿರೋಧದ ದಮನವಾಗುತ್ತಿದರುವುದು ಇಂದಿನ ಪ್ರವೃತ್ತಿ ಇದೆ. ಅದು ಪರಿಸರ ಹೋರಾಟ ವಿರಲಿಬಿನಯಕ್ ಸೇನ್ ವಿಷಯವಿರಲಿಈಶಾನ್ಯಭಾರತವಿರಲಿಕಾಶ್ಮೀರವಿರಲಿ ನಡೆಯುತ್ತಿರುವುದಿ ಇದೇ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಬಂದಿರುವ ಕರಾಳ ಕಾನೂನುಗಳ ಮೂಲಕ ಸಂವಿಧಾನ ಹಕ್ಕುಗಳನ್ನೇ ನಮ್ಮ ನ್ಯಾಯಾಂಗ ಎತ್ತಿ ಹಿಡಿಯದಿರುವಂತಹ ವ್ಯವಸ್ಥೇ ಕಟ್ಟುತ್ತಿರುವುದು ಅತ್ಯಂತ ಅಪಾಯ. ನಮ್ಮ ಸಮಾಜದ ಪ್ರಗತಿಗೆ ತೊಡಕಾಗಿರುವ ದೊಡ್ಡ ಸಮಸ್ಯೆ ಯಾವುದೆಂದರೆ ಎಲ್ಲಾ ವರ್ಗಗಳಲ್ಲಿ ಮಧ್ಯಮ ವರ್ಗವಾಗುವ ಕನಸು. ಅದನ್ನು ಅಳಿಸಿ ಹಾಕಿ ನ್ಯಾಯ ಸಮಾನತೆಯ ಪ್ರಶ್ನೆಯನ್ನು ಎದುರು ಹಾಕಿಕೊಳ್ಳದಿದ್ದರೆ ಎಲ್ಲರೂ ತಂತಮ್ಮ ಜಾತಿಗಳಕೋಮುಗಳಸಮುದಾಯಗಳ ಮಧ್ಯಮವರ್ಗದ ಅವಕಾಶವಾದಿತನವನ್ನೇ ಸೃಷ್ಟಿಸಿ ಪೋಷಿಸುತ್ತಿರುತ್ತಾರೆ. ಜಗತ್ತಿನ ಯಾವುದೇ ಕ್ರಾಂತಿಗಳು ಮಧ್ಯಮವರ್ಗದಿಂದ ಹುಟ್ಟಿದ ಪ್ರಜ್ಞೆಯೇ. ಅನುಷ್ಠಾನಕ್ಕೆ ತಂದಿರುವುದು ಬೇರೆಯವರಿರಬಹುದುಇಂದು ಮಧ್ಯಮ ವರ್ಗದ ಕನಸು ಎನ್ನುವುದು ಕೆಟ್ಟ ಕಾರ್ಪೊರೇಟ್ ಕ್ಷೇತ್ರದ ಕೆಟ್ಟ ಆಳ್ವಿಕೆಯನ್ನು ಪೋಷಿಸುವಂತದು. ಒಂದಕ್ಕೊಂದುಪೂರಕವಾಗಿದೆ. ಇಂದು ಅಣ್ಣಾ ಹಜಾರೆರಾಮದೇವರ ಪ್ರತಿಭಟನೆಗೆ ಸರ್ಕಾರ ಹೆದರುತ್ತಿರುವುದು ಯಾಕೆ ನೋಡಿ. ಸಮಗ್ರವಾಗಿ ನೋಡುವುದಾದರೆ ಮಧ್ಯಮ ವರ್ಗ ಭಾಗವಹಿಸುವಂತಿದ್ದರೆ ಇನ್ನೂ ಪ್ರಭುತ್ವಗಳು ಹೆದರಿಕೊಳ್ಳುವಂತಹ ರಜಕೀಯ ಪ್ರಜ್ಞೆಯಂತೂ ಇದೆ. ಇದನ್ನು ಪುನಶ್ಚೇತನಗೊಳಿಸಬೇಕು. ಎಲ್ಲರೂ ಅಣ್ಣಾ ಹಜಾರೆಯನ್ನು ಮೆರೆಸುತ್ತಿರಬಹುದು. ನನಗೆ ಅವರು ಬಹಳ ದೊಡ್ಡ ಸಂಕೇತ ಅನ್ನಿಸುತ್ತಿಲ್ಲ. ಅಣ್ಣಾ ಹಜಾರೆ ಮೂಲಕ ನಾನು ನೋಡುತ್ತಿರುವುದೇನೆಂದರೆ ಅವರ ಮೂಲಕ ನಾಗರೀಕ ಸಮಾಜ ಎಚ್ಚೆತ್ತುಇಕೊಂಡು ಬಾಗವಹಿಸುತ್ತದೆ ಎಂದರೆ ಇನ್ನೂ ಕೂಡ ವ್ಯವಸ್ಥೇ ಹೆದರುತ್ತದೆ ಎನ್ನುವುದು. ಒಂದು ಅಣ್ಣಾ ಹಜಾರೆ ಏನೂ ಮಾಡಲು ಸಾಧ್ಯವಿಲ್ಲ. ಅದು ದೊಡ್ಡ ಪರ್ಯಾಯವನ್ನೇನೋ ನೀಡಿದೆ ಎಂದು ನೋಡುವುದು ಮತ್ತೊಂದು ಭ್ರಮೆ. ಆದರೆ ಅಂತಹ ಸೂಚನೆ ಇದೆ. ಅದರಲ್ಲಿ ಸಕಾರಾತ್ಮಕ ಎಳೆಯನ್ನು ಕಾಣದಿರುವುದು ಸಿನಿಕತನ. ಆಶಯಗಳ ನಾಡಿಯನ್ನು ಹಿಡಿದುಕೊಳ್ಳಬೇಕು. ಇದರ ಬಗ್ಗೆ ನಮಗೆ ಅನುಮಾನಗಳಿರಲಿ ಆದರೆ ಸಿನಿಕತನ ಇರಬಾರದು. 

ಬಿ.ಜೆ.ಪಿ. ಸರ್ಕಾರ ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಹೆಗೆ ಮೌಲೀಕರಣ ಮಾಡುತ್ತೀರಿ?
ಅಧಿಕಾರಕ್ಕಾಗಿ ತನ್ನ ಘನತೆ ಮಾನವನ್ನೇ ಕಳೆದುಕೊಂಡಿರುವ ಸರ್ಕಾರ ಇದು. ಬೇರೆ ಎನೇಕ ವಿಷಯಗಳಿದ್ದರೂ ಶೋಭಾ ಕರಂದ್ಲಾಜೆಯ ಸಚಿವ ಸ್ಥಾನ ಕಳೆಯಲು ಪಕ್ಷದೊಳಗೆಯೇ ಬಂದ ಒತ್ತಡಗಳನ್ನು ಯಡಿಯೂರಪ್ಪ ನಿಭಾಯಿಸಿದ ರೀತಿ ಅವರ ಅಧಪತನವನ್ನಷ್ಟೇ ಸೂಚಿಸುತ್ತದೆ. ಈ ಕುರಿತು ನನಗಂತೂ ತೀರಾ ಬೇಸರವಿದೆ. ಮುಂದಿನ ಎರಡಯ ವರ್ಷಗಳಲ್ಲಿ ಕೆಲವಾದರೂ ಪ್ರಾಥಮಿಕ ಸತ್ಯಗಳನ್ನು ಹೇಳಲು ಸುರುಮಾಡಬೇಕು. ಕುರ್ಚಿ ಹೋದರೂ ಚಿಂತೆ ಇಲ್ಲ ಯಾವುದೇ ರೀತಿ ಹಣದ ಬಲೆಯೊಳಗೆ ಸಿಲುಕುವುದಿಲ್ಲ ಎಂದು ಅವರು ಪ್ರಮಾಣ ಮಾಡಬೇಕು. ಕುರ್ಚಿ ಉಳಿಸಲು ಮಠಗಳಿಗೆ ದುದ್ದುಕೊಟ್ಟು ಓಲೈಸುವುದನ್ನು ಬಿಡಬೇಕು. ನರಹಂತಕ ಮೋದಿಯನ್ನು ಮಾದರಿ ಎನ್ನುವ ಮಾದರಿ ಎನ್ನುವ ಬಿಡಬೇಕು. ರಜ್ಯದ ಜನತೆ ನಿಜಕ್ಕೂ ಸಹಿಸಿಕೊಂಡಿದಾರೆ. ಜನರ ಸಹಾನುಭೂತಿಯನ್ನು ಸದುಪಯೋಗಪಟಿಸಿಕೊಂಡು ಜನಕಲ್ಯಾಣದ ಕಾರ್ಯಕ್ರಮಗಳಿಗೆ ಮುಂದಿನ ದಿನಗಳನ್ನು ಅವರು ಬಳಸಿಕೊಳ್ಳಲಿ. ಬೇರೆಯವರಿಗೆ ಹೋಲಿಸಿಕೊಂಡು ತಮ್ಮ ಭ್ರಷ್ಟಾಚಾರ‍್ನೂ ಸಮರ್ಥಿಸಿಕೊಳ್ಳುವುದಕ್ಕಿಮತ ದುರಂತ ಇಲ್ಲ. ಇದು ಯಡಿಯೂರಪ್ಪನವರ ದುರಂತ ಹಾಗೂ ನಮ್ಮೆಲ್ಲರ ದುರಂತವೂ ಸಹ.

ಈ ಕ್ಷಣದ ಇರವು ಇನ್ನೊಂದು ಕ್ಷಣದ ನೆನಪು ಮಾತ್ರ ಆಗಿರಲು ಸಾಧ್ಯವಿದೆ:ಕೋಟಗಾನಹಳ್ಳಿ ರಾಮಯ್ಯ








೭೦ರ ದಶಕದಲ್ಲಿ ಕುಡಿಯೊಡೆದು ಹಬ್ಬಿದ ದಲಿತ ಚಳುವಳಿಯ ಸ್ಥಾಪಕ ಸದಸ್ಯರಲ್ಲೊಬ್ಬರಾದ ಕೋಟಗಾನಹಳ್ಳಿ ರಾಮಯ್ಯನವರು ತಮ್ಮದೇ ಶೈಲಿಯ ವಿಶಿಷ್ಟ ಚಿಂತನೆಪ್ರಯೋಗಗಳಿಗೆ ಹೆಸರಾದವರು. ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಇವರು ಇತ್ತಿಚೆಗ ನಡೆದ ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಮಕಾಲೀನ ಸಂದರ್ಭದ ಹಲವಾರು ಬಿಕ್ಕಟ್ಟುಗಳ ಬಗೆಗೆ ಅವರು ನಡೆಸಿದ ಮಾತುಕತೆ.

ನಮ್ಮ ಕನ್ನಡ ಸಾಹಿತ್ಯ ಇಂದು ಯಾವ ದಿಸೆಯಲ್ಲಿ ಸಾಗುತ್ತಿದೆ ಎಂದು ಭಾವಿಸುತ್ತೀರಿ?

ಇಂದು ಸಾಹಿತಿಗಳೆನಿಸಿಕೊಂಡವರು ಅದನ್ನು ಒಂದು ಮಾಹಿತಿಯಾಗಿ ಮಾತ್ರ ನೋಡುತ್ತಿದ್ದಾರೆಯೇ ವಿನಃ ಅದರಾಚೆಗೆ ನೋಡುತ್ತಿಲ್ಲ. ಇವರಿಗೆ ಸಾಹಿತ್ಯ ರಚನೆ ಒಂದು ಚಟದ ಮಟ್ಟಕ್ಕೆ ಉಳಿದಿದೆಯೇ ಹೊರತು ಬದುಕಿಗೆ ಅನ್ವಯವಾಗುವ ನಿಟ್ಟಿನಲ್ಲಿ ಅಲ್ಲ. ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಮೌಲಿಕ ಸಾಹಿತ್ಯ ರಚನೆಯಾಗಿದ್ದು ನನಗಂತೂ ಗೊತ್ತಿಲ್ಲ. ಬರೀ ಮಾತುಚರ್ಚೆಹಾಗೂ ಜ್ಞಾನವನ್ನು  ಹೆಚ್ಚಿಸಿಕೊಂಡರೆ ಉಪಯೋಗವಿಲ್ಲ. ಅಂಕ ಸಿಗಬಹುದುಪಿಎಚ್‌ಡಿ ಗೌರವ ಸಿಗಬಹುದಷ್ಟೆ. ಯಾವುದೇ ಸಾಹಿತ್ಯದ ಪ್ರಸ್ತುತತೆಯನ್ನು ನಿರ್ಧರಿಸುವುದು ಅದು ಆಯಾ ಕಾಲದಲ್ಲಿ ಎಷ್ಟರ ಮಟ್ಟಿಗೆ ಅನ್ವಯವಾಗುತ್ತದೆ ಎನ್ನುವುದು. ಎಪ್ಪತ್ತರ ದಶಕದಲ್ಲಿ ಒಂದು ಅಂತಹ ಅರ್ಥಪೂರ್ಣ ಸಾಹಿತ್ಯ ಹೊರಹೊಮ್ಮಿದ್ದನ್ನು ನಾವು ಕಾಣಬಹುದು. ಅದಕ್ಕೊಂದು ಉದ್ದೇಶವಿತ್ತು. ಆಗ ನಮ್ಮ ಸಮಾಜವೇ ಒಂದು ಸ್ಫೋಟಕ್ಕೆ ಕಾಯ್ತಿದೆ ಎನ್ನುವ ರೀತಿ ಕುದಿಯುತ್ತಾ ಇತ್ತು. ಆದರೆ ಆ ಒತ್ತಡದ ಸ್ಥಿತಿ ಈಗ ಏರ್ಪಡುತ್ತಿಲ್ಲ. ಎಲ್ಲವೂ ವಿಭಜನೆಗೊಂಡು ಹೋಗುತ್ತಿದೆ. ಒಟ್ಟಾರೆಯಾಗಿ ನೋಡುತ್ತಿದ್ದ ದೃಷ್ಟಿಗಿಂತ ವ್ಯಕ್ತಿಗತ ನೆಲೆಯಲ್ಲಿ ಅವರವರದೇ ಆದ ಅನನ್ಯತೆಗಳಲ್ಲಿ ರಾಜಕಾರಣದ ಹುಡುಕಾಟದಲ್ಲಿದ್ದಾರೆ. ಒಬ್ಬೊಬ್ಬರೂ ಒಂದೊದು ರೀತಿ ನೋಡುತ್ತಾ ಅಂತಿಮವಾಗಿ ಎಲ್ಲಿ ತಲುಪಬೇಕೋ ಅಲ್ಲಿ ತಲುಪುವ ದಿಕ್ಕಿನಲ್ಲಿ ಸಂಘಟಿತ ರೀತಿಯಲ್ಲಿ ಚಲಿಸುತ್ತಿಲ್ಲ. ಹೀಗಾದಾಗ ರಾಜಕಾರಣಸಂಸ್ಕೃತಿಚಳವಳಿಗಳಲ್ಲಿ ಒಂದು ಪ್ರತಿರೋಧದ ನೆಲೆಯೆ ಇಲ್ಲವಾಗಿ ಬಿಡುತ್ತದೆ. ಅಂತಹ ಒಂದು ಶೂನ್ಯತೆಯನ್ನು ಇಂದು ನಾವು ಅನುಭವಿಸುತ್ತಿದ್ದೇವೆ. ಜಾಗತೀಕರಣದ ಮಾರುಕಟ್ಟೆ ಆರ್ಥಿಕತೆಯ ಸಾಂಸ್ಕೃತಿಕ ಅಜೆಂಡಾಗಳೂ ಇದಕ್ಕೆ ಕಾರಣವಾಗಿವೆ. ಇದು ಮನುಷ್ಯನನ್ನು ವ್ಯಕ್ತಿಯಲ್ಲಿ ಕೊನೆಗೊಳಿಸುತ್ತಿದೆ. ವ್ಯಕ್ತಿ ಹಾಗೂ ಸಮಷ್ಟಿ ನಡುವಿನ ಬಿಕ್ಕಟ್ಟನ್ನು ಪರಿಹಾರ ಮಾಡಿಕೊಳ್ಳಲು ನಾವು ಅಸಮರ್ಥರಾಗುತ್ತಿದ್ದೇವೆ. ನಮ್ಮ ಉಳಿವಿನ ಪ್ರಶ್ನೆಯನ್ನು ಕೇವಲ ವೈಯುಕ್ತಿಕ ನೆಲೆಯಲ್ಲಿ ತೆಗೆದುಕೊಂಡು ಹೋಗುತ್ತಿರುವುದು ದುರಂತ.

ಮಂಟೇಸ್ವಾಮಿಮಲೆಮಾದೇಶ್ವರಜುಂಜಪಪ್ ಕಾವ್ಯಗಳಂತಹ ನಾಡಿನ ಮೌಖಿಕ ಕಾವ್ಯಗಳ ಪ್ರಾಮುಖ್ಯತೆಯನ್ನು ಹೇಗೆ ಗುರುತಿಸುತ್ತೀರಿ?

ಜನಪದರ ಸೃಷ್ಟಿಗಳಾಗಿರುವ ಮಹಾಕಾವ್ಯಗಳ ಕಡೆ ಗಮನ ಹರಿಸಬೇಕು ಎಂದು ಗೊತ್ತಾಗುತ್ತಿರುವುದು ಇರುವುದು ತೀರಾ ಇತ್ತೀಚೆಗೆ. ನಮ್ಮ  ಸಾಂಸ್ಕೃತಿಕ ಅಧ್ಯಯನಗಳು ಹಾಗೂ ಸಮಾಜಶಾಸ್ತ್ರೀಯ ಅಧ್ಯಯನಗಳು ಅಥವಾ ಜನಪದ ಆದ್ಯಯನಗಳು ಕಾಲಕಲಕ್ಕೆ ಬಿಕ್ಕಟ್ಟನ್ನು  ಸೃಷ್ಟಿಸಿದಾಗ ಅವಕ್ಕೆ ಉತ್ತರಗಳನ್ನು ಹುಡುಕುವ ಪ್ರಕ್ರಿಯೆಯಲ್ಲಿ ಇದುವರೆಗೆ ಕೇವಲ ಶಾಸ್ತ್ರೀಯ ಆಕರಗಳನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತಿತ್ತು. ಈಗ ಈ ಕ್ರಮಕ್ಕೆ ಹೊರತಾಗಿ ಮೌಖಿಕವನ್ನು ಪರಿಗಣಿಸುವ ಅನಿವಾರ್ಯತೆ ಸೃಷ್ಟಿಯಾಯ್ತು. ಲಾಗಾಯ್ತಿನಿಂದಲೂ ನಮ್ಮ ಸಾಂಸ್ಕೃತಿಕ ಆಧ್ಯಯನದ ತಳಹದಿ ಯಾವಾಗಲೂ ಶಾಸ್ತ್ರೀಯವಾದದ್ದೇ. ನಂತರ ಈ ನೆಲಕ್ಕೆ ಸಂಬಂಧಿಸಿದ್ದನ್ನು ನೋಡಿದಾಗ ಮಲೆಮಾದೇಶ್ವರಜುಂಜಪ್ಪ ಕಾವ್ಯಅಥವಾ ಧರೆಗೆ ದೊಡ್ಡವರು ಕಾವ್ಯಅಥವಾ ಜನಪದ ಮಹಾಭಾರತಇತ್ಯಾದಿಗಳೆಲ್ಲಾ ಸಿಕ್ಕಿವೆ. ಆದರೆ ವಿಶ್ವವಿದ್ಯಾನಿಲಯಗಳಲ್ಲಿರುವ ವಿದ್ವಾಂಸರು ತಮ್ಮ ವೈಯುಕ್ತಿಕವಾದ ವರ್ಚಸ್ಸುಅಥವಾ ಡಾಕ್ಟರೇಟ್‌ಗಳಿಗಾಗಿ ಇವುಗಳನ್ನು ನೋಡುತ್ತಿದ್ದಾರೆಯೇ ವಿನಃ ಅದರಾಚೆಗೆ ಅವುಗಳ ಸಾಧ್ಯತೆಯನ್ನು ನೋಡುವ ಪ್ರಯತ್ನ ಅಷ್ಟಾಗಿ ಇಲ್ಲ. ನಮ್ಮ ಪರಂಪರೆಯನ್ನು ಕಟ್ಟುವುದು ಅಥವಾ ಅರ್ಥಮಾಡಿಕೊಳ್ಳುವುದು ಎಂದರೆ ಇವನ್ನು ಶ್ರದ್ಧೆಯ ಮೂಲಕ ನೋಡುವ ಅಗತ್ಯ ಬೀಳುತ್ತದೆ. ನಮ್ಮ ಸಾಂಸ್ಕೃತಿಕಪರಂಪರೆಯಲ್ಲಿ ಪ್ರತಿರೋಧದ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ಇವುಗಳೇ ನಮಗಿರುವ ಪ್ರಮುಖ ಆಕರಗಳು. ಅವುಗಳ ಪ್ರತಿ ವಿವರಗಳನ್ನೂ ಸಹ ಬೇರೆ ಬೇರೆ ರೀತಿಯ ಜ್ಞಾನ ಶಿಸ್ತುಗಳ ಮೂಲಕ ಕಂಡುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಪ್ರಯತ್ನಿಸುತ್ತಿಲ್ಲ.

ನಮ್ಮಲ್ಲಿ ಜನಪದ ಅಧ್ಯಯನ ಉತ್ತಮ ಮಟ್ಟದಲ್ಲಿ ಇದೆಯಲ್ಲಾ?
ಜನಪದ ಕುರಿತಂತೆ ಕರ್ನಾಟಕ ಬಿಟ್ಟರೆ ಬೇರೆಲ್ಲೂ ಹೆಚ್ಚಿನ ಕೆಲಸ ಆಗಿಲ್ಲ ಎಂದು ಹೇಳುತ್ತಾರೆ. ಸಂಗ್ರಹಸಂರಕ್ಷಣೆ ಹಾಗೂ ಮುಖ್ಯವಾಹಿನಿಗೆ ಅದನ್ನು ಮರುಪರಿಚಯ ಬಹಳ ದೊಡ್ಡ ಮಟ್ಟದಲ್ಲಿ ಆಗಿದೆ ಎನ್ನುತ್ತಾರೆ. ನಾನೂ ಸಹ ಗಮನಿಸಿದ್ದೇನೆ. ಸಂಖ್ಯೆಯ ಹಾಗೂ ಪ್ರಮಾಣದ ದೃಷ್ಟಿಯಿಂದ ಈ ಮಾತು ನಿಜ. ಆದರೆ ದೃಷ್ಟಿಕೋನದ ವಿಷಯಕ್ಕೆ ಬಂದರೆ ನಾನು ಗಮನಿಸಿರುವ ಯಾವುದೇ ಅಧ್ಯಯನದಲ್ಲಿ ಬಹಳ ಜವಾಬ್ದಾರಿಯುತ ಹುಡುಕಾಟ ಬಹಳ ಕಡಿಮೆ. ಅದು ತೀರಾ ಬೆರಳೆಣಿಕೆಯಷ್ಟಿದೆ. ಈ ಕಾವ್ಯಗಳು ನಮ್ಮ ಹಿಂದಿನ ಜನಪದರು ತಮ್ಮ ಉಳಿವಿಗೋಸ್ಕರ ತಾವೇ ಕಟ್ಟಿಕೊಂಡಿರುವ ಆಕರಗಳು. ಉಳಿವಿಗಾಗಿನ ಪಠ್ಯಗಳು’ ಎಂದು ನಾನವುಗಳನ್ನು ಕರೆಯುತ್ತೇನೆ. ನಮ್ಮ ಅಕಡೆಮಿಕ್ಸ್‌ನ ಮಿತಿಯಿಂದಾಗಿ ಅವು ಇಂದು ಬರೀ ಪಠ್ಯಗಳಾಗಿ ಕಾಣುತ್ತಿವೆ. ರಾಷ್ಟ್ರ ಮಟ್ಟದಲ್ಲಿ ಸಬಾಲ್ಟರ್ನ್ ಅಧ್ಯಯನ ಎಂದು ಶುರುವಾಯ್ತು. ರಾಜ್ಯದಲ್ಲೂ ಬರಗೂರು ರಾಮಚಂದ್ರಪ್ಪಹಂಪಿ ವಿವಿಗಳಂತಹ ಕಡೆ ಉಪಸಂಸ್ಕೃತಿಗಳ ಅಧ್ಯಯನ ಮುಂತಾಗಿ ಸಾಕಷ್ಟು ಕೃಷಿ ನಡೆಸುತ್ತಿದ್ದಾರೆ. ಆದರೆ ಈ ಸಾಕಷ್ಟು ಕೃಷಿಯಲ್ಲಿರುವ ತೊಡಕು ಏನಂದರೆ ಅವೂ ಕೂಡಾ ಒಂದು ರೀತಿ ಅಕಾಡೆಮಿಕ್ ಕಸರತ್ತಾಗಿ ನೋಡಲಾಗುತ್ತಿದೆ. ಅದು ಬಿಟ್ಟು ನಮ್ಮೆಲ್ಲರ ಉಳಿವಿಗೆ ಹಾಗೂ ಭವಿಷ್ಯರಾಜಕಾರಣಕ್ಕೆ ಇವುಗಳನ್ನು ನೋಡಬೇಕಾದ ದೃಷ್ಟಿಕೋನದ ಕೊರತೆ ಇದೆ. ಪರಿಣಾಮವಾಗಿ ಅವು ಮ್ಯೂಸಿಯಂನಲ್ಲಿಡುವ ಸ್ಮಾರಕಗಳಾಗಿ ಮಾತ್ರ ಆಗಿಬಿಡುತ್ತಿವೆ. 

ಇತ್ತೀಚೆಗೆ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ತೀರಾ ಕಡಿಮೆ ಜನರು ಪಾಲ್ಗೊಂಡಿದ್ದರಲ್ಲಾ
-ಸಂಖ್ಯೆ ಮುಖ್ಯ ಅಲ್ಲ. ಅಂದು ದಲಿತ ಲೇಖಕ ಯುವಕರ ಸಂಘದ ಸಮಾವೇಶ ಭದ್ರಾವತಿಯಲ್ಲಿ ಮೊದಲ ಬಾರಿಗೆ ನಡೆದಾಗ ಅಬ್ಬಬ್ಬಾ ಎಂದರೆ ನೂರು ಜನ ಸೇರಿದ್ದರು ಅಷ್ಟೆ. ಆದರೆ ಅಷ್ಟು ಜನ ಸೇರಿಕೊಂಡು ಏನು ಮಾಡುತ್ತಾರೆಏನು ಮಾತಾಡುತ್ತಾರೆ ಎಂಬುದು ಮುಖ್ಯ. ನನಗಂತೂ ಇವತ್ತಿನ ಈ ದಲಿತ ಸಾಹಿತ್ಯಚಳವಳಿ ಬಗ್ಗೆ ಆಸಕ್ತಿಯೂ ಉಳಿದಿಲ್ಲ. ಅದರ ಬಗ್ಗೆ ಮಾತಾಡಲಿಕ್ಕೇ ಹೋಗಲ್ಲ. ಆ ಆಧ್ಯಾಯವನ್ನು ನನ್ನ ನೆನಪಿನಿಂದಲೇ ಅಳಿಸಿ ಹಾಕಿಬಿಡಬೇಕು ಎಂದುಕೊಂಡಿದೀನಿ. ನನ್ನ ಪ್ರಕಾರ ಇಲ್ಲಿ ಮಾಡ್ತಿರೋದೆಲ್ಲ ಶವಸಂಸ್ಕಾರಕ್ಕೆ ಸಮಾನವಾದದ್ದು. ದಲಿತ ಸಂಘಟನೆ ಎಂದೋ ಸತ್ತು ಹೋಗಿದೆ. ಅದಕ್ಕೆ ಶ್ರಾದ್ಧದ ಮೂಲಕ ಉಳಿಸೋಕೆ ನೋಡುತ್ತಿದ್ದಾರೆ. ಅದನ್ನು ಹೂತು ಹಾಕಿ ಅದರ ಸ್ಫೂರ್ತಿಯಲ್ಲಿ ಬೇರೆ ಬೇರೆಯದನ್ನು ನೋಡಬೇಕಾದ ತಾಕತ್ತಾಗಲೀದೃಷ್ಟಿಕೋನವಾಗಲೀ ಅಥವಾ ಅದು ಮುಖ್ಯ ಎನ್ನುವ ಪ್ರಜ್ಞೆ ಅವರಿಗಿಲ್ಲ.  ಹೀಗಾಗಿ ಪ್ರಜ್ಞಾ ಹೀನರ ಜೊತೆಗೆ ಒಡನಾಟ ಬೇಡ ಎಂದು ನಿಲ್ಲಿಸಿ ಬಿಟ್ಟಿದ್ದೇನೆ. ಅವರು ನನ್ನನ್ನೇ ಪ್ರಜ್ಞಾಹೀನ ಎಂದು ಪರಿಗಣಿಸಿದರೂ ಚಿಂತೆಯಿಲ್ಲ. ಬಹುಪಾಲು ದಲಿತ ಜಗತ್ತು ನನ್ನನ್ನು ದೂರ ಇಟ್ಟಿದೆ. ನೀವು ಮಾತಾಡಬಾರದು’ ಎಂದು ಆಜ್ಞೆ ಮಾಡಿದೆ. ಇಂದು ದಲಿತ ನಾಯಕತ್ವ ಏನಿದೆಯಲ್ಲಾ ಅದು ನಾಯಕತ್ವ ಅಲ್ಲ. ಅದು ಡಕಾಯಿರ ತಂಡ. ಉತ್ತರ ಭಾರತದಲ್ಲಿರುವ ಪಂಡಾಗಳಂತೆ ಇವರು ದುಡ್ಡು ವಸೂಲಿಗೆ ಇಳಿದಿರುವಂತವರು. ಈ ಬಗ್ಗೆ ನನ್ನನ್ನು ಹೆಚ್ಚು ಕೇಳದಿರುವುದು ಒಳ್ಳೆಯದು. ನನಗೆ ಬಹಳ ಜಿಗುಪ್ಸೆಯಾಗಿದೆ.  ಅಂದಿನ ದಲಿತ ಚಳುವಳಿಯ ಪರಂಪರೆಯ ಮುಂದುವರಿಕೆಯಾಗಿ ಇಂದಿನ ಚಳವಳಿಗಾರರು ನನಗೆ ಕಾಣುತ್ತಿಲ್ಲ.

ಇಂದು ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಲೇ ಇವೆಯಲ್ಲಾ?

-ಸಹಜ ಅದು. ನವ ಆರ್ಥಿಕತೆಯ ಕ್ರೌರ್ಯ ವ್ಯಕ್ತಗೊಳ್ಳುವುದು ಇಬ್ಬರ ಮೇಲೆ. ಒಂದು ಹೆಣ್ಣು ಮತ್ತೊಂದು ದಲಿತ. ಇಂದು ನವ ಆರ್ಥಿಕತೆ ಮತ್ತು ದಲಿತ ಚಳುವಳಿಯ ನಾಯಕತ್ವ ಕೈ ಕೈ ಹಿಡಿದುಕೊಂಡು ಹೋಗುತ್ತಿದೆ. ದಲಿತರ ಬಿಡುಗಡೆ ಅಥವಾ ದಲಿತರ ನೋವುಗಳಿಗೆ ಸ್ಪಂದಿಸುವ ಕಾರ್ಯ ಅವರ ಅಜೆಂಡಾದಲ್ಲಿ ಇಲ್ಲ. ನೀವು ಕೇಳುವ ಪ್ರಶ್ನೆಯನ್ನೂ ಒಳಗೊಂಡಂತೆ ನನಗೆ ತಕರಾರಿದೆ. ದೌರ್ಜನ್ಯ ಎಂದರೆ ಏನುಅದೇನು ದೈಹಿಕ ಹಿಂಸೆಯೋಮಾನಸಿಕ ಹಿಂದೆಯೋಇಂದು ಆನಂದ್ ತೇಲ್ತುಂಬ್ಡೆಕಾಂಚಾ ಐಲಯ್ಯರಣತವರನ್ನೂ ಒಳಗೊಂಡಂತೆ ಅವರು ದಲಿತ ವಿಷಯವನ್ನು ನೋಡುವುದರಲ್ಲಿ ಮಿತಿಗಳಿವೆ. ಎಡಪಂಥೀಯರಿಗೆ ಈ ನೆಲವನ್ನು ನೋಡಲಿಕ್ಕೇ ಬರುವುದಿಲ್ಲ. ಮಾರ್ಕ್ಸ್‌ವಾದಿ ದೃಷಿಕೋನದಲ್ಲಿರುವ ಬೌದ್ಧಿಕ ದಾರಿದ್ರ್ಯವನ್ನು ನೀಗಿಕೊಂಡಿದ್ದರೆ ಇಂದಿನ ಈ ಬಿಕ್ಕಟ್ಟು ಇರುತ್ತಿರಲಿಲ್ಲ. ತಳಹದಿಮೇಲ್‌ರಚನೆ ಎನ್ನುವುದನ್ನು ಇಂಡಿಯಾ ದೇಶಕ್ಕೆ ಅನ್ವಯಿಸಲಿಕ್ಕೆ ಆಗುವುದೇ ಇಲ್ಲ. ಅವರು ತಮ್ಮ ಪಾತ್ರವನ್ನು ಅರಿಯಾಗಿ ನಿರ್ವಹಿಸದ್ದರೆ ಇಷ್ಟೆಲ್ಲಾ ಯಾಕಿರುತ್ತಿತ್ತು?

ನಾಡಿನ ಸಮಕಾಲೀನ ಸಾಂಸ್ಕೃತಿಕ ಲೋಕಕ್ಕೆ ನೀವು ನಡೆಸುತ್ತಿರುವ ಆದಿಮದ ಕೊಡುಗೆ ಏನು?


ಆದಿಮವನ್ನು ತುಂಬಾ ಆದರ್ಶವಾಗಿ ನೋಡುವ ಅಗತ್ಯ ಇಲ್ಲ. ಅದು ತನ್ನ ಅತ್ಯಂತ ಕಡಿಮೆ ಮಿತಿಯಲ್ಲೇ ನಮ್ಮ ನೆಲಪಠ್ಯಗಳನ್ನು ಆದರಿಸಿದರೆ ಒಂದು ತಿಳಿವಳಿಕೆ ಹೇಗೆ ವಿಸ್ತರಿಸಬಹುದು ಮತ್ತು ಅದೇ ಒಂದು ನಡೆಗೆ ಕಾರಣವಾಗಬಹುದಾ ಎಂಬ ಪ್ರಯೋಗದಲ್ಲಿದೆ. ಆ ಪ್ರಯೋಗ ಪರಿಪೂರ್ಣವಾಗಿ ಕೈಗೆ ಸಿಗುತ್ತದೆಯೋ ಇಲ್ಲವೋ ಎಂದು ಗೊತ್ತಿಲ್ಲ. ಆದರೆ ಈಗಿರುವಂತಹ ಎಲ್ಲ ಸಾಂಸ್ಕೃತಿಕ ನೆಲೆಗಟ್ಟುಗಳಿಗಿಂತಲೂಇಲ್ಲಿ ಸ್ಥಾಪಿತವಾಗಿರುವ ಬೆಂಚ್ ಮಾರ್ಕ್‌ಗಳೇನಿವೆ- ಎನ್‌ಎಸ್‌ಡಿನೀನಾಸಂಇತ್ಯಾದಿಗಳ ಬೌದ್ಧಿಕ ದಾರಿದ್ರ್ಯ ಮತ್ತು ಜನನಿಷ್ಠೆಯಿಲ್ಲದಿರುವ ಹಿಪಾಕ್ರಸಿಗೆ ಬದಲಾಗಿ ಸ್ವಲ್ಪವಾದರೂ ಜೀವಂತ ನೆಲಪಠ್ಯಗಳೆಡೆ ಕಣ್ಣಾಡಿಸುವ ಪ್ರಯೋಗ ಇದು. ಮುಂದಿನ ದಿನಗಳಲ್ಲಿ ಅದನ್ನು ಬೇಕಾದಂತವರು ಬೇಕಾದ ರೀತಿಯಲ್ಲಿ ನೋಡಬಹುದು. ಅದು ಒಂದು ಮುಕ್ತವಾದಂತಹ ಜಾಗ. ಯಾರು ಬೇಕಾದರೂ ಇಲ್ಲಿ ಪ್ರಯೋಗ ನಡೆಸಬಹುದು.


ಪತ್ರಕರ್ತರಾಗಿ ಹಲವಾರು ವರ್ಷ ಕೆಲಸ ಮಾಡಿದ್ದೀರಿ. ಅಂದಿನ ಪತ್ರಿಕೋದ್ಯಮಕ್ಕೂ ಇಂದಿನ ಪತ್ರಿಕೋದ್ಯಮಕ್ಕೂ ತುಲನೆ ಮಾಡಿದಾಗ ಏನೆನ್ನಿಸುತ್ತದೆ?
ಇಂದು ಮುದ್ರಣ ಮಾಧ್ಯಮವಿದ್ಯುನ್ಮಾನ ಮಾಧ್ಯಮ ಎರಡೂ ಆರ್ಥಿಕ ಹಿತಾಸಕ್ತಿಗಳ ನಿರ್ದೇಶನದಲ್ಲಿರುವುದರಿಂದ ಅದರ ಎಲ್ಲ ಮೌಲ್ಯಗಳ ನೆಲೆಗಟ್ಟೂ ನಾಶವಾಗಿ ಹೋಗಿದೆ. ಹೀಗಾಗಿ ಮಾರುಕಟ್ಟೆಗೆ ಪೂರಕವಾದ ಸಂವಹನವನ್ನು ಮಾತ್ರ ನೆಲೆಗೊಳಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಇಂದು ಮಾಧ್ಯಮದ ಒಟ್ಟಾರೆ ಹಿತಾಸಕ್ತಿ ಜನಪರವಾದದ್ದಾಗಿಲ್ಲ. ಅದೇನಿದ್ದರೂ ವ್ಯಾಪಾರಿಬಂಡವಾಳಿಗರ ಹಾಗೂ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಪೂರಕವಾಗಿ ಜನರ ಮನಸ್ಸುಗಳನ್ನು ಸಂವಹನಕ್ಕೆ ಸಿದ್ಧಪಡಿಸುತ್ತಿವೆ. ಇಂತಹ ದಲ್ಲಾಳಿ ಕೆಲಸಕ್ಕೆ ಪತ್ರಿಕೋದ್ಯಮ ಎಂದು ಕರೆಯಬೇಕಾದ ಅಗತ್ಯ ಇಲ್ಲ. ಇವರು ಹೊಸ ಆರ್ಥಿಕತೆಯ ಮಧ್ಯವರ್ತಿಗಳಾಗಿದ್ದಾರೆ. ಮನುಷ್ಯನ ಮನಸ್ಸು ಮತ್ತು  ಪಂಚೇಂದ್ರಿಯಗಳನ್ನು ಅದಕ್ಕೆ ಪೂರಕವಾಗಿ ಮಾರ್ಪಡಿಸುತ್ತಿದ್ದಾರೆ. ಮಾರುಕಟ್ಟೆ ವಿಸ್ತರಣೆಗೆ ಪೂರಕವಾಗಿ ಜನರ ಮನಸ್ಸನ್ನು ಸಿದ್ಧಗೊಳಿಸುವುದು ಇಂದಿನ ಮಾಧ್ಯಮಗಳ ಉದ್ದೇಶ ಗುರಿಯಾಗಿದೆ. ಇಂದು ಸ್ಪರ್ಧೆ ಯಾವ ಮಟ್ಟಿಗೆ ಎಂದರೆ ಮುಂಬರುವ ಕೆಲವೇ ವರ್ಷಗಳಲ್ಲಿ ಇವರ ಎಲ್ಲ ತಳಹದಿಗಳೂ ನಿರ್ನಾಮವಾಗುವುದು ಖಚಿತ.  ಜನರ ಹಿತಾಸಕ್ತಿಯಾಗಲಿಜನರ ಸಾವು ಬದುಕಿನ ಹೋರಾಟಗಳಾಗಲೀಜನರ ಗುರುತುಗಳು ಅಳಿಸಿ ಹೋಗುತ್ತಿರುವುದಾಗಲೀ ಇವುಗಳಾವುದೂ ಮಾಧ್ಯಮಗಳಿಗೆ ಸುದ್ದಿಗಳಾಗಿ ಕಾಣಿಸುತ್ತಿಲ್ಲ. ಮಾರುಕಟ್ಟೆ ವಿಸ್ತರಣೆ ಏನಾದರೂ ಪ್ರೇರಣೆ ಇದ್ದರೆ ಮಾತ್ರ ಅದನ್ನು ಸುದ್ದಿಯಾಗಿ ಪರಿಗಣಿಸುತ್ತದೆ. ನಾವು ಪತ್ತಿಕೋದ್ಯಮದಲ್ಲಿ ಕೆಲಸ ಮಾಡುವಾಗ ಅದು ಒಂದು ಆದರ್ಶವಾಗಿತ್ತು. ಲಂಕೇಶ್ ಪತ್ರಿಕೆಸುದ್ದಿ ಸಂಗಾತಿಮುಂಗಾರು ಇವೆಲ್ಲವೂ ನಮಗೆ ಒಂದು ಆದರ್ಶವಾಗಿದ್ದವು. ಜೊತೆಗೆ ನಮ್ಮ ಸ್ಫೂರ್ತಿ ಎಲ್ಲವೂ ಅಂದಿನ ಚಾರಿತ್ರಿಕ ಹೋರಾಟಗಳಲ್ಲಿತ್ತು. ಆ ಕಾರಣಕ್ಕಾಗಿ ನಮ್ಮ ಹಿಂದೆ ಒಂದು ದೊಡ್ಡ ಭಿತ್ತಿ ಇತ್ತು. ಹೀಗಾಗಿ ಪತ್ರಿಕೋದ್ಯಮವೆ ಒಂದು ಪ್ರವಾಹದ ವಿರುದ್ಧದ ಈಜಾಗಿ ನಮಗೆ ಒಂದು ಚೈತನ್ಯ ನೀಡುತ್ತಿತ್ತು. ಇಂದು ಜನಪರ ಪತ್ರಿಕೋದ್ಯಮ ಎನ್ನುವುದೇ ಇಲ್ಲ. ಸಂವಹನ ಎಂಬುದೇ ಇಲ್ಲ. ಈ ನೆಲಕ್ಕೆ ಅನ್ಯ ಎಂದು ಯಾವುದನ್ನೆಲ್ಲಾ ಕರೆಯಬಹುದೋ ಆ ಅನ್ಯ ಪ್ರೇರಣೆಗಳನ್ನು ಗರ್ಭದಲ್ಲಿರುವ ಶಿಶುವಿನ ಮನಸ್ಸಿನೊಳಗೂ ಹೋಗುವ ರೀತಿಯಲ್ಲಿ ಗುರಿಪಡಿಸಿಕೊಂಡಿದೆ. ಎಲ್ಲೋ ಕೆಲವು ಪತ್ರಕರ್ತರನ್ನು ಇದರಿಂದ ಹೊರಗಿಡಬಹುದಾದರೂ ಒಟ್ಟಾರೆ ಪತ್ರಿಕೋದ್ಯಮದ ಇಂಗಿತ ಹೀಗಿದೆ ಎಂದು ನನ್ನ ಅಭಿಪ್ರಾಯ.

ಚಳವಳಿಗಳು ಕ್ಷೀಣವಾಗಿರುವ ಇಂದಿನ ಸಾಮಾಜಿಕ ಸಂದರ್ಭ ತೀರಾ ನಿರಾಶದಾಯಕವಾಗಿದೆಯಲ್ಲಾ?
ನಮ್ಮ ಹಿಂದಿನ ಗುರುತುಗಳು ಅಳಿಸಿ ಹೋಗುತ್ತಿರುವ ವೇಗ ಅದೆಷ್ಟು ಭಯಾನಕವಾಗಿದೆ ಎಂದರೆ ಈ ಕ್ಷಣದ ಇರವು ಇನ್ನೊಂದು ಕ್ಷಣದ ನೆನಪು ಮಾತ್ರ ಆಗಿರಲು ಸಾಧ್ಯವಿದೆ. ನೆಲಗುರುತುಗಳು ಅಷ್ಟು ಕ್ಷಿಪ್ರಗತಿಯಲ್ಲಿ ಅಳಿಸಿ ಹೋಗುವಂತಹ ಕಾಲಘಟ್ಟದಲ್ಲಿ ಮುಂದಿನ ಭವಿಷ್ಯಕ್ಕೆ ಬೇಕಾದ ನೆಲನಿಷ್ಠ ರಾಜಕಾರಣವನ್ನು ಕಟ್ಟುವುದು ದುಸ್ತರವಾಗಿದೆ. ನಮ್ಮ ಕುರುಹುಗಳು ಮಹತ್ವದ್ದಾಗಿ ಕಾಣಿಸದಿದ್ದಾಗ ಅವು ಬರೀ ಸಂಪನ್ಮೂಲವಾಗಿ ಕಾಣಿಸತೊಡಗುತ್ತವೆ. ಹಾಗಾದಾಗ ಅವನ್ನು ದೋಚಬೇಕುಅದನ್ನು ವ್ಯಾಪಾರೀ ಹಿತಾಸಕ್ತಿಗೆ ಕೊಡಬೇಕುಅದರ ಮೂಲಕ ಲಾಭದ ಆರ್ಥಿಕತೆಯನ್ನು ಸೃಷ್ಟಿಸಬೇಕು ಎನ್ನುವುದನ್ನು ವಸಾಹತುಶಾಹಿ ಆಳ್ವಿಕೆ ನಮಗೆ ಹೇಳಿಕೊಟ್ಟಿದೆ. ನಮ್ಮೆಲ್ಲಾ ಜ್ಞಾನಶಿಸ್ತುಗಳು ಕೈಗಾರಿಕಾ ಕ್ರಾಂತಿಯಿಂದಾದವು. ದರೋಡೆಗಳ ಫಲವೇ ಕೈಗಾರಿಕಾ ಕ್ರಾಂತಿ. ಪ್ರಪಂಚದ ಸಂಪನ್ಮೂಲಗಳ ದರೋಡೆಗೆ ನಾವು ಆ ಹೆಸರಿಟ್ಟಿದ್ದೆವಷ್ಟೆ. ನಾವು ಅದನ್ನು ಪ್ರಶ್ನೆಯನ್ನೇ ಹಾಕದೇ ಅದನ್ನು ಸಾರಾಸಗಟಾಗಿ ಒಪ್ಪೊಕೊಂಡು ಅದರ ಆಧಾರದ ಮೇಲೆ ನಮ್ಮ ಪ್ರಜ್ಞೆಯನ್ನು ರೂಪಿಸಿಕೊಂಡಿದ್ದೇವೆ. ಇಂತಹ ರೂಪಿತ ಪ್ರಜ್ಞೆಯಲ್ಲಿ ನೆಲದ ಸತ್ಯ ಗೋಚರಿಸುವುದಿಲ್ಲ. ಹೀಗಾಗಿ ನಮ್ಮ ಆಲೋಚನೆಗಳ ಚೌಕಟ್ಟಿನಲ್ಲೇ ಲೋಪವಿದೆ. ನಮ್ಮ ಬೌದ್ಧಿಕ ಮಟ್ಟದ ಈ ಬಿಕ್ಕಟ್ಟಿನಿಂದ ಹೊರಬರಬೇಕೆಂದರೆ ನಾವು ಡಿಲರ್ನಿಂಗ್ಅಪವರ್ಗೀಕರಣಕ್ಕೆ ಒಳಗಾಗಬೇಕಾಗುತ್ತದೆ. ಅಥವಾ ಸಂಪೂರ್ಣ ಯೂಟರ್ನ್ ತೆಗೆದುಕೊಳ್ಳಬೇಕಾಗುತ್ತದೆ. ಜಗತ್ತಿನಲ್ಲಿ ಈ ಬಗೆಯ ಪ್ರಕ್ರಿಯೆಗೆ ಒಳಗಾದ ಮಹಾನುಭಾವರಿದ್ದಾರೆ. ಉದಾಹರಣೆಗೆ ಗೂಗಿ ವಾ ಥಿಯಾಂಗೋನಂತವರು ಇಂಗ್ಲಿಷ್ ಬಿಟ್ಟು ಸ್ವಾಹಿಲಿಯಲ್ಲಿ ಬರೆಯಲು ಆರಂಭಿಸಿದ್ದು. ನಾಲಗೆಯನ್ನೇ ಕತ್ತರಿಸಿಕೊಂಡವರಿದ್ದಾರೆ. ಭಾರತದಲ್ಲಿ ಇಂತಹುದು ಯಾಕೆ ಸಾಧ್ಯವಾಗುವುದಿಲ್ಲ ಎಂದರೆ ಭಾರತೀಯ ಚಿಂತನೆಯಲ್ಲೇ ಇಬ್ಬಂತಿತನವಿದೆ. ಅದರ ಚಿಂತನೆ ಒಂದಿರುತ್ತದೆನಡೆ ಇನ್ನೊಂದು ಇರುತ್ತದೆ. ನಡೆಯಲ್ಲಿ ಒಪ್ಪಿಒತವಾದ್ದು ಚಿಂತನೆಯಲ್ಲಿರುವುದಿಲ್ಲ. ಚಿಂತನೆಯಲ್ಲಿ ಒಪ್ಪಿತವಾದದ್ದು ನಡೆಯಲ್ಲಿರುವುದಿಲ್ಲ. ಅದರಿಂದಾಗಿಯೇ ಇಷ್ಟೆಲ್ಲಾ ಎದ್ದು ಕಾಣುವ ಸಾಮಾಜಿಕ ಅಸಮಾನತೆಗಳುಭೇಧಗಳು ಕಣ್ಣಿಗೆ ಕಾಣುತ್ತಿದ್ದರೂ ಸಹ ಅವೆಲ್ಲಾ ಏನೂ ಅಲ್ಲ ಎನ್ನುವ ರೀತಿ ಇರುತ್ತೇವೆ. ಅಂತವು ನಡೆದಾಗ ಒಂದು ಘಟನೆಯ ಮಟ್ಟಿಗೆ ಮಾತ್ರ ನೋಡುತ್ತೇವೆ. ಕ್ರಿಕೆಟ್ ಪಂದ್ಯಕ್ಕೆ ಪ್ರತಿಕ್ರಿಯಿಸುತ್ತೇವಲ್ಲಾ ಹಾಗೆ. ಅಸಹಜವಾದದ್ದನ್ನೂಕೊಳಕಾದದ್ದನ್ನೂ ಸಹಜ ಎನ್ನುವಂತೆ ಒಪ್ಪಿಕೊಂಡುನಮ್ಮ ಪ್ರಜ್ಞೆಗೆ ಒಗ್ಗಿಸಿಕೊಂಡು ಬಿಡುತ್ತಿದ್ದೇವೆ.

ಆದರೆ ಈ ಮಾತನ್ನು ಎಲ್ಲಾ ಕಾಲ ಸಂದರ್ಭಕ್ಕೂ ಅನ್ವಯಿಸಲು ಸಾಧ್ಯವೇ?
ಎಲ್ಲಾ ಸಂದರ್ಭದಲೂ ಹಾಗೆಂದು ಹೇಳಲಾಗಲ್ಲ. ಚರಿತ್ರೆ ಎಂತೆಂತಹ ಸಂದರ್ಭಗಳನ್ನು ಒಳಗೆ ಸೃಷ್ಟಿ ಮಾಡುತ್ತದೆ ಹೇಳಲಾಗಲ್ಲ. ಸಧ್ಯದ ಸ್ಥಿತಿಯಿರುವುದಂತೂ ಹಾಗೆಯೇ. ಇದರೊಳಗೆನೇ ಒಂದು ಸ್ಫೋಟ ಸಂಭವಿಸಬಹುದು.

ನಮ್ಮ ರಾಜಕೀಯ ಆಣೆ ಪ್ರಮಾಣದವರೆಗೆ ಬಂದು ಇಂತಿದೆಯಲ್ಲಾ?
ನನಗೆ ಕರ್ನಾಟಕದ ರಾಜಕೀಯದಷ್ಟು ಇಂದಿನ ಅಧೋಗತಿ ಎಂದೂ ಕಂಡಿಲ್ಲ. ಆ ಮಟ್ಟಿಗಿನ ಅಧಃಪತನವಾಗಿದೆ. ಅದು ಯಾವ ಪಕ್ಷವೇ ಇರಲಿ. ಒಂದೇ ಒಂದು ಕಣದಷ್ಟೂ ನಾಚಿಕೆಮಾನಮರ್ಯಾದೆವಿವೇಕತಿಳಿವಳಿಕೆ,ಈ ನೆಲದ ನೀರು ಕುಡಿದಿದ್ದೇವೆಈ ನೆಲದ ಮಣ್ಣಿನಲ್ಲಿ ಬೆಳೆದಿರುವುದನ್ನು ತಿಂದಿದ್ದೇವೆಈ ಗಾಳಿಯಲ್ಲಿ ಉಸಿರಾಡುತ್ತಿದ್ದೇವೆಅದನ್ನೆಲ್ಲಾ ಶುದ್ದವಾಗಿಡುವುದು ನಮ್ಮ ಕತವ್ಯ ಎಂಬ ಸಾಮಾನ್ಯ ಜ್ಞಾನದ ಲವಲೇಶವೂ ಅವರ ಪ್ರಜ್ಞೆಯಲ್ಲಿ ಇಲ್ಲವೇ ಇಲ್ಲ. ಇಡೀ ಕರ್ನಾಟಕವನ್ನು ಎಷ್ಟು ಬೇಗ ಹರಾಜಿಗೆ ಹಾಕಿದರೆಎಷ್ಟು ಬೇಗ ಮಾರಿಬಿಟ್ಟರೆ ಒಟ್ಟಾರೆಯಾಗಿಅದರ ಮೂಲಕ ಸಿಗುವ ಲಾಭಗಳನ್ನು ತೆಗೆದುಕೊಂಡು ಹೋಗಿ ವೈಯುಕ್ತಿಕ ಬಂಡವಾಳ ಮಾಡಿಕೊಳ್ಳುವುದು ಹೇಗೆ ಎಂದು ಲೆಕ್ಕ ಹಾಕುತ್ತಿರುವ ರಾಜಕಾರಣ ಇದು. ಅತ್ಯಂತ ವಿಕೃತವಾದ ನಾಟಕಗಳು ವೇದಿಕೆ ಮೇಲೆ ನಡೆಯುತ್ತಿವೆ. ಇದು ನಿಜಕ್ಕೂ ಈ ನೆಲದ ಘನತೆಗೆ ಗೌರವ ತರುವಂತಾದ್ದಲ್ಲವೇ ಅಲ್ಲ. ಇನ್ನು ಈ ಮಠಾದೀಶರಿಗಂತೂ ಮಾನಮರ್ಯಾದೆಯೇ ಇಲ್ಲ. ಈ ಮಾತನ್ನು ಹೇಳಲೇಬೇಕಾಗುತ್ತದೆ. ಅವರು ಸಣ್ಣವರಿರಲೀದೊಟ್ಟವರಿರಲೀ ಕಣ್ಣುಕಿವಿ ಎರಡನ್ನೂ ಕಳೆದುಕೊಂಡಿದ್ದಾರೆ. ಒಂದು ಪ್ರಜಾಪ್ರಭುತ್ವಕ್ಕೆ ಸಲಹೆ ಕೊಡಲು ಇವರ‍್ಯಾರ್ರೀಇವರೇನು ಪ್ರಜಾಪ್ರಭುತ್ವಕ್ಕಿಂತ ದೊಡ್ಡವರಾಇದೇನು ರಾಜಪ್ರಭುತ್ವವಾಇವರೇರು ರಾಜಪುರೋಹಿತರಾನಾವೇನು ಧರ್ಮ ಪ್ರಭುತ್ವ ಒಪ್ಪಿಕೊಂಡಿದ್ದೇವಾಇವರು ಮಠಗಳನ್ನು ಕಟ್ಟಿಕೊಂಡಿರಬೇಕಷ್ಟೆ. ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲಿಕ್ಕೆ ಇವರಿಗೇನು ಹಕ್ಕಿದೆಇದೆಲ್ಲಾ ಪ್ರಜಾಪ್ರಭುತ್ವಕ್ಕೇ ಮಾಡುವ ಅಪಮಾನ. ಒಂದು ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡಲು ಇವರ‍್ಯಾರುಓಟು ಹಾಕಿದವನು ಸರ್ಟಿಫಿಕೇಟ್ ಕೊಡಬೇಕು. ಅದನ್ನು ಬಿಟ್ಟು ನೀವೇ ಒಂದು ಸರ್ಕಾರವನ್ನು ಪುರಸ್ಕರಿಸಲು ನೀವು ಯಾರುಎಂಬ ಪ್ರಶ್ನೆಯನ್ನು ಕೇಳಬೇಕು. ಅದನ್ನು ಕೇಳಿದರೆ ಜಾತಿಗಳು ಎದ್ದು ನಿಲ್ಲುತ್ತವೆ. ನಮ್ಮ ಜಾತಿ ಮಠಕ್ಕೆ ಯಾಕೆ ಕೇಳಿದ್ರಿ ಅಂತ. ಒಂದು ಜಾತಿಗೆ ಒಂದು ಮಠ ಸೀಮಿತವಾಗಿಯೆಂದಾದರೆ ಇನ್ನೇನು?

ರಾಜ್ಯದಲ್ಲಿ ಇಂಗ್ಲಿಷ್ ಶಾಲೆಗಳನ್ನು ತೆರೆಯಬೇಕು ಎಂದು ಸರ್ಕಾರ ತೀರ್ಮಾನ ಕೈಗೊಂಡಿದೆ. ಇದು ಶಿಕ್ಷಣ ಮತ್ತು ಭಾಷೆಯ ಮೇಲೆ ಯಾವ ಪರಿಣಾಮ ಬೀರಬಲ್ಲದು?
ಇಂದು ಶಿಕ್ಷಣ ಎನ್ನುವುದು ದೊಡ್ಡ ಅನೈತಿಕ ದಂದೆಯಾಗಿದೆ. ಅದು ಪೂರ್ತಿ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಪೂರಕವಾಗಿಖಾಸಗಿ ವಲಯಗಳನ್ನು ಭದ್ರ ಮಾಡಲು ಬಳಕೆಯಾಗಿದೆ. ಇಂದು ಇಂಗ್ಲಿಷ್ ಶಾಲೆಗಳನ್ನು ಆರಂಭಿಸುವುದರ ಪರಿಣಾಮವೆನೆಂದರೆ ಸರ್ಕಾರಿ ಶಾಲೆಯಲ್ಲಿ ನಾಲ್ಕಕ್ಷರ ಕಲಿಯುವ ಅವಕಾಶ ಕೂಡಾ ಕೈತಪ್ಪಿ ಹೋಗುತ್ತದೆ. ಇಂದು ಪ್ರಾಥಮಿಕ ಶಿಕ್ಷಣ ನೀಡುವ ಕರ್ತವ್ಯದಿಂದ ನುಣುಚಿಕೊಳ್ಳಲು ಏನು ಬೇಕೋ ಅದನ್ನು ಸರ್ಕಾರ ಮಾಡುತ್ತಿದೆ. ಇಂದು ಶಾಲೆಗಳನ್ನು ಮುಚ್ಚುತ್ತಿರುವ ವೇಗ ಹಾಗೂ ಅಲ್ಲಿನ ಗುಣಮಟ್ಟ ನೋಡಿದರೆ ಅರ್ಥವಾಗುತ್ತದೆ. ಅಲ್ಲೆಲ್ಲಾ ಬಡವರ ಮಕ್ಕಳೇ ಇರುವುದು. ಅದರಲ್ಲಿ ದಲಿತರ ಸಂಖ್ಯೆ ಜಾಸ್ತಿ ಇರುತ್ತದೆ. ಕನ್ನಡದಲ್ಲೂ ಕಲಿಯುವ ಅವಕಾಶದಿಂದ ವಂಚಿಸಿದಾಗ ಅನಿವಾರ್ಯವಾಗಿ ದುಡ್ಡುಕೊಟ್ಟೇ ಶಿಕ್ಷಣ ಪಡೆಯಬೇಕು. ಯಾರಿಂದ ಸಾಧ್ಯ ಇದುಪ್ರಾಥಮಿಕ ಶಾಲೆಯ ನೀತಿಗಳನ್ನು ಮಾಡಲು ವಿಪ್ರೋಗೆ ಬಿಟ್ಟಿದ್ದಾರೆ. ಸರ್ಕಾರ ತಲುಪಿರುವ ಮಟ್ಟ ಇದು.

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.