ಮಾರ್ಚ್ 31, 2012

ಸರ್ಕಾರಿ ವಿಜ್ಞಾನ ಕಾಲೇಜಿನ ಯಶೋಗಾಥೆ



'ಮನಸ್ಸಿದ್ದರೆ ಮಾರ್ಗ’ ಎಂಬ ಹಳೆಯ ನಾಣ್ಣುಡಿಗೆ ನಾಡಿನ ಶಿಕ್ಷಣ ಕ್ಷೇತ್ರದಲ್ಲಿ ಸಿಗುವ ಇತ್ತೀಚಿನ ಉದಾಹರಣೆ ಎಂದರೆ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜು.  ಈ  ಕಾಲೇಜು  ಹತ್ತು ವರ್ಷಗಳಲ್ಲಿ  ಹೇಗೆ ಬದಲಾವಣೆ ಸಾಧಿಸಿತು ಎಂಬುದರ    ವರದಿ . ದ ಸಂಡೆ ಇಂಡಿಯನ್ ಪತ್ರಿಕೆ ಗಾಗಿ . .  



   ಖಾಸಗೀಕರಣದ ಈ ಯುಗದಲ್ಲಿ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಎನ್ನುವುದು ಬಡ -ಮಧ್ಯಮ ಹಿನ್ನೆಲೆಯ ವಿದಾರ್ಥಿಗಳ ಪಾಲಿಗೆ ಗಗನ ಕುಸುಮವೇ ಆಗಿರುವಾಗ, ಯೂನಿವರ್ಸಿಟಿಗಳು ತಮ್ಮನ್ನುಳಿಸಿಕೊಳ್ಳಲು ಪರದಾಡುತ್ತಿರುವ ಈ ದಿನಗಳಲ್ಲೂ ಒಂದಷ್ಟು ಮಂದಿ ಪ್ರಾಧ್ಯಾಪಕರು ವಿಭಿನ್ನವಾಗಿ ಚಿಂತಿಸಿ, ಶ್ರದ್ಧೆಯಿಂದ ದುಡಿದರೆ ಅದ್ಭುತವನ್ನೇ ಸಾಧಿಸಬಹುದು ಎಂಬುದಕ್ಕೆ ಜೀವಂತ ಉದಾಹರಣೆ ಎಂದರೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜು. 91 ವರ್ಷಗಳ ಇತಿಹಾಸ ಇರುವ ಈ ಕಾಲೇಜು ಹಿಂದೆ ಗ್ಯಾಸ್ ಕಾಲೇಜಿನ (ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು) ಭಾಗವಾಗಿದ್ದು 1972ರಲ್ಲಿ ಕೇವಲ ವಿಜ್ಞಾನ ಕಾಲೇಜಾಗಿ ಪ್ರತ್ಯೇಕಗೊಂಡಿತ್ತು.  1997- 1998ರ ವರೆಗೂ ರಾಜ್ಯದ ಎಲ್ಲಾ ಸರ್ಕಾರಿ ಕಾಲೇಜುಗಳ ರೀತಿಯಲ್ಲಿಯೇ ಇದೂ ಕೂಡಾ ಕ್ಷಯ ರೋಗ ಬಡಿದ ಕೃಶವಾದ ರೋಗಿಯಂತೆಯೇ ಇತ್ತು. ಒಂದಿದ್ದರೆ ಮತ್ತೊಂದಿರಲಿಲ್ಲ. ವಿಜ್ಞಾನದ ಪ್ರಯೋಗಾಲಯಗಳು ಪುರಾತನ ಕಾಲದ ವಸ್ತು ಸಂಗ್ರಹಾಲಯಗಳೇ ಆಗಿದ್ದ ಪರಿಸ್ಥಿತಿ ಅದು. ಶೌಚಾಲಯ ವ್ಯವಸ್ಥೆಯೂ ಇಲ್ಲದೇ ನಾರುವಂತಿತ್ತು ಕಾಲೇಜು.
ಆದರೆ ಅಂದಿನಿಂದ ಇಂದಿನವರೆಗಿನ ಹತ್ತು ಹನ್ನೆರಡು ವರ್ಷಗಳಲ್ಲಿ ಈ ಕಾಲೇಜಿನಲ್ಲಾದ ಬದಲಾವಣೆ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.  ಇಚ್ಛಾಶಕ್ತಿಯೊಂದಿದ್ದರೆ ಯಾವುದೂ ಅಸಾಧ್ಯ ಅಲ್ಲವೆನ್ನುವುದು ಇಲ್ಲಿ ವೇದ್ಯವಾಗುತ್ತದೆ. ಅಂದು ಕಾಲೇಜಿಗೆ ಜೈವಿಕ ತಂತ್ರಜ್ಞಾನದ ವೃತ್ತಿಪರ ಕೋರ್ಸೊಂದನ್ನು ಮಂಜೂರು ಮಾಡಿಸಿಕೊಳ್ಳಬೇಕೆಂಬ ಇಂಗಿತದೊಂದಿಗೆ ಪ್ರಯತ್ನಶೀಲರಾಗಿದ್ದವರು ಪ್ರೊ. ಹರಿಶ್ಚಂದ್ರ ಭಟ್, ಶ್ರೀಮತಿ ಕೆ.ಎಂ ಶಾರುರಾಜ್, ರಾಮಕೃಷ್ಣಯ್ಯ ಮುಂತಾದವರು. ಆಗ ಪ್ರಯತ್ನ ಕೈಗೂಡಿತ್ತಲ್ಲದೇ ಇಡೀ ಕಾಲೇಜಿನ ಅಮೂಲಾಗ್ರ ಬದಲಾವಣೆಗೆ ಇಟ್ಟ ಮೊದಲ ಹೆಜ್ಜೆ ಅದಾಗಿತ್ತು.  ನಂತರ ಸರ್ಕಾರಿ ಪದವಿ ಕಾಲೇಜಿನ ಇತಿಹಾಸದಲ್ಲೇ ಮೊದಲ ಬಾರಿಗೆ ಇಲ್ಲೊಂದು ಕ್ಯಾಂಪಸ್ ಸೆಲೆಕ್ಷನ್ನಡೆದು ಮೊದಲ ಬ್ಯಾಚ್‌ನ ಎಲ್ಲಾ ವಿದ್ಯಾರ್ಥಿಗಳಿಗೂ ಕೆಲಸ ಖಾಯಂ ಆಗುವುದರೊಂದಿಗೆ ಕಾಲೇಜಿನ ಹಿರಿಮೆ ಹೆಚ್ಚಿತ್ತು.
ನಂತರ ಸರ್ಕಾರಿ ವಿಜ್ಞಾನ ಕಾಲೇಜಿನ ಅಭಿವೃದ್ಧಿಯ ಮತ್ತೊಂದು ಪರ್ವ ಆರಂಭಗೊಂಡಿದ್ದು ೨೦೦೪ರಲ್ಲಿ. ಈ ಕಾಲೇಜಿನಲ್ಲಿ ಹಿಂದೆ ಓದಿರುವ ಹಳೆಯ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಅವರಲ್ಲಿ ಕೆಲವರು ವಿಶೇಷ ಆಸ್ಥೆ ವಹಿಸುವುದರೊಂದಿಗೆ ಕಾಲೇಜಿನ ಅಭಿವೃದ್ಧಿ ಹೊಸ ಹಂತ ತಲುಪಿತು. ಅದರಲ್ಲೂ ಇನ್ಫೋಸಿಸ್‌ನ ಸ್ಥಾಪಕ ಸದಸ್ಯರಲ್ಲೊಬ್ಬರಾದ ಕೆ. ದಿನೇಶ್ ಹಾಗೂ ಎಚ್.ಎಂ.ಟಿಯ ಮ್ಯಾನೇಜರ್ ಆಗಿರುವ ಎನ್. ಡಿ. ವೀರಣ್ಣಗೌಡ, ಅರಣ್ಯ ಸಹಾಯಕ ಸಂರಕ್ಷಕರಾಗಿದ್ದ ಸಿ. ಎಲ್. ಗೌಡ, ಡಾ. ಜೆ. ಆರ್. ವಿಶ್ವನಾಥ್, ಎಚ್. ಶರತ್‌ಚಂದ್ರ, ಮುಂತಾದವರು ತಾವು ಓದಿದ್ದ ಈ ಕಾಲೇಜಿನ ಅಭಿವೃದ್ಧಿಗೆ ಟೊಂಕ ಕಟ್ಟಿನಿಂತು ಯಾವ ಪ್ರಸಿದ್ಧಿ, ಪ್ರತಿಫಲಗಳ ಅಪೇಕ್ಷೆಯಿಲ್ಲದೆ ಶ್ರಮವಹಿಸಿ ದುಡಿದರು.
ಹಾಗೆ ನೋಡಿದರೆ ಈ ಬಗೆಯಲ್ಲಿ ಹೋರಗಿನಿಂದ ಸಹಕಾರ ನೀಡಲು ಎಲ್ಲಾ ಕಡೆಯೂ ಎಲ್ಲಾ ಕಾಲದಲ್ಲೂ ಜನರಿದ್ದೇ ಇರುತ್ತಾರೆ. ಆದರೆ ಎಷ್ಟೋ ಕಾಲೇಜುಗಳಲ್ಲಿ ಒಂದು ವಿಭಾಗ ಪ್ರಾಧ್ಯಾಪಕರಿಗೂ ಮತ್ತೊಂದು ವಿಭಾಗದವರಿಗೂ ಎಣ್ಣೆ ಸೀಗೇಕಾಯಿ ಸಂಬಂಧ.  ಒಂದೇ ವಿಭಾಗದಲ್ಲೇ ಒಬ್ಬರ ಮುಖ ಮತ್ತೊಬ್ಬರ ನೋಡದ ಸ್ಥಿತಿ. ಇನ್ನು ಪ್ರಿನ್ಸಿಪಾಲರಿಗೂ ಪ್ರಾಧ್ಯಾಪಕರಿಗೂ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯುವ ರೀತಿಯಿರುತ್ತದೆ. ಇಂತವರ ನಡುವೆ ವಿದ್ಯಾರ್ಥಿಗಳೆಂಬುವವರ ಪಾಡು ನಾಯಿಪಾಡಾಗಿರುತ್ತದೆ. ಆದರೆ ಸರ್ಕಾರಿ ವಿಜ್ಞಾನ ಕಾಲೇಜು ತೀರಾ ವಿಭಿನ್ನವಾಗಿ ಕಾಣುವುದು ಈ ವಿಚಾರದಲ್ಲಿಯೇ. ಇದೇ ಕಾಲೇಜಿನ ಸಾಧನೆಯ ಹಿಂದಿನ ರಹಸ್ಯವೂ ಹೌದು!
ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ಚಾಲನೆ ದೊರೆತು ಹಲವಾರು ಜನರು ಕಾಲೇಜಿನ ಏಳಿಗೆಗಾಗಿ ಮುಂದೆ ಬರುತ್ತಿದ್ದಂತೆಯೇ ಕಾಲೇಜಿನ ಅಧ್ಯಾಪಕರೂ ಚುರುಕುಗೊಂಡು ತುಸು ಹೆಚ್ಚಿನ ಸ್ಪೂರ್ತಿಯಿಂದಲೇ ಕೆಲಸ ನಿರ್ವಹಿಸಿದ್ದಾರೆ. ನಾನಾ ಕೆಲಸಗಳಿಗೆ ಕೊಟ್ಯಂತರ ರೂಪಾಯಿಗಳ ಹಣ ಬರುತ್ತಿದ್ದಂತೆಯೇ ಅದರ ಸದ್ವಿನಿಯೋಗಕ್ಕಾಗಿ ಒಂದು ಆಂತರಿಕ ಗುಣಮಟ್ಟ ಖಾತ್ರಿ ಕೋಶವೊಂದು ರಚನೆಯಾಯಿತು. ಪ್ರಿನ್ಸಿಪಾಲರೂ ಅಷ್ಟೇ ಪಾತ್ರವಹಿಸಿದ್ದಾರೆ. ಆರ್. ಲಕ್ಷ್ಮಿನಾರಾಯಣರಿಂದ ಈ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ಆರಂಭವಾಗಿತ್ತೆನ್ನಬಹುದು. ನಂತರದಲ್ಲಿ ಅಧಿಕಾರ ವಹಿಸಿಕೊಂಡ ದಿ. ದೊಡ್ಡಯ್ಯ ನಿರ್ಣಾಯಕ ಪಾತ್ರವಹಿಸಿದೆರೆನ್ನಬಹುದು. ಸರಿಯಾದ ಜನರಿಗೆ ಸರಿಯಾದ ಕೆಲಸ ವಹಿಸುತ್ತಿದ್ದ ಅವರ ಕಾರ್ಯತತ್ಪರತೆ ಕಾಲೇಜಿನ ಏಳಿಗೆಗೆ ಬಹಳಷ್ಟು ಕೊಡುಗೆ ನೀಡಿದೆ. ಸಮಿತಿಯ ಸಂಯೋಜಕರಾಗಿದ್ದ ಕೆ. ವೈ. ನಾರಾಯಣಸ್ವಾಮಿ, ಎನ್. ರಮೇಶ್ ರೆಡ್ಡಿ, ಕೆ. ಆರ್. ಕವಿತಾ, ರಾಮಕೃಷ್ಣ ರೆಡ್ಡಿ, ಸುಮಿತ್ರ, ಜಿಲಾನಿ, ಜಿಷಾ, ರಾಮಣ್ಣ, ಮುಂತಾದ ಹಲವಾರು ಪ್ರಾಧ್ಯಾಪಕರು ಶ್ರಮವಹಿಸಿ ದುಡಿದರು. ಪ್ರತಿಯೊಂದು ಖರ್ಚು ವೆಚ್ಚದಲ್ಲಿ ಗರಿಷ್ಠ ಪಾರದರ್ಶಕತೆಯನ್ನು ಕಾಪಾಡಿಕೊಂಡಿದ್ದಲ್ಲದೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವ ಬದಲು ಚರ್ಚೆ ನಡೆಸಿ ಅಗತ್ಯವಿದ್ದ ಕೆಲಸಗಳಿಗೆ ಹಣವನ್ನು ಬಳಸಿಕೊಂಡು ಬರಲಾಗಿದೆ. ಈ ಸಂದರ್ಭದಲ್ಲಿ ಒಟ್ಟಾರೆ ಅಧ್ಯಾಪಕ ವರ್ಗ ತಳೆದ ಮನೋಭಾವದ ಬಗ್ಗೆ ಟಿಎಸ್‌ಐನೊಂದಿಗೆ ಮಾತನಾಡಿದ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಕೆ. ವೈ. ನಾರಾಯಣಸ್ವಾಮಿ, "ಇಲ್ಲಿ ಅಧ್ಯಾಪಕರುಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಸೈರಿಸಿಕೊಳ್ಳುವ, ಗೌರವಿಸುವ ಮನೋಭಾವವೇ ಇಂತಹ ಒಂದು ಬದಲಾವಣೆ, ಅಭಿವೃದ್ಧಿಗಳಿಗೆ ಕಾರಣವಾಗಿದೆ" ಎನ್ನುತ್ತಾರೆ. 

ಸೌಲಭ್ಯ, ಬೋಧನೆಯ ಗುಣಮಟ್ಟ, ಹಾಗೂ ಫಲಿತಾಂಶದ ದೃಷ್ಟಿಯಿಂದ ಅತ್ಯುತ್ತಮ ಸಾಧನೆ ಈ ಕಾಲೇಜಿನದ್ದು. ಇಡೀ ರಾಜ್ಯದಲ್ಲಿ ಯಾವುದಾದರೂ ಕಾಲೇಜು ಪ್ರಥಮ ಬಾರಿಗೆ ಡಿಜಿಟಲ್ ಗ್ರಂಥಾಲಯವೊಂದನ್ನು ಸ್ಥಾಪಿಸಿದ್ದರೆ ಅದು ಸರ್ಕಾರಿ ವಿಜ್ಞಾನ ಕಾಲೇಜು. ಕಾಲೇಜಿನ ಗ್ರಂಥಾಲಯದಲ್ಲಿ ನಾನಾ ವಿಷಯಗಳಿಗೆ ಸಂಬಂಧಿಸಿದ 67,000ದಷ್ಟು ಪುಸ್ತಕಗಳಿವೆ. ಇ- ಪುಸ್ತಕಗಳ ಸೌಲಭ್ಯವಿದೆ. ಕಾಲೇಜಿನಲ್ಲಿ ಇಂಟರ್‌ನೆಟ್ ಸೌಲಭ್ಯವಿದ್ದು ಲಾನ್ (ಲೋಕಲ್ ಏರಿಯಾ ನೆಟ್‌ವರ್ಕ್) ಜಾಲಕ್ಕೊಳಪಟ್ಟಿದೆ. ಉತ್ತಮ ವಾಚನಾಲಯ ರೂಪುಗೊಂಡಿದೆ. ಪ್ರಯೋಗಾಲಯಗಳಲ್ಲಿ ಅತ್ಯಾಧುನಿಕ ಸಾಧನ ಯಂತ್ರ ಸಲಕರಣೆಗಳನ್ನು ಅಳವಡಿಸಲಾಗಿರುವುದರಿಂದ ಜೈವಿಕ ತಂತ್ರಜ್ಞಾನ, ಜೆನೆಟಿಕ್ಸ್‌ನಂತಹ ವಿಭಾಗಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತೋರಿಸಲು ಸಾಧ್ಯವಾಗುತ್ತಿದೆ. ಹೀಗಾಗಿಯೇ ಬಯೋಸ್ಪೆಕ್ಟ್ರಂಎಂಬ ಸಂಸ್ಥೆ ನಡೆಸಿದ ಅಖಿಲ ಭಾರತ ಮಟ್ಟದ ಸಮೀಕ್ಷೆಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗವು ದೇಶದ ಹತ್ತು ಅತ್ಯತ್ತಮ ಜೈವಿಕ ವಿಜ್ಞಾನ ವಿಭಾಗಗಳಲ್ಲಿ ೮ ನೇ ಸ್ಥಾನ ಪಡೆದ ಹೆಗ್ಗಳಿಕೆಯನ್ನು ಸಾಧಿಸಿದೆ. ಕಾಲೇಜಿನಲ್ಲಿ ಒಟ್ಟು 17 ಸಂಯೋಜನೆಗಳಿವೆ. ವಿಶೇಷವಾಗಿ ದೇಶದ ಕೆಲವೇ ಕಾಲೇಜುಗಳಲ್ಲಿರುವ ಅರ್ಥಶಾಸ್ತ್ರ, ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ (ಇಎಂಎಸ್‌ಟಿ)  ವಿಶೇಷ ಸಂಯೋಜನೆ ಇಲ್ಲಿ ಲಭ್ಯವಿದೆ. ಹಲವಾರು ರಾಂಕ್‌ಗಳೂ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ದಕ್ಕಿವೆ.  2010ರಲ್ಲಿ ಸುಂದರ ದೀಪ್ತಿ ಎಂ.ವಿ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ  ವಿಶ್ವ ವಿದ್ಯಾಲಯ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದನ್ನಿಲ್ಲಿ ಸ್ಮರಿಸಬಹುದು. ಇಲ್ಲಿ ವಿದ್ಯಾಭ್ಯಾಸ ಮಾಡಿದ ಬಹುತೇಕ ವಿದ್ಯಾರ್ಥಿಗಳು ಉತ್ತಮ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಅನೇಕರು ದೇಶ ವಿದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ. 

ಪ್ರಾಧ್ಯಾಪಕರ ಸೃಜನಶೀಲತೆಯ ಪರಿಣಾಮವಾಗಿ ಸುಮ್ಮನೇ ಎಸೆದು ಬಿಡಬಹುದಾಗಿದ್ದ ವಸ್ತುಗಳ ಅತ್ಯುತ್ತಮ ಬಳಕೆ ಇಲ್ಲಿ ಆಗಿದೆ. ಉದಾಹರಣೆಗೆ ಲೈಬ್ರರಿ ಕ್ಯಾಬಿನ್‌ನ ಬೋರ್ಡುಗಳು ಇಲ್ಲಿ ಕ್ಯಾಂಟೀನ್‌ನಲ್ಲಿ ವಿಶೇಷ ಕೊಠಡಿಯಾಗಿವೆ, ಕಾಲೇಜಿನ ಗುರಿ- ದರ್ಶನಗಳ ಹೇಳಿಕೆಯನ್ನು ಬರೆಸಲು ಉಪಯೋಗಿಸದೇ ಬಿದ್ದಿದ್ದ ಹಳೆಯ ತೇಗದ ಕಪ್ಪು ಹಲಗೆಗಳಿಗೇ ಹೊಸ ರೂಪ ನೀಡಿ ಬಳಸಿಕೊಳ್ಳಲಾಗಿದೆ.  ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಜನರೇಟರ್ ಅಳವಡಿಸಿ ಅದನ್ನು ಸ್ಥಾಪಿಸಲಿಕ್ಕಾಗಿ ಹಿಂದೆ  ಕುಡಿಯುವ ನೀರಿನ ಟ್ಯಾಂಕ್ ಇಟ್ಟಿದ್ದ ಜಾಗವನ್ನೇ ಬಳಸಲಾಗಿದೆ.  ವ್ಯರ್ಥವಾಗಿಟ್ಟಿದ್ದ ಗ್ಯಾಸ್ ಚೇಂಬರ್ ಈಗ ಪವರ್ ಹೌಸ್ ಆಗಿ ಬದಲಾಗಿದೆ. ಹೀಗೆ ಹಣ ಮತ್ತು ಸ್ಥಳದ ಗರಿಷ್ಠ ಬಳಕೆಯಾದದ್ದು ಇಲ್ಲಿನ ಪ್ರಾಧ್ಯಾಪಕರ ಸೃಜನಶೀಲತೆಗೆ ಸಾಕ್ಷಿ.

ರಾಮನ್ ಕ್ಲಬ್, ‘ಸವಿಪತ್ರಿಕೆ, ನಾಟಕ ತರಬೇತಿ, ರಾಮಾನುಜನ್ ಕ್ಲಬ್, ಲೈಫ್ ಸೈನ್ಸ್ ಕ್ಲಬ್, ವಾರದ ಸಮಾವೇಶ, ಚಲನ ಚಿತ್ರ ಅಭಿರುಚಿ ಕೇಂದ್ರ, ಡ್ರೀಮ್ಸ್ ಕ್ಲಬ್, ಎನ್‌ಎಸ್‌ಎಸ್, ಎನ್‌ಸಿಸಿ, ಹೀಗೇ ನಾನಾ ಚಟುವಟಿಕೆಗಳಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳಾದರೂ ಅಷ್ಟೇ ಸ್ಪೂರ್ತಿಯಿಂದ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ಇಲ್ಲಿ ಕಾಣಬಹುದು.

ಇದೆಕ್ಕೆಲ್ಲ ಕಲಶವಿಟ್ಟಂತೆ 2009ರಲ್ಲಿ ಕಾಲೇಜುಗಳ ಗುಣಮಟ್ಟ ಪರಿಶೀಲನೆಗಾಗಿ ಯುಜಿಸಿ ನೇಮಿಸುವ ನ್ಯಾಕ್ ಸಮಿತಿಯು ಸರ್ಕಾರಿ ವಿಜ್ಞಾನ ಕಾಲೇಜಿಗೆ ನೀಡಿದ ಮರು ಮಾನ್ಯತೆಯಲ್ಲಿ ಗ್ರೇಡ್ ನೀಡಿತು. ಅಲ್ಲದೆ ಕಾಲೇಜಿನ ಸಾಧನೆಯನ್ನು ನೋಡಿ ಹರ್ಷಿತಗೊಂಡ ಯುಜಿಸಿಯು ವಿಶೇಷ ಮಾನ್ಯತೆಯೆಂಬಂತೆ ಕಾಲೇಜ್ ವಿತ್ ಪೊಟೆನ್ಷಿಯಲ್ ಫಾರ್ ಎಕ್ಸೆಲೆನ್ಸ್ಪುರಸ್ಕಾರ ನೀಡಿ ಒಂದು ಕೋಟಿ ರೂಪಾಯಿಯ ಅನುದಾನವನ್ನೂ ನೀಡಿತು. ನ್ಯಾಕ್ ಸಮಿತಿ ಕಾಲೇಜಿಗೆ ಭೇಟಿ ನೀಡುವ ಮೂರು ದಿನಗಳಿಗೆ ಮುಂಚಿತವಾಗಿ ಲಘುಬಗೆಯಿಂದ ಕಾಲೇಜಿನ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು, ಮೂರು ದಿನ ಮಾತ್ರ ಶಿಸ್ತಿನಿಂದ ಪಾಠ ಪ್ರವಚನ ನಡೆಸಿ ವರ್ಷವಿಡೀ ತಾವು ಹೀಗೇ ಎಂಬಂತೆ ನಟಿಸುವ ಸ್ಥಿತಿಯಲ್ಲಿ ರಾಜ್ಯದ ಅನೇಕ ಕಾಲೇಜುಗಳ ಶಿಕ್ಷಕವರ್ಗವಿರುವಾಗ ಇಲ್ಲೊಂದು ಸರ್ಕಾರಿ ಕಾಲೇಜು ನಿಜವಾದ ಅರ್ಥದಲ್ಲಿ ಗುಣಮಟ್ಟವನ್ನು ಸಾಧಿಸಿರುವ ಕಾರಣಗಳನ್ನು ಎಲ್ಲರೂ ಅರಿತು ಅದರಂತೆ ನಡೆದರೆ ಖಂಡಿತಾ ಒಳಿತಾಗಬಹುದು.

ಕಾಲೇಜ್  ಕ್ಯಾಂಟೀನ್- ಅಧ್ಯಾಪಕರಿಂದ ಬಡ ವಿದ್ಯಾರ್ಥಿಗಳಿಗಾಗಿ

ಸ್ಲಂಗಳಿಂದ, ತೀರಾ ಬಡತನದ ಹಿನ್ನೆಲೆಯಿಂದ ಬಂದು ಕಾಲೇಜು ಸೇರುವ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರತಿದಿನದ ಊಟದ ಖರ್ಚು ಭರಿಸುತ್ತಿರುವುದು ಇಲ್ಲಿನ ಪ್ರಾಧ್ಯಾಪಕರೇ. ತಾವು ಪಡೆಯುವ ವೇತನದಲ್ಲಿ ಅಧ್ಯಾಪಕರು ಪ್ರತಿತಿಂಗಳೂ ತಲಾ 500 ರೂಪಾಯಿಗಳನ್ನು ನೀಡಿ ಸುಮಾರು ೧೫೦ ಬಡ ವಿದ್ಯಾರ್ಥಿಗಳಿಗೆ ವರ್ಷವಿಡೀ ಉಚಿತ ಊಟ, ಉಪಹಾರ ಸಿಗುವ ವ್ಯವಸ್ಥೆ ಇಲ್ಲಿ ಮಾಡಲಾಗಿದೆ. ಈ ವ್ಯವಸ್ಥೆ ಮಾಡುವ ಮೊದಲು ಎಷ್ಟೋ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಲ್ಯಾಬ್‌ಗಳಲ್ಲಿ ನಿತ್ರಾಣರಾಗಿ ಬಿದ್ದು ಬಿಡುತ್ತಿದ್ದರು. ಹೀಗಾಗಿ ಇಂತಹ ಒಂದು ನಿರ್ಧಾರಕ್ಕೆ ಬಂದ ಪ್ರಾಧ್ಯಾಪಕರು ಅಂತಹ ಆರ್ಥಿಕವಾಗಿ ಅಶಕ್ತ ವಿದ್ಯಾರ್ಥಿಗಳ ಸೇವೆಗೆ ಮುಂದಾಗಿದ್ದು ನಿಜಕ್ಕೂ ಶ್ಲಾಘನೀಯ.  ಆರೋಗ್ಯ ತಪಾಸಣೆ, ರಕ್ತ ಗುಂಪು ತಪಾಸಣಾ ಶಿಬಿರ ಹಾಗೂ ಯುಜಿಸಿ ನೆರವಿನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವಂತಹ ಹಲವಾರು ಯೋಜನೆಗಳ ಪ್ರಯೋಜನವನ್ನು ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ.



 ಕಾಲೇಜಿನ ಪ್ರಿನ್ಸಿಪಾಲರು ಹೇಳುತ್ತಾರೆ...
  “ಸರ್ಕಾರ ಕೂಡ ಕೆಲವು ಮಾನದಂಡನೆಗಳ ಆಧಾರದ ಮೇಲೆ ಹೆಚ್ಚಿನ  ಅನುದಾನವನ್ನು ನೀಡಿದ್ದು ಈ ಬೆಳವಣಿಗೆಗೆ ಸಹಕಾರಿಯಾಯಿತೆನ್ನಬಹುದು.  ಜೊತೆಯಲ್ಲಿ ಕಟಿಬದ್ಧರಾದ, ಕಂಕಣ ಬದ್ಧರಾದ ಅಧ್ಯಾಪಕರ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡಿವೆ - ಜಿ. ಎಂ. ಮಹದೇವರಾಜು, ಪ್ರಿನ್ಸಿಪಾಲರು.

ಮಾರ್ಚ್ 16, 2012

ಮತ್ತೆ ಕಾಡಿದ ರಶೋಮನ್


ಕಳೆದ ಮಾರ್ಚ್ ೨ ರಂದು ನಡೆದ  ಬೆಂಗಳೂರಿನಲ್ಲಿ ನಡೆದ ವಕೀಲರು - ಪತ್ರಕರ್ತರು - ಪೊಲೀಸರ ನಡುವಿನ ವೃತ್ತಿಗಲಭೆ ನಿಧಾನಕ್ಕೆ ಜನಮಾನಸದಿಂದ ದೂರಾಗತೊಡಗಿದೆ. ಅಂದು ಮೂರೂ ಕಡೆಯವರಿಗೆ ಉಂಟಾದ ದೇಹದ ಮೇಲಿನ ಗಾಯಗಳೂ ವಾಸಿಯಾಗುತ್ತಿವೆ. ತಲೆಗೆ ಹಾಕಿದ್ದ ಹೊಲಿಗೆಗಳೂ ಬಿಚ್ಚಲಾಗಿದೆ. ಆದರೆ ಅಂದು ಉಂಟಾದ ಮಾನಸಿಕ ಗಾಯಗಳು ಇನ್ನು ಹತ್ತು ವರ್ಷಗಳಾದರೂ ವಾಸಿಯಾಗಲಾರವು. ಸಮಾಜದಲ್ಲಿ ಅತ್ಯಂತ ಜವಾಬ್ದಾರಿ ಹೊಂದಿದ್ದ ಈ ವೃತ್ತಿಪರರ ನಡುವಿನ ಕಂದಕ ದಿನೇ ದಿನೇ ಬೆಳೆಯುತ್ತಲೇ ಹೋಗುತ್ತಿದೆ.
ಅಂದಿನ ಘಟನೆ ಹೇಗೆ ನಡೆಯಿತೆಂದು ನೀವು ಪತ್ರಕರ್ತರಿಗೆ ಕೇಳಿದರೆ ಅವರು ಒಂದು ರೀತಿ ಮಾಧ್ಯಮಗಳ ಮೂಲಕ ಭಿತ್ತರಿಸಿದ್ದಾರೆ.  ವಕೀಲರು ತಮ್ಮ ಅಳಲನ್ನು ತಮ್ಮದೇ ರೀತಿ ಹೇಳುವ ಪ್ರಯತ್ನ ನಡೆಸಿದ್ದಾರೆ. ಪೊಲೀಸರು ಕೂಡಾ ಮತ್ತೊಂದು ಬಗೆಯಲ್ಲಿ ಹೇಳುತ್ತಾರೆ. ಈ ಹೊತ್ತಿನಲ್ಲಿ ನನಗೆ ಮತ್ತೊಮ್ಮೆ ಕಾಡಿದ್ದು ಜಗತ್ಪ್ರಸಿದ್ಧ ನಿರ್ದೇಶಕ ಅಕಿರಾ ಕೊರೊಸಾವಾನ ರಶೋಮನ್ (೧೯೫೦ರಲ್ಲಿ ನಿರ್ಮಿಸಿದ್ದು) ಎಂಬ ಅದ್ಭುತ ಸಿನೆಮಾ. ಈ ಸಿನೆಮಾ ನೋಡಿರುವವರಿಗೆಲ್ಲಾ ನನ್ನ ಮಾತು ಅರ್ಥವಾಗಿರುತ್ತದೆ. ಕೊರೊಸಾವಾನ ಎಲ್ಲಾ ಸಿನಿಮಾಗಳಲ್ಲಿ ಬಹಳ ಸಲ ಮತ್ತೆ ಮತ್ತೆ ಕಾಡುವುದು ರಷೊಮನ್. ಯಾಕೆಂದರೆ ಮನುಷ್ಯನ ಸ್ವಾರ್ಥ ಮತ್ತು ಆಲೋಚನೆಯ ಮಿತಿಗಳನ್ನು ಆ ಸಿನೆಮಾದ ಕತೆ ಅನಾವರಣ ಮಾಡುವಷ್ಟು ಅದ್ಭುತವಾಗಿ ಬೇರೆ ಯಾವುದೂ ಮಾಡಲು ಅಸಾಧ್ಯವೆಂದು ನನ್ನ ಭಾವನೆ. 
ರಶೋಮನ್ ಎಂದರೆ ಜಪಾನಿನ ಸ್ಮಾರಕವೊಂದರ ಬಾಗಿಲು. ಅಲ್ಲಿ ಹೊರಗೆ ಜೋರಾಗಿ ಮಳೆ ಬರುತ್ತಿದ್ದ ಹೊತ್ತಿನಲ್ಲಿ - ಒಬ್ಬ ಕಟ್ಟಿಗೆ ಕಡಿಯುವ ವ್ಯಕ್ತಿ, ಮತ್ತೊಬ್ಬ ಪೂಜಾರಿ ಹಾಗೂ ಒಬ್ಬ ಸಾಮಾನ್ಯ ಅಡ್ನಾಡಿ ಮನುಷ್ಯ- ಈ ಮೂವರ ನಡುವೆ ನಡೆಯುವ ಸಂಭಾಷಣೆಯೇ ರಷೋಮನ್ ಸಿನಿಮಾದ ಕತೆ. ಈ ಸಂಭಾಷಣೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಕೊಲೆಯೊಂದರ ಫ್ಲಾಷ್ ಬ್ಯಾಕ್ ಕತೆ ಅನಾವರಣಗೊಳ್ಳುತ್ತದೆ.
ಅಲ್ಲಿ ಒಂದು ಕೊಲೆಯಾಗಿರುತ್ತದೆ.  ತನ್ನ ಹೆಂಡತಿಯನ್ನು ಕುದುರೆಯ ಮೇಲೆ ಕೂರಿಸಿಕೊಂಡು ಕಾಡಿನ ದಾರಿಯಲ್ಲಿ ನಡೆಯುತ್ತಿದ್ದ ಸಮುರಾಯ್ (ಜಪಾನಿ ಸೈನಿಕ) ಒಬ್ಬ ಕೊಲೆಯಾಗಿದ್ದನ್ನು ಕಟ್ಟಿಗೆ ಕಡಿಯುವ  ವ್ಯಕ್ತಿ  ಬಂದು ಹೇಳಿರುತ್ತಾನೆ. ಆ ಕೊಲೆಗೆ ಸಂಬಂಧಿಸಿದಂತೆ ಸಾಕ್ಷಿ ವಿಚಾರಣೆ ನಡೆಯುತ್ತದೆ. ಆ ವಿಚಾರಣೆಯನ್ನು ನೋಡಿ ಆಘಾತಕ್ಕೊಳಗಾದ ಪೂಜಾರಿ ಅದು ಮಾನವೀಯತೆಯಲ್ಲಿ ತನಗೆ ನಂಬಿಕೆಯ ಕಳೆದುಕೊಳ್ಳುವಂತೆ ಮಾಡಿದೆ ಎನ್ನುತ್ತಾನೆ. ಇಂದು ದಿನನಿತ್ಯ ಜರುಗುವ ಯುದ್ಧ, ಭೂಕಂಪ, ಬರಗಾಲ, ಪ್ರವಾಹ, ಇತ್ಯಾದಿ ಎಲ್ಲವುಗಳಿಗಿಂತ ಭೀಕರವಾದದ್ದು ಆ ವಿಚಾರಣೆಯಲ್ಲಿ ತಾನು ಕೇಳಿದ ವಿವರಣೆಗಳು ಎಂದು ಅವನು ಹೇಳುತ್ತಾನೆ. ಹೀಗೆ ಆ ಇಡೀ ವಿಚಾರಣೆಯ ಕುರಿತು ಮೂರೂ ಜನರಲ್ಲಿ ಒಂದು ಜಿಜ್ಞಾಸೆ ಆ ರಷೋಮನ್ ಬಳಿ ನಡೆಯುತ್ತದೆ.
ಕೊಲೆಯ ನ್ಯಾಯ ವಿಚಾರಣೆಯಲ್ಲಿ ಮೂವರು ಸಾಕ್ಷಿ ನುಡಿದಿರುತ್ತಾರೆ. ಆ ಮೂವರೆಂದರೆ ಕುಖ್ಯಾತ ಡಕಾಯಿತ ತಜೊಮಾರು, ಸಮುರಾಯ್‌ನ ಹೆಂಡತಿ ಹಾಗೂ ಕೊಲೆಯಾದ ಸಮುರಾಯ್ (ಸಮುರಾಯ್‌ನನ್ನು ಒಂದು ಮಾಧ್ಯಮದ ಮೂಲಕ ಮಾತನಾಡಿಸಲಾಗುತ್ತದೆ). ವಿಶೇಷವೆಂದರೆ ಪ್ರತಿಯೊಬ್ಬರ ವಿವರಣೆಯೂ ಮತ್ತೊಬ್ಬರ ವಿವರಣೆಗೆ ತದ್ವಿರುದ್ಧವಾಗಿರುತ್ತದೆ.
ಅಲ್ಲಿಗೆ ಕೈಕಟ್ಟಿ ಎಳೆದುಕೊಂಡು ತರಲಾದ ಕುಖ್ಯಾತ ಡಕಾಯಿತ  ತಾಜೊಮಾರು ನೀಡುವ (ತೊಷಿರೋ ಮಿಫುನೆ) ಹೇಳಿಕೆಯ ಪ್ರಕಾರ ಸಮುರಾಯ್ ಮತ್ತು ಆತನ ಹೆಂಡತಿ ಹೋಗುತ್ತಿರುತ್ತಾರೆ. ಸಮುರಯ್‌ನ ಹೆಂಡತಿ ಆಕೆ ಬಹಳ ಸುಂದರವಾಗಿದ್ದರಿಂದ ಅವಳ ಮೇಲೆ ಮನಸ್ಸಾಗಿ ತಜೊಮಾರು ಸಮುರಾಯ್‌ನನ್ನು ಚಂಚಿಸಿ ಆತನನ್ನು ಬೇರೆಡೆ ಕರೆದುಕೊಂಡು ಹೋಗಿ ಆತನ ಹೆಡೆಮುರಿ ಕಟ್ಟಿ ಕೂರಿಸಿರುತ್ತಾನೆ. ಆತನ ಹೆಂಡತಿಯನ್ನು ಅಲ್ಲಿ ಕರೆದು ತೋರಿಸಿದಾಗ ಅವಳು ತನ್ನ ಬಳಿಯಿದ್ದ ಚೂರಿಯಿಂದ ಆತನನ್ನು ಇರಿಯಲು ಯತ್ನಿಸಿ ವಿಫಲವಾಗುತ್ತಾಳೆ.  ಆತ ಅವಳ ಶೀಲಹರಣಕ್ಕೆ ಮುಂದಾಗುತ್ತಾನೆ. ಕ್ರಮೇಣ ಆಕೆ ಸಮ್ಮತಿ ಸೂಚಿಸುತ್ತಾಳೆ. ಇದೆಲ್ಲವೂ ಸಮುರಾಯ್‌ನ ಎದುರಿಗೇ ನಡೆಯುತ್ತದೆ. ಆಗ ಆಕೆ ತಾನು ಅವಮಾನಕ್ಕೊಳಗಾಗುವುದರಿಂದ ತಪ್ಪಿಸಿಕೊಳ್ಳಲು ತನ್ನ ಗಂಡನೊಂದಿಗೆ ಹೋರಾಡಿ ಇಬ್ಬರಲ್ಲಿ ಒಬ್ಬರು ಸಾಯಬೇಕೆಂದು ಹಠ ಹಿಡಿಯುತ್ತಾಳೆ. ಅವಳ ಷರತ್ತನ್ನು ಒಪ್ಪಿಕೊಳ್ಳುವ ತಜೊಮಾರು ಸಮುರಾಯ್‌ನೊಂದಿಗೆ ಲೀಲಾಜಾಲವಾಗಿ ಹೊಡೆದಾಡುತ್ತಾನೆ. ಅಂತಿಮವಾಗಿ ಆತ ಸಮುರಾಯ್‌ನನ್ನು ಕೊಲ್ಲುವಷ್ಟರಲ್ಲಿ ಆಕೆ ತಪ್ಪಿಸಿಕೊಂಡು ಓಡಿ ಹೋಗಿರುತ್ತಾಳೆ.
ಇನ್ನು ಸಮುರಾಯ್‌ನ ಹೆಂಡತಿ ಇಡೀ ಘಟನೆಯನ್ನು ಬೇರೊಂದು ರೀತಿಯಲ್ಲಿ ವಿವರಿಸುತ್ತಾಳೆ. ಅದರ ಪ್ರಕಾರ ಆಕೆಯ ಮೇಲೆ ಬಲಾತ್ಕಾರವೆಸಗಿದ ತಜೊಮಾರು ಆಕೆಯನ್ನು ಅಲ್ಲೇ ಬಿಟ್ಟು ಹೊರಡುತ್ತಾನೆ. ತನ್ನೆದುರೇ ನಡೆದ ಈ ಅತ್ಯಾಚಾರವನ್ನು ಕಂಡು ಆಕೆಯ ಗಂಡನೂ ಆಕೆಯತ್ತ ತಿರಸ್ಕಾರದ ನೋಟ ಬೀರುತ್ತಾನೆ. ಇದರಿಂದ ಕುಸಿದು ಹೋದ ಆಕೆ ತನ್ನನ್ನು ಕೊಂದುಬಿಡಲು ತನ್ನ ಗಂಡನಿಗೆ ಕೇಳುತ್ತಾಳೆ. ಆದರೂ ಅವಳೆಡೆಗೆ ಆತ ಬೀರಿದ ವಿಚಿತ್ರ ತಿರಸ್ಕಾರದ ನೋಟವನ್ನು ಸಹಿಸಲಾಗದೇ ತಲೆಸುತ್ತು ಬಂದಂತಾಗಿ ಬಿದ್ದುಬಿಡುತ್ತಾಳೆ. ಮತ್ತೆ ಎಚ್ಚರಾಗಿ ನೋಡಿದರೆ ಅವಳ ಕೈಯಲ್ಲಿದ್ದ ಚೂರಿಯಿಂದ ಆಕೆಯ ಗಂಡ ಇರಿದುಕೊಂಡು ಸತ್ತಿರುವುದು ಕಾಣುತ್ತದೆ. ತಾನೂ ಸಾಯಲು ಪ್ರಯತ್ನಿಸಿದರೂ ಆಗುವುದಿಲ್ಲ.
ಇನ್ನು ಸಮುರಾಯ್ ಹೇಳುವ ವಿವರಣೆ ಮೇಲೆ ಹೇಳಿದ ಇಬ್ಬರ ವಿವರಣೆಗಳಿಗೂ ತದ್ವಿರುದ್ಧವಾದದ್ದು. ಡಕಾಯಿತ ತಜೊಮಾರು ಅವನ ಹೆಂಡತಿಯ ಮೇಲೆ ಅತ್ಯಾಚಾರವೆಸಗಿದ ಮೇಲೆ ಅವಳ ಬಳಿ ತನ್ನನ್ನು ಮದುವೆಯಾಗು ಎಂದು ಕೇಳುತ್ತಾನೆ. ಬೇಕಾದರೆ ಅವಳಿಗಾಗಿ ಕಳ್ಳತನವನ್ನೆಲ್ಲಾ ಬಿಟ್ಟುಬಿಡುತ್ತೇನೆಂದೂ, ಕಷ್ಟಪಟ್ಟು ದುಡಿದು ಅವಳನ್ನು ಸಾಕುವೆನೆಂದೂ ಗೋಗರೆಯುತ್ತಾನೆ. ಅದಕ್ಕೆ ಒಪ್ಪುವ ಆಕೆ ಆತನೊಂದಿಗೆ ಹೋಗಲು ಒಪ್ಪುತ್ತಾಳೆ.  ಆದರೆ ತಾನು ಇಬ್ಬರಿಗೆ ಸೇರಿದವಳಾಗುವುದನ್ನು ತಡೆಯಲಿಕ್ಕಾಗಿ ಆಕೆಯ ಗಂಡನನ್ನು ಕೊಂದುಬಿಡಲು ಕೇಳಿಕೊಳ್ಳುತ್ತಾಳೆ.  ಅವಳ ಈ ಮಾತುಗಳಿಂದ ಕೋಪೋದ್ರಿಕ್ತನಾಗುವ ತಜೊಮಾರು ಸಮುರಾಯ್‌ನನ್ನು ಬಿಡುಗಡೆಗೊಳಿಸಿ ಆಕೆಯನ್ನು ಏನು ಬೇಕಾದರೂ ಮಾಡಲು ಅವಳ ಗಂಡನಿಗೆ ಬಿಡುತ್ತಾನೆ. ಅವನ ಈ ನಡವಳಿಕೆಯಿಂದಾಗಿ ಸಮುರಾಯ್ ತಜೊಮಾರುನನ್ನು ಕ್ಷಮಿಸಿಬಿಡುತ್ತಾನೆ. ಅಷ್ಟು ಹೊತ್ತಿಗೆ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಗುವ ಆಕೆಯನ್ನು ಬೆನ್ನತ್ತಿ ತಜಮೋರು ಓಡುತ್ತಾನೆ. ಆಕೆ ಬಿಟ್ಟು ಹೋಗಿದ್ದ ಚೂರಿಯಿಂದ ಸಮುರಾಯ್ ತನ್ನನ್ನು ತಾನೇ ಇರಿದುಕೊಂಡು ಅಸುನೀಗುತ್ತಾನೆ.
ನ್ಯಾಯ ವಿಚಾರಣೆಯಲ್ಲಿ ಈ ಮೂರು ವಿವರಣೆಗಳನ್ನು ನೀಡಲಾಗುತ್ತದೆ. ಆದರೆ ಇದಕ್ಕೆ ಹೊರತಾದ ಮತ್ತೊಂದು ವಿವರಣೆಯನ್ನು ರಷೋಮನ್ ಬಳಿ ನಡೆವ ಮಾತುಕತೆಯಲ್ಲು ಹೇಳುವುದು ಕಟ್ಟಿಗೆ ಕಡಿಯುವ ವ್ಯಕ್ತಿ. ವಾಸ್ತವವಾಗಿ ಆ ದಿನ ನಡೆದ ಘಟನೆಯನ್ನು ದೂರದಿಂದ ಆತ ನೋಡಿರುತ್ತಾನೆ. ಆದರೆ ಈ ವಿಚಾರಣೆಯ ಭಾಗವಾಗಿರಲು ಒಪ್ಪದೇ ತನಗೇನೂ ಗೊತ್ತಿಲ್ಲವೆಂದೇ ಹೇಳಿರುತ್ತಾನೆ.
ಕಟ್ಟಿಗೆ ಕಡಿಯುವವನ ಪ್ರಕಾರ ತಜೊಮಾರು ಆಕೆಯನ್ನು ತನ್ನೊಂದಿಗೆ ಬರಲು ಕೇಳುತ್ತಾನೆ. ಆದರೆ ಆಕೆ ತನ್ನ ಗಂಡನನ್ನ ಕಟ್ಟಿಹಾಕಿದ ಹಗ್ಗವನ್ನು ಬಿಚ್ಚುತ್ತಾಳೆ. ಆದರೆ ಸಮುರಾಯ್ ಶೀಲ ಕೆಟ್ಟಿರುವ ತನ್ನ ಹೆಂಡತಿಯನ್ನು ತಿರಸ್ಕರಿಸುತ್ತಾನೆ. ಆಕೆ ಅವರಿಬ್ಬರನ್ನೂ ನಿಂದಿಸಿ ಇಬ್ಬರೂ ಹೊಡೆದಾಡುವಂತೆ ಪ್ರೇರೇಪಿಸಿಸುತ್ತಾಳೆ. ಒಮ್ಮೆ ಅವರಿಬ್ಬರೂ ಹೊಡೆದಾಡತೊಡಗಿದಂತೆ ಇವಳಲ್ಲಿ ಭಯ ಆವರಿಸುತ್ತದೆ. ಆ ಇಬ್ಬರೂ ಸಹ ಜೀವಭಯದಲ್ಲೇ ಹೊಡೆದಾಡುತ್ತಾರೆ. ಕೊನೆಗೆ ತಜೊಮಾರು ಸಮುರಾಯ್‌ನನ್ನು ಕೊಲ್ಲುತ್ತಾನೆ. ಅಷ್ಟರಲ್ಲಿ ತಜೊಮಾರು ಮುಂದೆ ಚಲಿಸಲಾಗದಷ್ಟು ನಿತ್ರಾಣನಾಗಿರುತ್ತಾನೆ. ಆಕೆ ಭಯಗೊಂಡು ಅಲ್ಲಿಂದ ಓಡಿಹೋಗಿರುತ್ತಾಳೆ.
ಈ ವಿವರಣೆಯನ್ನು ಕಟ್ಟಿಗೆ ಕಡಿಯುವವನು ಹೇಳಿಮುಗಿಸುವಷ್ಟರಲ್ಲಿ ಆ ರಶೋಮನ್ ಕಟ್ಟಡದ ಬಳಿ ಯಾರೋ ಬಿಟ್ಟುಹೋದ ಹಸುಗೂಸೊಂದು ಅಳುವುದು ಕೇಳಿಸುತ್ತದೆ. ಅದಕ್ಕೆ ಹೊದಿಸಿದ ವಸ್ತ್ರವನ್ನು ಅಡ್ನಾಡಿ ವ್ಯಕ್ತಿ ಕಿತ್ತುಕೊಳ್ಳುತ್ತಾನೆ.  ಇದರಿಂದ ನೊಂದುಕೊಂಡ ಕಟ್ಟಿಗೆ ಕಡಿಯುವವನು ಅವನನ್ನು ಸ್ವಾರ್ಥಿ ಎಂದು ಜರಿಯುತ್ತಾನೆ.  ಆಗ ಆ ವ್ಯಕ್ತಿ ಕೂಡ ಈತನನ್ನು ನೀನೂ ಸಹ ಸ್ವಾರ್ಥಿ ಅಲ್ಲದಿದ್ದರೆ ನ್ಯಾಯ ವಿಚಾರಣೆಯಲ್ಲಿ ಯಾಕೆ ನೀನು ಕಂಡಿದ್ದನ್ನು ಹೇಳಲಿಲ್ಲ? ಎಂದು ಮರುಪ್ರಶ್ನಿಸುತ್ತಾನೆ. ಅಡ್ನಾಡಿ ವ್ಯಕ್ತಿ ಅಲ್ಲಿಂದ ಕಾಲ್ಕೀಳುತ್ತಾನೆ. ಅಷ್ಟರಲ್ಲಿ ಅಲ್ಲಿದ್ದ ಪೂಜಾರಿಗೆ ಮನುಷ್ಯರ ಮೇಲೆಯೇ ನಂಬಿಕೆ ಹೋಗಿರುತ್ತದೆ. ಆದರೆ ಆ ಅನಾಥ ಮಗುವನ್ನು ತನ್ನ ಕೈಗೆತ್ತಿಕೊಳ್ಳಲು ಕಟ್ಟಿಗೆ ಕಡಿಯುವ ವ್ಯಕ್ತಿ ಮುಂದಾದೊಡನೆ ಅವನನ್ನು ಪೂಜಾರಿ ತಡೆದು ನೀನು ಆ ಮಗುವಿನ ಮೇಲಿನ ಉಳಿದ ಬಟ್ಟೆತುಂಡನ್ನೂ ಕಿತ್ತುಕೊಳ್ಳುತ್ತೀಯಾ ಎಂದು ಕೇಳುತ್ತಾನೆ. ಅದಕ್ಕೆ ಕಟ್ಟಿಗೆ ಕಡಿಯುವವನು ಖಂಡಿತಾ  ಇಲ್ಲ ನಾನು ಆ ಅನಾಥ ಮಗುವನ್ನು ಸಲಹುತ್ತೇನೆ ಎನ್ನುತ್ತಾನೆ.  ಪೂಜಾರಿ ನಿನಗೆ ಇದೊಂದು ಹೊರೆಯಾಗುವುದಿಲ್ಲವೇ ಎಂದು ಕೇಳಿದ್ದಕ್ಕೆ ನನಗೆ ಈಗಾಗಲೇ ಆರು ಮಕ್ಕಳಿವೆ. ಇದೊಂದನ್ನು ಕೊಂಡೊಯ್ದರೆ ಅದೇನೂ ವ್ಯತ್ಯಾಸವುಂಟುಮಾಡುವುದಿಲ್ಲ ಎಂದು ಅದನ್ನು ತನ್ನ ಕೈಗೆ ಎತ್ತಿಕೊಳ್ಳುತ್ತಾನೆ. ಆಗ ಆ ಪೂಜಾರಿಗೆ ಮತ್ತೆ ಮನುಷ್ಯರ ಒಳ್ಳೆಯತನದಲ್ಲಿ ನಂಬಿಕೆ ಬರುತ್ತದೆ.
ಇಡೀ ಸಿನಿಮಾದಲ್ಲಿ ಅದರ ಕಥಾವಸ್ತುವನ್ನು ಫ್ಲಾಷ್‌ಬ್ಯಾಕ್ ನಿರೂಪಣೆ, ಬೆಳಕು ನೆರಳಿನ ಸಂಯೋಜನೆ ಹಾಗೂ ಕ್ಯಾಮೆರಾಗಳ ಕೈಚಳಕದಿಂದ ಅದ್ಭುತವೆನ್ನುವಂತೆ ಕುರೋಸಾವಾ ಕಟ್ಟಿಕೊಟ್ಟಿದ್ದಾರೆ. ನ್ಯಾಯದ ತತ್ವಮೀಮಾಂಸೆಯನ್ನು, ಮನುಷ್ಯನ ಸ್ವಭಾವದ ಸಂಕೀರ್ಣತೆಯನ್ನು ಈ ಚಿತ್ರದಲ್ಲಿ ಅವರು ಪ್ರತಿಫಲಿಸಿದ ರೀತಿ ನಿಜಕ್ಕೂ ಅಪೂರ್ವವಾದದ್ದು. ಪ್ರತಿಯೊಬ್ಬರು ಹೇಳುವ ವಿವರಣೆಯಲ್ಲೂ ಸ್ವಾರ್ಥವೇ ಇರುತ್ತದಲ್ಲದೆ ತಮ್ಮನ್ನು ತಾವು ನಿರಪರಾಧಿಗಳೆಂದೂ, ಅಸಹಾಯಕರೆಂದೂ ಇಲ್ಲವೇ ಆ ಸಂದರ್ಭಗಳಲ್ಲಿ ತಾವು ಮಾಡಿದ್ದು ಸರಿಯಾದ ಕೃತ್ಯ ಎಂದೂ ಸಮರ್ಥಿಸಿಕೊಳ್ಳುವ ನಡವಳಿಕೆ ಅದು.  ಪ್ರತಿಯೊಬ್ಬರೂ ತನಗೆ ಯಾವುದು, ಎಷ್ಟು ಸತ್ಯ ಎಂದು ತೋರುತ್ತದೋ ಅದಷ್ಟನ್ನೇ ಸತ್ಯ ಎಂದು ಪ್ರತಿಪಾದಿಸುತ್ತದೆ. ಏಕೆಂದರೆ ಅದೇ ಸತ್ಯವಾಗಿರಲಿ ಎಂಬುದು ಅವರ ಬಯಕೆಯಾಗಿರುತ್ತದೆ.
ಮತ್ತೆ ಮೊನ್ನೆ ಇಲ್ಲಿ ನಡೆದ ಘಟನೆಗಳಲ್ಲಿ ಪತ್ರಕರ್ತರು, ವಕೀಲರು, ಪೊಲೀಸರು ನಡೆದುಕೊಳ್ಳುತ್ತಿರುವುದಕ್ಕೂ ಕುರೊಸೊವಾನ ರಷೋಮನ್ ಪಾಥ್ರಗಳಿಗೂ ಎಷ್ಟೊಂದು ಸಾಮ್ಯತೆ ಇದೆ ನೋಡಿ. ಇಲ್ಲಿ ಸಹ ಪ್ರತಿಯೊಂದು ವೃತ್ತಿಯವರೂ ತಮ್ಮ ಮೂಗಿನ ನೇರಕ್ಕೇ ಪ್ರತಿಯೊಂದನ್ನೂ ವಿವರಿಸುತ್ತಾರೆ. ಹಾಗೂ ತಾವು ಮಾಡಿದ ಪ್ರತಿಯೊಂದಕ್ಕೂ ಸಮರ್ಥನೆ ನೀಡುತ್ತಲೇ ಇದ್ದಾರೆ. ಅದಕ್ಕೆ ಹೊರಗಿನ ಬೆಂಬಲ ಪಡೆಯಲೂ ಯತ್ನಿಸಿದ್ದಾರೆ. ನಿಜಕ್ಕೂ ನಮ್ಮ ನಮ್ಮ ಸ್ವಾರ್ಥದ ಮನಸ್ಸುಗಳು ಅದೆಷ್ಟು ಗಟ್ಟಿಯಾಗಿರುತ್ತವೆಯೆಂದರೆ ಮತ್ತೊಬ್ಬರ ಮೇಲೆ ನಡೆದ ಹಲ್ಲೆಗಳೂ, ಮತ್ತೊಬ್ಬರ ಮೈಯಿಂದ ಹರಿದ ರಕ್ತವೂ, ಕಲ್ಲುಗಳಿಂದ ಜಖಂ ಆದ, ಸುಟ್ಟು ಕರಕಲಾದ ಮತ್ತೊಬ್ಬರ ವಾಹನಗಳೂ ನಮಗೆ ಎಲ್ಲೋ ಖುಷಿ ಕೊಡುವ ಮಟ್ಟಿಗೆ!
ಇದನ್ನು ಹೊರತು ಪಡಿಸಿ ಒಂದು ವಿಷಯವಿದೆ. ಸಾಮಾನ್ಯವಾಗಿ ಪ್ರಪಂಚದ ಸರ್ವಾಧಿಕಾರಿ ಆಡಳಿತಗಳನ್ನು, ಕಮ್ಯುನಿಷ್ಟ್ ಆಡಳಿತಗಳನ್ನು ಟೀಕಿಸುವಾಗ ಅಲ್ಲಿ ನಡೆಯುವ ಅನ್ಯಾಯ ಅನಾಚಾರಗಳ ಮಾಹಿತಿಯನ್ನೇ ಆ ಸರ್ಕಾರಗಳು, ಅಧಿಕಾರಸ್ಥರು ಹೊರಬರಲು ಬಿಡದಿರುವುದರ ಬಗ್ಗೆ ಚರ್ಚಿಸುತ್ತೇವೆ ಅಲ್ಲವೇ? ಈ ವಿಷಯವನ್ನು ಬೇಕಾದರೆ ಅಂಕಿ ಅಂಶಗಳನ್ನು ಹೆಕ್ಕಿ ಗಂಟೆಗಟ್ಟಲೆ ಮಾತಾಡುತ್ತೇವೆ, ಪುಟಗಟ್ಟಲೆ ಬರೆಯುತ್ತೇವೆ.  ಆ ಸರ್ವಾಧಿಕಾರಿ ದೇಶಗಳಿಂದ ತಪ್ಪಿಸಿಕೊಂಡು ಓಡಿ ಹೋಗಿ ಬೇರೆ ದೇಶಗಳಲ್ಲಿ ರಕ್ಷಣೆ ಪಡೆದವರು ಹೇಳಿದ್ದನ್ನು ಸಾರಿ ಸಾರಿ ಹೇಳುತ್ತೇವೆ. ಹೀಗೆ ಮಾಡಿ ನಮ್ಮಷ್ಟಕ್ಕೆ ನಾವು ಪ್ರಜಾಪ್ರಭುತ್ವವಾದಿಗಳು ಎಂದು ಬೆನ್ನು ತಟ್ಟಿಕೊಳ್ಳುತ್ತೇವೆ. ಆದರೆ ಮೊನ್ನೆ ನಡೆದ ವೃತ್ತಿಗಲಭೆಯಲ್ಲಿ ಇಲ್ಲಿ ಸಂಭವಿಸಿರುವುದೇನು? ಯಾವ ಸರ್ವಾಧಿಕಾರಿಗಳನ್ನೂ ಮೀರಿಸುವ ರೀತಿಯಲ್ಲಿ ನಾವು ವಕೀಲರ ಮೇಲೆ ನಡೆದ ಹಲ್ಲೆಗಳ ಕುರಿತ ಮಾಹಿತಿಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಿದೆವಲ್ಲವೇ? ಯೂಟ್ಯೂಬ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲ ತಾಣಗಳು ಇರದೇ ಹೋಗಿದ್ದರೆ ಕೆಲವು ಅವಿವೇಕಿ ವಕೀಲರಿಂದ ಪತ್ರಕರ್ತರು ಮತ್ತು ಪೊಲೀಸರ ಮೇಲೆ ಆದಂತೆಯೇ ಪತ್ರಕರ್ತರು ಹಾಗೂ ಪೊಲೀಸರು ಸೇರಿ ನಡೆಸಿದ ಭೀಕರ ಹಲ್ಲೆಗಳು, ಹಿಂಸಾ ಕೃತ್ಯಗಳು ಹೊರಜಗತ್ತಿಗೆ ತಿಳಿಯುತ್ತಲೇ ಇರಲಿಲ್ಲ.
ಈಗ ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದೋ ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು ಇಲ್ಲವೇ ನಾವೂ ಸರ್ವಾಧಿಕಾರಿ ಮನಸ್ಥಿತಿಯವರೇ ಹೊರತು ಪ್ರಜಾಪ್ರಭುತ್ವವನ್ನು ಗೌರವಿಸುವವರಲ್ಲ ಎಂದು ಒಪ್ಪಿಕೊಳ್ಳಬೇಕು. 




ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.