ಜನವರಿ 28, 2013

"ಭ್ರಷ್ಟಾಚಾರಕ್ಕಿಂತಲೂ ದೊಡ್ಡ ವ್ಯಾಧಿ ಮತಾಂಧತೆ " -ಕೋ. ಚೆನ್ನಬಸಪ್ಪ










 ಕೋ.ಚೆ ಎಂದೇ ನಾಡಿನಲ್ಲಿ ಜನಜನಿತವಾಗಿರುವ ಕೋ. ಚೆನ್ನಬಸಪ್ಪ ಅವರು ವೃತ್ತಿಯಲ್ಲಿ ನ್ಯಾಯಾಧೀಶರಾಗಿ, ವಕೀಲರಾಗಿ ಕೆಲಸ ಮಾಡಿದ್ದರೂ ತಮ್ಮ ಲೇಖನಿಯ ಮೂಲಕ ನಿಜವಾದ ನ್ಯಾಯವಾದಿಗಳಾಗಿ ನಾಡಿನ ಸಾಕ್ಷಿಪ್ರಜ್ಞೆಯಾಗಿ ಬದುಕಿರುವಂತಹವರು. ಅವರು ಬರೆದ ಪ್ರತಿಯೊಂದು ಬರಹವೂ ಸಮಾಜದ ಒಳಿತಿನ ಆಶಯವನ್ನೇ ಹೊಂದಿರುವಂತಹುದು. ತಮ್ಮ ಬದುಕಿನ ೯೦ರ ಹರೆಯದಲ್ಲಿರುವ ಅವರನ್ನು ೭೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು  ಸಹೃದಯರೆಲ್ಲರ ಪಾಲಿಗೆ ಸಂತಸದ ವಿಷಯ. ದ ಸಂಡೆ ಇಂಡಿಯನ್ ಗಾಗಿ ಹಲವಾರು ವಿದ್ಯಮಾನಗಳ ಕುರಿತು  ಕೋ.ಚೆ.ಯವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ. 

೭೯ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕುರಿತು ಏನನ್ನಿಸುತ್ತಿದೆ?

ನನ್ನ ಆಯ್ಕೆಯ ಕುರಿತು ಹೇಳುವುದಾದರೆ ಬಹುಶಃ ನನ್ನನ್ನು ಹೊರತುಪಡಿಸಿದ ಪಟ್ಟಿಯಲ್ಲಿದ್ದ ಇತರರಿಗೂ ನನ್ನ ಆಯ್ಕೆಯ ವಿಷಯದಲ್ಲಿ ತಕರಾರಿಲಿಲ್ಲ ಎಂದೆನಿಸುತ್ತದೆ. ಇದರಿಂದಾಗಿ ಪರಿಷತ್ತಿನ ಅಧ್ಯಕ್ಷರಿಗೂ ಸುಲಭವಾಯಿತು ಎಂದುಕೊಳ್ಳುತ್ತೇನೆ. ನಿಜಹೇಳಬೇಕೆಂದರೆ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾಗುತ್ತೇನೆ ಎಂದು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ. ಈ ಸ್ಥಾನವನ್ನು ಪಡೆಯಬಹುದು ಎಂದು ನನಗೆ ಎಂದೂ ಅನಿಸಿರಲಿಲ್ಲ. ಅದಕ್ಕಾಗಿ ನಾನು ಬರೆದೂ ಇಲ್ಲ. ಮತ್ತೆ ಈ ಸ್ಥಾನ ಬಹುತೇಕ ಶಿಕ್ಷಕ ಕ್ಷೇತ್ರದಿಂದ ಬಂದವರಿಗೇ ಮೀಸಲಾಗಿ ಬಂದಿರುವಂತದ್ದು. ಕೊನೇ ಪಕ್ಷ ಪ್ರೈಮರಿ ಶಾಲೆ ಮೇಸ್ಟರಾಗಿದ್ದರೂ ನಡೆಯುತ್ತದೆ. ಆದರೆ ಈ ವಿಷಯದಲ್ಲಿ ಈ ಸಲ ಉದಾರ ಮನಸ್ಸನ್ನು ತೋರಿಸಿದ್ದಾರೆ. ನನ್ನನ್ನು ಅಧ್ಯಕ್ಷನ್ನನಾಗಿ ಆಯ್ಕೆ ಮಾಡಿರುವುದು ಸಹಜವಾಗಿ ನನಗೆ ಖುಷಿ ತಂದಿದೆ. 

ಜಾತ್ರೆಯೋಪಾದಿಯ ಈ ಪ್ರತಿವರ್ಷದ ಸಮ್ಮೇಳನಗಳಿಂದ ಪ್ರಯೋಜನವಿದೆಯೇ? 

ಕೇವಲ ಜಾತ್ರೆಯಂತೆ ಮೂರು ದಿನಗಳ ಸಮ್ಮೇಳನ ನಡೆಸಿ ಅದನ್ನು ಕೇವಲ ವಿಲಾಸದ, ಸಡಗರದ ಕೆಲಸ ಎಂದು ಭಾವಿಸಿದರೆ ಯಾವ ಪ್ರಯೋಜನವೂ ಇಲ್ಲ. ಹಾಗೆಯೇ ಈ ಅದ್ದೂರಿ ಆಡಂಬರ ಉತ್ಸವಗಳು ಸರ್ವಥಾ ಇರಬಾರದು. ಮೂರು ದಿನ ಜನ ಸೇರಿ ಸಾಹಿತ್ಯದ ವಿಚಾರಗಳು ಕಿವಿಗೆ ಬಿದ್ದರೆ ಒಳ್ಳೆ ವಾತಾವರಣ ಕಾಣುತ್ತದೆ. ಅಲ್ಲಿಗೆ ಬಂದವರೆಲ್ಲರಿಗೂ ಸಾಹಿತ್ಯದ ಬಗ್ಗೆ ಆಸಕ್ತಿ ಇರುತ್ತದೆ ಎಂದಲ್ಲ. ಸಾಹಿತ್ಯ ಸಮ್ಮೇಳನ  ಎಂದರೆ ನಾಟಕ ನೋಡಿದಂತೆ. ಮೂರು ಗಂಟೆ, ಐದು ಗಂಟೆ ನಾಟಕ ನೋಡಿದ ನಂತರ ಮನಸ್ಸಿಗೆ ಸಂತೋಷವಾಗುತ್ತದೆ. ಹರಿಶ್ಚಂದ್ರ, ರಾಮಾಯಣ ನಾಟಕ ನೋಡಿದಂತೆ. ರಂಗಮಂದಿರದಿಂದ ಹೊರಬಂದ ಮೇಲೂ ಅದೇ ಗುಂಗಿನಲ್ಲಿ ಇರುತ್ತೇವಲ್ಲಾ ಹಾಗೆ. ಹೀಗೆ ಸಾಹಿತ್ಯ ಸಮ್ಮೇಳಗಳು ಕನ್ನಡದ ಗುಂಗನ್ನು ರಿಚಾರ್ಜ್ ಮಾಡುವ ಕೆಲಸ ಮಾಡಬೇಕು. ಜನರು ಕನ್ನಡ ವಿಷಯದಲ್ಲಿ ಜಾಗೃತರಾಗಲಿ ಎಂಬ ಕಾರಣದಿಂದ ಸಮ್ಮೇಳನಗಳು ಆರಂಭವಾಗಿದ್ದವು. ನಾಡಿನ ಜನರು ಒಂದಾಗಬೇಕು, ನಮ್ಮ ಸಂಪತ್ತನ್ನು ನಾವೇ ಸದುಪಯೋಗಪಡಿಸಿಕೊಳ್ಳಬೇಕು. ನಮ್ಮ ಸಂಪತ್ತು ವಿದೇಶಕ್ಕೆ ಪರಭಾರೆಯಾಗುತ್ತಿರುವುದನ್ನು ತಡೆಯಬೇಕು, ಇಂತಹವುಗಳನ್ನೆಲ್ಲಾ ಮನಸ್ಸಿನಲ್ಲಿ ಬರಲು ಸಮ್ಮೇಳನ ಸಹಾಯವಾಗಬೇಕು. 

ನೀವು ಸಾಹಿತ್ಯ ರಚನೆಗೆ ಮುಂದಾಗಲು ಕಾರಣವೇನಿತ್ತು

ನಾನು ಹೈಸ್ಕೂಲಿನಲ್ಲಿದ್ದಾಗ ಗಾಂಧೀವಾದಿ ಹರ್ಡೀಕರ್ ಮಂಜಪ್ಪನವರ ಪತ್ರಿಕೆಯಲ್ಲಿ ವೀರ ಸಾವರ್ಕರ್ ಅವರ ಜೀವನ ಚರಿತ್ರೆ ಪ್ರಕಟವಾಗಿತ್ತು. ಅದನ್ನು ಓದಿದ ನನಗೆ ಬಹಳ ಸ್ಪೂರ್ತಿ ಬಂದುಬಿಟ್ಟಿತು. ಅಂದೇ ನಾನು ನನ್ನ ಮೊದಲ ಕವಿತೆ ವೀರ ಸಾವರ್ಕರ್‌ಗೆ ಎಂದು ಬರೆದು ಕಳಿಸಿದೆ. ಅದು ಅಚ್ಚಾಗಿಬಿಟ್ಟಿತ್ತು. ಇದರಿಂದ ನನಗೆ ಬಹಳ ಹುರುಪು ಬಂದುಬಿಟ್ಟಿತು. ನನ್ನ ಹೆಸರು ಅಚ್ಚಾಯಿತಲ್ಲಾ ಎಂಬ ಕಾರಣಕ್ಕೆ. ಹಾಗೆಯೇ ನಾನು ಬರೆದ ಕೆಲವು ಬರೆಹಗಳು ಕರ್ಮವೀರದಲ್ಲೂ ಪ್ರಕಟವಾಗತೊಡಗಿದವು. ಅದರಿಂದ ಸ್ಪೂರ್ತಿಗೊಂಡು ಮತ್ತೂ ಬರೆಯತೊಡಗಿದೆ ಅಷ್ಟೆ.  

ನೀವು ಬರೆದಿದ್ದರಲ್ಲಿ ನಿಮಗೆ ಬಹಳ ತೃಪ್ತಿ ನೀಡಿದ ಕೃತಿ ಯಾವುದು?

ಒಂದೊಂದು ದೃಷ್ಟಿಯಿಂದ ಒಂದೊಂದು. ಕುವೆಂಪು ಅವರ ರಾಮಾಯಣ ದರ್ಶನಂ ಮಹಾಕಾವ್ಯ ವಿಮರ್ಶೆ ನನಗೆ ಉತ್ತಮವೆನಿಸಿದೆ. ಕಾದಂಬರಿಗಳಲ್ಲಿ ’ಹಿಂದಿರುಗಿ ಬರಲಿಲ್ಲ’, ’ಬೇಡಿ ಕಳಚಿತು ದೇಶ ಒಡೆಯಿತು’, ’ರಕ್ತ ತರ್ಪಣ’ ಇವು ಖುಷಿ ನೀಡಿವೆ. ಕವಿತೆಗಳನ್ನು ಹೆಚ್ಚು ಬರೆಯದಿದ್ದರೂ, ವ್ಯಾಕರಣ ಛಂದಸ್ಸು ದೃಷ್ಟಿಯಿಂದ ಇವು ಶ್ರೇಷ್ಠವಲ್ಲದಿದ್ದರೂ ಸಮಾಜಮುಖಿಯಾಗಿ ಬರೆದಿದ್ದೇನೆ. 

ಶಿಕ್ಷಣ ಮಾದ್ಯಮದ ಭಾಷೆ ಏನಾಗಿರಬೇಕು? 

ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕೆಂದು ಹೇಳುವುದಲ್ಲ. ಶಿಕ್ಷಣ ತಜ್ಞರು ಹೇಳುವ ಪ್ರಕಾರ ಮಗುವಿನ ಬೆಳವಣಿಗೆಗೆ ಮಾತೃಭಾಷೆಯ ಅಥವಾ ತಾಯಿನುಡಿಯ ಶಿಕ್ಷಣ ಅಗತ್ಯ. ತಾಯಿನುಡಿಯಲ್ಲಿ ಕಲಿಸುವುದು ಹೃದಯಕ್ಕೆ ತಟ್ಟುತ್ತದೆ. ಮೆದುಳಿಗೆ ತಲುಪುತ್ತದೆ. ಇಂದು ಇಂಗ್ಲಿಷ್ ಕಲಿತರೆ ಉದ್ಯೋಗ ಸಿಗುತ್ತದೆ ಎಂದು ಜನರು ನಂಬಿದ್ದಾರೆ. ಆದರೆ ಇದು ಪೂರ್ತಿ ಸತ್ಯವಲ್ಲ ಎನ್ನುವುದನ್ನು ಅರಿಯಬೇಕಾಗಿದೆ. ಇಂಗ್ಲಿಷ್ ಓದಿದವರಿಗೆಲ್ಲರಿಗೂ ನೌಕರಿ ಸಿಗುವುದಿಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಇಂಗ್ಲಿಷನ್ನೇ ಕಲಿಯಬೇಕು ಎಂಬ ಭಾವನೆಯಿಂದ ನಾವು ಹೊರಬರಬೇಕು. ಅಂದ ಮಾತ್ರಕ್ಕೆ ಇಂಗ್ಲಿಷನ್ನು ನಾವು ತ್ಯಜಿಸಬೇಕೆಂದು ಅಲ್ಲ. ೨೦೦ ವರ್ಷಗಳಿಂದ ಇಂಗ್ಲಿಷಿನಿಂದ ನಾವು ಸಾಕಷ್ಟು ಪ್ರಯೋಜನವನ್ನೂ ಪಡೆದುಕೊಂಡಿದ್ದೇವೆ. ಒಂದು ಭಾಷೆಯಾಗಿ ಅದನ್ನು ಕಲಿಯುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿರಲಿ. ಹಾಗೆಯೇ ಮತ್ತೊಂದು ಭಾಷೆಯಿಂದ ಪಡೆಯುವುದರಿಂದಲೇ ನಮ್ಮ ಭಾಷೆ ಬೆಳೆಯಲು ಸಾಧ್ಯ ಎನ್ನುವುದನ್ನೂ ನಾವು ಅರ್ಥಮಾಡಿಕೊಳ್ಳಬೇಕು. ನಮ್ಮ ಸಾಹಿತ್ಯದಲ್ಲಿ ಎಷ್ಟೊಂದು ಸಂಪತ್ತು ತುಂಬಿದೆ. ಇದನ್ನೆಲ್ಲಾ ಇಂಗ್ಲಿಷಿಗೆ ಅನುವಾದ ಮಾಡಿಕೊಂಡೇ ಓದಬೇಕೇ? 

ನಮ್ಮ ಸಾಹಿತ್ಯ ಚಳವಳಿಗಳನ್ನು ಹೇಗೆ ನೋಡುತ್ತೀರಿ?

ನಮ್ಮಲ್ಲಿ ಇಂಗ್ಲಿಷನ್ನು ಅಧ್ಯಯನ ಮಾಡಿ ಅದರಂತೆ ನವ್ಯರು ಕಾವ್ಯ ರಚನೆಗೆ ಶುರು ಮಾಡಿಕೊಂಡರು. ಭಾವಗೀತೆಗಳು ಬಂದಿದ್ದು ಹಾಗೆ. ನಮ್ಮಲ್ಲಿ ಕತೆಗಳು ಇದ್ದವು. ಮಹಾಕಾವ್ಯಗಳಂತವು. ಆದರೆ ಪಾಶ್ಚಾತ್ಯರನ್ನು ಓದಿದ ಮೇಲೆ ಅಂತಹ ಕತೆಗಳನ್ನು ಬರೆಯಲು ಶುರು ಮಾಡಿದ ನವೋದಯ ಪಂಥ ಬಂದಿತು. ನವೋದಯಯದಲ್ಲಿ ಇದ್ದ ಒತ್ತು ಮಧ್ಯಮವರ್ಗದ ಜೀವನ ಶೈಲಿಯಾಗಿತ್ತು. ಆ ಸಂದರ್ಭದಲ್ಲಿ ಹೆಚ್ಚು ವಿದ್ಯಾವಂತರಾಗಿದ್ದ ಮೇಲುಜಾತಿ, ಮೇಲುಮಧ್ಯಮವರ್ಗದ ಜನರು ಬರೆದಿದ್ದರಲ್ಲಿ ಕೆಳವರ್ಗ, ಕೆಳಜಾತಿಗಳ ಜನರ ಬದುಕಿಗೆ ಸಂಬಂಧಿಸಿದ್ದು ಇರುತ್ತಿರಲಿಲ್ಲ. ಈ ವಿಷಯವನ್ನು ಒಮ್ಮೆ ಮಾಸ್ತಿಯವರಲ್ಲಿ ನಾನು ಪ್ರಸ್ತಾಪಿಸಿ ನೀವು ಬರೆದಿದ್ದೆಲ್ಲವನ್ನೂ ಒಂದಕ್ಷರ ಬಿಡದೇ ಓದಿದ್ದೀನಿ. ನಮ್ಮ ಭಾಷೆಯಲ್ಲಿ ಸತ್ವ ಏನಾದರೂ ಇದ್ದರೆ ಅದು ನಿಮ್ಮಂಥವರು ಬರೆದಿದ್ದಿರಿಂದಲೇ. ಆದರೆ ಕೆಲವೇ ಸೀಮಿತ ಪಾತ್ರಗಳು ಮತ್ತು ಹೊಟ್ಟೆ ಬಟ್ಟೆಗೆ ಇದ್ದು ನೆಮ್ಮದಿಯಾಗಿರುವವರ ವಿಚಾರ ಮಾತ್ರ ಬರೆಯುತ್ತೀರಿ. ಕಷ್ಟದಲ್ಲಿರುವವರು, ಗುಡಿಸಲಲ್ಲಿರುವವರ ಬಗ್ಗೆ ನೀವು ಬರೆಯುವುದಿಲ್ಲವಲ್ಲ? ಎಂದಿದ್ದಕ್ಕೆ ಅವರು ನಕ್ಕು, ಚೆನ್ನಬಸಪ್ಪ, ನನಗೆ ತಿಳಿದಿದ್ದು ನನಗೆ ತಿಳಿದಿದ್ದು ಕಂಡಿದ್ದು ನಾನು ಬರೀತೇನೆ. ಕಾಣದ್ದನ್ನು ಬರೆಯಲು ಸಾಧ್ಯವಿಲ್ಲವಲ್ಲ? ನೀನು ಕಾಣು, ಬರಿ. ಚೆನ್ನಾಗಿದ್ದರೆ ನಾನೂ ಓದುತ್ತೇನೆ, ಓದಿ ಎಂದು ’ಭಾವ’ ಪತ್ರಿಕೆಯಲ್ಲೂ ಹಾಕ್ತೇನೆ. ಎಂದರು. ಎಷ್ಟು ಸರಳವಾದ ಮಾತು! ಹಾಗೆ ಅವರು ಕಂಡಿದ್ದನ್ನು ಅವರು ಬರೆದರು. ಹಾಗೆ ನಾವು ಕಂಡಂತಹ ದುಸ್ಥಿತಿ, ಅನಾರೋಗ್ಯ, ಜೀತದಾಳು ಪದ್ಧತಿ, ಮಹಿಳೆಯರನ್ನು ಕಾಣುವ ಕಠೋರ ರೀತಿ, ಇದನ್ನೆಲ್ಲ ನೋಡಿ ನಮ್ಮ ಮನಸ್ಸು ವಿಚಲಿತವಾಗುತ್ತಿತ್ತು. ಪ್ರಗತಿಶೀಲರಾದ ಕಟ್ಟೀಮನಿ, ನಿರಂಜನ, ನನ್ನಂತವರೆಲ್ಲಾ ಆರ್ಥಿಕವಾಗಿ ದುರ್ಬಲರೇ. ತರಾಸು ಇದಕ್ಕೆ ಮಾತ್ರ ಹೊರತಾಗಿದ್ದರು. ಇವರೆಲ್ಲಾ ಬರೆದಾಗ ಹಿಂದಿನವರೆಲ್ಲ ಅದನ್ನು ಸಾಹಿತ್ಯವೇ ಅಲ್ಲವೆಂಬತೆ ನೋಡಿದರು. ಅದು ಸರಿಯಲ್ಲ. ಜನಜೀವನಕ್ಕೆ ಸಂಬಂಧವಿರದ ಸಾಹಿತ್ಯ, ಜನರ ಬಾಳು ಉತ್ತಮವಾಗುವುದಕ್ಕೆ ಸಹಾಯಕವಾಗದ ಸಾಹಿತ್ಯ ಸಾಹಿತ್ಯವೇ ಅಲ್ಲ ಎಂಬುದು ನಮ್ಮ ನಿಲುವಾಗಿತ್ತು. ೪೦ ರಿಂದ ೬೦ರ ದಶಕದಲ್ಲಿ ಪ್ರಗತಿಶೀಲರ ಉಪಠಳವಗಿಬಿಟ್ಟಿತ್ತು. ನಾನು, ಪಾಟೀಲ ಪುಟ್ಟಪ್ಪ ವೇದಿಕೆಯೇರಿದರೆ ಸಾಕು ನಮ್ಮನ್ನು ರಾಹು- ಕೇತು ಎಂಬಂತೆ ನೋಡುತ್ತಿದ್ದರು. ಅವರಿಗೆ ಬೇಕಾದ್ದು ಅವರು ಬರೆದುಕೊಳ್ಳಲಿ, ಓದಲಿ. ನಮ್ಮದೇನೂ ಹರಕತ್ತಿಲ್ಲ. ಆದರೆ ತಾವು ಬರೆದಿದ್ದೇ ಸಾಹಿತ್ಯ ಎಂದರೆ ನಾವು "ಬರ್ರಿ ಕುಸ್ತಿಗೆ" ಎಂದು ಹೊರಡುತ್ತಿದ್ದೆವು. ಶುದ್ಧ ಸಾಹಿತಿಗಳ ಕಣ್ಣಲ್ಲಿ ನಾನು ಎಂದೂ ಸಾಹಿತಿಯೇ ಆಗಿರಲಿಲ್ಲ. ದೇಶದ ಸ್ವಾತಂತ್ರ್ಯ ಚಳವಳಿ ವಸ್ತುವಿಷಯವಾಗುಳ್ಳ ಬೇಡಿ ಕಳಚಿತು ದೇಶ ಒಡೆಯಿತು ಎಂಬ ಒಂಬೈನೂರು ಪುಟದ ಬೃಹತ್ ಕಾದಂಬರಿ ನಾನು ಬರೆದಾಗ ಎಲ್.ಎಸ್. ಶೇಷಗಿರಿರಾವ್, ಮತ್ತೂರು ಕೃಷ್ಣಮೂರ್ತಿ ಮುಂತಾದ ಕೆಲವರು ಉತ್ತಮ ವಿಮರ್ಷೆ ಬರೆದರು. ಆದರೆ ದೊಡ್ಡ ಸಾಹಿತಿಗಳ್ಯಾರೂ ಮಾತೇ ಆಡಲಿಲ್ಲ. ನಾನು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಅತ್ಯಂತ ಸಾಮಾನ್ಯರ ದೃಷ್ಟಿಯಿಂದ ಆ ಕಾದಂಬರಿಯನ್ನು ಬರೆದೆ. ಆದರೆ ನಮ್ಮ ದೊಡ್ಡವರ ಸ್ಕೇಲಿಗೆ ನಾವು ಬರೆದಿದ್ದು ಸರಿಹೊಂದುತ್ತಿರಲಿಲ್ಲ. ನಂತರ ಬಂಡಾಯ, ದಲಿತ, ಸ್ತ್ರೀವಾದಿ ಮುಂತಾಗಿ ಸಾಹಿತ್ಯಕ ಚಳವಳಿಗಳು ನಡೆದವು. ನನ್ನ ಮೂಲ ಸಿದ್ಧಾಂತ ಎಂದರೆ ಸಾಹಿತಿಗಳಾಗಿ ನಾವು ಸಮಾಜದ ಸ್ಥಿತಿಗತಿಯನ್ನು ಗಮನಿಸಬೇಕು. ಅದನ್ನು ನಮ್ಮ ಸಾಹಿತ್ಯದಲ್ಲಿ ಕಾಣಿಸಬೇಕು. ಇಂದು ಸಮಾಜದಲ್ಲಿ ಇರುವ ಅಸಮಾನತೆ ಅದರಲ್ಲೂ ಜಾತಿಆಧಾರಿತ ಪೂರ್ವಾಗ್ರಹ ನಮ್ಮ ದೇಶದ ಜಾಡ್ಯ. ಈ ಜಾಡ್ಯನಿವಾರಣೆಗೆ ನಮ್ಮ ಸಾಹಿತ್ಯ ಪ್ರೇರೇಪಿಸಬೇಕು. ಸಮಾನತೆಯೆಡೆ ಸಾಹಿತ್ಯ ತುಡಿಯಬೇಕು. 

ಹಲವು ವರ್ಷಗಳ ಕಾಲ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದೀರಿ. ನ್ಯಾಯಾಂಗದ ಸುಧಾರಣೆ ನಮ್ಮ ದೇಶದಲ್ಲಿ ಯಾವ ನಿಟ್ಟಿನಲ್ಲಿ ನಡೆಯಬೇಕಿದೆ?

ನಮ್ಮಲ್ಲಿರುವ ಆಂಗ್ಲೋ ಸ್ಯಾಕ್ಸನ್ ನ್ಯಾಯಾಡಳಿತ ನಮ್ಮ ದೇಶಕ್ಕೆ ಅನುಗುಣವಾಗಿಲ್ಲ. ನಮ್ಮ ಜನರ ಜಾಯಮಾನಕ್ಕೆ ಒಗ್ಗುವಂತದಲ್ಲ. ಎಲ್ಲೋ ಕುಳಿತ ಜಡ್ಜು ಏನು ನ್ಯಾಯಾದಾನ ನೀಡಲು ಸಾಧ್ಯ? ಅದರಿಂದ ವಿಳಂಬ ಮತ್ತು ವಿಪರೀತ ಖರ್ಚಾಗುತ್ತದೆ. ಅಲ್ಲಿ ನ್ಯಾಯದಾನ ಅಗುವ ಖಾತ್ರಿಯೂ ಇಲ್ಲ. ಇದಕ್ಕೆ ಪರ್ಯಾಯವಾಗಿ ನಮ್ಮ ಪರಂಪರೆಯಲ್ಲಿ ಬಂದ ಪಂಚಾಯತಿ ನ್ಯಾಯ ವ್ಯವಸ್ಥೆಯೇ ಸೂಕ್ತ. ಇದನ್ನು ಗುರುತಿಸುವ ಅಂಶ ನಮ್ಮ ಮಂಡಲ ಪಂಚಾಯ್ತಿ ಕಾನೂನಿನಲ್ಲಿ ಮೊದಲಿಗೆ ಇತ್ತು.  ಸಣ್ಣ ಪುಟ್ಟ ಅಪರಾಧಗಳನ್ನು ಅಲ್ಲಿಯೇ ತೀರ್ಮಾನಿಸಿಬಿಡಲು ಸಾಧ್ಯ. ಉನ್ನತ ನ್ಯಾಯಾಲಯಗಳಿಗೆ ಎಷ್ಟೋ ಹೊರೆ ತಪ್ಪುತ್ತದೆ. ಗ್ರಾಮ ಮಟ್ಟದಲ್ಲೇ ಅವು ಪರಿಹಾರವಾಗಿಬಿಡುತ್ತವೆ. ಆದರೆ ಅದರಲ್ಲಿದ್ದ ಒಂದು ಲೋಪವೆಂದರೆ ಗ್ರಾಮಮಟ್ಟದ ನ್ಯಾಯಾಧೀಶರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಬೇಕು ಎಂದಿದ್ದುದು. ಇದರಿಂದ ದಲಿತರು ನ್ಯಾಯಾಧಿಪತಿಗಳಾಗಿ ಆಯ್ಕೆಯಾಗುವ ಸಂಭವ ಇರುವುದಿಲ್ಲವಾದ್ದರಿಂದ ಅದಕ್ಕೆ ಪ್ರತಿರೋಧ ಬಂತು. ಅಲ್ಲಿ ಕೇವಲ ಅಪ್ಪ, ಗೌಡ, ರಾವ್‌ಗಳೇ ನ್ಯಾಯಾಧಿಪತಿಗಳಾಗುತ್ತಾರೆ ಎಂಬುದು ಅವರ ತಕರಾರು. ಅದು ವಾಸ್ತವವೂ ಹೌದು. ಇದಕ್ಕೆ ನಾನು ಹೇಳುವುದೇನೆಂದರೆ ನಿವೃತ್ತ ಸರ್ಕಾರಿ ನೌಕರರನ್ನು ಗೌರವಪೂರ್ವಕ ಮ್ಯಾಜಿಸ್ಟ್ರೇಟ್, ಗೌರವಪೂರ್ವಕ ಮುನ್ಸೀಫ್‌ಗಳಾಗಿ ನೇಮಿಸಬೇಕು. ತೀವ್ರತರದ ಪ್ರಕರಣಗಳನ್ನು ಮಾತ್ರವೇ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಕಳುಹಿಸಬಹುದು. ಆಗ ನ್ಯಾಯದಾನ ಪದ್ದತಿ ಸರಳೀತಗೊಳ್ಳುತ್ತದೆ. 

ನ್ಯಾಯಾಂಗದಲ್ಲಿನ ಭ್ರಷ್ಟಾಚಾರಕ್ಕೆ ಪರಿಹಾರವೇನು?

ನ್ಯಾಯಾಧೀಶರ ನೇಮಕದಲ್ಲಿ ಸಾಕಷ್ಟು ಸುಧಾರಣೆಗಳಾಗಬೇಕಿದೆ. ಪ್ರಾಮಾಣಿಕತೆ, ನಿಷ್ಪಕ್ಷಪಾತಗಳಿಲ್ಲದಿದ್ದರೆ ಉತ್ತಮ ನ್ಯಾಯದಾನ ಅಸಾಧ್ಯ. ನ್ಯಾಯಾಧೀಶನಾದವನು ಕರೀಕೋಟಿನೊಳಗಿನ ಸನ್ಯಾಸಿಯಾಗಿರಬೇಕಾಗುತ್ತದೆ. 

ನಮ್ಮ ಅರ್ಥನೀತಿಗಳು ನಾಡು ನುಡಿ ಸಂಸ್ಕೃತಿಯ ಮೇಲೆ ಉಂಟು ಮಾಡುತ್ತಿರುವ ಪರಿಣಾಮಗಳ ಬಗ್ಗೆ ನಿಮ್ಮ ಅವಗಾಹನೆ ಏನು? 

ಆರ್ಥಿಕ ಧೋರಣೆ ಯಾವಾಗಲೂ ನಮ್ಮ ಸಾಂಸ್ಕೃತಿಕ ಜೀವನದ ಮೇಲೆ ಪರಿಣಾಮ ಬೀರಿಯೇ ಬೀರುತ್ತದೆ. ಒಂದು ಸಣ್ಣ ಉದಾಹರಣೆ ನೀಡುತ್ತೇನೆ. ಇಂದಿನ ಐಟಿ-ಬಿಟಿ ಯುಗದಲ್ಲಿ ಗಂಡ ಹೆಂಡಿ ಇಬ್ಬರೂ ಆಫೀಸಿಗೆ ಹೋಗುತ್ತಾರೆ. ಅಡುಗೆ ಮಾಡಲೂ ಸಮಯ ಇರುವುದಿಲ್ಲ. ಹೀಗಾಗಿ ಅವರ ಬಹುಪಾಲು ಉಪಹಾರ ಹೋಟೆಲ್‌ನಲ್ಲಿಯೇ ಆಗುತ್ತದೆ. ನಲವತ್ತು ಸಾವಿರ ಸಂಬಳ ಬಂದರೆ ಊಟಕ್ಕಾಗಿಯೇ ಹತ್ತು ಸಾವಿರ ಹೋದರೆ ಏನು ಅಲ್ಲವೇ? ಇದರ ಪರಿಣಾಮ ಎಂದರೆ ಇನ್ನು ಹತ್ತು ಇಪ್ಪತ್ತು ವರ್ಷದಲ್ಲಿ ನಮ್ಮ ರೊಟ್ಟಿ, ನಮ್ಮ ಹೋಳಿಗೆ, ನಮ್ಮ ಮುದ್ದೆ ಇರುವುದಿಲ್ಲ. ನಮ್ಮ ಅಡುಗೆ ಮನೆಯಲ್ಲಿ ರೊಟ್ಟಿ ಬಡಿಯುವ ಸದ್ದು ಕೇಳಲು ಇರುವುದಿಲ್ಲ. ಹಿಂದೆ ನಮ್ಮ ಊರುಗಳಲ್ಲಿ ರಸ್ತೆಯಲ್ಲಿ ನಡೆದಾಡುತ್ತಿದ್ದರೇ ಸಜ್ಜೆ ರೊಟ್ಟಿ ಪರಿಮಳ ಬರುತ್ತಿತ್ತು. ಆದರೆ ಇಂದು ಅದಿಲ್ಲ. ಕೃತಕ ಗೊಬ್ಬರಗಳು ನಮ್ಮ ರುಚಿಯನ್ನೇ ಕೆಡಿಸಿ ಹಾಕಿವೆ. ಶ್ಯಾವಿಗೆ ಬದಲು ನೂಡಲ್ ಬಂದಿದೆ. ಪಿಜ್ಜಾ, ಬರ್ಗರ್ ಇತ್ಯಾದಿ ಜಂಕ್ ಫುಡ್ ಬಂದಿದೆ. ಸಾವಿರಾರು ವರ್ಷಗಳಿಂದ ನಮ್ಮ ಮಹಿಳೆಯರು ಪ್ರಯೋಗಗಳ ಮೂಲಕ ಅಭಿವೃದ್ಧಿಪಡಿಸಿದ್ದ ಸಾವಿರಾರು ಬಗೆಯ ತಿನಿಸುಗಳು ಕಣ್ಮರೆಯಾಗುತ್ತಿವೆ. ಇದಕ್ಕೆ ಪರಿಹಾರ ಎಂದರೆ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ಎಂದಲ್ಲ. ಆದರೆ ನಮ್ಮದಕ್ಕೆ ನಾವು ಅಂಟಿಕೊಳ್ಳುವುದರಲ್ಲೇ ಪರಿಹಾರವಿದೆ. 

118ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಮೂಲಕ ಜಾರಿಯಾಗುತ್ತಿರುವ 371 ಜೆ ವಿಧಿ ಹೈದರಾಬಾದ್ ಕರ್ನಾಟಕದ ಬವಣೆಗಳಿಗೆ ಪರಿಹಾರವಾಗಬಲ್ಲುದೇ? 

ಶಾಸನದಿಂದಲೇ ಎಲ್ಲವೂ ಪರಿಹಾರವಿಲ್ಲ. ಅದನ್ನು ಸರಿಯಾಗಿ ಜಾರಿಗೆ ತುರುವುದರಿಂದ ಅಭಿವೃದ್ಧಿ ಸಾಧ್ಯ. ಈಗ ನೋಡಿ. ಗೂರ್ಖಾಲ್ಯಾಂಡ್‌ನ ಒಂದೊಂದು ಜಿಲ್ಲೆಗೆ ಕೊಡುವ ನೂರು ಕೋಟಿಗಳಲ್ಲಿ ಜನರಿಗೆ ತಲುಪಿರುವುದು ಅತ್ಯಲ್ಪ ಮಾತ್ರ. ಹೀಗಾಗಿ ಜನರಿಗೆ ಅನುಕೂಲವಾಗುವಂತೆ ಸಮರ್ಪಕ ಅನುಷ್ಠಾನವಿಲ್ಲದಿದ್ದರೆ 371 ಜೆ ಮಾತ್ರ ಅಲ್ಲ 371 ಝಡ್ ವರೆಗೆ ಮಾಡಿದರೂ ಉಪಯೋಗವಿಲ್ಲ. ಈ ಕಾಯ್ದೆ ಅಸಮಾನತೆಯ ನಿರ್ಮೂಲನೆಗೆ ಅನುಕೂಲವಾಗಬೇಕು. ಮಧ್ಯವರ್ತಿಗಳ ಪಾಲಾಗದೇ ಜನರಿಗೆ ಅದರ ಫಲ ಸಿಗಬೇಕು. ಇಲ್ಲವಾದರೆ ಉತ್ತರ ಕರ್ನಾಟಕದ ಜನ  ಬಡಿಗೆ ತೆಗೆದುಕೊಳ್ಳುತ್ತಾರಷ್ಟೆ. ಕುವೆಂಪು ಒಮ್ಮೆ ನನಗೆ ಕೇಳಿದ್ದರು. 'ಉತ್ತರ ಕರ್ನಾಟಕದಲ್ಲಿ ಅಷ್ಟೊಂದು ಕೇಸುಗಳು ಯಾಕಿರುತ್ತವೆ?’ ಅಂತ. ಅದಕ್ಕೆ ನಾನು 'ಉತ್ತರ ಕರ್ನಾಟಕದವರು ಬಹಳ ಒಳ್ಳೆಯವರು. ಅದಕ್ಕೆ’ ಅಂದಿದ್ದೆ. ಆಶ್ಚರ್ಯ ಚಕಿತರಾಗಿ ಅವರು 'ಜನ ಒಳ್ಳೆಯವರಾದರೆ ಅದು ಹೇಗೆ ಅಷ್ಟೊಂದು ಕೇಸುಗಳಿರಲು ಸಾಧ್ಯ? ಎಂದು ಮರುಪ್ರಶ್ನೆ ಹಾಕಿದ್ದರು.  ಅದಕ್ಕೆ ನಾನು "ಹೌದು. ಅವರಿಗೆ ಅನ್ಯಾಯ ಆಯ್ತು ಅಂತ ಕಂಡು ಬಂದರೆ ಅವರು ಸಹಿಸೋದಿಲ್ಲ. ಅದಕ್ಕೆ" ಅಂದೆ. ಅದಕ್ಕೆ ಪುಟ್ಟಪ್ಪನವರು ಬಹಳ ನಕ್ಕಿದ್ದರು. 

ಟಿಪ್ಪೂ ವಿಷಯದಲ್ಲಿ ಆಗಾಗ ನಡೆಯುವ ವಿವಾದದ ಕುರಿತು ನಿಮ್ಮ ಅಭಿಪ್ರಾಯವೇನು?

ಟಿಪ್ಪೂ ಬ್ರಿಟಿಷರ ಪರಮ ಶತ್ರುವಾಗಿದ್ದ. ಆ ಕಾರಣ ಅವನನ್ನು ದುರ್ಬಲಗೊಳಿಸಲು ಅವರು ಮಾಡಿದ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಆತನಿಗೆ ಅಷ್ಟು ಮಟ್ಟದ ಜನಬೆಂಬಲವಿತ್ತು. ಆ ಜನಬೆಂಬಲವನ್ನು ಇಲ್ಲವಾಗಿಸಲು ಬ್ರಿಟಿಷರು ಇಂತಹ ಸಾಕಷ್ಟು ಅಪಪ್ರಚಾರಗಳನ್ನು ನಡೆಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಒಬ್ಬ ಹಿಂದೂ ಆಗಿದ್ದ ಪೂರ್ಣಯ್ಯ ಟಿಪ್ಪೂನ ಪ್ರಧಾನ ಮಂತ್ರಿಯಾಗಿರಲಿಲ್ಲವೇ? ಇಂದಿಗೂ ಸಾಮಾನ್ಯ ಹಿಂದೂಗಳು ಟಿಪ್ಪೂ ಕುರಿತು ಲಾವಣಿಗಳನ್ನು ಹಾಡಿ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಾರಲ್ಲವೇ? ಟಿಪ್ಪೂ ಅಷ್ಟೊಂದು ಕ್ರೂರಿಯಾಗಿದ್ದರೆ ಇದೆಲ್ಲಾ ಹೇಗೆ ಸಾಧ್ಯವಿತ್ತು? ಟಿಪ್ಪೂ ಸೋತಿದ್ದು ನಮ್ಮವರ ದ್ರೋಹದಿಂದಲೇ. ಟಿಪ್ಪೂ ವಿರುದ್ಧ ಮಾತನಾಡುವವರು ಪೂರ್ವಗ್ರಹಪೀಡಿತರಾಗಿದ್ದಾರೆ. ಅವರು ಯಾವಾಗಲೂ ಗತವನ್ನು ವೈಭವೀಕರಿಸುವುದರಲೇ ಸಂತೋಷಪಡುತ್ತಾರೆ. ಅಂತವರು ಪ್ರತಿಪಾದಿಸುವುದು ಧರ್ಮವನ್ನಲ್ಲ. ಅದು ಮತಾಂಧತೆ. 

ನಿಮ್ಮ ಪ್ರಕಾರ ಧರ್ಮ ಎಂದರೆ?

ಧರ್ಮ ಎನ್ನುವುದು ಎಂದಿಗೂ ಬೇರೆ ಬೇರೆ ಅಲ್ಲ. ಬೇರೆ ಇರುವುದು ಮತಗಳಷ್ಟೆ. ಏಕ ದೇವೋಪಾಸನೆ ಒಂದು ಮತವಾದರೆ ಬಹದೇವೋಪಾಸನೆ ಒಂದು ಮತ. ಅವರವರು ತಮ್ಮತಮ್ಮ ಮತವನ್ನು ಪಾಲಿಸಲಿ. ನಂಬಿಕೆಯನ್ನು ಯಾರೂ ಪ್ರಶ್ನಿಸುವ ಹಕ್ಕಿಲ್ಲ. ಆದರೆ ಇದೇ ಸರಿ ಎಂದು ಬೇರೆಯವರ ಮೇಲೆ ಹೇರುವುದಿದೆಯಲ್ಲ ಅದ ಸಮಸ್ಯಾತ್ಮಕ. ಧರ್ಮದ ಮೂಲಸೂತ್ರ ಎಂದರೆ ಋಗ್ವೇದದಲ್ಲಿ ಬರುವ ’ಏಕಂಸತ್ ವಿಪ್ರಾ ಬಹುದಾ ವದಂತಿ ಅಂದರೆ ಇರುವ ಸತ್ಯ ಒಂದೇ. ಬೇರೆ ಬೇರೆಯವರು ಅದನ್ನು ಬೇರೆ ಬೇರೆಯಾಗಿ ಗ್ರಹಿಸುತ್ತಾರೆ. ಅಷ್ಟೆ. ಹಾಗೆಯೇ ’ಸರ್ವ ಕಲ್ವಿದಂ ಬ್ರಹ್ಮ’. ಇದೇ ಧರ್ಮ. ಹೀಗಿರುವಾಗ ಜಾತಿ ಭೇದ ಯಾಕೆ? ಒಂದು ಸೃಷ್ಟಿ ಇದೆ. ಸೃಷ್ಟಿಕರ್ತ ಅಲ್ಲ. ಸೃಷ್ಟಿ ಹೇಗೆ ಎಂದು ಯಾರೂ ಹೇಳಲು ಆಗಿಲ್ಲ. ಅಂತಹ ಒಂದು ಸತ್ಯವನ್ನು ನಾನು ನಂಬುತ್ತೇನೆ. ಆದರೆ ಈ ’ದೇವರು’ ಎಂಬ ಕಲ್ಪನೆಯನ್ನು ನಾನು ನಂಬುವುದಿಲ್ಲ. ದೈವ ಎನ್ನುವುದು ನಾವು ಮಾಡಿಕೊಂಡ ಕಲ್ಪನೆ. ಬಸವಣ್ಣ ಹೇಳಿದ್ದೂ ಅದನ್ನೇ ಅಲ್ಲವೇ? ನೀನೇ ದೇವರು. ನಮ್ಮನ್ನು ನಾವು ಅರಿತುಕೊಳ್ಳುವುದರಲ್ಲೇ ಎಲ್ಲವೂ ಇದೆ. ನನ್ನ ದೃಷ್ಟಿಯಿಂದ ದೇವರು ಎಂದರೆ ಒಂದು ಶಕ್ತಿ. ಮತ್ತು ಆ ಶಕ್ತಿಯೇ ತನ್ನ ವಿಸ್ತಾರ ರೂಪದಲ್ಲಿ ನಮಗೆ ಕಾಣುತ್ತದೆ. 

ಯುವ ಲೇಖಕರಿಗೆ ನಿಮ್ಮ ಸಂದೇಶವೇನು?

ತಮ್ಮ ಶಿಕ್ಷಣದಿಂದ ಹಿಡಿದು, ಸಮಾಜ ಅಧ್ಯಯನದಿಂದ ಹಿಡಿದು ಪ್ರತಿಯೊಂದರಲ್ಲೂ ಅವರು ಸಮದರ್ಶಿಯಾಗಿರಬೇಕು. ಪೂರ್ವಗ್ರಹಗಳಿಂದ ದೂರವಿರಬೇಕು. ಅದರಲ್ಲೂ ಮತದ ವಿಚಾರದಲ್ಲಿ ಬಹಳ ಸಮದರ್ಶಿತ್ವವನ್ನು ನಮ್ಮ ಯುವ ಲೇಖಕರು ತೋರಬೇಕು. ನನ್ನ ಪ್ರಕಾರ ಭ್ರಷ್ಟಾಚಾರಕ್ಕಿಂತಲೂ ದೊಡ್ಡ ವ್ಯಾಧಿ ಮತಾಂಧತೆ ಅಥವಾ ಕೋಮುವಾದ. ಭ್ರಷ್ಟಾಚಾರವಾದರೆ ಮಾಡಿದವರಿಗೇ ಸೀಮಿತವಾಗಿರುತ್ತದೆ. ಮತಾಂಧತೆ ಹಾಗಲ್ಲ. ಇಂದು ಮತಾಂಧತೆ ಪ್ರತಿಯೊಬ್ಬರ ಮನಸ್ಸಿನಲ್ಲಿದೆ. ಬರಹಗಾರನಾದವರಿಗೆ ಮತಾಂಧ ಧೋರಣೆಯಿರಬಾರದು. ವಿಷಪೂರಿತ ಬರವಣೆಗೆಯಿಂದ ನೀವು ಸಾಧಿಸುವುದಾದರೂ ಏನು? ಹಾಗೆಯೇ ಆತ ಭ್ರಷ್ಟನಾಗಿರಬಾರದು. ಇಂದು ನೋಡಿ ಬರಹಗಾರರು, ಪತ್ರಕರ್ತರು ಏನಾಗಿದ್ದಾರೆ?. ಹೊಸಕೋಟೆಯಲ್ಲಿ ಸ್ಥಳೀಯ ವರದಿಗಾರನಾಗಿದ್ದವನು ಬೆಂಗಳೂರಿಗೆ ಬಂದು ಹತ್ತು ವರ್ಷದಲ್ಲಿ ಏಳು ಮನೆಗಳಿರುವ ಸಾಲು ಕಟ್ಟಿಸುತ್ತಾನೆ. ಹಲವು ವಾಹನಗಳನ್ನು ಖರೀದಿಸುತ್ತಾನೆ. ಬಿಳಿ ಬೋರ್ಡು ಹಾಕಿಕೊಂಡೇ ಹಳದಿ ಬೋರ್ಡಿನ ಕೆಲಸ ಮಾಡುತ್ತಾನೆ. ಅವನು ನಮ್ಮ ಜನಗಳ ಪ್ರತಿನಿಧಿ! ಇಂದು ಭ್ರಷ್ಟ ಬರಹಗಾರರಲ್ಲಿ ಪತ್ರಕರ್ತರೂ ಸೇರಿದ್ದಾರೆ. ಅಂತಹವರು ಖಜಾನೆಯನ್ನು ಲೂಟಿಮಾಡುವ ಐಎಎಸ್ ಆಫೀಸರ್‌ಗಳಿಗಿಂತಲೂ ಅಪಾಯಕಾರಿ ಎನ್ನುತ್ತೇನೆ ನಾನು. ಬರಹಗಾರರಿಗೆ ನಾನು ಹೇಳುವುದಿಷ್ಟೆ. ನೀವು ಅಮೆರಿಕ, ಇಂಗ್ಲೆಂಡಿನ ಪುಸ್ತಕಗಳನ್ನು ಓದಬೇಕಾಗಿಲ್ಲ. ಮೊದಲು ಒಳ್ಳೆಯವರಾಗಿ. ಸಮಾಜದ ಜನರ ದುಃಖ ನಿವಾರಣೆಗಾಗಿ ನಿಮ್ಮನ್ನು ಅರ್ಪಿಸಿಕೊಳ್ಳಿ. ಅದಕ್ಕೆ ಪ್ರಾಮಾಣಿಕತೆ, ನಿಸ್ವಾರ್ಥತೆ ಬೇಕಾಗುತ್ತದೆ. ನಿಮ್ಮ ಮನಸ್ಸು ನಿರ್ಮಲವಾಗಿರಲಿ.    
 ಚಿತ್ರಗಳು:ಹರ್ಷ

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.