ಜೂನ್ 26, 2023

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

 


ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ,
ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದು ನಮ್ಮಾಸೆ.‌
ಮಾನ್ಯ ಸ್ಪೀಕರ್ ಅವರೆ,
ಶಾಸಕರಿಗಾಗಿ ಶಿಬಿರ ನಡೆಸುವುದು ಬೇಡ ಎಂದು ಯಾರೂ ಹೇಳಿಲ್ಲ. ಶಾಸಕರಿಗೆ ಕಲಾಪ ನಡೆಯುವ ರೀತಿ ರಿವಾಜುಗಳ ಕುರಿತು, ಪ್ರಜಾಪ್ರಬುತ್ವದ ತತ್ವಗಳ ಕುರಿತು ಶಿಬಿರ ಪ್ರತಿ ಸಲ ನಡೆಯುತ್ತದೆ. ಅದು ಅಗತ್ಯ ಕೂಡಾ. ಈ ಬಗ್ಗೆ ಯಾವ ತಕರಾರೂ ಯಾರಿಗೂ ಇಲ್ಲ. ಸಮಸ್ಯೆ ಆಗಿದ್ದು ಈ ಸಲ ನೀವು ಹೊಸದಾಗಿ ಅದೇನೋ ಮೋಟಿವೇಶನ್ ಕೊಡಿಸೋಕೆ ಅಂತ ಕೆಲವರು ಮಹಾಮಹಿಮರ ಹೆಸರು ಹೇಳಿದ್ರಲ್ಲ... ಅದು. ನಿಮ್ಮ ಹೇಳಿಕೆಯಿಂದ ಎಲ್ಲರಿಗೂ ಸಿಕ್ಕಿದ ಸ್ಪಷ್ಟತೆ ಏನು ಎಂದರೆ ವೀರೇಂದ್ರ ಹೆಗ್ಗಡೆ, ರವಿಶಂಕರ ಗುರೂಜಿ, ಗುರುರಾಜ ಕರ್ಜಗಿ ಇವರ ಬಗ್ಗೆ ನಿಮಗೆ ಯಾವ ಸ್ಪಷ್ಟತೆ ಇಲ್ಲ ಎನ್ನುವುದು.
ಅದೇನೋ ಒತ್ತಡ ರಹಿತ ಕೆಲಸದ ನಿರ್ವಹಣೆ ಬಗ್ಗೆ ಆದ್ಯಾತ್ಮ ತರಬೇತಿ ಎಂದಿದ್ದೀರಿ. ನಿಮ್ಮ ಮಾತು ಹೇಗಿದೆ ಎಂದರೆ ಹೆಬ್ಬಾವನ್ನ ಕರೆದು ಕೋಳಿಮರಿಗಳಿಗೆ ಒತ್ತಡ ನಿರ್ವಹಣೆ ಹೇಗೆ ಎಂದು ತರಬೇತಿ ಕೊಡಿಸಿದಂತೆ.
ನೀವು ಕರಾವಳಿಯ ಒಬ್ಬ ಶಾಸಕರಾಗಿ ಆತ್ಮಸಾಕ್ಷಿ ಇಟ್ಟುಕೊಂಡು ಹೇಳಿ. ಒಬ್ಬ ಶಾಸಕ ಯಾವಾಗ ಒತ್ತಡವಿಲ್ಲದೆ ಶಾಂತಿ ಸಮಾದಾನದಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ? ಇಡೀ ರಾಜ್ಯದಲ್ಲಿ, ದೇಶದಲ್ಲಿ ಮತ್ತು ನಿಮ್ಮ ಕ್ಷೇತ್ರದಲ್ಲಿ ವಿವಿದ ದರ್ಮಗಳ ಜನರ ನಡುವೆ ಶಾಂತಿ ಸಹಬಾಳ್ವೆ ಇದ್ದಾಗ ಮಾತ್ರ ತಾನೆ? ಕೋಮು ದ್ವೇಷದ ವಾತಾವರಣ ಇದ್ದಾಗ ಶಾಸಕರು ಒತ್ತಡರಹಿತರಾಗಿ ಇರಬಲ್ಲರೇ? ಹಾಗಾದರೆ ನೀವು ಆಯ್ಕೆ ಮಾಡಿದ್ದ ಈ ಮೂವರು ಸೊ ಕಾಲ್ಡ್ ಆದ್ಯಾತ್ಮ ಬೋದಿಸುವವರು ಈ ನಾಡಿನಲ್ಲಿ ಶಾಂತಿ ಸಹಬಾಳ್ವೆಗೆ ನೀಡಿರುವ ಕೊಡುಗೆ ಏನು? ಮಾನ್ಯ ಸಬಾದ್ಯಕ್ಷರೆ ನಾಡಿನ ಜನರು ಹಸಿವಿಲ್ಲದೆ ನೆಮ್ಮದಿಯಿಂದ ಬಾಳಲಿ ಎಂದೇ ಅಲ್ಲವೆ ನಿಮ್ಮ ಸರ್ಕಾರ ಗ್ಯಾರಂಟಿ ಬಾಗ್ಯಗಳನ್ನು ಜಾರಿಗೆ ತಂದಿದ್ದು. ಇವುಗಳು ಸುಸೂತ್ರವಾಗಿ ಜನರಿಗೆ ತಲುಪಿದಾಗ ಮಾತ್ರ ನಿಮ್ಮ ಶಾಸಕರು ಒತ್ತಡರಹಿತವಾಗಿರಲು ಸಾದ್ಯ. ಆದರೆ ಈ ಕಲ್ಯಾಣ ಕಾರ್ಯಕ್ರಮಗಳನ್ನೇ ದೇಶಕ್ಕೆ ಗಂಡಾಂತರ ತರುವ ಬಿಟ್ಟಿ ಬಾಗ್ಯಗಳು ಎಂದು ಹೀಗಳಿಯುವ ಆರೆಸ್ಸೆಸ್ ಸ್ವಯಂಸೇವಕ ಗುರುರಾಜ ಕರ್ಜಗಿಯಿಂದ ನಿಮಗೆ ಪ್ರೇರಣೆ ಬೇಕಾ ಮಾನ್ಯ ಸಬಾದ್ಯಕ್ಷರೆ?
ತರಬೇತಿ ಶಿಬಿರ ನೋಡಿದ ಬಳಿಕ ಮಾತಾಡಬೇಕು ಎಂದು ಹೇಳಿದ್ದೀರಿ. ನೀವು ಅವಕಾಶ ಕೊಟ್ಟರೆ ದಾವೂದ್ ಇಬ್ರಾಹಿಂ ಕೂಡಾ ತರಬೇತಿ ಶಿಬಿರಕ್ಕೆ ಬಂದು ಶಾಸಕರಿಗೆ ಮೋಟಿವೇಶನ್ ಕೊಡಬಲ್ಲ. ಆದರೆ ಸರ್ಕಾರಕ್ಕೆ ಸಿಗುವ ಮರ್ಯಾದೆ ಏನು? ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ನಿರ್ಮಿಸುವ ಬದ್ದತೆ ಗೋಶಿಸಿರುವ ನೀವು ದ್ವೇಷದ ವ್ಯಾಪಾರಿ ನರೇಂದ್ರ ಮೋದಿಯ ಪರಮ ಬಕ್ತರನ್ನು, ರೇಸಿಸ್ಟ್ ಮತ್ತು ಪ್ಯಾಸಿಸ್ಟ್ ಸಂಗಟನೆಯಾಗಿರುವ ಆರೆಸ್ಸೆಸ್ ಸಿದ್ದಾಂತಿಗಳನ್ನು, ಸ್ಯೂಡೋ ಕಾರ್ಪೊರೇಟ್ ಆದ್ಯಾತ್ಮವಾದಿಗಳನ್ನು ಕರೆಯವುದು ಯಾವುದೇ ಶೋಬೆ ತರುವುದಿಲ್ಲ. ಅಂತಹ ನಡೆ ಅತ್ಯಂತ ನಕಾರಾತ್ಮಕ ಪ್ರಬಾವವನ್ನು ಉಂಟು ಮಾಡುತ್ತದೆ.
ಯಾವುದಾದರೂ ಶಾಸಕರಿಗೆ ಒತ್ತಡ ಇದ್ರೆ, ಮಾನಸಿಕ ಕ್ಷೋಬೆ ಇದ್ರೆ ಅವರು ಒಳ್ಳೆಯ ಮಾನಸಿಕ ತಜ್ಞರನ್ನು ಕಾಣಬೇಕೇ ಹೊರತು ಸ್ಯೂಡೋ ಆದ್ಯಾತ್ಮಿಕರೂ, ಜನರ ದೈವನಂಬಿಕೆಯನ್ನು ತಮ್ಮ ವ್ಯಾಪಾರಕ್ಕೆ ಬಳಸಿಕೊಳ್ಳುವರನ್ನೂ ಅಲ್ಲ. ನಿಜವಾದ ಆದ್ಯಾತ್ಮ ಚಿಂತಕರು ಸಮಾಜದಲ್ಲಿ ನೆರೆಹೊರೆಯ ಸಹಮನುಷ್ಯರ ನಡುವೆ ಸಂಬಂದಗಳು ಹೇಗಿರಬೇಕು, ನಮ್ಮಲ್ಲಿ ಸಹಾನುಬೂತಿ ಯಾಕಿರಬೇಕು, ಹೇಗಿರಬೇಕು, ದಯೆಯೆಂಬುದು ಮನುಶ್ಯರಿಗೆ ಯಾಕಿರಬೇಕು ಇತ್ಯಾದಿ ಸಂಗತಿಗಳನ್ನು ಮಾತಾಡುತ್ತಾರೆ. ಹೀಗೆ ನಿಜವಾದ ಆದ್ಯಾತ್ಮ ತಿಳಿಸುವ ಹತ್ತಾರು ಚಿಂತಕರಿದ್ದಾರೆ, ಶರಣ ಸಂಪ್ರದಾಯದ ಸ್ವಾಮೀಜಿಗಳಿದ್ದಾರೆ, ಬುದ್ದಗುರುವಿನ ನಿಜ ಅನುಯಾಯಿಗಳಿದ್ದಾರೆ... ಇವರನ್ನೆಲ್ಲಾ ಬಿಟ್ಟು ಇಡೀ ಕರಾವಳಿಗೆ ಕೋಮು ದಳ್ಳುರಿಯಿಂದ ಉರಿಯುವಾಗ ದಳ್ಳುರಿ ಹಚ್ಚುವ ಸಂಗಟನೆಗಳೊಂದಿಗೆ ಕೂಡಿಕೆ ಮಾಡಿಕೊಂಡವರು, ಕರಾವಳಿಯ ಜನತೆಗೆ ಒಂದೇ ಒಂದು ದಿನ ಸಹಬಾಳ್ವೆಯ ಸಂದೇಶ ನೀಡದವರು ನಿಮಗೆ ಆದ್ಯಾತ್ಮ ಬೋದಿಸುವರಾಗುತ್ತಾರೆ, ಅವರದೇ ಕೇಂದ್ರದಲ್ಲಿ ಶಿಬಿರ ನಡೆಯುತ್ತದೆ ಎಂದೂ ಹೇಳಿದ್ದೀರಿ.
ಮಾನ್ಯ ಸಬಾದ್ಯಕ್ಷರೆ ದಯವಿಟ್ಟು ಇಂತಹ ಅನಗತ್ಯ ಸಂಪ್ರದಾಯಕ್ಕೆ ನಾಂದಿ ಹಾಡಬೇಡಿ. ಸದ್ಯ ಶಾಸಕರಿಗೆ ಕಲಾಪಗಳು ನಡೆಯುವುದು ಹೇಗೆ, ಸಂವಿಧಾನದ ಆಶಯಗಳು ಏನು, ಯಾಕೆ ಸಂವಿದಾನದ ವಿರುದ್ದ ನಡೆದುಕೊಳ್ಳಬಾರದು, ನಮ್ಮ ದೇಶ ಕಟ್ಟಿದ ಮಹನೀಯರು ಕನಸುಗಳೇನಿದ್ದವು, ಈ ದೇಶಕ್ಕೆ ಒಂದು ಸಾರ್ವಬೌಮಿ, ಸೆಕ್ಯುಲರ್, ಸಮಾಜವಾದಿ, ಗಣರಾಜ್ಯದ ಬುನಾದಿ ಹಾಕಲು ಆ ನಮ್ಮ ಹಿರಿಯ‌ ಚೇತನಗಳು ಪಟ್ಟ ಪಾಡೇನು, ಮಾಡಿದ ತ್ಯಾಗಗಳೇನು ಇವುಗಳನ್ನು ತಿಳಿಸಿಕೊಡಿ ಸಾಕು.
ಸಂವಿದಾನದ ಪೀಟಿಕೆಯನ್ನು ಎಲ್ಲಾ ಶಾಸಕರಿಗೆ ಬಾಯಿಪಾಟ ಮಾಡಿಸಿ, ಅದರ ಒಂದೊಂದು ಅಂಶದ ಬಗೆಗೂ ಅರಿವು ಮೂಡಿಸಿ. ಶಾಸಕರಿಗೆ ನಮ್ಮ ಸಂವಿಧಾನದ ಪೀಟಿಕೆಗಿಂತ ದೊಡ್ಡ ಮೋಟಿವೇಶನ್‌ ಬೇಕಿಲ್ಲ. ಅದರಂತೆ ಎಲ್ಲಾ ಶಾಸಕರು ನಡೆದುಕೊಂಡರೆ ಸಾಕು ತಂತಾನೇ ಈ ನಮ್ಮ ಕನ್ನಡ ನಾಡು ಶಾಂತಿ, ಸಮೃದ್ದಿಯೆಡೆ ನಡೆಯುತ್ತದೆ.
ಯಾವ ಆದ್ಯಾತ್ಮವೂ ಬೇಡ, ಪುಕ್ಕಟೆ ಉಪದೇಶವೂ ಬೇಡ.
(ಕಡೆಯಲ್ಲಿ ಒಂದು ಮಾತು- ಸಾಮಾಜಿಕ ಜಾಲತಾಣದಲ್ಲಿ ಬರೆಯುವವರ ಕುರಿತು ನಿಮ್ಮ ಆಕ್ರೋಶವನ್ನು ಲೈಟಾಗಿ ಹೊರಹಾಕಿದ್ದೀರ. ಹೆಚ್ಚೇನೂ ಹೇಳುವುದಿಲ್ಲ, ಇವತ್ತು ಕಾಂಗ್ರೆಸ್ ಗೆದ್ದು, ನೀವು ಅದಿಕಾರ ಹಿಡಿಯುವಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ ಇದೆಯೋ ಇಲ್ಲವೋ ಎದೆಮುಟ್ಟಿ ಹೇಳಿ. ಇದೆ ಎಂದಾದರೆ ಆಗ ನಮಗೆ ಸ್ಪಷ್ಟತೆ ಇತ್ತೋ ಇಲ್ಲವೋ ಅದನ್ನೂ ಹೇಳಿ)
ಇಂತಿ
ನಿಮ್ಮ ಒಬ್ಬ ಅಬಿಮಾನಿ
ಹರ್ಷಕುಮಾರ್ ಕುಗ್ವೆ
(ವಿ.ಸೂ. ಈ ಬರೆಹದಲ್ಲಿ ಮಹಾಪ್ರಾಣ ಅಕ್ಷರ ಬಳಸಿರುವುದಿಲ್ಲ)

ಕಾಮೆಂಟ್‌ಗಳಿಲ್ಲ:

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.