ಡಿಸೆಂಬರ್ 04, 2013

ಲೇಖಕ ಯಾವತ್ತೂ ಸತ್ಯವನ್ನು ಹೇಳಬೇಕು: ನಾ. ಡಿಸೋಜಾ.





 (ಹಿರಿಯ ಸಾಹಿತಿ ನಾ. ಡಿಸೋಜಾ ಅವರೊಂದಿಗೆ ನಡೆಸಿರುವ ಸಂದರ್ಶನದ ಆಯ್ದ ಭಾಗ)

ನೀವು ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದ ಹಿನ್ನೆಲೆಯೇನು? ಹೇಗೆ ಬರವಣಿಗೆಯ ಗೀಳು ಹತ್ತಿಸಿಕೊಂಡಿರಿ?
ಮೂಲತಃ ಕೊಂಕಣಿ ಭಾಷಿಕನಾದ ನನಗೆ ಮನೆಯಲ್ಲಿ ಓದುವ ವಾತಾವರಣವಿತ್ತು. ನಮ್ಮ ತಂದೆ ಸ್ಕೂಲಿನ ಮಾಸ್ತರರಾಗಿದ್ದರು. ಅವರು ತಮ್ಮ ಪುಸ್ತಕಗಳಲ್ಲಿ ಮಕ್ಕಳಿಗಾಗಿ ಸಣ್ಣ ಸಣ್ಣ ಪದ್ಯಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು. ದೋಣಿ ಸಾಗಲಿ, ಮುಂದೆ ಹೋಗಲಿ, ನಾ ಕಸ್ತೂರಿ ನೀ ಹೊಯ್ಸಳ ಹೀಗೆ. ನಾನು 6ನೇ ವಯಸ್ಸಿನಲ್ಲಿ ಮೊದಲು ಓದಿದ ಪುಸತಕ ಅದೇ. ನನ್ನ ತಾಯಿ ನನಗೆ ಕೊಂಕಣಿ ಪದ್ಯಗಳನ್ನು ಹೇಳುತ್ತಿದ್ದರು. ತಂದೆ ಕಥೆಗಳನ್ನು ಹೇಳುತ್ತಿದ್ದರು. ನಾನು ಬೆಳೆಯುವ ಪೂರ್ವದಲ್ಲಿಯೇ ಅಕ್ಕ-ಅಣ್ಣಂದಿರ ಎಲ್ಲಾ ಪುಸ್ತಕಗಳನ್ನೂ ಓದಿ ಬಿಟ್ಟಿದ್ದೆ. ಸಂಧ್ಯಾರಾಗ, ಇಜ್ಜೋಡು, ಮರಳಿ ಮಣ್ಣಿಗೆ ಮುಂತಾದವನ್ನು ಪ್ರಾಥಮಿಕ ತರಗತಿಗಳಲ್ಲೇ ತಿರುವಿಹಾಕಿದ್ದೆ. ಓದುತ್ತಾ, ಓದುತ್ತಾ ಬರೆಯಬೇಕೆನ್ನಿಸಿತು. ಬರಹಗಾರನಾದೆ. ಅತ್ಯುತ್ತಮ ಶಿಕ್ಷಕರು ಸಿಕ್ಕಿದರು. ಗೊರೂರು ರಾಮಸ್ವಾಮಿ ಅಯ್ಯಂಗಾರರ ಅಣ್ಣ ಗೊರೂರು ನರಸಿಂಹಾಚಾರ್ ಎನ್ನುವವರು ಸಾಗರದ ಹೈಸ್ಕೂಲಿನಲ್ಲಿ ನನಗೆ ಶಿಕ್ಷಕರಾಗಿದ್ದರು.ಕಾಲೇಜಿನಲ್ಲಿ ಜಿ.ಎಸ್.ಶಿವರುದ್ರಪ್ಪ ನನಗೆ ಉಪನ್ಯಾಸಕರಾಗಿದ್ದರು. ಹಾಗೇ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಯಿತು.
ಹೊಸ ತಲೆಮಾರಿನವರ ಸಾಹಿತ್ಯ ಸೃಷ್ಟಿಯನ್ನು ನೋಡಿದಾಗ ನಿಮಗೇನನ್ನಿಸುತ್ತಿದೆ?
ನಿಜಕ್ಕೂ ಇಂದಿನ ಹೊಸ ತಲೆಮಾರಿನ ಅನೇಕ ಲೇಖಕರು ಬಹಳ ಜವಾಬ್ದಾರಿಯಿಂದ ಬರೆಯುತ್ತಿದ್ದಾರೆ. ಅವರಿಗೆ ಸಾಹಿತ್ಯವನ್ನು ಈ ದಿಕ್ಕೆಗೇತೆಗೆದುಕೊಂಡು ಹೋಗಬೇಕು ಎಂಬ ನಿಲುವಿದೆ. ಹಾಗೆಯೇ ಬರೆಯುತ್ತಿದ್ದಾರೆ ಕೂಡ. ನಮಗಿಂತ ಕಿರಿಯರಾದ ದೇವನೂರ ಮಹಾದೇವ ಇರಬಹುದು, ಜಯಂತ ಕಾಯ್ಕಿಣಿ ಇರಬಹುದು, ವಸುಧೇಂದ್ರ ಮತ್ತಿತರರು ಉತ್ತಮ ರೀತಿಯಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಆದರೆ ನಮಗೆಅಂದು ಇದ್ದಂತಹ ಓದುಗ ಸಮೂಹ ಇಂದು ಇವರಿಗಿಲ್ಲ. ಎಲ್ಲೋ ಕಾಲೇಜುಗಳಲ್ಲಿ ಕೆಲವರು ಮಾತ್ರ ಇವರು ಬರೆದಿದ್ದನ್ನು ಓದಿ ಹೊಗಳುತ್ತಾರೆ ಬಿಟ್ಟರೆ ಆ ಮಟ್ಟದಲ್ಲಿ ಜನರು ಓದುತ್ತಿಲ್ಲ. ನಮಗಾದರೆ ಒಂದು ಕೃತಿ ಪ್ರಕಟವಾದರೆ ಸಾಕು ಅದಕ್ಕೆ ಓದುಗಗರು ಪತ್ರ ಬರೆಯುತ್ತಿದ್ದರು.
ಸಾಹಿತ್ಯ ಪುಸ್ತಕಗಳ ಮಾರಾಟ ಚೆನ್ನಾಗಿಯೇ ನಡೆಯುತ್ತಿದೆಯಲ್ಲ?
ನಮ್ಮ ಜನರಿಗೆ ಒಂದು ಬಗೆಯ ಪುಸ್ತಕದ ವ್ಯಾಮೋಹವಿದೆ. ಅಂಗಡಿಗಳಲ್ಲಿ ಕೊಂಡುಚೆನ್ನಾಗಿ ಪ್ಯಾಕ್ ಮಾಡಿಕೊಂಡು ಮನೆಗೆ ಒಯ್ಯುತ್ತಾರೆ. ಆದರೆ ಅದರಲ್ಲಿ ಎಷ್ಟುಓದುತ್ತಾರೆ? ಹೀಗೆ ಜನರು ಓದದಿರುವುದಕ್ಕೆ ಮಾಧ್ಯಮಗಳೇ ಕಾರಣ. ಪ್ರತಿಪಾತ್ರವನ್ನೂ, ಪ್ರತಿ ದೃಶ್ಯವನ್ನೂ ವರ್ಣರಂಜಿತವಾಗಿ ತೋರಿಸುತ್ತ ಇರುವುದರಿಂದ ಸುಲಭವಾಗಿ ಜನರು ಆ ಕಡೆ ವಾಲುತ್ತಿದ್ದಾರೆ. ಈಗ ಟಿಆರ್ಪಿ ಎನ್ನುವುದು ಬೇರೆಬಂದಿದೆ. ಒಬ್ಬ ಒಳ್ಳೆಯ ಲೇಖಕ ಜನಕ್ಕೆ ಏನು ಬೇಕು ಅಂತ ನೋಡಿ ಬರೆಯುವುದಿಲ್ಲ. ಆದರೆ ಒಬ್ಬ ಕೆಟ್ಟ ಲೇಖಕ ಜನರು ಏನು ಬಯಸುತ್ತಾರೆ ನೋಡಿಅದರಂತೆ ಬರೆಯುತ್ತಾನೆ. ಅದು  ಸಾಹಿತ್ಯಕ್ಕೆ ಮಾಡುವ ದೊಡ್ಡ ದ್ರೋಹ. ನಮ್ಮಹಳೆಯ ಲೇಖಕರೆಲ್ಲಾ ತಮಗೆ ಏನು ಬೇಕೋ ಅದನ್ನು ಬರೆಯುತ್ತಿದ್ದರು. ಶಿವರಾಮಕಾರಂತ, ಇತ್ಯಾದಿ ಲೇಖಕರು ನಮಗೇನನ್ನಿಸುತ್ತದೆ, ಸಮಾಜ ತಮಗೆ ಹೇಗೆಕಂಡಿದೆ, ತಾನು ಸಮಾಜಕ್ಕೆ ಏನನ್ನು ಹೇಳಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಬರೆಯುತ್ತಿದ್ದರು. ಇಂದು ಅಂತವರ ಸಂಖ್ಯೆ ಕಡಿಮೆಯಾಗಿರುವುದು ದುರಂತ.
 
ಮೊದಲಿನಿಂದಲೂ ಶ್ರದ್ಧೆಯಿಂದ ಬಾಲಸಾಹಿತ್ಯವನ್ನು ರಚಿಸಿಕೊಂಡುಬರುತ್ತಿದ್ದೀರಿ.  ಈ ಪ್ರಕಾರ ಇಂದು ಇಂದು ಯಾವಬಗೆಯ ಪ್ರತಿಕ್ರಿಯೆ ಪಡೆಯುತ್ತಿದೆ?
ಬಾಲ ಸಾಹಿತ್ಯಕ್ಕೆ ಇಂದು ಬಹಳ ಶಿಥಿಲವಾದ ಪ್ರತಿಕ್ರಿಯೆ ಇದೆ. ಇದು ಬಹಳಬೇಸರದ ವಿಷಯ. ಒಂದು ಕಾಲಕ್ಕೆ ಪಂಜೆ ಮಂಗೇಶರಾಯರು, ನಾ.ಕಸ್ತೂರಿ, ಜಿ.ಪಿ.ರಾಜರತ್ನಂ, ಕುವೆಂಪು, ಹೀಗೆ ಎಲ್ಲರೂ ಮಕ್ಕಳ ಸಾಹಿತ್ಯವನ್ನು ಅದ್ಭುತರೀತಿಯಲ್ಲಿ ರಚಿಸುತ್ತಿದ್ದವರೇ. ಇತ್ತೀಚೆಗೆ ಕೆಲವೇ ಜನರನ್ನು ಬಿಟ್ಟರೆ ಉಳಿದವ್ಯಾರೂಮಕ್ಕಳಿಗಾಗಿ ಬರೆಯುತ್ತಲೇ ಇಲ್ಲ. ಇದು ಏನೂ ಸಾಲದು. ನಾವು ಮಕ್ಕಳನ್ನು ಓದುವ ಹಾಗೆ ಮಾಡಬೇಕಾಗಿದೆ.ಅವರಿಗೂ ಸಾಹಿತ್ಯದ ಅಭಿರುಚಿ ಬೆಳೆಸುವ ಜವಾಬ್ದಾರಿ ಸಾಹಿತಿಗಳಿಗಿದೆ.
ನಿಮ್ಮ ಕತೆ ಕಾದಂಬರಿಗಳಲ್ಲಿ ದೀವರು, ಹಸಲರಂತಹ ಹಿಂದುಳಿದ ಸಮುದಾಯಗಳನ್ನು ಪ್ರತಿಬಿಂಬಿಸಿದ್ದೀರಿ. ಇವರ ಬದುಕಿನಲ್ಲಿ ಇಂದುಯಾವ ರೀತಿ ಬದಲಾವಣೆಗಳಾಗಿವೆ?
ನಾನು 1959 ರಲ್ಲಿ ಮಂಜಿನಕಾನು, ಆ ಕಡೆ ಹೋದಾಗ ಹಸಲರಾಗಲೀ ದೀವರಾಗಲೀ ಎದುರಿಗೆ ಬಂತು ನಿಂತುಕೊಳ್ಳಲೂ ಹೆದರುತ್ತಿದ್ದರು.ದೀವರ ಹೆಂಗಸರು ಪೇಟೆಗೆ ಬಂದರೂ ಗಂಡಸರು ಬರಲು ನಾಚಿಕೊಳ್ಳುತ್ತಿದ್ದರು. ಇಲ್ಲಿ ಪೇಟೆಯಲ್ಲಿ ಅವರನ್ನು ಅವಮಾನಿಸುತ್ತಿದ್ದರು. ಏಯ್ ಗೌಡ ಬಾ ಇಲ್ಲಿ. ಆ ಚೀಲ ತೊಗೊ ಎಂದು ದಬಾಯಿಸುತ್ತಿದ್ದರು. ಅವರು ಕೈಗೆ ವಾಚು ಕಟ್ಟುವಂತಿರಲಿಲ್ಲ. ಹಳ್ಳಿಯಲ್ಲಿ ಅನುಕೂಲ ಇದ್ದವರನ್ನೂಪೇೆಯಲ್ಲಿ ಹಾಗೆ ಅವಮಾನಿಸಲಾಗುತ್ತಿತ್ತು. ಕಾಮನ ಹಬ್ಬದ ದಿನ ಗಾಡಿಗಳನ್ನು ತಡೆಯುತ್ತಿದ್ದರು. ಗಾಡಿಯ ಕೀಲುಗಳನ್ನು ತೆಗೆದುಬಿಡುತ್ತಿದ್ದರು. ಎಷ್ಟೋ ಕಡೆ ಗಾಡಿಗಳು ಕೆಳಗೆ ಬಿದ್ದ ಉದಾಹರಣೆಗಳೂ ಇವೆ. ಕೊನೆಕೊನೆಗೆ ಕಾಮನ ಹಬ್ಬಕ್ಕೆ ಹಳ್ಳೀ ಜನ ಗಾಡಿ ಕಟ್ಟಿಕೊಂಡು ಬರುವುದನ್ನೇಬಿಟ್ಟಿದ್ದರು. ಆದರೆ ಇಂದು ನನಗೆ ಬಹಳ ಸಂತೋಷ ಆಗುವುದೇನೆಂದರೆ ಹಸಲರೇ ಆಗಲೀ ದೀವರೇ ಆಗಲಿ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ.ಆದರೆ ಸ್ವಲ್ಪ ಅಡ್ಡ ದಾರಿ ಹಿಡಿಯುತ್ತಿರುವವರೂ ಇದ್ದಾರೆ. ಸ್ಪಷ್ಟವಾಗಿ ಹೇಳಬೇಕೆಂದರೆ ಸಾಂಸ್ಕೃತಿಕವಾಗಿ ಈ ದೀವರು ಮತ್ತು ಹಸಲರು ಬೆಳೆಯುತ್ತಿಲ್ಲ. ಇದು ವಿಷಾದನೀಯ. ಆರ್ಥಿಕವಾಗಿ ಹಾಗೂ ಅಧಿಕಾರಯುತವಾಗಿ ಮಾತ್ರವೇ ಅವರ ಬೆಳವಣಿಗೆ ಇದೆ.
ಈ ಸಮುದಾಯಗಳಿಗೆ ಸೇರದೆಯೂ ಅಷ್ಟು ಸಲೀಸಾಗಿ ನೀವು ನಿಮ್ಮ ಬರೆಹದಲ್ಲಿ ತರಲು ಹೇಗೆ ಸಾಧ್ಯವಾಯಿತು?
ಮೊದಲನೆಯದಾಗಿ ಹುಚ್ಚಪ್ಪ ಮಾಸ್ತರ ಸ್ನೇಹ. ಅವರ ಜೊತೆಯಲ್ಲಿ ನಾನುಸಿಕ್ಕಾಪ್ಟೆ ಹಳ್ಳಿಗಳನ್ನು ತಿರುಗಾಡಿದ್ದೇನೆ. ದೀವರ ಮನೆಗಳಲ್ಲಿ, ಹಸಲರ ಮನೆಗಳಲ್ಲಿ ಆ ಜನರ ಜೊತೆ ಬಹಳ ದಿನ ಒಡನಾಡಿದ್ದೇನೆ. ದೀವರ ಹೆಂಗಸರುಚಿತ್ತಾರ ಬರೆಯುವುದನ್ನು ಹದಿನೈದು ದಿನಗಳವರೆಗೆ ಕುಳಿತು ಗಮನಿಸಿದ್ದೇನೆ. ಈಜನರ ಮಾತು, ಕತೆ, ವ್ಯವಹಾರ, ಅವರ ಉಡಿಗೆ, ತೊಡಿಗೆ, ಅವರ ಗಟ್ಟಿತನ ಇವೆಲ್ಲಾ ನನ್ನಲ್ಲಿ ಆಕರ್ಷಣೆ ಉಂಟುಮಾಡಿತ್ತು. ಕುಗ್ವೆ ಊರಿನ ಓಲೆಕಾರ ಪುಟ್ಟಪ್ಪ ಎಂಬಾತ ನಮ್ಮ ಮನೆಕೆಲಸಕ್ಕೆ ಕರೆಸಿಕೊಂಡಿದ್ದೆ. ಅದ್ಭುತವಾದ ವ್ಯಕ್ತಿ. ಭಾರೀಧೈರ್ಯಶಾಲಿ. ಆತನಿಗೆ ಯಾವ ಮರದ ಹೆಸರು ಗೊತ್ತಿಲ್ಲ ಎಂದಿರಲಿಲ್ಲ. ಹಕ್ಕಿ,ಮೀನು, ಮರ, ಗಿಡ ಎಲ್ಲವುಗಳ ಹೆಸರನ್ನೂ ಸಟಸಟ ಅಂತ ಹೇಳುತ್ತಿದ್ದ. ಅದೆಲ್ಲಾಬರೆದುಕೊಂಡು ಆಕಾಶವಾಣಿಯಲ್ಲಿ ಒಂದು ಭಾಷಣವನ್ನೂ ಮಾಡಿದ್ದೆ. ಇಂತವರು ಬಹಳ ಜನ ಇದ್ದರು. ಆ ಜನರ ಜೀವನ ಶ್ರದ್ಧೆಯನ್ನು ನಾನು ಪ್ರೀತಿಸುತ್ತಿದ್ದೆ.
ಕ್ರೈಸ್ತ ಸಮುದಾಯದಿಂದ ಬಂದ ನೀವು ಹಲವು ಕೃತಿಗಳಲ್ಲಿ ಕ್ರೈಸ್ತರ ಕೆಲ ವರ್ತನೆಗಳನ್ನು ಟೀಕಿಸಿದ್ದೀರಿ. ಆ ಸಂದರ್ಭದಲ್ಲಿ ಕ್ರೈಸ್ತ ಸಮುದಾಯ ನಿಮ್ಮ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸಿದೆ?
ಕ್ರೈಸ್ತ ಸಮುದಾಯದವರಿಗೆ ನನ್ನ ಮೇಲಿರುವ ಆಪಾದನೆ ಎಂದರೆ ಈತ ಬೈಯುತ್ತಾನೆ ಎನ್ನುವುದು. ಆದರೆ ಒಬ್ಬ ಲೇಖಕ ಬರೆಯಲಿಕ್ಕೆ ಕುಳಿತಾಗ ಕೆಲವರನ್ನು ಬೈಯುವುದು, ಕೆಲವರನ್ನು ನಮ್ಮವರು ಎಂಬ ಕಾರಣಕ್ಕೆ ರಕ್ಷಣೆ ಮಡುವುದು, ಇವೆಲ್ಲಾ ಮಾಡಬಾರದು. ಲೇಖಕ ಯಾವತ್ತೂ ಸತ್ಯವನ್ನುಹೇಳಬೇಕು. ಸ್ಪಷ್ಟತೆ ಲೇಖಕನ ಗುಣ. ಮತಪ್ರಚಾರದಲ್ಲಿ ನನಗೆ ನಂಬಿಕೆಯಿಲ್ಲ. ಹಾಗಂತ ಹೇಳಿ ನಾನು ಚರ್ಚಿಗೂ ಹೋಗುವುದಿಲ್ಲ. ನಂಬಿಕೆಗಳ ವಿಚಾರಕ್ಕೆ ಬಂದರೆ ಕೆಲವು ಇವೆ, ಕೆಲವು ಇಲ್ಲ. ಹಾಗೆಯೇ ಕೆಲವು ಕೃತಿಗಳನ್ನು ಬರೆದಾಗ ಬಹಳಷ್ಟು ಕ್ರೈಸ್ತರು ಬಹಳ ಮೆಚ್ಚಿಕೊಂಡಿರುವದೂ ಇದೆ. ಇಗರ್ಜಿಯ ಸುತ್ತಲಿನ ಹತ್ತು ಮನೆಗಳು 50 ವರ್ಷಗಳ ಹಿಂದೆ ಮುರುಡೇಶ್ವರದಿಂದ ಸಾಗರಕ್ಕೆ ಬಂದ ಹತ್ತು ಕುಟುಂಬಗಳ ಕತೆ. ಹಾಗೆ ಬಂದವರ ಮೊಮ್ಮೊಕ್ಕಳೆಲ್ಲಾ ಇಲ್ಲಿ  ನಮ್ಮ ಮನೆಯ ಸುತ್ತಲಿರುವವರು. ಅವರೆಲ್ಲಾ ಅದನ್ನು ಓದಿ ಬಹಳ ಮೆಚ್ಚಿಕೊಂಡರು. ಆ ಕಾದಂಬರಿ ನನಗೆ ಬಹಳಹೆಸರನ್ನೂ ತಂದುಕೊಟ್ಟಿತು. ಒಬ್ಬ ಲೇಖಕನಾದವನು ತನಗೆಕಂಡ ಸತ್ಯವನ್ನು ಬರೆಯದೇ ಇರಲಿಕ್ಕಾಗುವುದಿಲ್ಲ. ಸತ್ಯಕ್ಕೆ ಅವಮಾನ ಮಾಡಲಿಕ್ಕಾಗುವುದಿಲ್ಲ. ಕ್ರೈಸ್ತರಲ್ಲಿನ ಒಂದು ಸಮಸ್ಯೆಯೆಂದರೆ ಅವರು ತಮ್ಮಚರ್ಚ ಕಾಂಪೌಂಡಿನಾಚೆ ಹೋಗುವುದಿಲ್ಲ. ಇತರರೊಡನೆ ಬೆರೆಯುವುದಿಲ್ಲ. ಒಳ್ಳೆಯ ಹಾಡುಗಾರರು, ನೃತ್ಯ ಮಾಡುವವರು ಇಲ್ಲಿದ್ದಾರೆ. ಆದರೆ ಅವರು ತಮ್ಮ ಪ್ರತಿಭೆಯನ್ನು ಹೊರಗೆ ಕೊಂಡೊಯ್ಯಲು ಹಿಂಜರಿಯುತ್ತಾರೆ.
ಒಂದು ಭಾಷೆಯಾಗಿ ಕನ್ನಡದ ಬೆಳೆಯುತ್ತಿದೆಯೇ?
ನಾವು ಭಾಷೆಯನ್ನು ಬೆಳೆಸುವತ್ತ ಆಸಕ್ತಿ ವಹಿಸುತ್ತಿಲ್ಲ. ತಮಿಳು ಭಾಷಿಕರು ಈ ಪ್ರಯತ್ನ ಮಾಡುತ್ತಿದ್ದಾರೆ. ಅಮೆರಿಕನ್ನರು ಹೊಸ ಪದಗಳನ್ನು ಸೃಷ್ಠಿಸುತ್ತಾರೆ. ಅವರು ಸೃಷ್ಠಿಸುವ ಪದಗಳು ಪದಕೋಶದಲ್ಲೇ ಇರುವುದಿಲ್ಲ. ಹೊಟೆಲ್ನಲ್ಲಿ ವಾಹನ ನಿಲುಗಡೆಗೆ ಅವಕಾಶವಿದ್ದರೆ ಅದನ್ನು ಮೊೆಲ್ ಎನ್ನುತ್ತಾರೆ. ಯಾವುದಾದರೂ ಬುಕ್ ಮ್ಯಾಗಝೀನ್‌ನಲ್ಲಿ ಪ್ರಕಟವಾದರೆ ಅದನ್ನು ಬುಕ್‌ಜಿನ್ ಎನ್ನುತ್ತಾರೆ. ಅಮೆರಿಕಾದ ಒಂದು ಸ್ಥಳಕ್ಕೆ 3 ತಿಂಗಳನಂತರ ಹೋದರೆ ಬದಲಾದ ಭಾಷೆ ಗೊಂದಲ ಹುಟ್ಟಿಸುತ್ತದೆ. ಕನ್ನಡದಲ್ಲಿ ಇದಾಗುತ್ತಿಲ್ಲವೆನ್ನುವುದು ವಿಷಾದಕರ ಸಂಗತಿ. ಮಡಿವಂತಿಕೆಯಿರುವ ಕನ್ನಡಿಗರಲ್ಲಿ ಸೃಜನಶೀಲತೆಯ ಕೊರತೆಯಿದೆ. ಕಂಪ್ಯೂಟರ್ ಬಂದ ಮೇಲೆ ಚಾಲ್ತಿಯಲ್ಲಿರುವ ಬ್ರೌಸಿಂಗ್, ಚಾಟಿಂಗ್ ಮುಂತಾದವುಗಳಿಗೆ ಹೊಸಕನ್ನಡ ಪದಗಳನ್ನು ತರಲು ಸಾಧ್ಯವಾಗೇ ಇಲ್ಲ. ನಾವು ಪ್ರತಿಯೊಂದಕ್ಕೂ ಇಂಗ್ಲಿಷ್ ಮೊರೆಹೋಗುತ್ತಿದ್ದೇವೆ. ಐಟಿ, ಬಿಟಿಗಳಲ್ಲಿ ಕೆಲಸ ಮಾಡುವ ನಮ್ಮಯುವಕ ಯುವತಿಯರು ತಾವು ಕೆಲಸ ಮಾಡುವ ಅಷ್ಟು ಭಾಷೆಗಳನ್ನು ಇಂಗ್ಲಿಷ್‌ನಲ್ಲಿಯೇ ಬಳಸುತ್ತಾರೆಯೇ ವಿನಃ ಕನ್ನಡದಲ್ಲಿ ಪ್ರಯತ್ನಿಸುವುದಿಲ್ಲ. ಹಾಗೆ ಪ್ರಯತ್ನಿಸಿದ್ದರೆ ಕನ್ನಡ ಪದಕೋಶ ಅಭಿವೃದ್ಧಿಯಾಗುತ್ತಿತ್ತು.
ಅಗಾಧ ಪ್ರಮಾಣದಲ್ಲಿ ಸಾಹಿತ್ಯ ರಚನೆ ಮಾಡಿರುವ ನಿಮಗೆ ಒಂದು ಸಣ್ಣ ಪಟ್ಟಣದಲ್ಲಿದ್ದುಕೊಂಡು ಬರವಣಿಗೆ ನಡೆಸಿದ್ದೇ  ನಿಮ್ಮನ್ನುರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಂದ ವಂಚಿಸಿದೆ ಎನ್ನಿಸುವುದಿಲ್ಲವೇ?

ಈ ಕುರಿತು ನಾನೆಂದೂ ಯೋಚಿಸಿಯೇ ಇಲ್ಲ. ಒಂದು ಮೂಲೆಯನ್ನಿದ್ದುಕೊಂಡು ನನ್ನ ಪಾಡಿಗೆ ನಾನು ಬರೆದುಕೊಂಡು ಬಂದಿದ್ದೀನೆ ಅಷ್ಟೆ.


1 ಕಾಮೆಂಟ್‌:

ಮೂರ್ತಿದೇರಾಜೆ ಹೇಳಿದರು...

ಸಂಮಾನ್ಯ ನಾ.ಡಿಸೋಜಾ ಅವರು ...ಒಬ್ಬ ಸರಳ ಸಹೃದಯಿ ... ಆದ್ದರಿಂದಲೆ ಪ್ರಾಯಷಃ ಅವರು ಒಬ್ಬ ದೊಡ್ಡ ವ್ಯಕ್ತಿ ಅಂತ ನಮಗೆ ಅನಿಸುವುದು ..... ಸ ೧೯೬೪ ರ ಸುಮಾರಿಗೆ ನಾನು ಏಳನೇ ಕ್ಲಾಸಿನಲ್ಲಿ ಅದೂ ಒಂದು ಕಾನ್ವೆಂಟ್ ನಲ್ಲಿ ಕಲಿಯುತ್ತಿದ್ದಾಗ ... "ಸುದಾ" ವೋ... "ಪ್ರಜಾಮತ"ವೋ ..."ಗೋಕುಲ"ವೋ ಯಾವುದೋ ಒಂದು ಪತ್ರಿಕೆಯಲ್ಲಿ ಬಂದ ಅವರ ಒಂದು ಕತೆ .... ಹೆಸರು ನೆನಪಿಲ್ಲ .... ಒಂದು ಕ್ರಿಶ್ಚನ್ ಸಮುದಾಯದ ಕತೆ ....ಓದಿ ಏನೋ ಒಂದು ಖುಶಿಯಾಗಿ ....ಅಪ್ಪಯ್ಯನಿಗೆ ತೋರಿಸಿ ಅವರೂ ಅದನ್ನು ಮೆಚ್ಚಿಕೊಂಡದ್ದು ನೆನಪಿದೆ. ಮಾನ್ಯ ನಾ.ಡಿಸೋಜಾ ಅವರ "ಕುಂಜಾಲು ಕಣಿವೆಯ ಕೆಂಪು ಹೂವು...." ನನ್ನ ಅಪ್ಪಯ್ಯನೇ....." ತುಂಬಾ ಚೆನ್ನಾಗಿದೆ ಓದು..." ಎಂದು ಹೇಳಿದರೂ ...ನಾನು ಓದಿದ್ದು ಅಪ್ಪಯ್ಯ ತೀರಿ ಹೋದ ದಿನಗಳಲ್ಲಿ. ಆ ಕಾದಂಬರಿ ನನ್ನನ್ನು ತುಂಬಾ ಕಾಡಿದೆ. ಆಗ ಅವರಿಗೆ ಒಂದು ಪತ್ರ ಬರೆದಿದ್ದೆ. ತುಂಬಾ ಬಾಲಿಶವಾಗಿ ಇದ್ದಿರಬಹುದಾದ ಆ ಪತ್ರಕ್ಕೆ ಅವರ ಉತ್ತರವೂ ಬಂದದ್ದು ನನಗೆ ಇನ್ನಿಲ್ಲದ ಆನಂದ ನೀಡಿದೆ. ಚಂದದ ಈ ಸಂದರ್ಶನಕ್ಕಾಗಿ ಕುಗ್ವೆಯವರಿಗೆ ವಂದನೆಗಳು.
----ಮೂರ್ತಿದೇರಾಜೆ,ವಿಟ್ಲ.

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.