ಜೂನ್ 11, 2012

ಹಳ್ಳೀಮುಕ್ಕ..... ಬಿದ್‌ಬಿದ್ ನಕ್ಕ!





ಕೃತಿ: ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ
ಲೇಖಕರು: ನಾಗೇಶ ಹೆಗಡೆ
ಪುಟಗಳು: ೯೨
ಬೆಲೆ: ೭೫ ರೂಪಾಯಿ
ಪ್ರಕಾಶನ: ಭೂಮಿ ಪ್ರಕಾಶನ
ಮೊದಲ ಮುದ್ರಣ: ೨೦೧೧


ನಾಗೇಶ್ ಹೆಗಡೆಯವರ ’ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ’ ಅವರ ಹಿಂದಿನ ಎಲ್ಲ ಗಂಭೀರ ವಸ್ತು ವಿಷಯಗಳ ಕುರಿತ ಬರಹಗಳಿಗಿಂತ ಭಿನ್ನವಾಗಿ ತಮ್ಮ ಹಳ್ಳಿ, ಮನೆ ಮತ್ತು ಅವರ ತೋಟದ ಪರಿಸರದೊಂದಿಗಿನ ದಿನದಿನದ ಒಡನಾಟವನ್ನು ಹಾಸ್ಯಭರಿತವಾಗಿ ತೆರೆದಿಡುವ ಪುಸ್ತಕ. ವಿಜ್ಞಾನದ ಅದೆಂತಹ ಕಬ್ಬಿಣದಂತಹ ವಿಷಯವನ್ನೂ ಕಡಲೆಯಾಗಿಸಿ ಕನ್ನಡಿಗರು ಸುಲಲಿತವಾಗಿ ಓದಲು ಅನುವಾಗುವಂತೆ ಬರೆದುಕೊಂಡು ಬರುತ್ತಿರುವವರು ನಾಗೇಶ್ ಹೆಗಡೆ. ಈಗ ಈ ಕೃತಿಯಲ್ಲಿ ತಮ್ಮದೇ ಪ್ರಯೋಗ ಜೀವನದ ಅನುಭವಗಳನ್ನು ಮತ್ತೂ ಸೊಗಸಾಗಿ ಓದುಗರ ಮನಸ್ಸು ಮುದಗೊಳ್ಳುವಂತೆ ಬರೆದಿದ್ದಾರೆ. 
ತಮ್ಮ ಪತ್ರಿಕಾ ವ್ಯವಸಾಯದಿಂದ ನಿವೃತ್ತಿ ಪಡೆದ ನಂತರ ಬೆಂಗಳೂರಿನ ಕೆಂಗೇರಿ ಬಳಿಯಲ್ಲಿ ಕೆಲವರು ಸಮಾನಾಸಕ್ತರು ಸೇರಿ ನಿರ್ಮಿಸಿಕೊಂಡ ಮೈತ್ರಿ ಗ್ರಾಮದಲ್ಲಿ ಲೇಖಕರ ಮನೆ ಮತ್ತು ಕೈತೋಟಗಳಲ್ಲಿನ ಕೈಕಾರ್ಯಗಳ ಕುರಿತಾಗಿ ಈ ಕೃತಿಯ ಹದಿನಾಲ್ಕು ಲೇಖನಗಳಿವೆ. ಕೃತಿಯ ಮೊದಲ ಲೇಖನ ’ದೈತೋಟರ ಮನೆಯ ಪಕ್ಕ ನಮ್ಮ ಕೈದೋಟ’ ನಮಗೆ ಹೊಸ ಬಗೆಯ ವಿಸಿಟಿಂಗ್ ಕಾರ್ಡನ್ನು ಪರಿಚಯಿಸುತ್ತದೆ. ಹೆಸರಾಂತ ಪರಿಸರವಾದಿ ಶ್ರೀಪಡ್ರೆಯವರು ಲೇಖಕರಿಗೆ ನೀಡುವ ಆ ವಿಸಿಟಿಂಗ್ ಕಾರ್ಡು ಬೇರೇನಲ್ಲ. ಒಂದು ಪಾರದರ್ಶಕ ಪ್ಯಾಕೆಟ್ ಒಳಗಿನ ನಾಲ್ಕು ಬಾಂಗ್ಲಾ ಬಸಳೆ ಬೀಜಗಳು! ದೊಡ್ಡವರ ಮನೆಗಳಲ್ಲಿ ಶೋಕಿಗಾಗಿ ಇಡುವ ಭಾರೀ ಹಣ ತೆತ್ತು ವಿದೇಶಗಳಿಂದೆಲ್ಲಾ ತರಿಸುವ ನಿರ್ಜೀವ ವಸ್ತುಗಳಿಗಿಂತ ಈ ಹೊಸರೂಪದ ವಿಸಿಟಿಂಗ್ ಕಾರ್ಡ್ ಹೆಚ್ಚು ಮೌಲ್ಯಯುತವಾದದ್ದು ಎಂಬುದನ್ನು ತಮ್ಮದೇ ಆಕರ್ಷಕ ರೀತಿಯಲ್ಲಿ ಲೇಖಕರು ಹೇಳುತ್ತಾ ಹೋಗುತ್ತಾರೆ. ’ಸಿಂಥೆಟಿಕ್ ಸೆಗಣಿಗೆ ಹುಡುಕಾಟ’ ಎಂಬ ಲೇಖನದಲ್ಲಿ ಸಾವಯವ ಕೃಷಿಗಾಗಿ ಪಾಳೇಕರ್ ಜೀವಾಮೃತ, ಬೀಜಾಮೃತ ತಯಾರಿಸಲಿಕ್ಕಾಗಿ ಸೆಗಣಿ ಹುಡುಕಲಿಕ್ಕಾಗಿ ಲೇಖಕರು ಪರದಾಟುವ ಪ್ರಸಂಗ. ಅಪ್ಪಟ ದೇಸೀ ಸೆಗಣಿಯನ್ನು ಹುಡುಕಲು ವಿಫಲಗೊಂಡು ಕೊನೆಗೆ ಕೋಳಿ ಗೊಬ್ಬರವನ್ನು ಹಾಕಬಹುದೆಂಬ ಕೃಷಿಕ ನಾರಾಯಣಗೌಡ ಅವರ ಸಲಹೆ ಮೇರೆಗೆ ಕೋಳಿ ಸಾಕಲಾಗಿ ಅವಕ್ಕೆ ಗೆದ್ದಲು ಆಹಾರ ಎಂಬ ಕಾರಣಕ್ಕೆ ಗೆದ್ದಲು ಸಾಕಲೆಂದು ಹೊರಡುತ್ತಾರೆ. ಕೊನೆಗೆ ಗೆದ್ದಲು ಸಾಕುವ ವಿಧಾನ ಇಂತಿರುತ್ತದೆ ತೂತಾದ ಮಡಕೆಯನ್ನು ನೆಲದಲ್ಲಿ ಹೂಳಬೇಕು.ಅದಕ್ಕೆ ನಾಲ್ಕಾರು ಚೂರು ಹಳೆ ಕಟ್ಟಿಗೆ ಇಲ್ಲವೆ ಪ್ಲೈವುಡ್ ಚೂರುಪಾರು, ವೇಸ್ಟ್ ಪೇಪರ್ ಹಾಕಬೇಕು. ಒಂದಿಷ್ಟು ಸೆಗಣಿ ಹಾಕಿ ನೀರು ಚುಮುಕಿಸಿ ನಾಲ್ಕು ದಿನ ಇಡಬೇಕು. ಸೆಗಣಿ ತೀರಾ ಮುಖ್ಯ!! ಹೀಗೆ ಸೆಗಣಿಯಿಂದ ಶುರುವಾಗಿ ಮತ್ತೆ ಸೆಗಣಿಗೇ ನಿಲ್ಲುವ ಈ ಪ್ರಸಂಗವನ್ನು ಬಹುರಸವತ್ತಾಗಿ ಲೇಖಕರು ವಿವರಿಸುತ್ತಾರೆ. ಇದೇ ತರದ ಮತ್ತೊಂದು ಪ್ರಸಂಗ ’ಅದೇನು-ಮಾಯಾವಿಯಾ ಮ-ಯೂರಿಯಾ’ ಲೇಖನದಲ್ಲೂ ಬರುತ್ತದೆ. ಕೈದೋಟದ ಕೊಳದಲ್ಲಿ ಪಾಚಿ ತೆಗೆಯಲುಹೊರಡುವ ಲೇಖಕರು ಮತ್ತವರ ಪತ್ನಿ ಕೊಳದ ಸಣ್ಣ ಮೀನುಗಳನ್ನು ಕೋಳಿಗಳು ತಿನ್ನುವುದನ್ನು ನೋಡಿ ಮೀನುಗಳ ಸಂಖ್ಯೆ ಹೆಚ್ಚಿಸಲು ಯೂರಿಯಾ ತರಲೆಂದು ಪತ್ತೆ ಪರದಾಟುತ್ತಾರೆ. ಆದರೆ ಕೊನೆಯಲ್ಲಿ ತಿಳಿಯುವುದು ಯೂರಿಯಾ ಪಾಚಿಯನ್ನು ಹುಲುಸಾಗಿ ಬೆಳೆಸುತ್ತದೆ, ಅದನ್ನು ತಿಮದು ಮೀನುಗಳು ಬೆಳೆಯುತ್ತವೆ ಎಂಬುದು! 
ಚಕೋತ ಗಿಡಕ್ಕೆಂದು ಗೊಬ್ಬರ ಹುಡುಕು ಯತ್ನವನ್ನು ಚಕೋತ ಗಿಡಕ್ಕೆ ಚಳ್ಳೆ ಹಣ್ಣು ಲೇಖನದಲ್ಲಿ ನೀರಾ ಇಳಿಸಲೆಂದು ಹೋಗಿ ಮನೆಯಾಕೆಯ ಕೋಪಕ್ಕೀಡಾಗುವ ’ನೀರಾ ರಾಡಿಯ ಕತೆ’ಗಳು ಲಘುಹಾಸ್ಯದೊಂದಿದೆ ಕೂಡಿವೆ. ನೀರಾ ರಾಡಿಯ ಕತೆಯಲ್ಲಿ ಲೇಖಕರು ಇತ್ತೀಚಿನ ನೀರಾ ರಾಡಿಯಾ ಹಗರಣದ ಸಂದರ್ಭದೊಂದಿಗೆ ತಳುಕು ಹಾಕಿ ವಿವರಿಸುತ್ತಾರೆ. ಮೈತ್ರಿ ಗ್ರಾಮದ ಸುತ್ತಲೂ ಕೆಲವಾರು ಹಳ್ಳಿಗಳಿವೆ. ಅಲ್ಲಿನ ಜನರು ನಗರ ಮತ್ತು ಇಂದಿನ ರಿಯಲ್ ಎಸ್ಟೇಟ್ ದಂಧೆಯ ಸಂದರ್ಭದಲ್ಲಿ ಪಡೆದುಕೊಂಡಿರುವ ಆರ್ಥಿಕ ಲೆಕ್ಕಾಚಾರಗಳನ್ನು ಲೇಖಕರ ಇಲ್ಲಿಗಲ್ ಮಣ್ಣಂಗಟ್ಟಿ, ಬೀಮನ ಅಮಾಸೆ ಮಹಾತ್ಮೆ ಲೇಖನಗಳಲ್ಲಿ ಕಾಣಬಹುದು. ಮಾರುತಿ ಪ್ರಣಯ ಪ್ರಸಂಗ ಲೇಖನವು ಸಾಕಿದ ತಾಯಿ ಗಂಗಮ್ಮ ಮತ್ತು ಪ್ರಾಣಿದಯಾ ಸಂಘದವರ ನಡುವೆ ಕೋತಿಯೊಂದು ಸಿಲುಕುವ ಪ್ರಸಂಗವನ್ನು ತಿಳಿಸುತ್ತದೆ. ಅಗತ್ಯ ಸಂದರ್ಭದಲ್ಲಿ ನಾಯಿಯೊಂದರ ಜೀವವನ್ನು ರಕ್ಷಿಸಲಾರದ ಪ್ರಾಣಿದಯಾಪರರು  ಮನುಷ್ಯರು ಸಾಕಿಕೊಂಡ ಕೋತಿಯ ರಕ್ಷಣೆಗೆ ಬರುವ ಅವರ ಇಬ್ಬಂದಿತನವನ್ನು ಲೇಖಕರು ಚೆನ್ನಾಗಿ ಬಯಲುಗೊಳಿಸಿದ್ದಾರೆ. ತಮ್ಮ ಮನೆಯೊಳಗೇ ನಿಸರ್ಗದತ್ತ ಆಹಾರ ಸರಪಳಿಯೊಂದು ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ’ಅಂತರಜಾಲ ಮತ್ತು ಜೀವಜಾಲ’ ಕೃತಿ ಅದ್ಭುತ ರೀತಿಯಲ್ಲಿ ಅಷ್ಟೇ ಸೊಗಸಾಗಿ ಬಿಚ್ಚಿಡುತ್ತದೆ. ಇಂತಹ ಒಂದು ಪ್ರಕ್ರಿಯೆ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆಯಾದರೂ ನಾವು ಅದನ್ನು ಗುರುತಿಸಿ ಅದನ್ನು ಹಾಗೇ ಇರಗೊಡುವ ಸೂಕ್ಷ್ಮತೆಯನ್ನೇ ಕಳೆದುಕೊಂಡಿರುವ ಸತ್ಯ ಈ ಲೇಖನವನ್ನೋದುತ್ತಾ ಹೋದಂತೆ ಅರಿವಾಗುತ್ತದೆ.  
ಸರಳ ಮತ್ತು ಪರಿಸರ ಸ್ನೇಹಿ ಬದುಕನ್ನು ಅಳವಡಿಸಿಕೊಂಡು ಬಂದಿರುವ ಲೇಖಕ ನಾಗೇಶ್ ಹೆಗಡೆಯವರು ಅದನ್ನು ಎಲ್ಲೂ ತಮ್ಮ ಬರಹಗಳಲ್ಲಿ ಬೋಧನೆ, ಪ್ರವಚನದಂತೆ ವಾಚ್ಯಗೊಳಿಸದೆ ಲಲಿತ ಪ್ರಬಂಧಗಳ ರೀತಿ ಹೇಳಬೇಕಾದುದನ್ನು ಓದುಗರಲ್ಲು ಕುತೂಹಲ ಮೂಡಿಸುತ್ತಲೇ ಹೇಳುವ ರೀತಿ ಆಕರ್ಷಕವಾಗಿರುತ್ತದೆ. ಲೇಖಕರು ಎದುರಿಸುವ ಪಡಿಪಾಟಲುಗಳನ್ನೂ ತಮಾಷೆಯಾಗಿಯೇ ಹೇಳಿಬಿಡುವ ಕಲೆ ಅವರಿಗೆ ಸಿದ್ಧಿಸಿಬಿಟ್ಟಿದೆ. ಹಳ್ಳೀಮುಕ್ಕ.... ಕೃತಿಯ ಬಹುತೇಕ ಲೇಖನಗಳು ಹಲವೆಡೆ ನಮ್ಮನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತಲೇ  ಹೊಸಬದುಕಿನ ಮಾರ್ಗದ ಚಿಂತಯೊಂದನ್ನು ಓದುಗರಿಗೆ ದಾಟಿಸುವಲ್ಲಿ ಯಶಸ್ವಿಯಾಗಿವೆ.  

ಕೃತಿಯ ಪುಟಗಳಿಂದ....

"...ಶ್ರೀಮತಿಯವರಿಗೆ ಹಳ್ಳಿಯ ಹವೆಗಿಂತ ನಗರದಲ್ಲಿ ಉಸಿರಾಟ ಸಲೀಸಾಗಿ ಅನ್ನಿಸತೊಡಗಿತು. ಹಳ್ಳಿಯನ್ನು ಬಿಟ್ಟು ಮತ್ತೆ ನಗರಕ್ಕೆ ಬಂದು ವಾಸಿಸುವುದರಲ್ಲೇ ಅವರ ಸಮಸ್ಯೆಗೆ ಉತ್ತರವಿದೆ’ -ಹೀಗೆಂದು ಮೌನ ಮುರಿದು ತ್ರಿವಿಕ್ರಮ ಹೇಳಿದ್ದೇ ತಡ, ಆತನ ಹೆಗಲಮೇಲಿದ್ದ ಬೇತಾಳ ಛಂಗನೆ ಮೇಲಕ್ಕೆ ನೆಗೆದು ಫ್ಲೈಓವರ್‌ನ ಕಾಂಕ್ರೀಟಿಗೆ ತಲೆ ಬಡಿಸಿಕೊಂಡು ದಿಕ್ಕುತೋಚದಂತಾಗಿ ಕೊಂಬೆ ಇರಬಹುದಾದ ಎತ್ತರದ ಮರವೊಂದನ್ನು ಹುಡುಕುತ್ತ ಚಾಮರಾಜಪೇಟೆ, ಬಸವನಗುಡಿಗಳಲ್ಲಿ ಅಂಡಲೆಯುತ್ತ ತ್ರಿಶಂಕುವಾಯಿತು."

(ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಪ್ರಕಟಿತ)


ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.