ಜೂನ್ 09, 2012

"ಸಹಪಂಕ್ತಿ ಭೋಜನದಿಂದಲೇ ಜಾತಿ ಸಾಮರಸ್ಯ ಸಾಧ್ಯ" : ಪ್ರೊ. ಬಿ. ವಿ. ವೀರಭದ್ರಪ್ಪ







ಪ್ರೊ.ಬಿ.ವಿ.ವೀರಭದ್ರಪ್ಪನವರು ಕನ್ನಡ ನಾಡು ಕಂಡ ಪ್ರಖರ ವಿಚಾರವಾದಿ. ಅಧ್ಯಾಪಕರಾಗಿ, ಬರಹಗಾರರಾಗಿ ಪತ್ರಕರ್ತರಾಗಿ ಕೆಲಸ ಮಾಡಿದ ಬೀವಿಯವರು ನಾಡಿನ ವೈಚಾರಿಕ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ದೊಡ್ಡದು. ’ವೇದಾಂತ’ ರೆಜಿಮೆಂಟ್, ವೇದಗಳಲ್ಲಿ ಜನಸಾಮಾನ್ಯರು, ಭಗವದ್ಗೀತೆ: ಒಂದು ವೈಚಾರಿಕ ಒಳನೋಟ ಮುಂತಾದ ಅವರ ಕೃತಿಗಳು ನಾಡಿನ ವಿಚಾರ ಸಾಹಿತ್ಯದಲ್ಲಿ ಶಾಶ್ವತ ಸ್ಥಾನ ಪಡೆದಿರುವಂತವಹು. ಇದೀಗ ನಿವೃತ್ತ ಜೀವನ ಸಾಗಿಸುತ್ತಿರುವ ಬೀವಿಯವರು ಸಮಕಾಲೀನ ಸಂಗತಿಕಳ ಕುರಿತು ಮಾತನಾಡಿದ್ದಾರೆ.

ನಾಡಿನಲ್ಲಿ ವೈಚಾರಿಕ ಸಾಹಿತ್ಯ ಪರಂಪರೆಗೆ ಬಹಳಷ್ಟು ಕೊಡುಗೆ ನೀಡಿರುವವರು ನೀವು. ವೈಚಾರಿಕ ಸಾಹಿತ್ಯ ರಚನೆಗೆ ನೀವು ತೊಡಗಿಕೊಂಡಿದ್ದಕ್ಕೆ ಕಾರಣಗಳೇನಿತ್ತು? 

ನನಗೆ ನನ್ನ ಸುತ್ತಮುತ್ತಲಿನ ಸಮಾಜವು ಧರ್ಮನಿಷ್ಟತೆ, ಜಾತಿ ನಿಷ್ಠತೆಯ ಅಂಧಕಾರದಲ್ಲಿ ಬಳಲುತ್ತಿದೆ ಎನಿಸಿತ್ತು. ಕತೆ ಕವನಕಿಂತ ವೈಚಾರಿಕ ಸಾಹಿತ್ಯ ಜನರನ್ನು ಜಾಗೃತಗೊಳಿಸಬಲ್ಲದು ಎಂಬ ನಂಬಿಕೆ ನನ್ನದಾಗಿತ್ತು. ಹಾಗಾಗಿ ಜನರಿಗೆ ವಿಚಾರವನ್ನು ನೇರವಾಗಿ ತಲುಪಿಸಬೇಕೆಂಬ ಪ್ರೇರಣೆ ಉಂಟಾಯಿತು. ಜನರು ಯಾವುದನ್ನು ಅತ್ಯಂತ ಪವಿತ್ರ, ಪೂಜ್ಯ ಎಂದು ತಿಳಿದಿದ್ದರೋ ಅದರ ಮೂಲ ಪರಿಕಲ್ಪನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದಲೇ ಅನೇಕ ಲೇಖನಗಳನ್ನು ಬರೆಯುತ್ತಾ ಹೋದೆ. ನನ್ನಲ್ಲಿ ವೈಚಾರಿಕ ಪ್ರಜ್ಞೆ ಬೆಳೆಯಲು ಕಾರಣ ಜನಪದರು. ಅವರ ನುಡಿ, ಬದುಕಿನ ಪ್ರೀತಿ, ಸ್ಥಾವರ ನಿರಾಕರಣದ ಪರಿಕಲ್ಪನೆಗಳು ಅತ್ಯಂತ ಆರೋಗ್ಯಕರವಾದವು. ಅಕ್ಷರ ಜಗತ್ತಿನ ಮೌಢ್ಯಗಳು ಜನಪದರಲ್ಲಿಲ್ಲ. ಎರಡನೆಯದಾಗಿ ಪ್ರೊ. ಕೋವೂರ್, ಎಚ್. ನರಸಿಂಹಯ್ಯ ಅವರನ್ನು ಆಹ್ವಾನಿಸಿ ಭಾಷಣ ಮಾಡಿಸಿದ್ದೆವು. ಇವೂ ನನಗಾದ ಪ್ರೇರಣೆಗಳೆ. 

ಇದಕ್ಕೆ ನಿಮಗೆ ಸಾಹಿತ್ಯಕವಾಗಿ ಏನಾದರೂ ಪ್ರೇರಣೆಗಳಿದ್ದವೇ? 
ಪರಂಪರೆಯೊಂದಿಗೆ ಹೇಗೆ ಅನುಸಂಧಾನ ನಡೆಸಬೇಕೆಂಬುದನ್ನು ನಮ್ಮಲ್ಲಿ ಪಂಪ ಮತ್ತು ಅವನ ಸಮಕಾಲೀನ ಕವಿಗಳು, ವಚನಕಾರರು, ದಾಸರು ತೋರಿಸಿಕೊಟ್ಟಿದ್ದಾರೆ. ವಚನಕಾರರು ವೇದ ಉಪನಿಷತ್ತುಗಳಲ್ಲಿನ ಮಿತಿ ಹಾಗೂ ಮೌಲ್ಯಗಳನ್ನು ಅರ್ಥೈಸಿದ ವಿಶಿಷ್ಟ ಬಗೆಗಳು ನನಗೆ ಪ್ರಭಾವಿಸಿವೆ. ನಮ್ಮ ಇಂದಿನ ಸಮಕಾಲೀನ ತಲ್ಲಣಗಳಿಗೆ ಒಳಬೇರುಗಳು ಹಾಗೂ ಉತ್ತರಗಳು ವೇದ, ಉಪನಿಷತ್ತುಗಳಲ್ಲೇ ಇವೆ. ಆದ್ದರಿಂದ ನನ್ನ ಅಧ್ಯಯನ ಆ ಕುರಿತಾಗಿಯೇ ಇದೆ. 

ನಿಮ್ಮ ಬರಹಗಳಿಗೆ ಸಿಕ್ಕಂತಹ ಪ್ರತಿಕ್ರಿಯೆ, ಪ್ರೋತ್ಸಾಹಗಳೇನಾಗಿದ್ದವು? 
ನಾನು ಲಂಕೇಶ್ ಪತ್ರಿಕೆ ಪ್ರಾರಂಭವಾದ ಹೊಸತರಲ್ಲಿ ಒಂದು ಲೇಖನ ಬರೆದ್ದು ಕಳಿಸಿದ್ದೆ. ಆಗ ಅವರು ಅದನ್ನು ಮೆಚ್ಚಿಕೊಂಡು ನೀವು ಪತ್ರಿಕೆಗೆ ಬರೀತಾ ಇರಿ ಎಂದರು. ನಂತರ ಬರೆಯುತ್ತಾ ಹೋದೆ. ನನಗೆ ನನ್ನ ಲೇಖನಗಳನ್ನು ವೈಚಾರಿಕ ಲೇಖನಗಳು ಅಂತ ಹೆಸರಿಟ್ಟಿದ್ದು ಅವರೇ. ನನಗೆ ಅದೇನೂ ಗೊತ್ತಿರಲಿಲ್ಲ. ಆ ಕಾಲದಲ್ಲಿ ಸಂಪ್ರದಾಯಗಳು ಜಾಸ್ತಿ ರೂಡಿಯಲ್ಲಿದ್ದು ವಿದ್ಯಾವಂತರಾವರೂ ಅವಕ್ಕೇ ಗಂಟು ಬಿದ್ದಿದ್ದಂತ ಸಂದರ್ಭ. ಆಗ ಲಂಕೇಶ್ ಅವರು ನನ್ನ ಲೇಖನಗಳನ್ನು ಪ್ರಕಟಿಸುವ ಜೊತೆಗೆ ’ವೇದಾಂತ ರೇಜಿಮೆಂಟ್’ ಶೀರ್ಷಿಕೆಯ ನನ್ನ ಲೇಖನಗಳ ಸಂಗ್ರಹ ಪುಸ್ತಕವನ್ನೂ ಪ್ರಕಟಿಸಿದರು. ಇಂದು ನಮ್ಮ ಉಡುಗೆ ತೊಡುಗೆ ಜೀವನ ವಿಧಾನಗಳೆಲ್ಲಾ ಅತ್ಯಂತ ಆಧುನಿಕವಾಗಿವೆಯಾದರೂ ಬಹಳಷ್ಟು ಜನರು ಮಡಿವಂತಿಕೆಗಳನ್ನು ಬಿಟ್ಟು ಬರಲು ತಯಾರಿಲ್ಲ. ಸಮಾಜ ಮುಂದುವರೆಯಬೇಕಾದರೆ ಇಂತಹ ಅಂಧವಿಶ್ವಾಸಗಳಿಂದ ಹೊರಬರುವ ಅಗತ್ಯ ಇದೆ ಎನ್ನುವುದು ಇದು ನನ್ನ ಅಭಿಪ್ರಾಯ. 

ತಾವು ಇತ್ತೀಚೆಗೆ ಬರೆಯುತ್ತಿಲ್ಲವಲ್ಲ? 
ಇಲ್ಲ. ಇತ್ತೀಚೆಗೆ ಬರೆಯುವ ಶಕ್ತಿ ಕುಂದಿದೆ. ನೆನಪಿರುವುದಿಲ್ಲ. ಏನಾದರೂ ಬರೆಯಲು ಕುಳಿತರೆ ಅದರ ಹಿಂದೆ ಮುಂದಿನ ವಿಷಯಗಳು ನೆನಪಿಗೆ ಬರುವುದಿಲ್ಲ. 

ಇಂದು ವೈಜ್ಞಾನಿಕ ಚಿಂತನೆಗಳನ್ನು ಪ್ತೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ಮಾಧ್ಯಮಗಳು ಕೆಲಸ ಮಾಡುತ್ತಿವೆಯಾ?
ಹಾಗಾಗುತ್ತಿಲ್ಲ ಎನ್ನುವುದೇ ವಿಷಾದ. ಇಂದು ಸಮಾಜದಲ್ಲಿ ವೈಜ್ಞಾನಿಕತೆ ಹೆಚ್ಚುತ್ತಿಲ್ಲ ಎಂದರೆ ಅದು ವಿಜ್ಞಾನದ ವೈಫಲ್ಯವಲ್ಲ. ಅದು ಜನರ ವೈಫಲ್ಯ. ವೈಜ್ಞಾನಿಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ವಿಜ್ಞಾನ ದಿನೇ ದಿನೇ ಪ್ರಗತಿಯಲ್ಲಿದೆ. ಸ್ಟೀಫನ್ ಹಾಕಿಂಗ್‌ನಂತವರು ಅದ್ಭುತವಾಗಿ ಬರೆಯುತ್ತಿದ್ದಾರೆ. ಆದರೆ ನಮ್ಮ ಮಾಧ್ಯಮಗಳು ಅವನ್ನು ಪ್ರಚುರಪಡಿಸುತ್ತಿಲ್ಲ. ಮೂಢನಂಬಿಕೆಗಳನ್ನು ಪ್ರಚಾರ ಮಾಡುವುದರಿಂದ ಮಾಧ್ಯಮಗಳಿಗೆ ಆರ್ಥಿಕ ಲಾಭವಿರುವುದರಿಂದ ಅವುಗಳನ್ನು ಹೆಚ್ಚಾಗಿ ಪ್ರಸಾರ ಮಾಡುತ್ತಾರೆ. ಸಮಾಜದದಲ್ಲಿ ಬಹಳ ಜನರು ವೈಚಾರಿಕತೆ ಅಳವಡಿಸಿಕೊಳ್ಳದಿದ್ದರೆ ಜನರ ಮೌಢ್ಯವನ್ನು ಬಳಸಿಕೊಂಡು ಸುಖಜೀವನ ನಡೆಸುವ ವರ್ಗಗಳಿಗೆ ಲಾಭವಿದೆ. ಹೀಗಾಗಿಯೇ ಮಾಧ್ಯಮಗಳೂ ಅಂತಹ ವರ್ಗಗಳಿಗೆ ಲಾಭವಾಗುವಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. 

ಮೊನ್ನೆ ಪೇಜಾವರ ಸ್ವಾಮಿಗಳು ಸಹಪಂಕ್ತಿ ಕುರಿತು ಹೇಳಿದ ಮಾತುಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಪೇಜಾವರರು ಮಠಾಧಿಪತಿಗಳು. ಈ ಹಿಂದೆ ದಲಿತರನ್ನೂ ತಮ್ಮ ಭಕ್ತರನ್ನಾಗಿಸಿಕೊಳ್ಳುವ ಕಾರಣಕ್ಕೆ ದಲಿತರ ಕೇರಿಯಲ್ಲಿ ಪಾದಯಾತ್ರೆ ಮಾಡಿದರು. ಜಾತಿಗಳ ನಡುವೆ ನಿಜಕ್ಕೂ ಸಾಮರಸ್ಯ ಮೂಡಿಸುವ ಉದ್ದೇಶ ಅವರಿಗೇನಾದರೂ ಇದ್ದಿದ್ದರೆ ದಲಿತರ ಕೇರಿಗಳಲ್ಲಿ ಮತ್ತು ಮೇಲ್ಜಾತಿಯವರ ಕೇರಿಗಳಲ್ಲಿ ಸಹಪಂಕ್ತಿ ಭೋಜನವನ್ನು ಅವರು ಏರ್ಪಡಿಸಬೇಕು. ಅದಕ್ಕೆ ಇವರು ತಯಾರಿಲ್ಲ. ಇಂದು ಪರಿಸ್ಥಿತಿ ಹೇಗಿದೆ ಎಂದರೆ ಆರ್ಥಿಕವಾಗಿ ಉತ್ತಮ ಹಂತದಲ್ಲಿರುವ, ವಿದ್ಯಾವಂತ ದಲಿತರಿಗೆ ಮೇಲ್ಜಾತಿ ಮನೆಗಳಲ್ಲಿ ಪ್ರವೇಶ ಸುಲಭವಿಲ್ಲ. ಒಬ್ಬ ಮೇಲಧಿಕಾರಿ ದಲಿತನಾಗಿದ್ದು ಕೆಳಗಿನ ಅಧಿಕಾರಿ ಮೇಲ್ಜಾತಿಯವನಾಗಿದ್ದರೆ ಆ ಮೇಲಧಿಕಾರಿಯ ಮನೆಯಲ್ಲಿ ಊಟ ಮಾಡುವ ಪರಿಸ್ಥಿತಿ ಇಂದೂ ಇಲ್ಲ. ಇಂತಹ ಕೀಳು ಮನಸ್ಥಿತಿಯೇ ನಮ್ಮ ದೇಶದ ಅವನತಿಗೆ ಕಾರಣ. 

ಪ್ರಬಲ ಜಾತಿಗಳೆಲ್ಲಾ ಜಾತಿ ಸಮಾವೇಶಗಳನ್ನು ನಡೆಸುವ ಪ್ರಕ್ರಿಯೆ ನಡೆಯುತ್ತಿದೆ. ಇದು ಸಮಾಜದಲ್ಲಿ ಆರೋಗ್ಯಕರ ವಾತಾವರಣ ಉಂಟುಮಾಡುತ್ತದೆಯಾ?
ಈಗ ನೋಡಿ ಟಿವಿಯಲ್ಲಿ ಬರುತ್ತಿದೆ. ಒಕ್ಕಲಿಗೆರೆಲ್ಲ ಒಂದಾಗಬೇಕು, ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹಸರಿಡಬೇಕು ಎಂದೆಲ್ಲಾ ಹೇಳುತ್ತಿದಾರೆ. ಆದರೆ ಒಕ್ಕಲಿಗರಲ್ಲೇ ಮತ್ತೆ ನೂರಾರು ಜಾತಿಗಳಿವೆಯಲ್ಲ? ನಾವೆಲ್ಲಾ ಜಾತಿ ಪಂಗಡಗಳನ್ನು ಬಿಟ್ಟು ಒಂದು ಎನ್ನುವಂತಾಗಿದ್ದರೆ ಸಮಾಜದ ಪ್ರಗತಿಯೆಡೆ ಸಾಗುತ್ತಿತ್ತು. ಆದರೆ ನಮ್ಮ ಪರಂಪರೆಯಲ್ಲಿಯೇ ಒಡೆದು ಆಳುವ ಪದ್ಧತಿ ಹಾಸು ಹೊಕ್ಕಾಗಿದೆ. ಇಲ್ಲಿ ಜನಪ್ರತಿನಿಧಿಗಳಾದವರೂ ಜಾತಿರಾಜಕಾರಣ ಮಾಡುತ್ತಾರೆ. ಜನಪ್ರತಿನಿಧಿಯಾದವರಿಗೆ ತನ್ನ ಜಾತಿ ಮುಖ್ಯವಾಗಬಾರದು. ದೇಶದ ಸಂವಿಧಾನಕ್ಕೆ ಅನುಸಾರವಾಗಿ ಆಡಳಿತ ನಡೆಸಬೇಕೇ ಹೊರತು, ತನ್ನ ಜಾತಿಯ ಹಿತದೃಷ್ಟಿಯಿಂದ ಅಲ್ಲ. 

ಬಿಜೆಪಿ ಸರ್ಕಾರ ಬಂದ ಮೇಲೆ ಮಠಾಧೀಶರೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರಲ್ಲ?
ನಮ್ಮಲ್ಲಿ ರಾಜಕಾರಣ ಎನ್ನುವುದು ಸಂವಿಧಾನದಲ್ಲಿ ಹೇಳುವಂತೆ ಜಾತ್ಯಾತೀತವಾಗಿಲ್ಲ. ಸೆಕ್ಯುಲರ್ ಎಂದರೆ ಆಳ್ವಿಕೆಯಲ್ಲಿ ಧರ್ಮಗಳನ್ನಾಗಲೀ ಜಾತಿಗಳನ್ನಾಗಿಗಲೀ ಲೆಕ್ಕಕ್ಕೇ ತೆಗೆದುಕೊಳ್ಳಬಾರದು. ಆದರೆ ಇಲ್ಲಿ ಅದಕ್ಕೆ ವಿರುದ್ಧವಾಗಿಯೇ ನಡೆಯುತ್ತಿದೆ. ಯಡಿಯೂರಪ್ಪ ಲಿಂಗಾಯತ ಎಂದು ಹೇಳಿ ಮಠಗಳಿಗೆ ದುಡ್ಡುಕೊಡುವುದನ್ನು ಆರಂಭಿಸಿ ಅಂತಹ ಕೆಟ್ಟ ಚಾಳಿಗೆ ನಾಂದಿಹಾಡಿದರು. ಇದರಿಂದ ಪ್ರಜೆಗಳಿಗಿಂತ ಮಠಾಧಿಪತಿಗಳ ಮಾತಿಗೇ ಹೆಚ್ಚು ಬಲ ಬಂದಿದೆ. 

ನಿಮ್ಮ ಮನೆಗೆ ’ಲೋಕಾಯತ’ ಎಂದು ಹೆಸರಿಟ್ಟಿದೀರಲ್ಲ. ಏಕೆ?
ನಮ್ಮ ಈ ಮನೆಯನ್ನು ಕಟ್ಟುವಾಗ ದೇವಿಪ್ರಸಾದ್ ಚಟ್ಟೋಪಾದ್ಯಾಯ ಅವರ ’ಲೋಕಾಯತ’ ಎಂಬ ಪುಸ್ತಕ ಓದುತ್ತಿದ್ದುದರಿಂದ ಆ ಹೆಸರನ್ನೇ ಮನೆಗೆ ಇಟ್ಟಿದ್ದೆ. ಸಾಮಾನ್ಯವಾಗಿ ಮನೆಗಳಿಗೆ ದೇವರ ಹೆಸರಿಡುತ್ತಾರೆ. ದೇವರು ಬಂದು ತಮ್ಮನ್ನು ಕಾಪಾಡುತ್ತಾನೆ ಎಂದು. ’ಲೋಕಾಯತ’ ಅಂದರೆ ’ನಾನು ಈ ಲೋಕದ ಪ್ರಜೆ. ಲೋಕದ ಎಲ್ಲ ಜನರು ಸುಖ ಸಮೃದ್ಧಿಯಾಗಿರುವುದು ಜೀವನದ ಉದ್ದೇಶವಾಗಿಬೇಕು. ಎಲ್ಲೊರಂದಿಗೆ ನಾನು ಬದುಕಬೇಕು ಎಂಬ ಆಶಯವನ್ನು ಕೊಂಡೊಯ್ಯುವುದು. ಇದು ನಮ್ಮ ಭಾರತೀಯ ತತ್ವಶಾಸ್ತ್ರದ ಒಂದು ಮುಖ್ಯವಾದ ಪರಂಪರೆಯಾಗಿತ್ತು. ಈಗ ’ಲೋಕಾಯುಕ್ತ’ ಎನ್ನುವುದು  ಪ್ರಚಾರಕ್ಕೆ ಬಂದ ಮೇಲೆ ಬಹಳ ಜನ ವಿದ್ಯಾವಂತರು ’ಓಹೋ ಲೋಕಾಯುಕ್ತರಾ ನೀವು?’ ಎಂದು ಕೇಳ್ತಾರೆ. ಲೋಕಾಯತ ಎಂಬುದರ ಅರಿವೇ ಅವರಿಗಿರುವುದಿಲ್ಲ. 

ಪತ್ರಿಕೋದ್ಯಮದ ಭಾಗವಾಗಿಯೂ ಕೆಲಸ ನಿರ್ವಹಿಸಿದ್ದಿರಿ. ನಿಮ್ಮ ಕಾಲದ ಪತ್ರಿಕೋದ್ಯಮಕ್ಕೂ ಇಂದಿನ ಪತ್ರಿಕೋದ್ಯಮಕ್ಕೂ ಯಾವ ಭಿನ್ನತೆ ಕಾಣುತ್ತೀರಿ?

ಉನ್ನತ ಉದ್ದೇಶಗಳನ್ನಿಟ್ಟುಕೊಂಡು, ಅದಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಡುವಂತವರು ಅಂದು ಇದ್ದರು. ಈಗ ಪತ್ರಿಕೆ - ಮಾದ್ಯಮಗಳಲ್ಲಿ ಪೈಪೋಟಿ ವಿಪರೀತವಾಗಿದೆ. ಎಲ್ಲರೂ ಪತ್ರಿಕೆ ನಡೆಸುತ್ತಿರುವುದು ಹೊಟ್ಟೆ ಹೊರೆದುಕೊಳ್ಳುವುದಕ್ಕೆ ಮಾತ್ರ. ಅದಕ್ಕಾಗಿ ಜನಸಾಮಾನ್ಯರನ್ನು ಜಾಗೃತಗೊಳಿಸುವ ವಿಷಯಗಳಿಗಿಂತ ಸುಲಭವಾಗಿ ಜನರು ನೋಡುವಂತಹ, ಮನರಂಜನೆಗಳನ್ನು ಮಾತ್ರ ನೀಡುತ್ತಾರೆ. ಇಂದು ಮಾದ್ಯಮಗಳಿಗೆ ಜಾಹೀರಾತುಗಳೇ ಮುಖ್ಯವಾಗಿಬಿಟ್ಟದೆ. ಜನಸಾಮಾನ್ಯರ ಪ್ರಗತಿ ಹೊಂದುವುದಕ್ಕಿಂತ ತಮ್ಮ ಹೊಟ್ಟೆಹೊರೆದುಕೊಳ್ಳುವುದೇ ಇಂದು ಪ್ರಧಾನ ಎಂಬಂತಾಗಿದೆ. ಸುದ್ದಿಗಳನ್ನೂ ಹಣ ತೆಗೆದುಕೊಂಡು ನೀಡುವ ದುಸ್ಥಿತಿ ಇದೆ. 

ನಿಮ್ಮ ಮತ್ತು ಪತ್ರಿಕೋದ್ಯಮದ ಒಡನಾಟ ಹೇಗಾದದ್ದು? 

ನಾನು ಪತ್ರಕರ್ತನಾಗಬೇಕೆಂದು ಉದ್ದೇಶ ಇಟ್ಟುಕೊಂಡವನಾಗಿರಲಿಲ್ಲ. ನಾನು ಪದವಿ ಓದುವಗಲೇ ಆಸಕ್ತಿಯ ಕಾರಣಕ್ಕೆ ಬರೆಯುತ್ತಿದ್ದೆ. ಒಮ್ಮೆ ಲಂಕೇಶ್ ಪತ್ರಿಕೆಗೆ ಪ್ರತಿಕ್ರಿಯೆ ಬರೆದೆ. ಅದಕ್ಕೆ ಅವರು ಮರುಪತ್ರ ಬರೆದು ನೀವು ಚೆನ್ನಾಗಿ ಬರೀತೀರಿ. ನಮ್ಮ ಪತ್ರಿಕೆಗೆ ಬರೆಯಿರಿ ಎಂದು ತಿಳಿಸಿದರು. ಆಮೇಲಷ್ಟೇ ನಾನು ಗಂಭೀರವಾಗಿ ನಾನಾ ವಿಷಯಗಳ ಬಗ್ಗೆ ವರದಿ, ವಿಶ್ಲೇಷಣೆಗಳನ್ನು ಬರೆಯುತ್ತಾ ಹೋದದ್ದು. ಅದರಿಂದ ಸಣ್ಣ ಪುಟ್ಟ ಬದಲಾವಣೆಗಳೂ ನನ್ನೆದುರಿಗೇ ಸಂಭವಿಸಿದ್ದು ನನಗೆ ಸಂತೋಷ ನೋಡುತ್ತಿತ್ತು. ಬರೆಯುತ್ತಾ ಬರೆಯುತ್ತಾ ವಿಷಯಗಳನ್ನು ಹೇಗೆ ನೋಡಬೇಕು, ನೋಡಬಾರದು ಎಂಬುದೂ ತಿಳಿಯುತ್ತಾ ಹೋಯಿತು. ಸುತ್ತಮುತ್ತಲಿನ ಹಲವಾರು ವಿಷಯಗಳ ಬಗ್ಗೆ ಬರೆದೆ. 

ನಾವು ತಂತ್ರಜ್ಞಾನದ ಬೆಳವಣಿಗೆ ಉತ್ತುಂಗದಲ್ಲಿದ್ದೇವೆ. ಆದರೆ ಈ ಆಧುನಿಕತೆ ತಂತ್ರಜ್ಞಾನಗಳು ವೈಚಾರಿಕತೆಯನ್ನು ಮುಂದೆ ಕೊಂಡೊಯ್ಯಬಲ್ಲವಲ್ಲವೇ? 

ಹಿಂದೆಲ್ಲಾ ವಿಚಾರವಾದಿಗಳು, ಲೇಖಕರು ಸಮಾವೇಶಗಳನ್ನು, ರ‍್ಯಾಲಿಗಳನ್ನೆಲ್ಲಾ ಸಂಘಟಿಸಿದ್ದೆವು. ವೈಚಾರಿಕ ಚಿಂತನೆ ಮತ್ತು ಮೂಢನಂಬಿಕೆಗಳ ವಿರುದ್ಧ ಜಾಗೃತಿಯ್ನನು ಬೆಳೆಸುವ ಕೆಲಸ ಮಾಡುತ್ತಿದ್ದೆವು. ಆದರೆ ಇಂದು ಅಂತಹ ಆಂದೋನಗಳು ಇಲ್ಲ. ಇಂದು ಆಧುನಿಕೀಕರಣದ ಭರಾಟೆಯಲ್ಲಿ ಜನರು ತಮ್ಮ ತಮ್ಮ ಜೀವನ ನಿರ್ವಹಣೆಯನ್ನೇ ಮುಖ್ಯವಾಗಿಸಿಕೊಂಡಿದ್ದಾರೆ. ಸಾಮಾಜಿಕ ಕೆಲಸಗಳಿಗೆ ಸಮಯವೆ ಇಲ್ಲದಂತೆ ಹೈಟೆಕ್ ಆಗಿದ್ದೇವೆ ಇಂದು. ನಮ್ಮಲ್ಲಿ ಕಂಪ್ಯೂಟರ್ ಬಂದಿದೆ, ಇಂಟರ್ನೆಟ್ ಬಂದಿದೆ. ಎಲ್ಲಾ ಸರಿ. ಆದರೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ. ಇಂದು ಆಧುನಿಕತೆ ಎನ್ನುವುದು ಅನಿವಾರ್ಯವಾಗಿ ಬರುತ್ತಿದೆ. ಜಗತ್ತು ಹಳ್ಳಿಯಾಗಿ ಬಿಟ್ಟಿದೆ. ಈ ಕಾರಣದಿಂದಲೇ ಇಂದು ಅಸ್ತಿತ್ವಕ್ಕಾಗಿ ಸಂಘರ್ಷವೂ ನಡೆಯುತ್ತಿದೆ. ಆದರೆ ಸಂಸ್ಕೃತಿ, ನೈತಿಕತೆಗಳು ತಮ್ಮ ಸ್ಥಾನ ಕಳೆದಕೊಂಡಿವೆ. ನೈತಿಕವಾಗಿ, ಆಧ್ಯಾತ್ಮಿಕವಾಗಿ ಹಾಗೂ ಮಾನವೀಯವಾಗಿ ಮೌಲ್ಯಗಳನ್ನು ನಾವು ಉಳಿಸಿಕೊಂಡು ಹೋಗುತ್ತಿಲ್ಲ ಎನ್ನುವುದು ಖೇದಕರ. ಇದರ ನಡುವೆಯೂ ಅಲ್ಲಲ್ಲಿ ಕೆಲವರಿದ್ದಾರೆ. ಸಿದ್ದೇಶ್ವರ ಸ್ವಾಮಿ ಎಂಬುವವರೊಬ್ಬರಿದ್ದಾರೆ. ಅವರು ಕಾವಿ ಉಡುವುದಿಲ್ಲ. ಲುಂಗಿ ಜುಬ್ಬ ತೊಡುತ್ತಾರೆ. ತಮ್ಮ ಬಟ್ಟೆ ತಾವೇ ಒಗೆದುಕೊಳ್ಳುತ್ತಾರೆ. ಸ್ವಂತ ಕಾರಿಟ್ಟುಕೊಂಡಿಲ್ಲ. ದೂರ ಊರಿಗೆ ಹೋದರೆ ಮಾತ್ರ ಬಸ್‌ಬನಲ್ಲಿ ಓಡಾಡುತ್ತಾರೆ. ಉಳಿದಂತೆ ನಡೆದೇ ಹೋಗುತ್ತಾರೆ. ಇವರಿಗೆ ಅಪಾರ ಸಂಖ್ಯೆ ಭಕ್ತರೂ ಇದ್ದಾರೆ. ಇಂತವರು ಜನರಿಗೆ ದಾರಿ ತೋರಿಸಬೇಕು. 

ಆರೋಗ್ಯಕರ ಸಮಾಜದ ಕನಸು ಕಂಡಿರುವ ನೀವು ಇಂದಿನ ನಮ್ಮ ಅಭಿವೃದ್ಧಿ ಮಾದರಿಗಳ ಬಗ್ಗೆ ಏನು ಹೇಳುತ್ತೀರಿ? 

ಇಂದಿನ ಅಭಿವೃದ್ಧಿ ಯೋಜನೆಗಳೆಲ್ಲಾ ತಯಾರಾಗುತ್ತಿರುವುದು ಕಾರ್ಪೊರೇಟ್ ಕಛೇರಿಗಳಲ್ಲಿ. ನೆಲದ ನೋವೇನೆಂದೇ  ತಿಳಿಯದವರು ಈ ದೇಶದ ಅಭಿವೃದ್ಧಿ ಬಗ್ಗೆ ಯೋಜನೆಗಳನ್ನು ಸಿದ್ಧಪಡಿಸುತ್ತಾರೆ. ಬಡವರ ಹೆಸರಿನಲ್ಲಿಯೇ ಇರುವ ಇಂತಹ ಯೋಜನೆಗಳು ಅಕ್ಷರವಂತರಿಗೆ, ಶ್ರೀಮಂತರಿಗೆ, ಮೇಲ್ಜಾತಿಗಳಿಗಷ್ಟೇ ದಕ್ಕಿಬಿಡುವ ಯೋಜನೆಗಳಾಗಿವೆ.  

ಸಮಾಜವನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಲ್ಲಿ ಯಾವುದು ಮುಖ್ಯ ಎನ್ನಿಸುತ್ತದೆ ನಿಮಗೆ? 

ಭ್ರಷ್ಟಾಚಾರವೇ ಎಲ್ಲದಕ್ಕಿಂತ ದೊಡ್ಡ ಸಮಸ್ಯೆ. ಅದನ್ನು ಯಾರು ಯಾರ ಮೇಲೆ ಹೇಳುವುದು? ಭ್ರಷ್ಟಾಚಾರ ಇದೆ ಎಂದು ಹೇಳುವವರೇ ದೊಡ್ಡ ಭ್ರಷ್ಟರಾಗಿರುತ್ತಾರಲ್ಲ. ಯಾರಾದರೂ ಲಂಚ ಕೇಳಿದಾಗ ಪ್ರಶ್ನಿಸದೆ ಹಿಂದೆ ಮುಂದೆ ನೋಡದೆ ಕೊಟ್ಟು ಬರುವವರಿದ್ದಾಗ ಭ್ರಷ್ಟಾಚಾರ ಹೇಗೆ ನಿಲ್ಲುತ್ತದೆ ಹೇಳಿ?

ಇಂದಿನ ತರುಣರಿಗೆ ಏನು ಹೇಳಲು ಇಚ್ಛಿಸುತ್ತೀರಿ?
ಇಂದಿನ ಯುವಕರಿಗೆ ನಾನು ಹೇಳಲು ಇಚ್ಛಿಸುವುದಿಷ್ಟೆ. ಇಂದಿನ ಪರಿಸ್ಥಿತಿ ಸಮಾಜ ಹದಗೆಟ್ಟಿದೆ ನಿಜ. ಅದರಲ್ಲೂ ಸಹ ನೀವು ಸಮಾಜದಲ್ಲಿ ಮತ್ತೊಬ್ಬರ ಮೇಲೆ ಅವಲಂಬಿತತರಾಗದೇ ಬದುಕುವುದನ್ನು ಕಲಿಯಬೇಕು. ಪ್ರಾಮಾಣಿಕವಾಗಿ ದುಡಿದು ಜೀವನ ನಡೆಸುತ್ತಾ ಮತ್ತೊಬ್ಬರಿಗೆ ಮಾರ್ಗದರ್ಶನ ನೀಡಲು ಕಲಿಯಬೇಕಿದೆ. 

ಯುವ ಬರಹಗಾರರಿಗೆ ನಿಮ್ಮ ಸಲಹೆ ಸೂಚನೆ ಏನು?
ಯುವ ಬರಹಗಾರರಾದವರು ನಿರಂತರ ಓದಿನಲ್ಲಿ ತೊಡಗಿರಬೇಕು. ಭಾರತೀಯ ತತ್ವಶಾಸ್ತ್ರ, ವೇದ ಉಪನಿಷತ್ತುಗಳಂತಹ ಪ್ರಾಚೀನ ಗ್ರಂಥಗಳನ್ನು ಮತ್ತು ಆಧುನಿಕ ಚಿಂತನೆಗಳನ್ನು ಅಧ್ಯಯನ ನಡೆಸಬೇಕು. ಇಲ್ಲದಿದ್ದರೆ ಸಾಮಾಜಿಕ ವಿಷಯಗಳ ಬಗ್ಗೆ ಸ್ಪಷ್ಟ ನಿಲುವುಗಳು ಹೊರಬರುವುದಿಲ್ಲ. ಹಾಗೆಯೇ ಸಾಮಾಜಿಕವಾದ ಉದ್ದೇಶವಿರದ ಬರಹಕ್ಕೆ ಯಾವ ಬೆಲೆಯೂ ಇಲ್ಲ ಎನ್ನುವುದನ್ನು ಅವರು ಅರಿತುಕೊಳ್ಳಬೇಕು. ನಮ್ಮ ಪರಂಪರೆಯನ್ನು ಅರ್ಥಮಾಡಿಕೊಂಡರೆ ಮಾತ್ರ ಸಮಕಾಲೀನ ಸಮಾಜದ ನಾಡಿಮಿಡಿತವನ್ನು ಕೇಳಿಸಿಕೊಳ್ಳಲು ಸಾಧ್ಯ. ಹೊಸ ತಲೆಮಾರಿನ ಬರಹಗಾರರಿಗೆ ಈ ಜವಾಬ್ದಾರಿ ಬೇಕಿದೆ. 

1 ಕಾಮೆಂಟ್‌:

ಪುಷ್ಪರಾಜ್ ಚೌಟ ಹೇಳಿದರು...

ಸಂದರ್ಶನ ಲೇಖನದೊಳಗಿನ ಚಿಂತನಾಲಹರಿ, ಬೀವಿಯವರ ವೈಚಾರಿಕತೆಗಳು ಬಹಳ ಖುಷಿ ಕೊಟ್ಟವು.

"ಯುವ ಬರಹಗಾರರಾದವರು ನಿರಂತರ ಓದಿನಲ್ಲಿ ತೊಡಗಿರಬೇಕು. ಭಾರತೀಯ ತತ್ವಶಾಸ್ತ್ರ, ವೇದ ಉಪನಿಷತ್ತುಗಳಂತಹ ಪ್ರಾಚೀನ ಗ್ರಂಥಗಳನ್ನು ಮತ್ತು ಆಧುನಿಕ ಚಿಂತನೆಗಳನ್ನು ಅಧ್ಯಯನ ನಡೆಸಬೇಕು. ಇಲ್ಲದಿದ್ದರೆ ಸಾಮಾಜಿಕ ವಿಷಯಗಳ ಬಗ್ಗೆ ಸ್ಪಷ್ಟ ನಿಲುವುಗಳು ಹೊರಬರುವುದಿಲ್ಲ. ಹಾಗೆಯೇ ಸಾಮಾಜಿಕವಾದ ಉದ್ದೇಶವಿರದ ಬರಹಕ್ಕೆ ಯಾವ ಬೆಲೆಯೂ ಇಲ್ಲ ಎನ್ನುವುದನ್ನು ಅವರು ಅರಿತುಕೊಳ್ಳಬೇಕು. ನಮ್ಮ ಪರಂಪರೆಯನ್ನು ಅರ್ಥಮಾಡಿಕೊಂಡರೆ ಮಾತ್ರ ಸಮಕಾಲೀನ ಸಮಾಜದ ನಾಡಿಮಿಡಿತವನ್ನು ಕೇಳಿಸಿಕೊಳ್ಳಲು ಸಾಧ್ಯ. ಹೊಸ ತಲೆಮಾರಿನ ಬರಹಗಾರರಿಗೆ ಈ ಜವಾಬ್ದಾರಿ ಬೇಕಿದೆ." - ಎನ್ನುವ ಅವರ ಮಾತುಗಳನ್ನು ನಮ್ಮ ಯುವಜನತೆ ಅವಶ್ಯವಾಗಿ ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇದೆ.

ಈ ನಿಟ್ಟಿನಲ್ಲಿ ಬೆಳಕು ಚೆಲ್ಲುವಂತಾಗಲಿ ನಿಮ್ಮ ಈ ಸಂದರ್ಶನ ಲೇಖನ ಕುಗ್ವೆಯವರೇ. ವಂದನೆಗಳು ನಿಮಗೆ.

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.