ಮೇ 28, 2012

ಫೇಸ್ ಥ್ರೀ ಫೇಸ್!




ಇದು ಮೂರು ವ್ಯಕ್ತಿಗಳ ಆರು ಮುಖಗಳ ಕತೆ. ಮೊನ್ನೆಯಷ್ಟೇ  ಶಾಂತಿನಗರದ 'ಗ್ಯಾಲರಿ ಸುಮುಖ’ದಲ್ಲಿ  ಮುಕ್ತಾಯವಾದ  ’ಫೇಸ್ ಟೂ ಫೇಸ್’ (Face 2 Face)  ಛಾಯಾಚಿತ್ರ ಹಾಗೂ ವಿಡಿಯೋ ಪ್ರದರ್ಶನದ ವೇಳೆ ಕಂಡ ಮುಖಗಳಿವು.

ಫೇಸ್ ವನ್:
ಆ ವ್ಯಕ್ತಿ ಹೆಸರು ಬಗಡೆ ಹಳ್ಳಿ ಬಸವರಾಜು. ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಗಾಂಧೀಜಿ. ಅದೇ ಮಹಾತ್ಮ ಗಾಂಧೀಜೀನೇ!. ಗಾಂಧೀಜಿಯವರ ತತ್ವಗಳಿಂದ ಪ್ರೇರಿತನಾಗಿದ್ದ ಈ ಯುವಕ ಅವನ್ನು ಜನಮಾನಸದಲ್ಲಿ ಮತ್ತಷ್ಟು ದಟ್ಟಗೊಳಿಸಲು ಆಯ್ಕೆ ಮಾಡಿಕೊಂಡ ದಾರಿ ವಿಶಿಷ್ಟವಾದದ್ದು. ಅದೆಂದರೆ ಗಾಂಧೀಜಿಯವರನ್ನು ಹೋಲುವಂತೆಯೇ ಮೈತುಂಬಾ ಬೆಳ್ಳಿಯ ಬಣ್ಣ ಬಳಿದುಕೊಂಡು ಗಾಂಧೀಜಿಯವರ ಜೀವಂತ ವಿಗ್ರಹದಂತೆ  ಕೋಲೊಂದನ್ನು ಹಿಡಿದು ಜನರ ಮಂದೆ ಓಡಾಡುವುದು. ಈ ವೇಶದಲ್ಲಿ ಬಸವರಾಜ್ ನಾನಾ ಸಾರ್ವಜನಿಕ ಸಮಾರಂಭಗಳಲ್ಲಿ ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದಾರೆ. ಈ ’ಗಾಂಧೀ’ ಬಸವರಾಜ್‌ರನ್ನು ಕಂಡು ಜನರು ಗೌರವಿಸಿದ್ದಿದೆ, ಕೈ ಮುಗಿದಿದ್ದಿದೆ, ಅಪಹಾಸ್ಯ ಮಾಡಿ ಚುಡಾಯಿಸಿದ್ದಿದೆ, ವಿಚಿತ್ರವಾಗೊ ನೋಟ ಬೀರಿದ್ದೂ ಇದೆ. ಆದರೆ ಈ ಎಲ್ಲಾ ಪ್ರತಿಕ್ರಿಯೆಗಳಿಗೂ ಬಸವರಾಜ್‌ದು ಒಂದೇ ಉತ್ತರ. ಅದೇ ಗಾಂಧೀ ಸ್ಮೈಲು

ಫೇಸ್ ಟೂ:
ಈ ವ್ಯಕ್ತಿಯ ಹೆಸರು ವಿದ್ಯಾಸಾಗರ. ತಮ್ಮ ಯೌವನದಿಂದಲೂ ಇವರಿಗೆ ತಮಿಳು ನಟ ಎಂ.ಜಿ.ಆರ್ ಅವರನ್ನು ಕಂಡರೆ ವಿಚಿತ್ರ ಅಭಿಮಾನ. ತಮ್ಮ ಶಾಲಾ ಕಾಲೇಜು ದಿನಗಳಿಂದಲೇ ಎಂ.ಜಿ.ಆರ್‌ರನ್ನು ಅನುಕರಿಸಲು ತೊಡಗಿದವರು. ಮಾತ್ರವಲ್ಲ ಒಂದು ಬಗೆಯ ಗೀಳನ್ನೇ ಹಚ್ಚಿಕೊಂಡು ಬಿಟ್ಟರು. ಎಂಜಿಆರ್ ರಂತೆಯೇ ಮಾತು, ನಡಿಗೆ, ಉಡುಗೆ, ತೊಡುಗೆ, ಕೊನೆಗೆ ಕೂದಲು ಬಾಚಿಕೊಳ್ಳುವುದೂ ಎಂಜಿಆರ್ ತರಾನೇ. ನಂತರ ವಿದ್ಯಾಸಾಗರ್ ಸಿವಿಲ್ ಇಂಜಿನಿಯರ್ ಆದರು. ಆಗಲೂ ಈ ಗೀಳು ಬಿಡಲಿಲ್ಲ. ಇಂದಿಗೂ ಬಿಟ್ಟಿಲ್ಲ. ’ನನಗೆ ಎಂಜಿಆರ್ ಎಂದರೆ ನನಗೆ ಜೀವ, ಅವರು ಬೇರೆ ನಡರಂತಲ್ಲ್ಲ. ತಾವು ಸಿನಿಮಾದಲ್ಲಿ ದುಡಿದಿದ್ದೆಲ್ಲವನ್ನೂ ಬಡ ಬಗ್ಗರಿಗೆ ಹಂಚಿದ ಮಹಾತ್ಮ. ಅವರನ್ನು ಬಿಟ್ಟರೆ ಕನ್ನಡದಲ್ಲಿ ನನಗೆ ಇಷ್ಟವಾಗುವುದು ಡಾ. ರಾಜ್‌ಕುಮಾರ್ ಮಾತ್ರ’ ಎಂದು ಅರೆ ಬರೆ ಇಂಗ್ಲಿಷಿನಲ್ಲಿ ಎಂಜಿಆರ್ ಶೈಲಿಯಲ್ಲೇ ಹೇಳುತ್ತಾರೆ ವಿದ್ಯಾಸಾಗರ್.


ಫೇಸ್ ಥ್ರೀ:
ಇವರ ಹೆಸರು ಶಿವರಾಜು ಬಿ. ಎಸ್ ವೃತ್ತಿಯಲ್ಲಿ ಪೊಲೀಸ್. ಹಾಗಾಗಿ ಇವರು ಕಾಪ್ ಶಿವ. ಪ್ರವೃತ್ತಿಯಲ್ಲಿ ಛಾಯಾಗ್ರಾಹಕ. ಮೇಲಿನ ಎರಡೂ ವ್ಯಕ್ತಿಗಳ ಅಭಿನಯಗಳನ್ನು ಅದ್ಭುತವೆನ್ನುವಂತೆ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಕಾಪ್ ಶಿವ ಕೂಡಾ ಒಮ್ಮೆ ಪೊಲೀಸ್ ಆಗಿ ಮತ್ತೊಮ್ಮೆ ಛಾಯಾ ಚಿತ್ರ ಕಲಾವಿದನಾಗಿ ದ್ವಿಪಾತ್ರದಲ್ಲಿ ಬದುಕು ನಡೆಸುತ್ತಿದ್ದಾರೆ. ಪೊಲೀಸ್ ವೃತ್ತಿಯ ಒತ್ತಡದಲ್ಲಿ ತಮ್ಮೊಳಗಿನ ಕಲಾವಿದನನ್ನು ಪೊರೆಯುವುದು ಅಷ್ಟು ಸುಲಭದ ಮಾತಲ್ಲ. ಆದರೆ ಕಷ್ಟವನುಂಡೇ ಬೆಳೆದಿರುವ ಶಿವರಾಜು ಅವರಲ್ಲಿರುವ ಕಲಾವಿದನ ಬದ್ಧತೆ, ಆಸಕ್ತಿ ಅವರಿಗೆ ವಿಶೇಷ ಶಕ್ತಿ ನೀಡಿರಿಲಿಕ್ಕೂ ಸಾಕು. ಮೊದಮೊದಲಿಗೆ ಯಾವುದೇ ತರಬೇತಿಯನ್ನೂ ಪಡೆಯದೆ ಫೋಟೊಗ್ರಫಿಗಿಳಿದ ಶಿವ ಕ್ರಮೇಣ ಹಿರಿಯ ಛಾಯಾಗ್ರಾಹಕರ ಸಲಹೆ ಸಹಕಾರಗಳ ಮೂಲಕ ತನ್ನದೇ ಛಾಪನ್ನು ಒತ್ತಿದ್ದಾರೆ. ರಾಜ್ಯ, ದೇಶಗಳ ಗಡಿಯಾಚೆಗೂ ಕಾಪ್ ಶಿವ ಅವರ ಚಿತ್ರಗಳು ಪ್ರದರ್ಶನಗೊಂಡಿವೆ. ಪ್ರಾಯಶಃ ತಾನು ಈ ರೀತಿ ತನ್ನ ವೃತ್ತಿ ಮತ್ತು ಪ್ಯಾಷನ್‌ಗಳನು ನಿಭಾಯಿಸುವ ಸಂಘರ್ಷದಲ್ಲೇ ಕಾಪ್ ಶಿವ ಅವರಿಗೆ ತನ್ನಂತೆಯೇ ಇರುವ ಮೇಲಿನ ಎರಡು ಅದ್ಭುತ ವ್ಯಕ್ತಿತ್ವಗಳ ಕುರಿತು ಆಲೋಚಿಸುವಂತಾಗಿ ತನ್ನ ಕ್ಯಾಮೆರಾ ಕಣ್ಣನ್ನು ಆ ಕಡೆ ತಿರುಗಿಸುವಂತೆ ಮಾಡಿರಬಹುದು.


ಮೊನ್ನೆ ಈ ಚಿತ್ರ ಪ್ರದರ್ಶನ ಇನ್ನು ಕೇವಲ ಒಂದೇ ದಿನ ಬಾಕಿ ಇರುವಾಗ ನಾನು ಹೋದೆ. ’ಛೇ! ಮಿಸ್ ಮಾಡ್ಕೊಂಡು ಬಿಡ್ತಾ ಇದ್ನಲ್ಲಾ' ಎನ್ನಿಸಿತು.


ಕಾಮೆಂಟ್‌ಗಳಿಲ್ಲ:

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.