ಇಂದು ಜಾತಿ ಎನ್ನುವುದೇ ಆಧುನಿಕತೆಯ ಒಂದು ಶಾಪ - ಡಾ. ಎಂ.ಎಸ್.ಆಶಾದೇವಿ
ಇಂದು ಜಾತಿ ಎನ್ನುವುದೇ ಆಧುನಿಕತೆಯ ಒಂದು ಶಾಪ - ಡಾ. ಎಂ.ಎಸ್.ಆಶಾದೇವಿ ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಸಾಹಿತ್ಯ ರಚನೆ ಇಂದು ಯಾವ ಘಟ್ಟವನ್ನು ತಲುಪಿದೆ ಎಂದು ನಿಮ್ಮ ಅನಿಸಿಕೆ ? ಎಲ್ಲ ಬಗೆಯ ಶೋಷಿತವರ್ಗಗಳ ಸಂಕಥನದಲ್ಲಿ ಗುರುತಿಸಬಹುದಾದ ಸಾಮಾನ್ಯ ಲಕ್ಷಣಗಳು ಇಲ್ಲೂ ಇವೆ. ಮೊದಲನೆಯದ್ದು ಆತ್ಮ ಮರುಕದ ಘಟ್ಟವಾದರೆ ಎರಡನೆಯದ್ದು ಸ್ವ - ಅರಿವಿನ ಘಟ್ಟ. ಮೂರನೆಯದ್ದು ಅಧಿಕೃತೆಯನ್ನು ದಾಖಲಿಸುವ ಘಟ್ಟ. ಹೀಗೆ ಇಂದು ಲೇಖಕಿಯರು ತಮ್ಮ ಅನುಭವಕ್ಕೂ ತಮ್ಮ ಬರವಣಿಗೆಗೂ ಒಟ್ಟಾರೆ ತಮ್ಮ ಅಭಿವ್ಯಕ್ತಿಗೆ ಅಧಿಕೃತತೆಯನ್ನು ಪಡೆದುಕೊಳ್ಳುವ ಒಂದು ಘಟ್ಟದಲ್ಲಿದ್ದಾರೆ. ನಮ್ಮ ಎದುರಿಗಿರುವ ಸವಾಲೆಂದರೆ ಲೋಕದೃಷ್ಟಿಯಿಂದ ಪಡೆದುಕೊಳ್ಳಬೇಕಾದ ಬಿಡುಗಡೆಗಿಂತ ಸ್ವ ಬಿಡುಗಡೆ ತುಂಬ ಮೂಲಭೂತವಾದದ್ದು ಅನ್ನಿಸುತ್ತೆ. ಇವತ್ತಿನ ಲೇಖಕಿಯರು ಅವರವರ ಬದುಕಿನ ಸಣ್ಣ ಪುಟ್ಟ ಸುಖ ಸಂತೋಷಗಳನ್ನು ತುಂಬ ಮುಖ್ಯವಾದದ್ದೆನ್ನುವ ಹಾಗೆ , ಅದೇ ಅವರ ಅನುಭವ ಲೋಕ ಎನ್ನುವ ಹಾಗೆ ಬರೆಯುತ್ತಿದ್ದಾರೆ. ಹಾಗೆ ಬರೆಯುವಾಗ ಅವರಿಗಿರುವ ಆತ್ಮವಿಶ್ವಾಸ ಒಂದು ಗುರುತರವಾದ ಬದಲಾವಣೆಯನ್ನು ತಂದುಕೊಡುತ್ತಿದೆ. ಮಹಿಳೆಯರ ಸಾಹಿತ್ಯ ಸೃಷ್ಟಿಗೆ ಯಾವ ಪ್ರತಿಸ್ಪಂದನೆ ಸಿಗುತ್ತಿದೆ ? ಇಂದು ಮಹಿಳೆಯ ಸಾಹಿತ್ಯಕ್ಕೆ ಸಿಗ್ತಾ ಇರೋ ಸ್ಥಾನ ಬೇರೆ. ಮಹಿಳೆಯ ಸಾಹಿತ್ಯ ಮತ್ತು ಸಾಹಿತ್ಯದ ಸ್ವರೂಪ ಎರಡಕ್ಕೂ ಹತ್ತಿರದ ಸಂಬಂಧವಿದೆ. ಮಹಿಳೆಯ ಸಾಹಿತ್ಯವನ್ನು ಸಾಹಿತ್...