ಕೆಲವು ಸಿನೆಮಾಗಳು ನಮ್ಮ ಮನಸ್ಸಿಗೆ ಮುದ ನೀಡಿದರೆ ಮತ್ತೆ ಕೆಲವು ಸೀದಾ ಹೃದಯಕ್ಕೇ ಲಗ್ಗೆ ಇಟ್ಟು ಬಿಡುತ್ತವೆ. ಮೊನ್ನೆ ನೋಡಿದ 'ಐ ಆ್ಯಮ್ ಕಲಾಂ ಈ ಎರಡನೆಯ ಬಗೆಯ ಚಿತ್ರ.
‘ಇರಾನಿನ ಮಜೀದ್ ಮಜೀದಿಯ ಸಿನೆಮಾಗಳನ್ನು ನೋಡುವಾಗಲೆಲ್ಲಾ ಅನಿಸುತ್ತಲ್ಲ, ‘ವಾವ್, ಇಷ್ಟೊಂದು ಸರಳವಾಗಿ ಇಷ್ಟು ಅದ್ಭುತವಾಗಿ ಸಿನೆಮಾ ಮಾಡಬಹುದಾ?!’ ಅಂತ... ಐ ಯಾಮ್ ಕಲಾಂ ಸಿನೆಮಾ ನೋಡುವಾಗ ಅನ್ನಿಸಿದ್ದೂ ಹೀಗೇನೇ.

ಇಡೀ ಚಿತ್ರದ ಕತೆ ನಡೆಯುವುದು ರಾಜಾಸ್ತಾನದ ಮರುಭೂಮಿಯಲ್ಲಿರುವ ಪ್ರವಾಸಿಗರು ಭೇಟಿ ಮಾಡುವ ಹೊಟೆಲ್ ಒಂದರ ಸುತ್ತ. ಮನೆಯಲ್ಲಿ ಕಷ್ಟವಿರುವ ಕಾರಣಕ್ಕೆ ಚೋಟುನ ತಾಯಿ ಅವನನ್ನು ಹೊಟೆಲ್ ಮಾಲಿಕ ಭಾಟಿಯ ಸುಪರ್ದಿಗಿಪ್ಪಿಸಿಬಿಡುತ್ತಾಳೆ. ಚೋಟು ಅದೆಂತಹ ಚೂಟಿ ಹುಡುಗ ಎಂದರೆ ಬಂದ ಮೊದಲ ದಿನದಿಂದಲೇ ಭಾಟಿಯ ಮೆಚ್ಚುಗೆಗಳಿಸುವಂತೆ ಕೆಲಸ ಮಾಡತೊಡಗುತ್ತಾನೆ. ಪಾಪ ಅಲ್ಲಿ ಬಹಳ ದಿನಗಳಿಂದ ಕೆಲಸ ಮಾಡುತ್ತಿರುವ ಲಪ್ಟನ್ (ಪಿತೋಬಾಶ್)ಗೆ ಈ ಚೋಟುವಿನಿಂದಾಗಿ ಅವಮಾನವಾಗತೊಡಗುತ್ತದೆ. ಆದರೆ ತನ್ನ ತರ್ಲೆ ಬುದ್ದಿಯಿಂದ ಲಪ್ಟನ್ಗೆ ಭೂತಚೇಷ್ಟೆ ಮಾಡಿ ಹೆದರಿಸಿಟ್ಟುಕೊಂಡುಬಿಡುತ್ತಾನೆ ಚೋಟು. ಚೋಟುಗೆ ಓದಿ ಬರೆಯುವ ಹುಚ್ಚು ಬಹಳ. ಹೋಟೆಲ್ನ ಟೀವಿಯಲ್ಲಿ ದೆಹಲಿಯಲ್ಲಿ ಗಣರಾಜ್ಯದಿನದ ಪೆರೇಡ್ನಲ್ಲಿ ಎಲ್ಲರಿಂದ ಸೆಲ್ಯೂಟ್ ಹೊಡೆಸಿಕೊಳ್ಳುವ ವ್ಯಕ್ತಿಯ ಹೆಸರು ಕಲಾಂ ಎಂದು ತಿಳಿಯುತ್ತದೆ. ಅಲ್ಲಿಂದ ಶುರುವಾಗುತ್ತದೆ ಚೋಟುನ ಕಲಾಂ ಕನಸು. ತಾನೂ ಓದಿ ಇಂಗ್ಲಿಷ್ ಕಲಿತು ಸೂಟು, ಬೂಟು ಹಾಕಿಕೊಂಡು ಕಲಾಂನಂತೆ ಎಲ್ಲರಿಂದ ಸೆಲ್ಯೂಟ್ ಹೊಡೆಸಿಕೊಳ್ಳಬೇಕು.... ಆಹಾ ಎಂತಹ ಕನಸು! ಮಾತ್ರವಲ್ಲ ಇನ್ನು ಮುಂದೆ ತಾನು ಕಲಾಂನಂತೆಯೇ ಕಾಣಿಸಬೇಕು. ಅದಕ್ಕಾಗಿ ತಲೆಗೆ ಎಣ್ಣೆ ಹಚ್ಚಿಕೊಂಡು ಎದುರಿಗೆ ಕಲಾಂ ಅವರ ಫೋಟೋ ಇಟ್ಟುಕೊಂಡು ಅದರಂತೆಯೇ ಬೈತಲೆ ತೆಗೆದುಕೊಳ್ಳುತ್ತಾರೆ ನಮ್ಮ ಚೋಟು!


ಹೀಗೆ ’ಕಲಾಂ’ ಮತ್ತು ರಣವಿಜಯ್ ಪರಮಾಪ್ತರಾಗುತ್ತಾರೆ. ಚೋಟುಗೆ ರಣವಿಜಯ್ ಇಂಗ್ಲಿಷ್ ಕಲಿಸಿದರೆ, ಚೋಟು ’ಕಲಾಂ’ಗೆ ಹಿಂದಿ, ಮರ ಹತ್ತುವುದು, ಇತ್ಯಾದಿ ಕಲಿಸುವುದು ನಡೆಯುತ್ತದೆ.
ಈ ನಡುವೆ ಬಹಳ ದಿನಗಳ ನಂತರ ಭಾಟಿಯ ಹೋಟೆಲ್ಗೆ ಫ್ರೆಂಚ್ ಮಹಿಳೆ ಲೂಸಿಯ ಆಗಮನವಾಗುತ್ತದೆ. ಆಕೆ ಇಲ್ಲಿ ಸ್ಥಲೀಯ ಸಂಸ್ಕೃತಿಯನ್ನು ಅಧ್ಯಯನ ನಡೆಸಲು ಬಂದವಳು. ಭಾಟಿ ಮಹಾರಾಜರಿಗೆ ಲೂಸಿ ಮೇಲೆ ಹೇಳಿಕೊಳ್ಳಲಾರದ ಮೋಹ. ಅದಕ್ಕಾಗಿ ಆಕೆಯನ್ನು ಒಲಿಸಿಕೊಳ್ಳಲು ಬಹಳಾ ಕಷ್ಟಪಡುತ್ತಿರುತ್ತಾರೆ ಪಾಪ. ಆದರೆ ಲೂಸಿ ಮೇಡಂ ಚೋಟುಗೆ ಎರಡು ದಿನ ರಜೆ ಹಾಕಿಸಿ ತನ್ನೊಂದಿಗೆ ಕರೆದುಕೊಂಡು ಹೋಗಿಬಿಟ್ಟಾಗ ಭಾಟಿಯವರಿಗೆ ಬಹಳ ಕಷ್ಟವಾಗುತ್ತದೆ ಪಾಪ.
ಚೋಟು ಮತ್ತು ರಾಜಕುಮಾರನ ಒಡನಾಟ ಒಂದು ದಿನವೂ ತಪ್ಪುವುದಿಲ್ಲ. ಚೋಟು ಮೂಲಕ ಲೂಸಿಯ ಸಹಾಯದಿಂದ ರಾಜಕುಮಾರ ಫ್ರಂಚ್ ಪರೀಕ್ಷೆಯಲ್ಲಿ ಎ ಪ್ಲಸ್ ಗಿಟ್ಟಿಸಿಕೊಳ್ಳುತ್ತಾನೆ. ಚೋಟು ಬರೆದ ಹಿಂದಿ ಭಾಷಣವನ್ನು ಹೇಳಿ ಪ್ರಶಸ್ತಿಯೂ ಗಿಟ್ಟುತ್ತದೆ. ಅತ್ತ ಚೋಟು ಎಲ್ಲರಿಗಿಂತ ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಾನೆ. ಆದರೆ ರಾಯಲ್ ಹೋಟೆಲಿನ ಮ್ಯಾನೇಜರ್ಗೆ ಈ ಗೆಳೆತನ ತಿಳಿದು ಚೋಟು ಇರುವ ಹೊಟೆಲ್ಗೆ ಬಂದು ನೋಡಿದರೆ ಅಲ್ಲಿ ರಾಜಕುಮಾರ ನೀಡಿದ ಬಟ್ಟೆಬರೆಗಳೆಲ್ಲಾ ಸಿಕ್ಕಿ ತನ್ನ ತಾಯಿತೆದುರೇ ’ಕಳ್ಳ’ ಎನ್ನಿಸಿಕೊಳ್ಳಬೇಕಾಗಿ ಬಂದರೂ ಸತ್ಯವನ್ನು ಬಿಟ್ಟುಕೊಡುವುದಿಲ್ಲ ಚೋಟು. ಆದರೆ ತನಗಾದ ಅವಮಾನ ತಾಳದೇ ತನ್ನ ಬಹುದಿನದ ಕನಸಿನಂತೆ ಟ್ರಕ್ ಒಂದನ್ನು ಹತ್ತಿ ಡೆಲ್ಲಿಗೆ ಕಲಾಂ ಭೇಟಿ ಮಾಡಲು ಹೊರಟೇಬಿಡುತ್ತಾನೆ. ಇದೆಲ್ಲಾ ಕೊನೆಗೆ ರಾಜಕುಮಾರನಿಗೆ ತಿಳಿಸು ಅವನ ಹೃದಯ ಕಳೆದ ಪ್ರಾಣಮಿತ್ರನಿಗಾಗಿ ಬಿಕ್ಕತೊಡಗುತ್ತದೆ. ಎಲ್ಲರೆದುರು ಆತನೇ ಇದುವರೆಗೆ ನಡೆದ ಸತ್ಯವನ್ನು ಹೇಳಿ ತನ್ನ ಎಲ್ಲಾ ಸಾಧನೆಯ ಹಿಂದಿರುವುದು ’ಕಲಾಂ’ ಎಂದೂ ತನಗೆ ಕಲಾಂ ಬೇಕೇ ಬೇಕು ಎಂದು ಹಠ ಹಿಡಿಯುತ್ತಾನೆ. ಹೀಗೆ ಅಲ್ಲಿ ಎಪಿಜೆ ಅಬ್ದುಲ್ ಕಲಾಂ ಹುಡುಕುತ್ತಾ ಚೋಟು ಹೊರಟರೆ, ಈ ಕಲಾಂನನ್ನು ಹುಡುಕಿಕೊಂಡು ರಾಜಕುಮಾರನ ಕುಟುಂಬ ಹಾಗೂ ಲೂಸಿ ಎಲ್ಲರೂ ಹುಡುಕುತ್ತಾರೆ.....
